ಖ್ಯಾತ ಯೋಗಪಟು ಕಮಲೇಶ್ ಬರ್ವಾಲ್ ಸಂದರ್ಶನ
ಹೊದ್ದುಕೊಂಡಿರುವ ಆಲಸ್ಯತನವನ್ನು ತೆಗೆದೆಸೆದು ಚುಮುಚುಮು ಬೆಳಕಿನಲ್ಲಿ ಒಂದು ಬಾರಿ ಮನೆಬಳಿಯಿರುವ ಪಾರ್ಕಿನತ್ತ ಅಡ್ಡಾಡಿಬನ್ನಿ. ಬಿರಬಿರನೆ ನಡೆಯುವವರು, ತಮಗೆ ತಿಳಿದಂತೆ ವ್ಯಾಯಾಮ ಮಾಡುತ್ತಿರುವವರು, ಪದ್ಮಾಸನ ಹಾಕಿಕೊಂಡು ಉಸಿರಾಟದ ವ್ಯಾಯಾಮ ಮಾಡುತ್ತಿರುವವರು, ಸುಮ್ಮನೆ ಕುಳಿತು ಹಾಳು ಹರಟೆ ಹೊಡೆಯುತ್ತಿರುವವರು ನಿಮ್ಮ ಕಣ್ಣಿಗೆ ಬಿದ್ದೇಬೀಳುತ್ತಾರೆ.
ನಗರ ಜೀವನ ಎಷ್ಟು ಸಂಕೀರ್ಣವಾಗಿದೆಯೆಂದರೆ, ದುಡಿಯುವವರು ಮಾತ್ರವಲ್ಲ, ನಿವೃತ್ತಿ ಜೀವನ ಸಾಗಿಸುತ್ತಿರುವವರು, ಖಾಲಿ ಮನೆಯಲ್ಲಿ ಕುಳಿತಿರುವವರು ತಮ್ಮ ಆರೋಗ್ಯದ ಬಗ್ಗೆ ಪ್ರಯತ್ನಪೂರ್ವಕ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳುತ್ತಿದ್ದಾರೆ. ದೈನಂದಿನ ಜಟಾಪಟಿಯಲ್ಲಿ ವ್ಯಾಯಾಮ ಮಾಡುವುದು, ತಪ್ಪದೆ ನಡೆಯುವುದು, ಯೋಗ ಮಾಡಿ ಆರೋಗ್ಯವನ್ನು ದಿವಿನಾಗಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ ಕೂಡ.
ಆರೋಗ್ಯಕ್ಕಿಂತ ಮತ್ತೊಂದು ಭಾಗ್ಯ ಇಲ್ಲವೇ ಇಲ್ಲ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವೆಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವುದರಿಂದ ಯೋಗ ವಿಶ್ವದಾದ್ಯಂತ 'ಒಳ್ಳೆಯ' ಜ್ವರದಂತೆ ವ್ಯಾಪಿಸಿಕೊಳ್ಳುತ್ತಿದೆ. ಯಾವುದೇ ಧಾರ್ಮಿಕ ಕಟ್ಟುಪಾಡುಗಳಿಲ್ಲದೆ ಪಾರ್ಕುಗಳಲ್ಲಿ, ಮೈದಾನಗಳಲ್ಲಿ, ಕಚೇರಿಗಳಲ್ಲಿ, ಶಾಲಾಕಾಲೇಜುಗಳಲ್ಲಿ ಯೋಗಾಭ್ಯಾಸ ನಡೆಯುತ್ತಿದೆ, ಯೋಗದ ಬಗ್ಗೆ ಚರ್ಚೆ, ವಾದವಿವಾದಗಳು ನಡೆಯುತ್ತಿವೆ.
ವಿಶ್ವದಾದ್ಯಂತ ಯೋಗದ ಧ್ಯಾನ, ಗುಣಗಾನ ನಡೆಯುತ್ತಿರುವ ಸಂದರ್ಭದಲ್ಲಿ ಒನ್ಇಂಡಿಯಾ ಕನ್ನಡದ ಜೊತೆ ಮಾತಿಗೆ ಸಿಕ್ಕಿದ್ದು, ಆರ್ಟ್ ಆಫ್ ಲಿವಿಂಗ್ ನಲ್ಲಿ ಯೋಗ ಗುರುವಾಗಿರುವ ಕಮಲೇಶ್ ಬರ್ವಾಲ್ ಅವರು. ಹಿಮಾಚಲ ಪ್ರದೇಶದವರಾದ ಕಮಲೇಶ್ ಕಳೆದ 14 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರೆ ಮತ್ತು ವಿಶ್ವದಾದ್ಯಂತ ಸಂಚರಿಸಿ ವಿಭಿನ್ನ ಶೈಲಿಯಲ್ಲಿ ಯೋಗ ತರಬೇತಿ ನೀಡುತ್ತಿದ್ದಾರೆ.
ಯೋಗಕ್ಕೆ ಕಮಲೇಶ್ ಅವರು ಮರುಳಾಗಿದ್ದೇ ಒಂದು ದೊಡ್ಡ ಕಥೆ. ಶೀಮ್ಲಾದಲ್ಲಿ ಶಾಲಾ ಬಾಲಕಿಯಾಗಿದ್ದಾಗ ವಿಪರೀತ ತುಂಟಿಯಾಗಿದ್ದ ಮತ್ತು ಪ್ರತಿಭಾವಂತೆಯಾಗಿದ್ದ ಕಮಲೇಶ್, ಇದ್ದಕ್ಕಿದ್ದಂತೆ ನರರೋಗ ದೌರ್ಬಲ್ಯಕ್ಕೆ ಒಳಗಾದರು. ಆ ರೋಗ ಅವರ ಎಲ್ಲ ಉತ್ಸಾಹವನ್ನು ಬಸಿದಿತ್ತು. ಚೈತನ್ಯದ ಚಿಲುಮೆಯಾಗಿದ್ದ ಕಮಲೇಶ್ ಗೂಡಿನಲ್ಲಿ ಸೇರಿಕೊಂಡ ಗುಬ್ಬಿಯಂತಾದರು. ಜೀವನದ ಮೇಲಿನ ಆಸೆಯೇ ಬತ್ತಿಹೋದಂತಾಗಿತ್ತು.
ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಅವರಿಗೆ ಸುದರ್ಶನ ಕ್ರಿಯಾ ಮಾಡಬೇಕೆಂದು ಹೇಳಿದವರು ನರರೋಗ ತಜ್ಞರಾಗಿದ್ದ ಡಾ. ರೂಪಕ್ ಅವರು. ಇದನ್ನು ಕೇಳುತ್ತಿದ್ದಂತೆ, ಎಲ್ಲವನ್ನೂ ಬಿಟ್ಟು ಮಗಳನ್ನು ಸುದರ್ಶನ ಕ್ರಿಯಾ ಕೋರ್ಸಿಗೆ ಸೇರಿದ್ದು ಕಮಲೇಶ್ ಅವರ ತಾಯಿ. ಯೋಗದ ಮೋಡಿಗೆ ಮರುಳಾದ ಮೇಲೆ ಕಮಲೇಶ್ ಬರ್ವಾಲ್ ಅವರು ಹಿಂದೆತಿರುಗಿ ನೋಡಿದ್ದೇ ಇಲ್ಲ. ಯೋಗದಲ್ಲಿ ಪರಿಣತಿ ಗಳಿಸಿದ ಅವರು ಈಗ ಯೋಗಗುರುವಾಗಿದ್ದಾರೆ.
"ಹನ್ನೆರಡೇ ತಿಂಗಳಲ್ಲಿ ಎಲ್ಲ ಔಷಧಿಗಳನ್ನು ಬಿಟ್ಟಿದ್ದೆ. ಕಳೆದ ಹನ್ನೆರಡು ವರ್ಷಗಳಲ್ಲಿ ಯಾವುದೇ ಮಾತ್ರೆಯನ್ನೂ ನುಂಗಿಲ್ಲ. ದೇಶದೇಶ ಸುತ್ತಿದ್ದೇನೆ, ವಿಪರೀತ ಹವಾಮಾನಗಳನ್ನು ಎದುರಿಸಿದ್ದೇನೆ, ಆದರೆ ಯಾವುದೂ ನನ್ನ ಆರೋಗ್ಯದ ಮೇಲೆ ದುಷ್ಪರಿಣಾ ಬೀರಿಲ್ಲ" ಎನ್ನುವ ಅವರು, "ಯೋಗದಿಂದ ನನ್ನ ಸಂತೋಷ ಹೆಚ್ಚಿದೆ, ಯಶಸ್ವಿಯನ್ನಾಗಿಸಿದೆ ಮತ್ತು ಉತ್ತಮ ಮಹಿಳೆಯನ್ನಾಗಿ ಮಾಡಿದೆ" ಎಂದು ಆನಂದತುಂದಿಲರಾಗಿ ಹೇಳುತ್ತಾರೆ.
ಜೀವನದ ಉಳಿದ ಸಮಯವನ್ನು ಯೋಗದ ಪಾಠ ಹೇಳಿಕೊಡುತ್ತ, ಇತರರನ್ನು ಸಂತೋಷವಾಗಿಡುವುದು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಬಗ್ಗೆ ತರಬೇತಿ ನೀಡುತ್ತ ಕಳೆಯುತ್ತೇನೆ ಎನ್ನುವ ಕಮಲೇಶ್ ಬರ್ವಾರ್ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.