ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗಂದೂರು ದೇವಸ್ಥಾನಕ್ಕೆ ನನ್ನ ತೀರ್ಥಯಾತ್ರೆ- ಶಾಮ್

By Shami
|
Google Oneindia Kannada News

ಇವರನ್ನು ಜನ ಉಪ್ಪಿನಕಾಯಿ ಭಟ್ರು ಅಂತ ಕರೀತಾರೆ. ಆದರೆ ಅವರ ನಿಜವಾದ ಹೆಸರು ಸೀತಾರಾಮ ಭಟ್. ಲೊಟ್ಟೆ ಹೊಡೆದುಕೊಂಡು ಚಪ್ಪರಿಸುವ ಅಪ್ಪೆ ಮಿಡಿ ಉಪ್ಪಿನಕಾಯಿ ತಯಾರಿಸುವುದು, ಬಿಕರಿ ಮಾಡುವುದು ಇವರ ಉದ್ಯೋಗ. ಈ ವ್ಯಕ್ತಿ ಕನ್ನಡ ಅಂತರ್ಜಾಲದಲ್ಲಿ ಇವತ್ತು ಸುದ್ದಿಯಾಗುತ್ತಿದ್ದಾರೆ. ಯಾಕೆ ಅಂದ್ರೆ..

ಬೆಂಗಳೂರು ನಿವಾಸಿಯಾಗಿರುವ ನನಗೆ ಈ ಬಾರಿ ಬೇಸಿಗೆ ಕಾಲದ ಅನುಭವವೇ ಆಗ್ಲಿಲ್ಲ. ಯಾಕಂದ್ರೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಪೂರ್ತಿ ಹೆಚ್ಚೂ ಕಮ್ಮಿ ದಿನಾ ಮಳೆ ಬಂತು. ನಗರದ ವಾತಾವರಣ ತಂಪಾಗಿದ್ದುದು, ಸಂಜೆ ಮನೆ ತಲುಪುವುದು ಕಷ್ಟವಾಗಿದ್ದುದು, ಯಾವಾಗ ಯಾವ ಮರ ತಲೆ ಮೇಲೆ ಬೀಳತ್ತೋ ಎಂಬ ಭಯದಲ್ಲಿ ರಸ್ತೆಯಲ್ಲಿ ನಡೆದದ್ದು..ಈ ಬಾರಿಯ ಬೇಸಿಗೆ ಕಾಲದ ಲಾಭ-ನಷ್ಟಗಳು!

ಬೆಂಗಳೂರೇ ಮಲೆನಾಡಾಗಿತ್ತಾದ್ದರಿಂದ ಈ ಸಲದ ಮುಂಗಾರು ಮಳೆ ಆರಂಭವಾಗುವುದಕ್ಕೆ ಮುಂಚೆ ಅಸಲಿ ಮಲೆನಾಡು ಪ್ರದೇಶಗಳಲ್ಲಿ ಸುತ್ತಾಡುವ ಆಸೆ ಆಯ್ತು. ಹೇಗೆ? ಎಲ್ಲಿ? ಐಡಿಯಾ ಹೊಳೆಯುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಸರಿಯಾಗಿ ನನ್ನ ತಮ್ಮ, ಅವನ ಹೆಂಡತಿ ಪೂನದಿಂದ ಬೇಸಿಗೆ ರಜೆ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಪೂನಾಗೆ ವಾಪಸು ಹೋಗುವ ಮುಂಚೆ ಶಿವಮೊಗ್ಗ ಜಿಲ್ಲೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ಯಾವುದೋ ಹರಕೆ ಹೊತ್ತುಕೊಳ್ಳುವ ಅಥವಾ ಹರಕೆ ತೀರಿಸುವ ಇಚ್ಛೆ ತಮ್ಮನ ಹೆಂಡತಿಗೆ ಇತ್ತು ಅಂತ ಕಾಣತ್ತೆ.

Pilgrimage to Sigandur Hindu Temple, Sagara, Shivamogga

ಸಿಕ್ಕಿದ್ದೇ ಛಾನ್ಸ್ ಅಂತ ನಾವು ಮನೆಮಂದಿ ನಾಕು ಜನ ಸಿಗಂದೂರಿಗೆ ಪಿಕ್ನಿಕ್ ಹೊರಟೆವು. ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ಪ್ರಯಾಣ ಆರಂಭವಾಯಿತು. ತುಮಕೂರು, ಗುಬ್ಬಿ, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮಾರ್ಗವಾಗಿ ಭದ್ರಾವತಿ ತಲುಪಿದೆವು. ಊರುಗಳು ಬಂದಾಗಲೆಲ್ಲ ಕಾರು ನಿಲ್ಲಿಸುವುದು, ಏನಾದರೂ ತಿನ್ನುವುದು, ಕುಡಿಯುವುದೇ ಕೆಲಸ! ಮುಖ್ಯವಾಗಿ ಉಪ್ಪು-ಖಾರ ಹಚ್ಚಿದ ಗಿಣಿಮೂತಿ ಮಾವಿನಕಾಯಿ. ಕಾಫಿ. ಭದ್ರಾವತಿಯಲ್ಲಿ ಒಂದು ರಾತ್ರಿ ತಂಗಿದ್ದು ಮಾರನೇದಿನ ಬೆಳಗ್ಗೆ ಪುನಃ ಪ್ರಯಾಣ ಶುರುವಾಯಿತು.

ಶಿವಮೊಗ್ಗ, ಸಾಗರ, ಆನಂದಪುರ ಮಾರ್ಗವಾಗಿ ಕಳಸವಳ್ಳಿ, ತುಮರಿ, ಸಿಗಂದೂರು ತಲುಪಿದೆವು. ಶಿವಮೊಗ್ಗದಿಂದ ಸುಮಾರು 125 ಕಿಲೋಮೀಟರ್ ದೂರ. ಶರಾವತಿ ಹಿನ್ನೀರಲ್ಲಿ ಕರ್ನಾಟಕ ಸರಕಾರ ಒಳನಾಡು ಜಲಸಾರಿಗೆ ಇಲಾಖೆಯ ಲಾಂಚ್ ನಲ್ಲಿ ತೇಲಿಹೋದರೆ ಸಿಗಂದೂರು ದೇವಿಯ ಸನ್ನಿಧಿ ಸಿಗ್ತದೆ. ಚೌಡೇಶ್ವರಿಯ ಮಹಿಮೆ ಅಪಾರ. ಮಂತ್ರಾಲಯ, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ದೇಗುಳದಷ್ಟೇ ಪ್ರಸಿದ್ಧಿ ಇದಕ್ಕಿದೆ. ಆದರೆ ಪ್ರಚಾರ ಕಡಿಮೆ. ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಮಾಡಿ ಹೊರಟೆವು. ಹೊರಡುವುದಕ್ಕೆ ಮುಂಚೆ ದೇವಸ್ಥಾನದ ಆವರಣದಲ್ಲಿ ಕಳ್ಳೇಪುರಿ ತಿಂದು, ಗೋಲಿ ಸೋಡ ಕುಡಿದೆವು.


ಶರಾವತಿ ಹಿನ್ನೀರಿನ ಹರಿವು, ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡೆ. ಕಡಿದಾದ ಗುಡ್ಡಗಳ ನಡುವೆ ಶೇಖರವಾಗಿರುವ ಅಪಾರ ನೀರು. ಲಾಂಚ್ ನಲ್ಲಿ ಹೋಗುತ್ತಿರುವಾಗ ಮೀನುಗಳಿಗೆ ಕಳ್ಳೇಪುರಿ ಹಾಕುವುದು, ನೂರಾರು ಮೀನುಗಳು ಪುರಿ ನುಂಗುವುದಕ್ಕೆ ಜಗಳ ಕಾಯುವುದನ್ನು ನೀವು ನೋಡಬೇಕು. ಮುಖ್ಯವಾದ ವಿಚಾರವೆಂದರೆ ನೀರಿಗೆ ಇಳಿಯಲೇ ಬಾರದು. ಭಯಂಕರ ಅಪಾಯಕಾರಿ ಜಾಗ. ಈಜಲು ಹೋಗಿ ಸಾವು - ಎಂಬ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ ಎಂದು ಕಾರ್ ಪಾರ್ಕಿಂಗ್ ಸೂಪರ್ ವೈಸರ್ ರಮೇಶ ಹೇಳಿದನು.

ಕಳೆದ ಏಪ್ರಿಲ್ ತಿಂಗಳಲ್ಲಿ ಸಿಗಂದೂರಿನಲ್ಲಿ ಪದಾರ್ಪಣ 25 ಕಾರ್ಯಕ್ರಮ ಜರುಗಿತು. ಶರಾವತಿ ಹಿನ್ನೀರಿನಲ್ಲಿ ಚೌಡೇಶ್ವರಿಯ ವಿಗ್ರಹ ಮುಳುಗಡೆಯಾದಾಗ ಅದನ್ನು ತಂದು ಬೇರೆಡೆ ಪ್ರತಿಷ್ಠಾಪಿಸಲಾಯಿತು. ಆ ಪ್ರತಿಷ್ಠಾಪನೆಯಾಗಿ 25 ವರ್ಷ ತುಂಬಿತು. ಅದರ ಸ್ಮರಣೆಗೋಸ್ಕರ ನಡೆದದ್ದು ಪದಾರ್ಪಣ-25. ಈ ಸಂದರ್ಭಕ್ಕಾಗಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಹಾಡಿದ "ದಿವ್ಯಾಪರಾಧ ಕ್ಷಮಾಪಣಾ ಸ್ತೋತ್ರ ಮತ್ತು ಪ್ರವಚನದ" ಆಡಿಯೋ ಲಿಂಕನ್ನು ಸಿಗಂದೂರು ಮಾತೆಯ ಭಕ್ತರಿಗಾಗಿ ಇಲ್ಲಿ ಲಿಂಕ್ ಮಾಡಿದ್ದೇನೆ.

Pilgrimage to Sigandur Hindu Temple, Sagara, Shivamogga

ಸಿಗಂದೂರಿನಿಂದ ವಾಪಸ್ಸು ಭದ್ರಾವತಿಗೆ ಹೋಗುವಾಗ ನಡುವೆ ಮಲೆನಾಡ ಗುಡಿ ಸಾಗರ ಸಿಗುತ್ತದೆ. ಸಾಗರ ಒಂದು ತಾಲೂಕು ಕೇಂದ್ರ. ವಿಧಾನಸಭಾ ಕ್ಷೇತ್ರ. ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಈ ಊರಿನ ಶ್ರೀ ಟಾಕೀಸ್ ರಸ್ತೆಯಲ್ಲಿರುವ ಅಪ್ಪೆ ಮಿಡಿ ಉಪ್ಪಿನಕಾಯಿ ಭಟ್ಟರ ಭೇಟಿ, ಪರಿಚಯ ಆಯಿತು. ಭೇಟಿಯ ವಿವರಗಳು ಇಲ್ಲಿವೆ, ಓದಿರಿ.)
English summary
Pilgrimage to the temples of Malnad region Karnataka covering Sri Siganduru Chowdeshwari temple, Sagara, Shimoga district. The temple built on banks of idyllic Sharavati back waters, jolly ride on launch makes a wonderful experience to devotees and tourists. Travelogue by S K Shama Sundara, editor Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X