ಸರಳ ಸಂಸಾರಿ ಸಂತನ 'ಸುಖ'ದ ಪಾಠಕ್ಕೆ ಶುಲ್ಕವಿಲ್ಲ, ವೆಚ್ಚವಿಲ್ಲ
'ಸುಖ' ಅವರವರ ಮನಸಿನ ಬಯಕೆಗಳನ್ನು ನೆರವೇರಿಸಿಕೊಳ್ಳುವಲ್ಲಿ ಇರುತ್ತದೆ ಎಂದರೆ ಸರಳಗೊಳಿಸಿದಂತೆ ಎಂಬ ಭಾವನೆ ಹುಟ್ಟಬಹುದು. ಸಾರ್ವಜನಿಕಗೊಳಿಸಿ ಹೇಳುವುದಾದರೆ ಸುಖ ಅವರವರು ಭಾವಿಸಿದಂತೆ. ಹೀಗೆಂದರೂ ಪೂರ್ಣವಾಗದು. ಇದು ಪ್ರಶ್ನೆಗೆ ಉತ್ತರವೂ ಉತ್ತರದಲ್ಲಿ ಅಡಗಿದ ಪ್ರಶ್ನೆಯೂ ಆಗಿರುತ್ತದೆ. ಸಂಶಯಗಳನ್ನು ಉಳಿಸುವ ಅನೇಕ ಸಂಗತಿಗಳಲ್ಲಿ 'ಸುಖ'ವೂ ಒಂದು.
ಈ ಪ್ರಸಂಗದಲ್ಲಿ ಬರುವ ಸಾಮಾನ್ಯನೆಂದರೆ ಸಾಮಾನ್ಯನಾದ ಒಬ್ಬನ 'ಸುಖ'ದ ಬಗೆಗಿನ ದೃಷ್ಟಿ ಅತಿ ಸಾಮಾನ್ಯ ಅನ್ನಿಸಿದರೂ ಅನುಭವದ ದೃಷ್ಟಿಯಲ್ಲಿ ಸಾಮಾನ್ಯವಲ್ಲ. ಶ್ರೀನಿವಾಸಪುರದ ಆರಿಕುಂಟೆ ಗ್ರಾಮದ ವೆಂಕಟರೆಡ್ಡಿ ಅನಕ್ಷರಸ್ಥ. ವಯಸ್ಸು 60ರ ಹತ್ತಿರ. ಕುರಿ ಕಾಯುವುದೇ ಕೆಲಸ.
ಬೆಳಗ್ಗೆ ತಂಗಳಿಟ್ಟು ಹೊಟ್ಟೆಗೆ ಸೇರಿಸಿ, ಅದನ್ನೇ ಕಟ್ಟಿಕೊಂಡು ಕುರಿಗಳೊಂದಿಗೆ ಕಾಡಿಗೆ ಹೊರಟರೆ ಹಿಂದಿರುಗುವುದು ಸೂರ್ಯ ಮುಳುಗಿದ ಮೇಲೆಯೇ. ಅವುಗಳನ್ನು ದೊಡ್ಡಿ ಸೇರಿಸಿ, ಕೈ-ಕಾಲು, ಮುಖ ತೊಳೆದು ದೇವರಿಗೊಂದು ನಮಸ್ಕಾರ ಹಾಕಿ, ಮನೆಯ ವಿಚಾರ ಒಂದಿಷ್ಟು. ಹೆಂಡಿರು- ಮಕ್ಕಳೊಡನೆ ಮಾತಾಡುವ ವೇಳೆಗೆ ರಾತ್ರಿ ಊಟದ ಹೊತ್ತಾಗುವುದು.
ಊಟ ಮಾಡಿ, ಚಾಪೆಯ ಮೇಲೆ ಕುಳಿತು 'ಶಿವನೇ ಈ ದಿನವನ್ನು ಮುಗಿಸಿದೆಯಪ್ಪ' ಎಂದು ಕೈಮುಗಿದು ಮಲಗಿದನೆಂದರೆ ಆತನ ಅಂದಿನ ಕಾಯಕ ಮುಗಿಯಿತು. ಮೈ ಮರೆತ ನಿದ್ದೆ ಆಯಾಸ ಪರಿಹರಿಸುವುದು.

ಇಂಥ ವೆಂಕಟರೆಡ್ಡಿಗೂ ಮಧುಮೇಹ
ಈತನ ಜೀವನ ಸರಳವೆಂದರೆ ಸರಳ. ಊಟವೂ ಅಷ್ಟೆ, ದಿನವೊಂದರಲ್ಲಿ ಕುರಿಗಳ ಜೊತೆ ಕಾಡಿನಲ್ಲಿ ಸರಿಸುಮಾರು ಹನ್ನೆರಡು ಕಿಲೋಮೀಟರ್ ಸಂಚರಿಸುವ, ಮಾಲಿನ್ಯ ರಹಿತ ಗಾಳಿಯನ್ನು ಉಸಿರಾಡುವ ಈತನಿಗೆ ಕಾಣಿಸಿಕೊಂಡ ಒಂದೇ ಒಂದು ಕಾಯಿಲೆ ಎಂದರೆ ಮಧುಮೇಹ.

ವೈದ್ಯರಿಗೇ ಆಶ್ಚರ್ಯ
ಇಂತಹವನಿಗೆ ಇದು ಹೇಗೆ ಅಂಟಿಕೊಂಡಿತೆಂದು ವೈದ್ಯರಿಗೇ ಆಶ್ಚರ್ಯ. ಅವನ ಹಿರಿಯರಿಗಾರಿಗೂ ಇದು ಇದ್ದುದಿಲ್ಲ. ಆದರೆ ಈತ ಇದನ್ನು ಕೊರಗು ಮಾಡಿಕೊಂಡಿರಲಿಲ್ಲ. ವೈದ್ಯರಿಂದ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಕಲಿತು, ಚೆಡ್ಡಿ ಜೇಬಿನಲ್ಲಿಟ್ಟುಕೊಂಡು ಕಾಡಿನಲ್ಲೇ ಚುಚ್ಚಿಕೊಳ್ಳುತ್ತಿದ್ದ.

ಹೋಗೋ ಕಾಲಕ್ಕೆ ನೆಪ ಬೇಕಲ್ಲ?
ಇದು ಹೇಗೆ ಬಂತೆಂದು ಕೇಳಿದರೆ, 'ಪೋಯೇ ಕಾಲಾನಿಕಿ ಏದೋ ಒಗ ಸಾಕು ಕಾವಾಲಿ ಕದಾ? ದೇವುಡು ನಾಕಿದಿ ಇಚ್ಚಾಡೇಮೋ. ಅಂದುಕ್ಯಾಲ ಏಡಿಸೇದಿ' (ಸಾಯುವ ಕಾಲಕ್ಕೆ ಯಾವುದೋ ಒಂದು ನೆಪ ಬೇಕಲ್ಲವೆ? ದೇವರು ನನಗಿದನ್ನು ಕೊಟ್ಟನೇನೊ. ಅದಕ್ಕೆ ಅಳುವುದೇತಕ್ಕೆ?) ಎಂದು ನಿರ್ಲಿಪ್ತನಾಗಿ ಹೇಳುತ್ತಿದ್ದ.

ಅಂಥ ಯಾವ ಲಕ್ಷಣವೂ ಇರಲಿಲ್ಲ
ಡಯಾಬಿಟಿಕರು ಹೇಳಿಕೊಳ್ಳುವ ಆಯಾಸ, ತಲೆಸುತ್ತು, ಮಂಕು ಇವಾವುದೂ ಇರಲಿಲ್ಲ. ರಕ್ತ ಪರೀಕ್ಷೆಯಲ್ಲಿ ಮಾತ್ರ ಸಕ್ಕರೆಯ ಅಂಶ ಚಿಕಿತ್ಸೆ ಪಡೆಯುವಷ್ಟಿರುತ್ತಿತ್ತು. ಲವಲವಿಕೆ, ಚಟುವಟಿಕೆ ಸಾಮಾನ್ಯರಲ್ಲಿ ಇರುವಂತೆಯೇ ಇತ್ತು. ಇದಕ್ಕೆ ವೈದ್ಯರು ಕೊಡುತ್ತಿದ್ದ ಕಾರಣ ಆತನ ಮನೋಬಲ.

ಹಣ ಬಡ್ಡಿಗೆ ಬಿಟ್ಟು ನೆಮ್ಮದಿಯಾಗಿ ಇರಬಾರದಾ?
ಇಂಥವರಿಗೆ ಸಾಮಾನ್ಯವಾಗಿ ಸಿಗುವ ಸಲಹೆಯೆಂದರೆ 'ಈ ವಯಸ್ಸಿನಲ್ಲಿ ಯಾಕೆ ಈ ಕಷ್ಟ? ಕುರಿಗಳನ್ನು ಮಾರಿದರೆ ಲಕ್ಷ ಬರುತ್ತೆ. ಬಡ್ಡಿಗೆ ಕೊಟ್ಟು ಆ ಬಡ್ಡಿಯಿಂದ ಸುಖವಾಗಿರಬಾರದೆ?' ಬೇರೆಯವರಾಗಿದ್ದರೆ ಏನೆನ್ನುತ್ತಿದ್ದರೊ? ಈತನ ಉತ್ತರ ಕೇವಲ ಒಂದೇ ಒಂದು ಮುಗುಳ್ನಗೆ. ಆತನ ವೈದ್ಯ, ನನ್ನ ಗೆಳೆಯ ವೆಂಕಟಾಚಲರಿಗೆ ಈ ವಿಷಯ ತಿಳಿದುಬಂದು, 'ಹಾಗೆ ಮಾಡಬಹುದಲ್ಲ?' ಎಂದು ಕೇಳಿದರು.

ಕೈವಾರ ತಾತಯ್ಯನ ಪದ ಹಾಡುವುದರಲ್ಲಿ ಸುಖವಿದೆ
ಅದಕ್ಕೆ ಆತ ಕೊಟ್ಟ ಉತ್ತರ ಚಿಂತಕರೆನಿಸಿಕೊಳ್ಳುವವರೂ ಚಿತಿಸುವಂತಹುದು. 'ಸುಖ ಅಂದ್ರೆ ಅವರಿಗೇನು ಗೊತ್ತು? ಜೀವ(ಕುರಿ)ಗಳು ಹೊಟ್ಟೆ ತುಂಬ ಮೇದು, ನೀರು ಕುಡಿದು ಮರದಡಿ ಮಲಗಿ ಮೆಲುಕು ಹಾಕ್ತಿದ್ದರೆ ಅವುಗಳನ್ನ ನೋಡ್ತಾ ಕೈವಾರ ತಾತಯ್ಯನ ಪದ ಹಾಡೋದಕ್ಕಿಂತ ದೊಡ್ಡ ಸುಖ ಯಾವುದಿದೆ? ದೇವರಂತಹ ಜೀವಗಳನ್ನ ಮಾರಿ, ಬಡ್ಡಿಗೆ ದುಡ್ಡು ಬಿಟ್ಟು ಬದುಕೋದ್ರಲ್ಲಿ ಯಾವ ಸೀಮೆ ಸುಖ ಇದ್ದೀತು?'
ಸಂಸಾರಿಯ ಸಂತತನ ಏನೆಂಬುದು ಆತನಿಂದ ತಿಳಿಯಿತು. ಇಂಥ ಅನುಭವದ ಸರಳಾತಿ ಸರಳ ಪಾಠ ಶುಲ್ಕ ಕೊಟ್ಟು ಹೋಗಿ ಬರುವಂಥ ಶಿಬಿರಗಳಲ್ಲಿ ಸಿಕ್ಕೀತೆ?












Click it and Unblock the Notifications