ಸಿಂಗಪುರದಲ್ಲೂ ಅನುರಣಿಸಿದ ಭಗವದ್ಗೀತೆ: ಪುತ್ತಿಗೆ ಶ್ರೀಗಳ ಪ್ರವಚನ
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಗೀತಾ ಜಯಂತಿಯ ನಿಮಿತ್ತವಾಗಿ 22 ಅಕ್ಟೋಬರ್ 2017ರಂದು ನಡೆದ ಅಂತರಾಷ್ಟ್ರೀಯ ಗೀತಾ ವೇದಿಕೆಯಲ್ಲಿ ಮುಖ್ಯ ಟಿಪ್ಪಣಿ ಪ್ರವಚನ (Key note address ) ನೀಡಲು ಸಿಂಗಪುರಕ್ಕೆ ಆಗಮಿಸಿದ್ದರು. ಈ ಪ್ರವಚನವನ್ನು ಕೇಳುವ ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ಇಂದಿನ ಜೀವನದಲ್ಲಿ ಭಗವದ್ಗೀತೆಯ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ಮಾತನಾಡಿದ ಶ್ರೀಗಳು ಹೇಳಿದ ಕೆಲವು ಮುಖ್ಯ ಮಾತುಗಳು (ನಾನು ತಿಳಿದ ಮಟ್ಟಿಗೆ) ಇಂತಿವೆ:
* ಸಕಲ ವೇದ, ಉಪನಿಷತ್ತು, ಪುರಾಣಗಳು ಒಂದು ಗೋಮಾತೆಯಾದರೆ, ಅರ್ಜುನ ಒಂದು ಕರುವಿದ್ದಂತೆ. ಭಗವಾನ್ ಶ್ರೀ ಕೃಷ್ಣನು ಈ ಗೋಮಾತೆಯಿಂದ ಅರ್ಜುನ ನಿಮಿತ್ತವಾಗಿ ಆದರೆ ಮಾನವ ಕುಲಕ್ಕೆಂದು ಕರೆದ ಪರಿಶುದ್ಧ ಹಾಲೇ ಭಗವದ್ಗೀತೆ. ಹೇಗೆ ದೈಹಿಕ ಆರೋಗ್ಯಕ್ಕೆ ಗೋವಿನ ಹಾಲು ಉತ್ತಮವೋ, ಆಧ್ಯಾತ್ಮಿಕ ಆರೋಗ್ಯಕ್ಕೆ ಭಗವದ್ಗೀತೆ ಎಂಬ ಜ್ಞಾನ ಕ್ಷೀರ ಅತ್ಯುತ್ತಮ.

* ಭಗವದ್ಗೀತೆ ಕೇವಲ ಬ್ರಾಹ್ಮಣರ ಅಥವಾ ಕೇವಲ ಹಿಂದುಗಳ ಗ್ರಂಥ ಮಾತ್ರವಲ್ಲ. ಅದು ದೇವರು ಎಲ್ಲ ಜನರಿಗೆ ನೀಡಿದ ಒಂದು ಕಾಣಿಕೆ.
* ಭಗವದ್ಗೀತೆಯ ಅಭ್ಯಾಸ ಮಾಡಿದರೆ ಸಕಲ ಧರ್ಮಗ್ರಂಥಗಳ ಅಭ್ಯಾಸ ಮಾಡಿದಂತೆ, ಆದುದರಿಂದಲೇ ಅದನ್ನು ಪಂಚಮ ವೇದ ಎಂದು ಕರೆಯಲಾಗಿದೆ.
ವೇದಾದಿ ಗ್ರಂಥಗಳಲ್ಲಿ ಮಹಾಭಾರತ ಶ್ರೇಷ್ಠ, ಮಹಾಭಾರತದಲ್ಲಿ ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮಗಳು ಶ್ರೇಷ್ಠ. ಅದರಲ್ಲೂ ಭಗವದ್ಗೀತೆ ಎಲ್ಲದಕ್ಕಿಂತಲೂ ಶ್ರೇಷ್ಠ. ಏಕೆಂದರೆ ಭಗವದ್ಗೀತೆ ಕೇವಲ ಸ್ತೋತ್ರ ಮಾತ್ರವಲ್ಲ, ಅದು ಸ್ತೋತ್ರದೊಡನೆ ತತ್ವಜ್ಞಾನ, ಜೀವನ ದರ್ಶನ ಎಲ್ಲವೂ ಕೂಡ. ಏನೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ನೀಡಬಲ್ಲ ಪವಿತ್ರ ಗ್ರಂಥ.
* ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಈ ಜಗತ್ತಿನಲ್ಲಿ ಕೇವಲ ಸಜ್ಜನರು ಮತ್ತು ದುರ್ಜನರು ಎಂಬ ಎರಡು ಜಾತಿ ಮಾತ್ರ ಎಂದು ಹೇಳಿದ್ದಾನೆ. ಅಲ್ಲದೇ ತಾನು ಸಜ್ಜನರ ರಕ್ಷಣೆಗೆ ಮತ್ತು ದುರ್ಜನರ ಶಿಕ್ಷೆಗೆ ಅವತಾರ ತಾಳುತ್ತೇನೆ ಎಂದು ಹೇಳಿದ್ದಾನೆ. ಆದುದರಿಂದ ಇದು ಯಾವುದೇ ಮಾನವ ನಿರ್ಮಿತ ಜಾತಿ ಮತ್ತು ಧರ್ಮಗಳಿಗೆ ಸೀಮಿತವಾದ ಗ್ರಂಥವಲ್ಲ. ಎಲ್ಲರಿಗೂ ಸೇರಿದ ಜೀವನ ದರ್ಶನ.
* ಜಗತ್ತಿನಲ್ಲಿ ಧರ್ಮರಕ್ಷಣೆಗಾಗಿಯೇ ಕುರುಕ್ಷೇತ್ರ ಯುದ್ಧ ಎಂದು ತಿಳಿದೂ ಅರ್ಜುನ ತನ್ನವರ ಮೋಹಕ್ಕೆ ಒಳಗಾಗಿ, ಯುದ್ಧದ ಬಗ್ಗೆ ವೈರಾಗ್ಯ ತಾಳಿದ್ದು ಕೇವಲ ಅವನ ದೌರ್ಬಲ್ಯ ಅಷ್ಟೇ. ಅಲ್ಲಿಯವರೆಗೂ ಅನೇಕ ಯುದ್ಧಗಳನ್ನು ಮಾಡಿದ ಅರ್ಜುನ ಸಹಸ್ರಾರು ಜನರನ್ನು ಹತ ಮಾಡಿದ್ದ. ಆದರೆ ಕುರುಕ್ಷೇತ್ರದಲ್ಲಿ ತನ್ನವರನ್ನು ಕೊಲ್ಲಲು ಮಾತ್ರ ಹಿಂಜರಿದ. ಅಲ್ಲಿ ತಾನು ಮತ್ತು ತನ್ನವರು ಎಂಬ ಸುಳ್ಳು ಮೋಹ ಮತ್ತು ಮಮತೆ ಅವನನ್ನು ದಾರಿ ತಪ್ಪುವಂತೆ ಮಾಡಿತು. ಆದುದರಿಂದ ಕೃಷ್ಣ ಅರ್ಜುನನನ್ನು ಮೋಹ ಮಾಯೆಯಿಂದ ಹೊರಬಂದು ಸತ್ಯ ಮತ್ತು ಧರ್ಮಗಳ ರಕ್ಷಣೆಗೆ ಕಂಕಣ ಕಟ್ಟಿ ನಿಲ್ಲಲು ಪ್ರೇರೇಪಿಸಿದನು.

* ಅದೇ ರೀತಿಯಾಗಿ ಇಂದು ಜಗತ್ತಿನಲ್ಲಿ ಅಶಾಶ್ವತ ವಸ್ತುಗಳು ಮತ್ತು ಜೀವಿಗಳ ಬಗೆಗಿನ ಮೋಹ ಮತ್ತು ಮಮತೆಗಳು ಅನೇಕರನ್ನು ಅರ್ಜುನನಂತೆ ದಾರಿ ತಪ್ಪಿಸಿವೆ ಮತ್ತು ಅವರು ಅಂಧರಂತೆ ಧರ್ಮಹೀನರಾಗಿ ಕುಕೃತ್ಯಗಳನ್ನು ಮಾಡುತ್ತಿದ್ದಾರೆ ಅಥವಾ ಕರ್ತವ್ಯಹೀನರಾಗಿದ್ದಾರೆ.
* ಆದುದರಿಂದ ಅಂದಿನ ಅರ್ಜುನನಂತೆ ಇಂದು ಕೂಡ ಅಶಾಶ್ವತ ವಸ್ತುಗಳ ಮೇಲಿನ ಮೋಹ ಬಿಟ್ಟು ಶಾಶ್ವತವಾದ ಅಲೌಕಿಕ ಶಕ್ತಿಯ ಬಗ್ಗೆ ಮತ್ತು ಧರ್ಮದ ಬಗ್ಗೆ ಜ್ಞಾನ ಪಡೆಯಲು ಪ್ರಯತ್ನ ಮಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
* ಶ್ರೀಗಳು ಭಾಷಣದ ಆರಂಭದಲ್ಲಿ ಮಹಾತ್ಮಾ ಗಾಂಧಿಯವರು ಭಗವದ್ಗೀತೆಯ ಬಗ್ಗೆ ಹೇಳಿದ ಮಾತುಗಳನ್ನು ಉಲ್ಲೇಖಿಸಿದರು. ಆ ಮಾತುಗಳು ಹೀಗಿವೆ:
"When doubts haunt me, when disappointments stare me in the face, and I see not one ray of hope in the horizon, I turn to Bhagavad-Gita and find a verse to comfort me; and I immediately begin to smile in the midst of overwhelming sorrow. Those who meditate on the Gita will derive fresh joy and new meanings from it every day"
ಮಹಾತ್ಮಾ ಎನಿಸಿದ ಗಾಂಧೀಜಿಯವರಿಗೆ ಭಗವದ್ಗೀತೆ ಇಷ್ಟೊಂದು ಆಳವಾದ, ಅರ್ಥವತ್ತಾದ ಮತ್ತು ಉಪಯೋಗಿ ಗ್ರಂಥ ಎನಿಸಿದರೆ ನಮಗೆಲ್ಲರಿಗೂ ಈ ಗ್ರಂಥದ ತಕ್ಕಮಟ್ಟಿನ ಪರಿಚಯ ಬೇಕೇ ಬೇಕು ಅಲ್ಲವೇ? ಅದರ ಉಪಯೋಗ ನಮಗೆಲ್ಲರಿಗೂ ಆಗಲೇಬೇಕಲ್ಲವೇ ಎನಿಸಿತು.

ಭಗವದ್ಗೀತೆ ಯಾವುದೇ ಜಾತಿ-ಜನಾಂಗದ ಸೊತ್ತಲ್ಲ
ಅತ್ಯಂತ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ನಡೆದ ಈ ಪ್ರವಚನ ಭಗವದ್ಗೀತೆಯ ಬಗೆಗಿನ ನನ್ನ ಕುತೂಹಲ ಮತ್ತು ಭಕ್ತಿ ಭಾವವನ್ನು ದ್ವಿಗುಣಗೊಳಿಸಿತು. ಭಗವದ್ಗೀತೆಯನ್ನು ಸಮೂಲಾಗ್ರವಾಗಿ ಅಭ್ಯಾಸ ಮಾಡುವ ಇಚ್ಛೆ ಮತ್ತೊಮ್ಮೆ ನನ್ನಲ್ಲಿ ಉದಿಸಿತು. ಅಲ್ಲದೇ ಶ್ರೀಗಳೇ ಹೇಳಿದಂತೆ ಭಗವದ್ಗೀತೆ ಕೇವಲ ಒಂದು ಜಾತಿ, ಜನಾಂಗದ ಸೊತ್ತಲ್ಲ. ಅದು ಸಮಗ್ರ ಮಾನವ ಕುಲದ ಆಸ್ತಿ. ಸಹಸ್ರಾರು ವರ್ಷಗಳ ಹಿಂದೆ ಉದಯವಾದ ಈ ಪವಿತ್ರ ಕೃತಿ ನಮ್ಮ ಸಂಸ್ಕೃತಿಯ ಜ್ಞಾನ ಸಮಷ್ಟಿಯ ಸಾರ. ಲಕ್ಷಾಂತರ ಜನರು ವಿಶ್ವದಾದ್ಯಂತ ಈ ಕೃತಿಯನ್ನು ಅಭ್ಯಾಸ ಮಾಡಿ ಅನೇಕ ಬಗೆಯ ವಿವರಣೆ, ವ್ಯಾಖ್ಯಾನಗಳನ್ನು ಮಾಡಿದ್ದಾರೆ. ಜೀವನದ ಜಟಿಲತೆಗಳನ್ನು ಕುರಿತು ಈ ಕೃತಿ ನೀಡುವ ಪರಿಹಾರಗಳನ್ನು ಪ್ರಶಂಸಿಸಿದ್ದಾರೆ. ನಮಗೆ ಅದು ಮುಖ್ಯವಾಗ ಬೇಕು.
ವಿವಾದಗಳಿಗೆ ಇತಿಶ್ರೀ ಹಾಡಬೇಕು
ಈ ವಿಷಯದಲ್ಲಿ ನನಗಿನ್ನೊಂದು ಅನಿಸಿಕೆ. ಅನೇಕರು ಭಗವದ್ಗೀತೆಯಲ್ಲಿನ ಕೆಲವು ಶ್ಲೋಕಗಳನ್ನು ಮುಂದಿಟ್ಟುಕೊಂಡು ಅದರ ಅರ್ಥವನ್ನು ಕುರಿತು ಕೆಲವು ವಿವಾದಾತ್ಮಕ ಹೇಳಿಕೆ ನೀಡುತ್ತಾರೆ. ಇಂತಹ ಹೇಳಿಕೆಗಳಿಂದ ಜಿಗುಪ್ಸೆ ಪಟ್ಟು ವಿರೋಧಿ ಚಳವಳಿಗಳನ್ನು ನಡೆಸುವುದರಿಂದ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಪ್ರಚಾರ ದೊರಕುತ್ತದೆಯೇ ಹೊರತು ಬೇರೆ ಏನನ್ನೂ ಸಾಧಿಸಿದಂತಾಗುವುದಿಲ್ಲ. ಅಂತಹ ಅಪಪ್ರಚಾರ ಮಾಡುವವರ ಹೆಸರೆತ್ತದೆಯೇ ಅವರ ವಿವಾದಾತ್ಮಕ ಹೇಳಿಕೆಗೆ ತರ್ಕಬದ್ಧವಾಗಿ ಪ್ರತ್ಯುತ್ತರ ನೀಡಿ ಇಂತಹ ಹೇಳಿಕೆಗಳಿಗೆ ಮತ್ತು ವಿವಾದಗಳಿಗೆ ಇತಿಶ್ರೀ ಹಾಡಬೇಕು.
ಈ ಅವಕಾಶ ದೊರೆತದ್ದು ನಮ್ಮ ಸೌಭಾಗ್ಯ
ಎಲ್ಲಕ್ಕಿಂತ ಮುಖ್ಯವಾಗಿ ಭಗವದ್ಗೀತೆಯನ್ನೊಳಗೊಂಡು ನಮ್ಮ ಪುರಾಣ, ಕಾವ್ಯಗಳು, ವೇದೋಪನಿಷತ್ತುಗಳು ಜನರನ್ನು ತಲುಪುವಂತಾಗಬೇಕು. ವಿದ್ವಾಂಸರ ಚರ್ಚೆಯ ಮಟ್ಟದಿಂದ ಇಳಿದು ಸಾರ್ವಜನಿಕರ ಜೀವನವನ್ನು ತಲುಪಬೇಕು. ಇಂದಿನ ಜೀವನಕ್ಕೆ ಅಳವಡಿಸುವಂತಹ ಹೊಸ ಹೊಸ ವ್ಯಾಖ್ಯಾನಗಳನ್ನು ಅಭ್ಯಾಸದ ಮೂಲಕ ಕಂಡು ಹಿಡಿಯಬೇಕು. ಯಾವುದೇ ಪೂರ್ವಗ್ರಹ ಇಲ್ಲದೇ ನಮ್ಮ ವೇದ, ಪುರಾಣ ಮತ್ತು ಮಹಾಕಾವ್ಯಗಳ ವ್ಯಾಪಕ ಅಧ್ಯಯನವನ್ನು ಮಾಡಿ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ನಮ್ಮ ಸದ್ಯದ ಸಮಯಕ್ಕೆ ಅನುಗುಣವಾದ ಉಪಯುಕ್ತ ಅಂಶಗಳನ್ನು ಬೆಳಕಿಗೆ ತರುವ ಮತ್ತು ಪ್ರಚಾರಗೊಳಿಸುವ ಮಹಾಕಾರ್ಯ ಆಗಬೇಕು. ಇಂತಹ ಮಹಾನ್ ಕೆಲಸಕ್ಕೆ ಕೈ ಹಾಕಿ ಅವುಗಳನ್ನು ಜನ ಸಾಮಾನ್ಯರತ್ತ ಕೊಂಡೊಯ್ಯಲು ಶತ ಪ್ರಯತ್ನ ಮಾಡುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇದ್ರ ತೀರ್ಥ ಶ್ರೀಪಾದಂಗಳವರ ಪ್ರವಚನ ಸಿಂಗಪುರದ ಜನತೆಗೆ ಲಭಿಸಿದ್ದು ನಮ್ಮ ಭಾಗ್ಯ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications