ನಮ್ಮ ನಿಮ್ಮೊಳಗೊಬ್ಬ ಇದ್ದೇ ಇದ್ದಾನೆ 'ಲೇಟ್ ಲತೀಫ್'!
ಕಳೆದ ವಾರದಲ್ಲಿ ಲೇಟ್ ಲತೀಫ್ ಬಗ್ಗೆ ಒಂದೆರಡು ಬಾರಿ ಕಿವಿಗೆ ಬಿತ್ತು. ನಾನು ಬಹಳ ವರ್ಷಗಳಿಂದ ಈ ಮಾಹಾನುಭಾವನ ಹೆಸರನ್ನು ಕೇಳಿದ್ದರೂ ಇವನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಒಮ್ಮೆ ನೋಡಿಯೇ ಬಿಡೋಣ ಅಂತ ಒಂದಷ್ಟು ಮಾಹಿತಿ ಕಲೆಹಾಕಿದ್ದು ಇಲ್ಲಿದೆ.
ಈ ಲೇಟ್ ಲತೀಫ್ ಯಾರು? ಯಾರೋ ಒಬ್ಬರು ಒಂದು ವಿಡಿಯೋ ಕಥೆ ಹಾಕಿದ್ದರು ಅಂತ ನೋಡಿದೆ. ನಿಮಗಾರಿಗೂ ಗೊತ್ತಿರದ ಒಂದು ವಿಷಯ ಇಲ್ಲಿದೆ ಅಂತ ಕಥೆ ಶುರುಮಾಡಿದ್ದರು. ಯಾರಿಗೂ ಗೊತ್ತಿರದೆ ಇವರೊಬ್ಬರಿಗೆ ಗೊತ್ತಾಗಿದ್ದು ಹೇಗೆ? ಇರಲಿ ಬಿಡಿ, ಲತೀಫ್ ಅಂತ ಒಬ್ಬ ಹುಡುಗನಿದ್ದನಂತೆ ಅಂತ ಶುರು ಮಾಡಿದಾಗಲೇ ಅರ್ಥವಾಯ್ತು ಇದೊಂದು ಕಟ್ಟುಕಥೆ ಅಂತ. ಕಥೆ ಮುಂದೆ ಹೋಗ್ತಾ ಹೋಗ್ತಾ ಹೇಗೆ ಅವನು ಜೀವನವೆಲ್ಲಾ ಬರೀ ತಡ ಮಾಡೋದನ್ನೇ ಅಭ್ಯಾಸ ಮಾಡಿಕೊಂಡಿದ್ದ ಎಂದೂ, ಕೊನೆಗೆ ಮನೆಯವರ ಜೊತೆ ಜಾತ್ರೆಗೆ ಹೋಗುವಾಗ ಟ್ರೈನ್ ಹತ್ತಲೂ ತಡ ಮಾಡಿ ಜಾತ್ರೆ ಮಿಸ್ ಮಾಡಿಕೊಂಡ ಮೇಲೆ ಬುದ್ದಿ ಬಂತು ಎಂಬಲ್ಲಿಗೆ ಕಥೆ ನಿಂತಿತು.
ಒಟ್ಟಾರೆ ನನ್ನ ಪ್ರಕಾರ, ಈ ಲತೀಫ್ ಎಂಬುವವನು ಒಂದು ಪಾತ್ರ ಅಷ್ಟೇ. Spiderman, Superman, Batman ಎಂಬೆಲ್ಲಾ ಶಿಷ್ಟರ ರಕ್ಷಣೆ ಮಾಡುವ fiction charactersಗಳಂತೆ ಈ ನಮ್ಮ ಲತೀಫ್ ಕೂಡಾ. ಇವನ ಪಾತ್ರದ ಮಹತ್ವವೇ being late!

ಲೇಟ್ ಲತೀಫ್ ಒಬ್ಬ ಸಾಮಾನ್ಯ ಮಹಾಪುರುಷ ಎನ್ನೋಣ... ಈತನನ್ನು ಸಾಮಾನ್ಯ ಅನ್ನುವುದಕ್ಕಿಂತ ಸರ್ವೇಸಾಮಾನ್ಯ ಎನ್ನೋಣ. ಅರ್ಥ ಇಷ್ಟೇ, ಇವನು ಸರ್ವಾಂತರ್ಯಾಮಿ. ನಮ್ಮೆಲ್ಲರಲ್ಲೂ ಒಬ್ಬ ಲೇಟ್ ಲತೀಫ್ ಇದ್ದಾನೆ. ಕೆಲವರು ಲತೀಫನೇ ಆಗಿರಬಹುದು, ಕೆಲವರಲ್ಲಿ ಅವನು ಆಗಾಗ್ಗೆ ಜಾಗೃತನಾಗಿರಬಹುದು. ಕೆಲವರಲ್ಲಿ ಸಂದರ್ಭಾನುಸಾರ ಜಾಗೃತ ಆಗಬಹುದು, ಕೆಲವು ವಿಶೇಷ ವ್ಯಕ್ತಿಗಳಲ್ಲಿ ಇವನ ಆಟ ಏನೂ ನಡೆಯದೆ ಹೋಗಬಹುದು.
ಈ ಲೇಟ್ ಲತೀಫ್'ನಲ್ಲಿ ಲತೀಫನೇ ಏಕೆ? ಹೋಲಿಕೆಗಾಗಿ, ಸಿಡುಕು ಸುಬ್ಬರಾಯ ತೆಗೆದುಕೊಳ್ಳಿ. ಇಲ್ಲಿ ಸುಬ್ಬರಾಯನೇ ಏಕೆ? ರೇಡಿಯೋ ರಂಗಮ್ಮನ ಬಗ್ಗೆ ಹೇಳಿದಾಗ ರಂಗಮ್ಮನೇ ಏಕೆ? ರೌಡಿ ರಂಗಣ್ಣ ಎಂದಾಗ ರಂಗಣ್ಣನೇ ಏಕೆ? ಈಗ ನಿಮಗೆ pattern ಅರ್ಥವಾಗಿರಬಹುದು. ಹಾಗೆಯೇ ಲೇಟ್ ಲತೀಫ್'ನಲ್ಲಿ ಎರಡೂ 'ಲ'ಕಾರಗಳು ಅಷ್ಟೇ!
ಈ ಲೇಟ್ ಎಂಬ ಪದಕ್ಕೆ ಮತ್ತೊಂದು ಅರ್ಥವೂ ಇದೆ. ಬಹುಶ: ನಾವೆಲ್ಲರೂ ಇದರ ಬಳಕೆಯನ್ನು invitation cardಗಳಲ್ಲಿ ನೋಡಿಯೇ ಇರುತ್ತೇವೆ. ಚಿಕ್ಕ ವಯಸ್ಸಿನಲ್ಲಿ, 'ಕಾರ್ಡ್'ನಲ್ಲಿ ಲೇಟ್ ಅಂತ ಯಾಕೆ ಮುದ್ರಿಸುತ್ತಾರೆ?' ಅಂತ ಗೊತ್ತಿರಲಿಲ್ಲ. ಈ ಲೇಟ್ ಎಂಬ ಪದಕ್ಕೆ ಹೀಗೂ ಅರ್ಥವಿದೆ ಅಂತ ಗೊತ್ತಿರಲಿಲ್ಲ. ಯಾವ ರೀತಿ ಒಬ್ಬ ವ್ಯಕ್ತಿಯನ್ನು ಸತ್ತಿದ್ದಾರೆ ಎಂಬುದಕ್ಕೆ ಬದಲಾಗಿ ಗೌರವದಿಂದ ದಿವಂಗತರಾದ ಅಥವಾ ಸ್ವರ್ಗಸ್ಥರಾದ ಎಂದೆಲ್ಲಾ ಸಂಭೋಧಿಸುತ್ತೇವೋ ಹಾಗೆಯೇ ಈ ಲೇಟ್ ಪದ ಕೂಡ.

"He is coming in late to work" ಅಂತ ಹೇಳುವಾಗ ಆ ವ್ಯಕ್ತಿ ಆ ಸಮಯದಲ್ಲಿ ಅಲ್ಲಿಲ್ಲ ಅಂತಲೇ ಅರ್ಥ. ಅದನ್ನು ಲೇಟ್ ಎಂದು ಬಳಸಿದಾಗ "ಈಗ ಇಲ್ಲಿಲ್ಲ, ಆದರೆ ಆಮೇಲೆ ಇಲ್ಲಿರುತ್ತಾರೆ" ಎಂಬುದೇ ಈ ಪದದ ಅರ್ಥವಾದರೆ, ಸ್ವರ್ಗಸ್ಥರಾದ ವ್ಯಕ್ತಿಯ ಹೆಸರಿನ ಹಿಂದೆ ಲೇಟ್ ಎಂದು ಬಳಸುವಾಗ "ಈಗ ಈ ವ್ಯಕ್ತಿ ನಮ್ಮೊಂದಿಗಿಲ್ಲ ಆದರೆ ನಂತರ ಬರುತ್ತಾರೆ" ಎಂಬ ಮರುಜನ್ಮದ ಗೂಡಾರ್ಥವಿರಬಹುದೇ? ಯೋಚಿಸಿ ನೋಡಿ.
ಈಗ ನಮ್ಮ ಲತೀಫ್ ವಿಷಯಕ್ಕೆ ವಾಪಸ್ ಬರೋಣ. ಒಬ್ಬರ ಜೀವನದಲ್ಲಿ ಲೇಟ್ ಎಂಬುದು ಎಲ್ಲಿಂದ ಶುರುವಾಗಬಹುದು?
ಗಾಂಧಾರಿಯನ್ನು ಕೇಳಿ ನೋಡಿ, ಅರ್ಥವಾಗುತ್ತದೆ. ಹುಟ್ಟಿನಿಂದಲೇ ತಡವಾಗಬಹುದು. ಸರಿಯಪ್ಪಾ, ಹುಟ್ಟೇನೋ ತಡವಾಯ್ತು ಸರಿ, ಸಾವಾದರೂ ಬೇಗ ಬಂತೇ ಸುಯೋಧನನಿಗೆ? ಅದೂ ಇಲ್ಲ, 'ಪಾಂಡವರು' ಸತ್ತರು ಎಂಬ ವಿಷಯ ಕಿವಿಗೆ ಬೀಳೋ ತನಕ ಸಾವನ್ನೂ ತಡ ಮಾಡಿದ. ಸತ್ತವರು ಉಪಪಾಂಡವರು ಅಂತ ಅವನು ಸಾಯೋ ಮುನ್ನ ಗೊತ್ತಾಗಿದ್ದಿದ್ದರೆ, ಪಾಂಡವರು ಸ್ವರ್ಗಾರೋಹಣ ಮಾಡುವ ಹೊತ್ತಿಗೂ ಇವನು ಹಾಗೆ ಕಾಯುತ್ತಾ ಇರುತ್ತಿದ್ದನೇನೋ?
ತ್ರೇತಾಯುಗದಲ್ಲಿ ಲೇಟ್ ಲತೀಫ್ ಪ್ರಭಾವ ಇದ್ದಿದ್ದರೆ? ಹದಿನಾಲ್ಕು ವರುಷಗಳ ವನವಾಸ ಮುಗಿಸಿ ಅಯೋಧ್ಯೆಗೆ ವಾಪಸ್ ಬರಲು ರಾಮನಿಗೆ 'ತಡ'ವಾಗಿದ್ದರೆ ಭರತನ ಕಥೆ ಏನಾಗುತ್ತಿತ್ತೋ ಪಾಪ?
ಕಲಿಯುಗದಲ್ಲಿ ಮಾತ್ರ ಲೇಟ್ ಲತೀಫನದ್ದೇ ರಾಜ್ಯಭಾರ. ಎಲ್ಲೆಲ್ಲಿ ಇದೆ ಅಂತ ಕೆಲವು ಸ್ಯಾಂಪಲ್ ನೋಡೋಣ. ಶುದ್ಧ ಸೋಮವಾರ ಬೆಳಿಗ್ಗೆ, ಅಲಾರಾಂ ಹೊಡ್ಕೊಳ್ಳುತ್ತೆ. ಈಗ ತಾನೇ ಕಣ್ಣುಮುಚ್ಚಿದಂತಿತ್ತು ಆಗಲೇ ಸೋಮವಾರ ಬೆಳಿಗ್ಗೆ ಆಗಿಯೇ ಹೋಯ್ತಾ ಅಂತ ಬೈದುಕೊಂಡೇ ಅದರ ತಲೆ ಮೇಲೆ ಕುಟ್ಟಿ ಒಂದೈದು ನಿಮಿಷ ಅಂತ ಮಲಗಿದವರಿಗೆ ಇನ್ನರ್ಧ ಘಂಟೆಯಾದ ಮೇಲೆ ಎಚ್ಚರವಾಯ್ತು ಎಂದಾಗ Mondayಯ ಮಂಡೆ ಬಿಸಿ ಶುರು.
ಅಲ್ಲಿಂದ ಮಿಕ್ಕೆಲ್ಲಾ ಕೆಲಸ ಬರೀ ಗಡಿಬಿಡಿ. ಬಚ್ಚಲುಮನೆ ಬ್ಯುಸಿ ಆಗಿರಬಹುದು, ಟಾಯ್ಲೆಟ್'ನಲ್ಲಿ ಯಾರೋ ಹೋಗಿ ಕೂತು ನಿದ್ರಿಸಿರಬಹುದು, ಬಸ್ ಸಿಗದೇ ಹೋಗಬಹುದು, ಫ್ಯಾಕ್ಟರಿ / ಆಫೀಸ್ ಬಸ್ ಮಿಸ್ ಆಗಬಹುದು, ಬೀದಿಯಲ್ಲಿ ವಿಪರೀತ ಟ್ರಾಫಿಕ್ ಆಗಿರಬಹುದು... ಏನೆಲ್ಲಾ ಅವಾಂತರಗಳು ಆಗಿ ಕೊನೆಗೆ ಎಂಟೂವರೆಗೆ ಆಫೀಸಿಗೆ ಹೋದ್ರಿ ಅಂದುಕೊಳ್ಳಿ ಅಲ್ಲಿ ಬಾಸ್'ನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಕಾರಣ ಇಷ್ಟೇ, ನೀವು ಮುಖ್ಯವಾದ ಮೀಟಿಂಗ್ ಒಂದನ್ನು ಎಂಟುಘಂಟೆಗೇ ಇಟ್ಟುಕೊಂಡಿದ್ದು, ನೀವೇ ತಡ ಮಾಡಿರುತ್ತೀರಿ. ಕೆಲವೊಮ್ಮೆ ತಡವಾಗಿ ಕೆಲಸಕ್ಕೆ ಹೋಗಿ ಬಾಸ್'ನ ಕ್ರೋಧಕ್ಕೆ ಬಲಿಯಾಗಿದ್ದ ದಿನವೇ, ಬೇಗ ಮನೆಗೆ ಹೋಗಬೇಕು ಅಂತ persmission ಕೇಳಬೇಕಾದ ಸಂದಿಗ್ದ ಕೂಡಾ ಎದುರಾಗುತ್ತದೆ.
ಆಫೀಸಿಗೆ ತಡವಾಗಿ ಹೋಗಬೇಕು ಅನ್ನೋ ಆಶಯ ಇರೋದಿಲ್ಲ, ಆದರೆ ಸಂದರ್ಭಗಳು ಹಾಗೆಯೇ ಎದುರಾಗುತ್ತದೆ. ಆದರೆ ಪಾರ್ಟಿಗಳಿಗೆ ತಡವಾಗೋದಕ್ಕೆ ಕಾರಣವೇನು? ಅವರಿಗೆ ತಡ ಮಾಡಿಬರಬೇಕು ಅಂತ ಇರೋದಿಲ್ಲ. ಆದರೆ ಬೇಗ ಬರುವ ಇರಾದೆ ಇರೋದಿಲ್ಲ. ಕೆಲವು ಸಮಯ punctual ಆಗಿ ಇದ್ದವರೂ ಯಾಕೆ ಬದಲಾಗುತ್ತಾರೆ ಗೊತ್ತೇ?
ಎಲ್ಲೋ ಒಂದು ಸಮಾರಂಭಕ್ಕೆ ಕರೆದಿರುತ್ತಾರೆ ಎಂದಾಗ ನೀವೇ ಮೊದಲಿಗರಾಗಿ ಹೋದಿರಿ ಎಂದಾಗ 'ಇಂಥಾ ಹಪಾಪಿತನವೇ? ಕರೆದ್ವಿ ಅಂದ್ರೆ ಇಷ್ಟು ಬೇಗಾ ಬರೋದು?' ಅಂತ ಯಾರಾದ್ರೂ ಕೇಳಿಬಿಟ್ಟರೆ? ಒಂದು ಬರ್ತ್ಡೇ ಪಾರ್ಟಿಗೆ ಕರೆದಿದ್ದಾಗ ಸರಿಯಾದ ಟೈಮಿಗೆ ನೀವು ಹೋದಾಗ ಅವರಿನ್ನೂ ಸಿದ್ಧತೆ ಮಾಡುತ್ತಿರಬಹುದು. ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡು ಹೋದ ನೀವು ಬಲೂನ್ ಕಟ್ಟಲು ನಿಲ್ಲಬೇಕಾದೀತು ಅಥವಾ ಅಂಗಡಿಗೆ ಹೋಗಿ ಕೇಕು pickup ಮಾಡಬೇಕಾದೀತು. ಮತ್ಯಾವುದೋ ಪಾರ್ಟಿಗೆ ಬೇಗ ಹೋಗಿದ್ದಾಗ ನಿಮಗೆ "ಹೋಟೆಲ್'ನಿಂದ 'ಗೋಬಿ ಮಂಚೂರಿಯನ್' ಪಿಕ್ ಮಾಡ್ಕೊಂಡ್ ಬರ್ತೀರಾ?" ಎನ್ನಬಹುದು. ಅದು gravy ಇದೆ ಅಂತ ನಿಮಗೆ ಹೇಳಿರೋದಿಲ್ಲ. ಬಿಳೀ ಷರಟು ಧರಿಸಿದ ನೀವು ಆ trayಯನ್ನು ನಿಮ್ಮದೇ ಕೂಸಿನಂತೆ ತೆಗೆದುಕೊಂಡು ಬಂದು ಇಟ್ಟಾಗ ಕಲೆಯಾದ ನಿಮ್ಮ ಷರಟನ್ನು ನೋಡಿ ನಿಮ್ಮಾಕೆ grave ತೊಡೋ ಹಾಗೆ ಕಣ್ಣುಬಿಟ್ಟರು ಅಂದರೆ ಅಲ್ಲಿಗೆ ಮುಗೀತು. ಜಪ್ಪಯ್ಯ ಅಂದ್ರೂ ಇನ್ನು ಮುಂದೆ ನೀವು ಸರಿಯಾದ ಟೈಮಿಗೆ ಹೋಗೋದಿಲ್ಲ.
ಇಂಥದ್ದೇ ಕಾರಣ ಅಂತ ಇರದೇ ಹೇಗೋ ತಡವಾಗುತ್ತದೆ. ಯಾವುದೇ ಕಾರಣಕ್ಕೆ ತಡವಾಗಿದ್ದರೂ ನಿಮ್ಮ ಮನಸ್ಸಿಗೆ ಬರುವ ಮೊದಲ ಆಲೋಚನೆ ಅಂದ್ರೆ "ಯಾವ ಕಾರಣ ಹೇಳಿ ಈ ದಿನ ತಡ ಆಗಿದ್ದಕ್ಕೆ ತಪ್ಪಿಸಿಕೊಳ್ಳಬಹುದು?" ಅಂತ.
ಒಂದಂತೂ ನಿಜ, ನೀವು ಕಚೇರಿಗೆ ಬೇಗ ಹೋದ ದಿನ ಬಾಸ್ ತಡವಾಗಿ ಬರ್ತಾರೆ. 'ಯಾಕ್ರೀ ತಡ?' ಅಂತ ನೀವು ಕೇಳೋ ಹಾಗಲ್ಲ! ನೀವು ತಡವಾಗಿ ಹೋದ ದಿನ, ಅವರು ಬಹಳ ಬೇಗ ಬಂದು ವಕ್ಕರಿಸುತ್ತಾರೆ. ಗ್ರಹಚಾರ ಜಾಸ್ತಿ ಕೆಟ್ಟಿದ್ದರೆ, ಅವರ ಕಣ್ಣಿಗೆ ಬೀಳಬಾರದು ಅಂತ ಹೋಗುತ್ತಿದ್ದರೆ ಅವರು ನಿಮ್ಮ ಮುಂದೆಯೇ ಬರಬಹುದು, ಅಥವಾ ನಿಮ್ಮ ಕುರ್ಚಿಯ ಬಳಿಯೇ ನಿಂತು ಮತ್ತೊಬ್ಬರ ಬಳಿ ತುಂಬಾ ಮುಖ್ಯವಾದ ವಿಷಯ ಮಾತನಾಡುತ್ತಿರಬಹುದು.
ಯಾವುದೇ ಕೆಲಸಕ್ಕೆ ತಡವಾಗಿ ಹೋಗೋದೇ ಅಭ್ಯಾಸವಾಗಿ ಹೋಗಿದ್ದರೆ, ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರೆ ಖಂಡಿತವಾಗಿಯೂ ಈ ದಿಶೆಯಲ್ಲಿ ಕೊಂಚ ಎಚ್ಚರಿಕೆ ವಹಿಸಬೇಕಾಗುತ್ತದೆ. ಮರುದಿನಕ್ಕೆ ಹಿಂದಿನ ದಿನವೇ ಒಂದಷ್ಟು ತಯಾರಿ ಇದ್ದರೆ ಒಳಿತು. ಬೆಲ್ಟು, ಕರವಸ್ತ್ರ, ಲಿಪ್ಸ್ಟಿಕ್, ಕಾರಿನ ಕೀ, ಮನೆಯ ಕೀ, ವಾಲೆಟ್, ಪರ್ಸ್ ಇತ್ಯಾದಿಗಳು ನಿತ್ಯವೂ ಒಂದೇ ಜಾಗದಲ್ಲಿರುವಂತೆ ಶಿಸ್ತು ಕಾಪಾಡಿಕೊಳ್ಳಿ. ಮರುದಿನದ ಬಟ್ಟೆಗಳನ್ನು ಹಿಂದಿನ ರಾತ್ರಿಯೇ ಒಂದೆಡೆ ಎತ್ತಿಕೊಳ್ಳಿ. ಬೆಳಿಗ್ಗೆ ತಿಂಡಿ / ಅಡುಗೆ ಮಾಡಬೇಕು ಎಂಬುದಾದರೆ ಅದಕ್ಕೆ ಎಷ್ಟು ಸಾಧ್ಯವೋ ಅಷ್ಟು ತಯಾರಿ ಹಿಂದಿನ ದಿನವೇ ಆಗಿರಲಿ. ಏಳೋದನ್ನ ಐದು ನಿಮಿಷ ಮುನ್ನವೇ ಏಳಿ. ಎಲ್ಲ ಕೆಲಸಕ್ಕೂ ಇಂತಿಷ್ಟು ಸಮಯ ಅಂತ ಮನಸ್ಸಿನಲ್ಲೇ ವಿಂಗಡಿಸಿಕೊಳ್ಳಿ. ಒಮ್ಮೊಮ್ಮೆ ತಡವಾಗಬಹುದು ಆದರೆ ಅದೇ ಅಭ್ಯಾಸವಾಗದಿರಲಿ.
ದೊಡ್ಡ ವ್ಯಕ್ತಿಗಳಿಗೆ ಕಾಯಿಸೋದ್ರಲ್ಲಿ ಅದೇನೋ ಖುಷಿ ಸಿಗುತ್ತೆ, ಇಂಥವರು ಎಲ್ಲೇ ಹೋದರು ತಡವಾಗಿಯೇ ಹೋಗ್ತಾರೆ. ದೊಡ್ಡ ವ್ಯಕ್ತಿತ್ವದವರು ತಡ ಮಾಡೋದಿಲ್ಲ, ಮಾಡಿದರೂ ಕ್ಷಮೆ ಯಾಚಿಸುತ್ತಾರೆ. ಸಮಯಕ್ಕಿಂತಾ ಮೊದಲೇ ಅಥವಾ ಸಮಯಕ್ಕೆ ಸರಿಯಾಗಿ ಒಂದೆಡೆ ಇರುವುದು ಯಾರನ್ನೂ ಮೆಚ್ಚಿಸಲು ಅಲ್ಲ. ನಿಮ್ಮೊಳಗಿನ ನಿಮ್ಮನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಲು ಅಷ್ಟೇ!
-
IMD Weather Forecast: ಈ ಭಾಗಗಳಲ್ಲಿ ಒಂದು ವಾರ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ -
Rashmika Mandanna: ಫೆಬ್ರವರಿಯಲ್ಲಿ ಮದುವೆ ವದಂತಿ ಬಗ್ಗೆ ಕೊನೆಗೂ ಉತ್ತರ ಕೊಟ್ಟ ರಶ್ಮಿಕಾ ಮಂದಣ್ಣ -
Gilli: ತುಂಬಾ ಸಣ್ಣ ಆಗಿದ್ದೀಯ: ಬಿಗ್ಬಾಸ್ ವಿನ್ನರ್ ಗಿಲ್ಲಿಗೆ ನಟ ಶಿವಣ್ಣ ನಿವಾಸದಲ್ಲಿ ಆತಿಥ್ಯ -
India Metro Network 2026: ದೇಶದ ಟಾಪ್ 20 ನಗರಗಳ ಮೆಟ್ರೋ ಜಾಲ: ದೆಹಲಿ ನಂ.1, ಬೆಂಗಳೂರಿಗೆ ಎಷ್ಟನೇ ಸ್ಥಾನ! -
Bank Holiday: ವಾರದಲ್ಲಿ ಎರಡು ದಿನ ರಜೆಗಾಗಿ ಸಿಬ್ಬಂದಿ ಮುಷ್ಕರಕ್ಕೆ ನಿರ್ಧಾರ: ದೇಶಾದ್ಯಂತ 4 ದಿನ ಬ್ಯಾಂಕ್ ಸೇವೆ ಸ್ಥಗಿತ -
Karnataka Weather: ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಾಲ್ಕು ದಿನ ಭಾರೀ ಚಳಿ ಮುನ್ಸೂಚನೆ -
ಬಜೆಟ್ ಅಧಿವೇಶನದ ಬಳಿಕ ರಾಜ್ಯ ಸಂಪುಟ ಪುನಾರಚನೆ: 8-12 ಮಂತ್ರಿಗಳಿಗೆ ಗೇಟ್ಪಾಸ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? -
ಜನವರಿ 21ರ ದಿನ ಭವಿಷ್ಯ: ಹಣಕಾಸಿನ ಲಾಭ, ಸ್ಥಿರತೆಗೆ ತಾಳ್ಮೆ ವಹಿಸುವುದು ಅಗತ್ಯ -
ಹೊರರಾಜ್ಯದ ವಾಹನಗಳಿಗೆ ತಪಾಸಣೆಯಿಲ್ಲದೆ ಎಫ್ಸಿ; ಆರ್ಟಿಒ ಅಧಿಕಾರಿ ಅಮಾನತು -
Gilli Marriage: ಗಿಲ್ಲಿ ಜೊತೆ ಮದುವೆ ಏನಿಲ್ಲ, ಸ್ನೇಹ ಮುಂದುವರಿಯುತ್ತೆ: ಕ್ಲಾರಿಟಿ ಕೊಟ್ಟ ಕಾವ್ಯ -
'ಕೆಪಿಎಸ್ ಮ್ಯಾಗ್ನೆಟ್ ಯೋಜನೆ': 40,000 ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ಆದೇಶ, ಜನಾಕ್ರೋಶ -
ಲಕ್ಕುಂಡಿಯಲ್ಲಿ ಬಂಗಾರದ ನಿಧಿ ಸಿಕ್ಕ ಬಳಿಕ ಹೊಸ ತಿರುವು, ಭೂಮಿ ಬೆಲೆ ದುಪ್ಪಟ್ಟು












Click it and Unblock the Notifications