ಧರೆಯೇ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ?

ನಂಬಿರೋವರಿಂದಲೇ ನಮಗೆ ಅನ್ಯಾಯ ಆದರೆ ಹರ ಕೊಲ್ಲಲ್ ಪರ ಕಾಯ್ವನೇ? ಮಾತು ತಂತಾನೇ ಹೊರಬರುತ್ತೆ. ಯಾರನ್ನೋ ನಾವು ಆಶ್ರಯಿಸಿ ಅವರ ಬಳಿ ಹೋದಾಗ ಅವರಿಂದಲೇ ತೊಂದರೆಗೆ ಒಳಗಾದರೆ ಈ ಮಾತು ಆಡುತ್ತೇವೆ. ಇಲ್ಲಿ ಹರ ಎಂದರೆ ಈಶ್ವರನೇ ಅಲ್ಲ ದೈವ ಅಂತ ಅಂದುಕೊಳ್ಳಿ. ಅಥವಾ ದೈವ ಅಂತ ನೀವು ನಂಬಿರೋ ಮನುಷ್ಯನೂ ಆಗಬಹುದು!

'ಗಗನ' ಸಿನಿಮಾದಲ್ಲಿ ಒಂದು ಸನ್ನಿವೇಶ ಇದೆ. ಇಡೀ ಸಿನಿಮಾ ನಿಂತಿದ್ದೇ ಆ ಸನ್ನಿವೇಶದಿಂದ ಅಂತಾನೂ ಅನ್ನಬಹುದು. ರಾಜಾನಂದ್ ದೈವ ಅಂತ ನಂಬಿ ಅಶ್ವತ್ ಅವರ ಬಳಿ ಹಣದ ಸಹಾಯ ಕೇಳಲು ಹೋಗುತ್ತಾರೆ. ಸನ್ನಿವೇಶದ ವೈಪರೀತ್ಯದ ಪರಿಣಾಮವಾಗಿ ಅಶ್ವಥ್ ತಮ್ಮ ಬಳಿ ಹಣ ಇಲ್ಲ ಎನ್ನುತ್ತಾರೆ. ಹರ ಕೊಲ್ಲಲ್ ಪರ ಕಾಯ್ವನೆ ಅಂತ ವೇದಾಂತ ಹೇಳಿ ಹತಾಶರಾಗಿ ಮನೆಗೆ ಹೋಗಿದ್ದರೆ ಸಿನಿಮಾನೇ ಇರ್ತಿರಲಿಲ್ಲ!

ನೋಡೋದಕ್ಕೆ ಅಥವಾ ಕೇಳೋಕ್ಕೆ ಸಿಂಪಲ್ ಅನ್ನಿಸಿದರೂ ಇಂಥಾ ವಿಷಯದಲ್ಲಿ ಎಷ್ಟೆಷ್ಟೋ ಸಂಬಂಧಗಳು ಮುರಿದಿವೆ, ಗೋಡೆಗಳು ಎದ್ದಿವೆ...

Beware of fraudsters, the world is not so trustworthy

ವೈದ್ಯೋ ನಾರಾಯಣೋ ಹರಿ: ಅನ್ನೋ ಮಾತು ಎಲ್ಲರೂ ಕೇಳಿಯೇ ಇರ್ತೀರಾ. ಅದೇನೋ ಗೊತ್ತಿಲ್ಲ, ಮನೆಯಲ್ಲಿ ಕೊಸ ಕೊಸ ಅಂತ ದಿನವೆಲ್ಲಾ ಒದ್ದಾಡಿಕೊಂಡು ಇರ್ತೀವಿ. ಸಂಜೆ ಡಾಕ್ಟರ್ ಬಳಿ ಹೋಗ್ತಿದ್ದ ಹಾಗೆ ಎಲ್ಲಾ ರೋಗ ಮಾಯಾ! ಕೆಮ್ಮಿರೋಲ್ಲ, ನೆಗಡಿ ಇರೋಲ್ಲ. ಅದೇ ನೋಡಿ ವೈದ್ಯರ ಕೈಗುಣ! ಅವರ ಕೈಗುಣ, ಮುಖದ ಮೇಲಿನ ಮಂದಹಾಸ ಇತ್ಯಾದಿ ವಿಶೇಷಗಳೇ ವೈದ್ಯರು ಎಂದರೆ ದೈವ ಎಂಬ ಮನೋಭಾವ ಮೂಡಿಸೋದು.

ಇಲ್ಲೂ ಹರ ಕೊಲ್ಲಲ್ ಎಂದು ಬಂದಾಗ ಏನ್ ಮಾಡೋದು? ಧರೆಯೇ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ?

ಬಹಳ ವರ್ಷಗಳ ಹಿಂದಿನ ಒಂದು ಘಟನೆ. ಅರ್ಥಾತ್ ಫೆಬ್ರವರಿ 1995ರಲ್ಲಿ ಬೆಳಕಿಗೆ ಬಂದ ಘಟನೆ. ಎಲ್ಲಮ್ಮ ದಾಸಪ್ಪ ಆಸ್ಪತ್ರೆಯಲ್ಲಿ ನಡೆಸುತ್ತಿದ್ದ ಒಂದು ದಂಧೆಯ ವಿಚಾರ. ಕೆಲಸ ಕೊಡಿಸುತ್ತೇವೆ ಎಂದು ಜನರನ್ನು ನಂಬಿಸಿ ಬೆಂಗಳೂರಿಗೆ ಕರೆತಂದು, ಆಸ್ಪತ್ರೆಗೆ ಸೇರಿಸೋದು. ಅವರಿಗೆ ಎಚ್ಚರವಾದ ಮೇಲೆ "ನೀವು ತಲೆ ಸುತ್ತಿ ಬಿದ್ದಿರಿ. ಆಸ್ಪತ್ರೆಗೆ ಸೇರಿಸಲಾಗಿದೆ. ಅಷ್ಟೇ ಅಲ್ಲದೆ ತುರ್ತಾಗಿ ಆಪರೇಷನ್ ಮಾಡಬೇಕಾಯ್ತು ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯವಾಗುತ್ತಿತ್ತು' ಅಂತ ಹೇಳಿ ಐದೋ ಆರೋ ಸಾವಿರ ಕೈಲಿಟ್ಟು ಕಳಿಸುತ್ತಿದ್ದರು.

Beware of fraudsters, the world is not so trustworthy

ಹಳ್ಳಿಯವನೇ ಆದರೂ ಒಬ್ಬಾತ "ಅಲ್ಲಾ, ತಲೆ ಸುತ್ತಿ ಬಿದ್ದವನು ನಾನು. ಆಸ್ಪತ್ರೆಗೆ ಸೇರಿಸಿದ್ದೂ ನನ್ನನ್ನೇ. ಆಪರೇಷನ್ ಆಗಿದ್ದು ನನಗೆ. ಆದರೆ ಮಾಡಿದ ಆಪರೇಷನ್'ಗೆ ದುಡ್ಡು ತೊಗೋತಾರಾ ಅಥವಾ ಕೊಡ್ತಾರಾ?" ಹೀಗೆ ಅನುಮಾನ ಬಂದು ತಮ್ಮೂರಿನ ಡಾಕ್ಟರ್ ಬಳಿ ಹೋದಾಗ ಅರಿವಾಗಿದ್ದು ಒಂದು ಕಿಡ್ನಿ ನಾಪತ್ತೆ ಅಂತ.

ಅಮಾಯಕರನ್ನು ಬಲೆಗೆ ಬೀಳಿಸಿಕೊಂಡು, ಕಿಡ್ನಿಯನ್ನು ಕದ್ದು, ಸೌದಿಯಲ್ಲಿನ ಸಿರಿವಂತರಿಗೆ ಅದನ್ನು ಮಾರಿ ದುಡ್ಡು ಮಾಡಿಕೊಳ್ಳುತ್ತಿದ್ದರು ಸಮಾಜಘಾತುಕರು ಮತ್ತು ಅಲ್ಲಿನ ಡಾಕ್ಟರ್'ಗಳು. ಕೆಲಸ ಕೊಡಿಸುತ್ತಾನೆ ಎಂಬ ನೆವದಿಂದ ಗೊತ್ತುಗುರಿಯಿಲ್ಲದೆ ಹಣಕಾಸು ಕಳೆದುಕೊಂಡವರು, ಶೀಲ ಕಳೆದುಕೊಂಡು ಕಾಮಾಟಿಪುರ ಸೇರಿದವರು, ಕಿಡ್ನಿ ಕಳೆದುಕೊಂಡವರೇ ಅಲ್ಲದೆ ಪ್ರಾಣವನ್ನೇ ಕಳೆದುಕೊಂಡವರೂ ಇದ್ದಾರೆ.

ಕಥೆ ಇಷ್ಟೇ ನೇರವಾಗಿದ್ದರೆ ಸಮಾಜಘಾತುಕರು ಎಲ್ಲೆಲ್ಲೂ ಇರ್ತಾರೆ ಎನ್ನಬಹುದಿತ್ತು. ಆದರೆ 'ರುಚಿ ಕಂಡ ಬೆಕ್ಕು' ಅನ್ನೋ ಹಾಗೆ ಒಮ್ಮೆ ರುಚಿ ಕಂಡ ಹಲವು ವೈದ್ಯರು ತಮ್ಮ ಹಸ್ತವನ್ನು ಸ್ವಲ್ಪ ಮುಂದೆ ಚಾಚಿ, ತಮ್ಮ ಆಸ್ಪತ್ರೆಗೆ ಖಾಯಿಲೆಯಿಂದ ಬಳಲುತ್ತ ದಾಖಲಾದ ರೋಗಿಗಳ ಕಿಡ್ನಿಯನ್ನೇ ಮಂಗಮಾಯ ಮಾಡಿದ್ದು ಅತ್ಯಂತ ಶೋಚನೀಯ. ಇದೇ 'ಹರ ಕೊಲ್ಲಲ್... ' ಪರಿಸ್ಥಿತಿ. ತಾವು ನಂಬಿದ ವೈದ್ಯರೇ ಹೀಗೆ ಮಾಡಿದರೆ ಇನ್ನಾರು ತಾನೇ ಖಾಯಿಲೆ ಗುಣಪಡಿಸಿಯಾರು?

Beware of fraudsters, the world is not so trustworthy

ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಹಲವು ತಿಂಗಳು / ವರ್ಷಗಳಿಂದಲೂ ನಡೆಯುತ್ತಿರುವ ಒಂದು ಹಗರಣ ಸ್ವಲ್ಪ ದಿನಗಳ ಹಿಂದೆ ಅಮೆರಿಕಾದಲ್ಲಿ ಭುಗಿಲೆದ್ದಿತು. ಡಾ| Larry Nassar, ಅಮೇರಿಕಾದ gymnastics ತಂಡದ ವೈದ್ಯ. ಅದರಲ್ಲೂ 'ಒಲಿಂಪಿಕ್ಸ್ gymnasts' ತಂಡದ ವೈದ್ಯ. ಒಲಿಂಪಿಕ್ಸ್'ನಲ್ಲಿ gymnasts' ತಂಡದಲ್ಲಿ ಭಾಗವಹಿಸಬೇಕು ಎಂಬ ಆಶಯ ಹೊತ್ತ ಯಾವುದೇ ಸ್ಪರ್ಧಿಯಾಗಲಿ (ಗಂಡು / ಹೆಣ್ಣು) ಈತನನ್ನು ಮೊದಲ ಕಾಣಲೇಬೇಕಿತ್ತು. ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ ಸ್ಪರ್ಧಿಗಳನ್ನು ತನಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದ. ಅರ್ಥಾತ್ ತನ್ನಿಚ್ಛೆಯಂತೆ ಅವರ ದೇಹವನ್ನು ಪರೀಕ್ಷೆಯ ನೆಪದಲ್ಲಿ ಬಳಸಿಕೊಂಡು ಆನಂದಿಸುತ್ತಿದ್ದ.

ಆತನ ವಿರುದ್ಧ ಎಷ್ಟೋ ಮಂದಿ ಹೆಣ್ಣುಗಳು ಮುಂದೆ ಬಂದು ತಮಗಾದ / ತಮಗಾಗಿದ್ದ ಅನ್ಯಾಯವನ್ನು ಹೇಳಿಕೊಂಡು ಅವನನ್ನು ಕಟಕಟೆಯಲ್ಲಿ ನಿಲ್ಲಿಸಿದರು. ಫೆಬ್ರವರಿ ಐದರಂದು ಈತನಿಗೆ ಶಿಕ್ಷೆ ವಿಧಿಸಲಾಯಿತು. ಈ ವೈದ್ಯನಿಗೆ ವಿಧಿಸಿರುವ ಶಿಕ್ಷೆ ಹತ್ತಲ್ಲ, ಇಪ್ಪತ್ತಲ್ಲ ಕನಿಷ್ಠ ನಲವತ್ತೈದು ವರ್ಷದಿಂದ ನೂರಾ ಇಪ್ಪತ್ತೈದು ವರ್ಷಗಳ ಸಜೆ. ಇನ್ನೊಂದರ್ಥದಲ್ಲಿ ಇವನಿಗೆ ಮುಕ್ತಿಯೇ ಇಲ್ಲ. ಇವನಿಂದ ಶೋಷಿತರಾದವರ ಸಂಖ್ಯೆ ಒಂದಲ್ಲಾ ಎರಡಲ್ಲ ಇನ್ನೂರೈವತ್ತಕ್ಕೂ ಹೆಚ್ಚು ಮಂದಿ. ವೈದ್ಯಕೀಯ ವೃತ್ತಿಗೆ ಒಂದು ದೊಡ್ಡ ಕಪ್ಪುಚುಕ್ಕಿ ಇವನು ಎಂದರೆ ಅತಿಶಯೋಕ್ತಿಯೇನಲ್ಲ.

ಮನುಷ್ಯ ಸತ್ತಿದ್ದರೂ ಅದನ್ನು ಸಂಬಂಧಿಗಳಿಗೆ ತಿಳಿಸದೇ ತಾವೇನೋ ಚಿಕಿತ್ಸೆ ನಡೆಸುತ್ತಿದ್ದೇವೆ ಎಂಬ ಸೋಗು ಹಾಕಿಕೊಂಡು ಆ ಔಷಧಿ ತನ್ನಿ, ಈ ಔಷಧಿ ತನ್ನಿ ಎಂದು ಸಂಬಂಧಿಗಳಿಂದ ದುಡ್ಡು ಖರ್ಚು ಮಾಡಿಸಿ ಕೊನೆಗೆ ಕನ್ನಡಕ ತೆಗೆಯುತ್ತಾ 'ಸಾರಿ' ಎಂದು ಹೇಳುವ ಸನ್ನಿವೇಶ ಸಿನಿಮಾದಲ್ಲಿ ಕಂಡಿದ್ದೇವೆ. ನಿಜಜೀವನದಲ್ಲಿ ಇಷ್ಟು ಸಿನಿಮೀಯ ಅಲ್ಲದಿದ್ದರೂ, ಸನ್ನಿವೇಶದಲ್ಲಿ ಅಷ್ಟು ವ್ಯತ್ಯಾಸ ಇಲ್ಲದೆ ಇರುವ ಹಲವಾರು ಘಟನೆಗಳನ್ನು ಕೇಳಿದ್ದೇವೆ. ತಾವು ಉಣ್ಣುವುದೇ ಅಲ್ಲದೇ ತಮ್ಮ ಮುಂದಿನ ಮತ್ತು ಹಲವು ತಲೆಮಾರುಗಳಿಗೂ ದುಡ್ಡು ಮಾಡೋ ಕೆಟ್ಟ ಬುದ್ದಿ ಯಾಕೋ ಅರ್ಥವೇ ಆಗೋದಿಲ್ಲ.

Beware of fraudsters, the world is not so trustworthy

ಪ್ರತಿ ಕ್ಷೇತ್ರದಲ್ಲಿ, ಎಷ್ಟು ದೈವಾಂಶ ಸಂಭೂತರಿರುತ್ತಾರೋ ಅದಕ್ಕಿಂತಲೂ ಹೆಚ್ಚು ಮಂದಿ ಬರೀ ಭೂತಗಳೇ ಇರುತ್ತಾರೆ ಎಂಬುದು ಸತ್ಯ. ಬೇರಾವ ಕ್ಷೇತ್ರದಲ್ಲಿ ಇಂಥಾ ಕೆಡುಕರು ಇದ್ದರೂ ಹೇಗೋ ಸಹಿಸಿಕೊಂಡೋ ಅಥವಾ ಪ್ರತಿಭಟಿಸಿಯೋ ಇರಬಹುದು. ಆದರೆ ವೈದ್ಯಕೀಯ ಕ್ಷೇತ್ರ ಮಾತ್ರ ಈ ವಿಷಯದಲ್ಲಿ ಹೊರತಾಗಿರಬೇಕು ಎಂಬೋದು ಇಲ್ಲಿನ ದನಿ.

ಕಾರಣ ಇಷ್ಟೇ, ಬೇರೆಡೆಯ ಅನ್ಯಾಯಗಳು ನಮ್ಮ ನಿತ್ಯ ಜೀವನಕ್ಕೋ, ಮುಂದಿನ ಓದಿಗೋ, ಕ್ರೀಡೆಗೂ ಹೀಗೆ ಏನೋ ಬಾಧಕವಾಗುತ್ತದೆ. ಆದರೆ ವೈದ್ಯಕೀಯ ಕ್ಷೇತ್ರದ ತಪ್ಪು / ಮೋಸ / ವಂಚನೆಗಳು ಮನುಷ್ಯನನ್ನು ಬದುಕಿದ್ದೂ ಸತ್ತಂತೆ ಮಾಡಬಹುದು ಅಥವಾ ಸಾಯಿಸಿಯೇಬಿಡಬಹುದು. ಹೋದವರ ಮನೆಯವರು ರಾತ್ರಿ ಕಳೆದು ಬೆಳಗಾಗೋಷ್ಟರಲ್ಲಿ ಬೀದಿಗೆ ಬರಬಹುದು, ನಿರಾಶ್ರಿತರಾಗಬಹುದು ಅಥವಾ ಇನ್ನೇನೇನೋ ಅವಘಢಗಳಾಗಬಹುದು.

ಹೇಗೆ ಎಲ್ಲೆಲ್ಲೂ ಲೈಂಗಿಕ ಅನ್ಯಾಯಗಳ ಬಗ್ಗೆ ಆಂದೋಲನ ಎದ್ದು ಸಮಾಜದಲ್ಲಿ ದೊಡ್ಡ ತಲೆಗಳು ಎನಿಸಿಕೊಂಡಿದ್ದವರು ಕಂಬಿ ಎಣಿಸುವ ಹಾಗೆ ಆಗುತ್ತಿದೆಯೋ, ಅವು ಮಿಕ್ಕ ಕ್ಷೇತ್ರಗಳಿಗೂ ಹಬ್ಬಿ ಸಮಾಜಘಾತುಕರಿಗೆ ಎಚ್ಚರಿಕೆ ಘಂಟೆ ಬಾರಿಸುವ ಯತ್ನಗಳು ಆಗಬೇಕು.

ಆಂದೋಲನ ಎಂದರೆ ಬೀದಿ ದೀಪಕ್ಕೆ ಕಲ್ಲು ಹೊಡೆಯಬೇಕು, ಬಸ್ಸಿಗೆ ಬೆಂಕಿ ಹಚ್ಚಬೇಕು ಅಂತಲ್ಲಾ. ಇವು ವಿವೇಚನೆ ಹೊಂದಿರುವ ಆಂದೋಲನ ಅಲ್ಲ. ಬದಲಿಗೆ ಕೆಲಸವಿಲ್ಲದವರು ಹಣಪಡೆದು ನಡೆಸುವ ಕೆಲಸಗಳು.

ಇಂದಿನ ಸಮಾಜದಲ್ಲಿ ಇವೆಲ್ಲಾ ಸುಧಾರಿಸೋಲ್ಲ ಬಿಡಿ ಎಂದು ಮೂಗೆಳೆದು ಸುಮ್ಮನಾಗೋ ದಿನಗಳು ಇನ್ನು ಮುಂದೆ ಬಾರದಿರಲಿ. ಅನ್ಯಾಯವಾದಾಗ ಪ್ರತಿಭಟನೆ ಇರಲಿ ಆದರೆ ಅದರಿಂದ ಸಮಾಜಕ್ಕೆ ಒಳಿತಾಗಬೇಕೇ ವಿನಃ ತೊಂದರೆಯಾಗಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+