ಶ್ರೀನಾಥ್ ಭಲ್ಲೆ ಅಂಕಣ; ಬತ್ತಳಿಕೆಯೊಳಗಿನ ಬಾಣಗಳು

ಒಂದಾನೊಂದು ಕಾಲದಲ್ಲಿ ನೃಪತುಂಗ ರಸ್ತೆಯಲ್ಲಿರುವ YMCAನಲ್ಲಿ ಒಂದು conferenceಗೆ ಹೋಗಿದ್ದೆ. ಅಲ್ಲಿಗೆ ಬಂದ ಮುಖ್ಯ ಅತಿಥಿಗಳು ಆಡಿದ ಮಾತುಗಳು ಇನ್ನೂ ನೆನಪಿದೆ. ಅವರಾಡಿದ ಅದೇ ಮಾತುಗಳು ಅಲ್ಲದಿದ್ದರೂ ಆ ಅರ್ಧ ಗಂಟೆಯ ಸಾರಾಂಶ ಹೀಗಿದೆ.

ದಿನನಿತ್ಯದಲ್ಲಿ ಕಲಿಕೆ ಅನ್ನೋದು ನಿಮಗೆ ಅವಿಭಾಜ್ಯ ಅಂಗವಾಗಿರಬೇಕು. ಕಲಿಕೆ ನಿಲ್ಲಿಸಿದ ದಿನ ನೀವು obsolete ಆಗುವಿರಿ. ಆ ದಿನದಿಂದ ನಿಮಗಿಂತ ಹಲವಾರು ಮಂದಿ ಮುಂದೆ ಹೋಗಿರುತ್ತಾರೆ. ಹೀಗೇ ಒಂದೊಂದು ದಿನ ಮುಂದೆ ಸಾಗಿದಂತೆ ನೀವು ಹಿಂದುಳಿಯುತ್ತಾ ಸಾಗುವಿರಿ. ಮಾರುಕಟ್ಟೆಯಲ್ಲಿ ನಿಮ್ಮ ಬೆಲೆ ಇಳಿಯುತ್ತಾ ಸಾಗುತ್ತದೆ. ಹೀಗೆಯೇ ಸಾಗಿತ್ತು ಅವರ ಮಾತು. ಬಹುಶಃ ಈ ಮಾತುಗಳು ಅಂದಿಗೂ, ಇಂದಿಗೂ ಮುಂದೆಂದಿಗೂ ಸಲ್ಲುವಂಥ ಮಾತುಗಳೇ ಆಗಿರುತ್ತದೆ.

ಇಲ್ಲಿ obsolete ಎಂದರೆ ತ್ಯಕ್ತ ಅಥವಾ ತ್ಯಾಜ್ಯ ಎನ್ನಬಹುದು. ಅವರಾಡಿದ ಮಾತುಗಳಲ್ಲಿ ಹಲವಾರು ವಿಚಾರಗಳು ಅಡಕವಾಗಿದೆ. ಮೊದಲಿಗೆ, ದಿನನಿತ್ಯದಲ್ಲಿ ಕಲಿಕೆ ಇರಬೇಕು ಅಂದರೆ ಇಂದು ಬಡಗಿಯಂತೆ ಕೆತ್ತಿ ನಾಳೆ ಬೆಡಗಿಯಂತೆ ನರ್ತಿಸುವುದನ್ನು ಕಲಿಯುವುದಲ್ಲ. ಅದು ಕಲಿಕೆಯಲ್ಲ ಬದಲಿಗೆ ಅರಿವಿರುವ ಜ್ಞಾನದ ಬಳಕೆ. ಈ ಬಳಕೆ ಮಾಡಬೇಕು ಎಂದರೆ ಕಲಿಯಬೇಕಲ್ಲವೇ? ದಿನನಿತ್ಯದಲ್ಲಿ ಕಲಿಕೆ ಎಂದರೆ ನಾವು ಮಾಡುವ ಕೆಲಸವನ್ನೇ ವಿಭಿನ್ನವಾಗಿ ಮತ್ತು ಹೊಸ ರೀತಿಯಲ್ಲಿ ಮಾಡುತ್ತಾ ನಮಗಿರುವ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು.

Learning Should Be An Integral Part Of Life

ಹೀಗೇ ನಡೆಸಿದಾಗ ಆ ಕೆಲಸ ಲೀಲಾಜಾಲ ಆಗೋದು ಸಹಜ. ಆಮೇಲೆ ಸಹಜವಾಗಿ ಆ ಕೆಲಸ ಬೇಸರ ಮೂಡಿಸುವುದೂ ಸಹಜ. ಹಾಗಾಗಿ ಗೊತ್ತಿರುವುದನ್ನು ಹೊಸ ರೀತಿಯಲ್ಲಿ ಮಾಡುವಂತೆಯೇ, ಒಂದು ಹೊಸ ಕಲಿಕೆಯನ್ನು ಸಮಾನಾಂತರವಾಗಿ ಅಭ್ಯಸಿಸುತ್ತಾ ಸಾಗಬೇಕು. ಹೀಗೆ ನಡೆಸಿದಾಗ ಇಂದು ಬಡಗಿ, ನಾಳೆ ಸಾಹಿತ್ಯ, ಮರುದಿನ ಹಾಡುಗಾರಿಕೆ ಅಂತ ಮನಸ್ಸನ್ನು ಉಲ್ಲಾಸದಿಂದ ಇಟ್ಟುಕೊಳ್ಳಬಹುದು.

ಈಗ ಅವರಾಡಿರುವ ಮಾತುಗಳಿಂದ ನಾನಾಡಲಿರುವ ಮಾತುಗಳಿಗೆ ಬರುತ್ತೇನೆ. ದಿನ ನಿತ್ಯದಲ್ಲಿ ಕಲಿಕೆ ಇರಬೇಕು ಎಂದರೆ ನಿಮ್ಮ ಬತ್ತಳಿಕೆಯನ್ನು ಖಾಲಿ ಇಡದಿರಿ. ರಣರಂಗದಲ್ಲಿ ಹೋರಾಡುವಾಗ ಬಿಲ್ಲಿಗೆ ಬಾಣ ಹೂಡಬೇಕು ಎಂದಾಗ ಬಾಣವೇ ಇಲ್ಲದಿದ್ದರೆ ಏನು ಮಾಡುವಿರಿ? ಬಿಲ್ಲಿನಿಂದ ಹೋರಾಡಲಾದೀತೇ? ಆದರೆ, ಬತ್ತಳಿಕೆಯೇನೋ ಖಾಲಿ ಆಯ್ತು ಸರಿ, ಆದರೆ ಇತರ ಅಸ್ತ್ರಗಳು ನಿಮ್ಮ ರಥದಲ್ಲಿದ್ದು ಅದರ ಬಳಕೆ ಗೊತ್ತಿದ್ದರೆ ಬದುಕಬಹುದು. ಈಗ ಊಹಿಸಿಕೊಳ್ಳಿ, ಬಿಲ್ವಿದ್ಯೆ ಬಿಟ್ಟು ಬೇರೇನೂ ಗೊತ್ತಿಲ್ಲ ಎಂದರೆ ಏನಾಗಬಹುದು ಅಂತ.

ಎಷ್ಟೋ ಸಾರಿ ನಮ್ಮ ಜೀವನದಲ್ಲಿ ಆಗುವುದು ಇದೇ. ಒಂದು ಕೆಲಸದಲ್ಲಿ ಪರಿಣತಿ ಹೊಂದಿ comfort zone ನಲ್ಲಿ ಕುಳಿತು ಬಿಡುತ್ತೇವೆ. ನಮ್ಮ ಸ್ಥಾನಕ್ಕೆ ಚ್ಯುತಿ ಇಲ್ಲ ಎಂದೇ ನಂಬಿರುತ್ತೇವೆ. ಆದರೆ ಕೆಲಸದಿಂದ ನಿವೃತ್ತಿಯಾಗಬಹುದು ಅಥವಾ ಆ ಕಂಪನಿಯೇ ಮುಚ್ಚಬಹುದು. ಹಾಗಾದಾಗಲೇ ಗೊತ್ತಾಗೋದು ನಮ್ಮ ಬತ್ತಳಿಕೆ ಖಾಲಿಯಾಗಿದೆ ಅಂತ.

Learning Should Be An Integral Part Of Life

ಬತ್ತಳಿಕೆಯೊಳಗಿನ ಬಾಣಗಳು ಎಂದರೆ ನಮ್ಮ skill set ಅರ್ಥಾತ್ ಕೌಶಲ್ಯ. ಎಲ್ಲವೂ ಕುಶಲವಾಗಿರುವಾ ತನಕ ಒಂದೇ ಕೌಶಲ್ಯ ಇದ್ದರೂ ಬಹುಶಃ ಬದುಕುಳಿಯಬಹುದು ಅಥವಾ ಆ ಖಿನ್ನತೆಯಿಂದ ದೂರವಿರಬಹುದು. ಉದಾಹರಣೆಗೆ ಅರ್ಜುನ. ಜಗತ್ತಿನ ಶ್ರೇಷ್ಠ ಧನುರ್ಧಾರಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದವನು. ಅನೇಕ ಯುದ್ಧಗಳನ್ನು ಏಕಾಂಗಿಯಾಗಿಯೇ ಹೋರಾಡಿ ಗೆದ್ದವನು ಎಂದೆಲ್ಲಾ ಖ್ಯಾತಿ ಹೊಂದಿದ್ದವನು. ಮಹಾಭಾರತದ ಯುದ್ಧಾನಂತರ ಸನ್ನಿವೇಶ ಬದಲಾಗುತ್ತದೆ. ಅಲ್ಲಿಂದಾಚೆಗೆ, ಅಂದರೆ ಮೂವತ್ತಾರು ವರುಷಗಳ ನಂತರ ಒಂದು ಸನ್ನಿವೇಶದಲ್ಲಿ ಹೆಂಗಸರು ಮಕ್ಕಳನ್ನು ಅಡ್ಡಗಟ್ಟಿ ಹಿಂಸೆ ಮಾಡುವ ದರೋಡೆಗಾರರನ್ನು ಎದುರಿಸಲೂ ಆಗದೆ ನಿಶ್ಶಕ್ತನಾಗಿದ್ದ. ಅವನ ಗಾಂಡೀವವೇ ಅವನಿಗೆ ಸಹಾಯಕ್ಕೆ ಬರಲಿಲ್ಲ. ವಯೋಸಹಜವಾಗಿ ಅವನ ಬತ್ತಳಿಕೆ ಖಾಲಿಯಾಗಿತ್ತು ಎನ್ನಬಹುದು.

ಬಾಣ ಬತ್ತಳಿಕೆ ಎಂದಾಗ ಬಭೃವಾಹನ ಸಿನಿಮಾ ನೆನಪಾಗೋದು ಖಂಡಿತ. ಬಭೃವಾಹನ ತನ್ನ ತಾಯಿಯ ಬಳಿಗೆ ಒಂದು ಹೊಸ ಬಾಣವನ್ನು ತಂದು ತೋರಿಸುತ್ತಾ - ನನ್ನ ಬತ್ತಳಿಕೆಯಲ್ಲಿರುವ ಈ ಹೊಸ ಬಾಣ ಯಾವುದು? ಎಂದು ಪ್ರಶ್ನೆ ಮಾಡುತ್ತಾನೆ. ಆಗ ಆ ತಾಯಿ ಹೇಳೋದು, ಅದನ್ನು ಹಾಗೇ ಇಟ್ಟುಕೋ. ಆದರೆ ನಾನು ಹೇಳುವ ತನಕ ಬಳಸಬೇಡ ಅಂತ. ನಮ್ಮ ಸನ್ನಿವೇಶದಲ್ಲಿ ಈ ಹೊಸ ಬಾಣ ಎಂಬುದನ್ನು ಹೊಸ ಕೌಶಲ್ಯ ಎಂದು, ಅದನ್ನು ಬತ್ತಳಿಕೆಯಲ್ಲಿ ಇರಿಸಿಕೊಂಡು, ಸಮಯ ಬಂದಾಗ ಬಳಸಿಕೊಳ್ಳಬೇಕು ಎಂಬುದಾಗಿ ಅರ್ಥೈಸಿಕೊಳ್ಳೋಣ.

Learning Should Be An Integral Part Of Life

ಸಮಯ ಬಂದಾಗ ಉಪಯೋಗಿಸುವುದು ಎಂದಾಗ ಇಲ್ಲಿ ಒಂದು ವಿಷಯ ಉಲ್ಲೇಖಿಸಲೇಬೇಕು. ಪ್ರತೀ ಕುಸ್ತಿಯ ಗುರು ತನ್ನಲ್ಲೊಂದು ಪಟ್ಟನ್ನು ಹೇಳಿಕೊಡದೇ ಇಟ್ಟುಕೊಂಡಿರುತ್ತಾರೆ ಎನ್ನುತ್ತಾರೆ. ಕಾರಣ ಇಷ್ಟೇ, ಗುರುವಿಗೆ ತನ್ನ ಶಿಷ್ಯ ತನಗಿಂತ ಮುಂದೆ ಸಾಗಬೇಕು ಎಂಬ ಇಚ್ಛೆ ಇರುತ್ತದೆ. ಆದರೆ ಹಾಗೆ ಮುಂದೆ ಸಾಗುತ್ತ ಗುರುವಿನ ಹೆಸರನ್ನು ಉಳಿಸಿದರೆ ಯಾವುದೂ ತೊಂದರೆಯಾಗುವುದಿಲ್ಲ. ಆದರೆ ಕಾಲ ಹೇಗೆ ಆಟವಾಡಿಸುತ್ತದೋ ಯಾರಿಗೆ ಗೊತ್ತು. ಗುರುವನ್ನು ಮೀರಿಸುವ ಆ ಶಿಷ್ಯ ಒಂದು ದಿನ ಗುರುವಿನ ವಿರುದ್ಧ ತಿರುಗಿ ಬಿದ್ದರೆ?

ಕಾರ್ಪೊರೇಟ್ ಜಗತ್ತಿನಲ್ಲಿ ಇದನ್ನು job security ಎನ್ನುತ್ತಾರೆ. ನಾವು ಮಾಡುವ ಕೆಲಸಗಳನ್ನು ಮತ್ತೊಬ್ಬರಿಗೆ ಹೇಳಿಕೊಡಬೇಕು. ನಾವು ರಜೆ ಅಂತ ಹೋಗುವಾಗ ಅಥವಾ ನಮ್ಮ ಮೇಲೆ ಬಸ್ ಹರಿಯಿತು ಎಂದರೆ ಕಂಪನಿಯ ಕೆಲಸ ನಿಲ್ಲಬಾರದು. ಹಾಗಾಗಿ ನಮ್ಮ ಕೆಲಸವನ್ನು ಮತ್ತೊಬ್ಬರು ಸಲೀಸಾಗಿ ನಡೆಸಿಕೊಂಡು ಹೋಗುವಂತೆ ತರಬೇತಿ ನೀಡಿರಬೇಕು ಅಥವಾ ದಾಖಲಿಸಿರಬೇಕು. ಆದರೆ ತಮ್ಮ ಬತ್ತಳಿಕೆ ಯಾವುದೇ ಕಾರಣಕ್ಕೂ ಖಾಲಿಯಾಗಬಾರದು ಅಂತ ಎಲ್ಲವನ್ನೂ ಮತ್ತೊಬ್ಬ ಉದ್ಯೋಗಿಗೆ ಯಾರೂ ಹೇಳಿಕೊಡುವುದಿಲ್ಲ. ತಾವಿಲ್ಲದಿದ್ದಾಗ ತಮ್ಮ ಬೆಲೆಯು ಇತರರಿಗೆ ತಿಳಿಯಬೇಕು ಎಂದರೆ ಒಂದಷ್ಟು ಸೂಕ್ಷ್ಮ ವಿಚಾರಗಳು ತಮ್ಮ ಬತ್ತಳಿಕೆಯಲ್ಲಿ ಇರಿಸಿಕೊಂಡಿರುತ್ತಾರೆ.

ಸಿನಿಮಾ ಜಗತ್ತಿನಲ್ಲಿ ಈ ಬತ್ತಳಿಕೆಯ ವಿಚಾರ ಹೇಗೆ? ಒಬ್ಬ ನಟ ಅಥವಾ ನಟಿ ಒಂದೇ ರೀತಿಯ ಪಾತ್ರವನ್ನು ನಿರ್ವಹಿಸುತ್ತಿದ್ದರೆ ಕೆಲವು ಕಾಲ ಅದು ಚಲಾವಣೆಯಲ್ಲಿರಬಹುದು. ಆದರೆ ಪ್ರೇಕ್ಷಕನಿಗೆ ಒಮ್ಮೆ ಬೇಸರ ಮೂಡಿದರೆ ಅಲ್ಲಿಗೆ ಆ ನಟ ಅಥವಾ ನಟಿಯ ಬತ್ತಳಿಕೆ ಖಾಲಿಯಾಯಿತು ಅಂತಲೇ ಅರ್ಥ. ಈ ಅಪಾಯವನ್ನು ಮುಂಚಿತವಾಗಿಯೇ ಊಹಿಸಿಕೊಂಡು ಮುನ್ನೆಚ್ಚರಿಕೆಯ ಕ್ರಮವಾಗಿ ಹೊಸ ಬಾಣಗಳನ್ನು ಸೇರ್ಪಡೆ ಮಾಡಿಕೊಳ್ಳದಿದ್ದರೆ ಅವರ ಆ ವೃತ್ತಿ ಜೀವನ ಕೊನೆಯಾಗಬಹುದು.

ಕಲಿತಷ್ಟೂ ಕಲಿಯಲು ಉಳಿದಿರುವ, ಎಂದೆಂದಿಗೂ ಖಾಲಿಯಾಗದ ಬತ್ತಳಿಕೆಯೇ ಎಲ್ಲ ವಿದ್ಯೆಗಳೂ. ಆದರೆ ಅಂಥವಲ್ಲಿ ಮುಕುಟಪ್ರಾಯ ಎಂದು ಒಂದಿದ್ದರೆ ಅದೇ ಅಡುಗೆಯ ಕಲೆ. ಇಂತಿಷ್ಟು ಪ್ರಮಾಣ ಹಾಕಿದಾಗ ಇಂತಹ ರುಚಿ ಬಂದೇ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ ಕಾರಣ ನೀರಿನ ರುಚಿ ಬೇರೆ ಆದರೆ ಎಲ್ಲವೂ ವ್ಯತ್ಯಾಸವಾಗುತ್ತದೆ. ಒಂದು ಚಿಟಿಕೆ ಉಪ್ಪು ಭಿನ್ನವಾದರೆ ರುಚಿಯೇ ಬೇರೆಯಾಗುತ್ತದೆ. ಒಂದು ಟೇಬಲ್ ಸ್ಪೂನ್ ಅದು ಹಾಕಿ, ಒಂದು ಟೀ ಸ್ಪೂನ್ ಇದು ಹಾಕಿ ಎಂದಾಗ ಅಲ್ಲೊಂದು ಅಳತೆ ಇದೆ ಅಂತಾಗಬಹುದು ಆದರೆ ರುಚಿಗೆ ತಕ್ಕಷ್ಟು ಅದು, ಕಣ್ಣಳತೆಯಷ್ಟು ನೀರು, ಒಂದು ಹಿಡಿ ಇದು ಅಂತೆಲ್ಲಾ ಹೇಳಿದಾಗ ನಮ್ಮಪ್ಪನಾಣೆ ಪ್ರತೀ ಬಾರಿಯೂ ಆ ರುಚಿ ಭಿನ್ನವೇ ಸರಿ. ಬಹುಶಃ ಇದಕ್ಕೇ ಇರಬೇಕು ಲೋಕೋ ಭಿನ್ನ ರುಚಿಃ ಅಂತ ಹೇಳೋದು. ಒಬ್ಬೊಬ್ಬರ ಅಡುಗೆಯೂ ಭಿನ್ನ ರುಚಿ ಹೊಂದಿರುತ್ತದೆ ನೋಡಿ. ಯಾವುದು ಏನೇ ಆಗಿರಲಿ, ದೇವಸ್ಥಾನದಲ್ಲಿ ಒಂದು ಹಿಡಿಯಷ್ಟೇ ಪ್ರಸಾದ ಕೊಡುವರಲ್ಲ ಅದರ ರುಚಿಯ ಮುಂದೆ ಬೇರಾವ ರುಚಿಯೂ ಇಲ್ಲ ಎನ್ನುತ್ತೇನೆ.

ಜೀವನದಲ್ಲಿ ಉತ್ಸಾಹವೆಂಬ ಬತ್ತಳಿಕೆಯು ಬತ್ತದಿರಲಿ. ಕಲಿಕೆಗಳು ಬಾಣಗಳಂತೆ ನಿರಂತರವಾಗಿ ಹರಿತವಾಗಿ ಹರಿಯುತ್ತಿರಲಿ. ಯಾವ ಕಲಿಕೆಯೂ ಚಿಕ್ಕದಲ್ಲ. ಕಲಿಯುವುದರಲ್ಲಿ ಕಲಿಕೆ ಇದೆ. ಕಲಿಸುವುದರಲ್ಲಿಯೂ ಕಲಿಕೆ ಇದೆ. ಆಯ್ತೆ ನಿಮ್ಮದು. ಏನಂತೀರಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+