ಎಲ್ಲೆ ಮೀರಿಯೂ ಎಲ್ಲೇ ಇದ್ದರೂ ಶರಣಯ್ಯ ಶ್ರದ್ಧಾಳು ವೈದ್ಯರಿಗೆ

ವೈದ್ಯ, ವೈದ್ಯನ ಚಿಕಿತ್ಸೆ ಕುರಿತು ಇರುವಂತಹ ಜೋಕುಗಳ ನಡುವೆ ಎಲ್ಲ ವೈದ್ಯರ ಕುರಿತಲ್ಲದಿದ್ದರೂ ಅನೇಕ ವೈದ್ಯರ ಕೈಗುಣ, ಉತ್ತಮ ಚಿಕಿತ್ಸೆ, ಔದಾರ್ಯ, ಅವರು ನೀಡುವ ಆರೋಗ್ಯ ಮಾಹಿತಿಗಳ ಬಗ್ಗೆ ಮೆಚ್ಚುಗೆ, ಹೊಗಳಿಕೆಗಳೂ ಬರವಿಲ್ಲದೆ ಇರುತ್ತವೆ.

ಹೊಗಳುವವರಿರಲಿ, ತೆಗಳುವವರೂ ರೋಗ ಬಂದಾಗ ವೈದ್ಯನಲ್ಲಿಗೆ ಹೋಗದೆ ಇರುವುದಿಲ್ಲ. ಇದು ರೋಗಿ-ವೈದ್ಯನ ನಡುವಿನ ನಂಟು. ರೋಗಿಗಳಿಗೆ ಧೈರ್ಯ ತುಂಬಿ, ಅವರ ಆರೋಗ್ಯವನ್ನು ಹಾರೈಸದವನು ವೈದನಾಗಲಾರ. ಅವನು ಚಿಕಿತ್ಸೆ ಕೊಡುವಂತಾಗಿರುವ ಒಬ್ಬ ವ್ಯಕ್ತಿ ಮಾತ್ರ.

ವೈದ್ಯರಲ್ಲಿ ಸಿಟ್ಟು ಸಿಡುಕರಿಗೇನೂ ಕಡಿಮೆಯಿಲ್ಲ. ಆದರೆ ಅವರು ಕೊಡುವ ಚಿಕಿತ್ಸೆ, ನೀಡುವ ವೈದ್ಯಕೀಯ ಸಲಹೆ, ತುಂಬು ಮನಸ್ಸಿನ ಹಾರೈಕೆಗಳ ಮುಂದೆ ಆತನ ಸಿಟ್ಟು ಸಿಡುಕುಗಳು ರೋಗಿಗೆ ಗೌಣವಾಗಿಬಿಡುತ್ತದೆ. ಇಂಥ ವೈದ್ಯರಲ್ಲಿ ಒಬ್ಬರು, ರೋಗಿಗಳಿಗೆ ಮತ್ತು ಸ್ನೇಹದಲ್ಲಿ ನನಗೂ ಆಪ್ತರಾಗಿದ್ದ ಚಿಂತಾಮಣಿ ತಾಲೂಕಿನ ಊಲವಾಡಿಯ ಡಾ. ಚೌಡರೆಡ್ಡಿ.

Salute to all good doctors who are people friendly

ಎದೆಗೂಡು ತಜ್ಞರಾಗಿದ್ದ ಅವರು ದೊಡ್ಡಾಸ್ಪತ್ರೆಗಳಲ್ಲಿ ಇರಬೇಕಿದ್ದವರಾದರೂ ಅಲ್ಲಿನ ಅವ್ಯವಹಾರಗಳಿಂದ ಬೇಸತ್ತು ನಿವೃತ್ತರಾಗುವವರೆಗೂ ಹಳ್ಳಿ ಆಸ್ಪತ್ರೆಗಳಲ್ಲಿ ವೈದ್ಯರಾಗಿದ್ದರು. ಅವರು ಗದರದೆ, ಬೈಯದೆ ಚಿಕಿತ್ಸೆ ನೀಡಿದರೆ ಹೊರಬಂದ ರೋಗಿ 'ಡಾಕ್ಟ್ರು ಈ ಪೊದ್ದು ತಿಟ್ಟಕುಂಡ ಮಂದಿಚ್ಚಿಂದೇ ಬೇಜಾರು' (ಡಾಕ್ಟರು ಇವತ್ತು ಬೈಯದೆ ಮದ್ದು ಕೊಟ್ಟಿದ್ದೇ ಬೇಜಾರು) ಎಂದು ಏನೋ ಇಲ್ಲವಾಗಿಬಿಟ್ಟಂತೆ ಪೇಚಾಡುತ್ತಿದ್ದುದುಂಟು.

ಇಂಥ ಪ್ರಸಂಗದ ನಡವಳಿಕೆಗಳನ್ನು ಆಧುನಿಕ ಮನೋವಿಜ್ಞಾನ ಹೇಗೆ ವಿಶ್ಲೇಷಿಸುತ್ತೋ ತಿಳಿಯದು.

ಒಮ್ಮೆ ಇಂಥ ಕೆಲವು ಪ್ರಸಂಗಗಳನ್ನು ಹೇಳಿಕೊಳ್ಳುತ್ತಿದ್ದಾಗ ಗೆಳೆಯ ಭವಾನಿ ಶಂಕರ್ ನಿಜ ವೈದ್ಯರೊಬ್ಬರೊಂದಿಗಿನ ತನ್ನ ಅನುಭವವನ್ನು ಬಿಚ್ಚಿದ. ಆ ವೈದ್ಯರ ಹೆಸರು ವೇದಾಂತಂ. ಅವರು ತಮಿಳುನಾಡಿನಿಂದ ಬೆಂಗಳೂರಿಗೆ ಬಂದು, ರಾಜಾಜಿನಗರದಲ್ಲಿ 1976ರಲ್ಲಿ ಕ್ಲಿನಿಕ್ ತೆರೆದಿದ್ದರು.

Salute to all good doctors who are people friendly

ರೋಗಿಗಳೊಂದಿಗೆ ವ್ಯವಹರಿಸುತ್ತಲೇ ಕನ್ನಡವನ್ನು ಮಾತನಾಡಲಷ್ಟೇ ಅಲ್ಲದೆ ಬರೆಯಲೂ ಕಲಿತಿದ್ದರು. ಔಷಧಿ ಚೀಟಿಯ ಹಿಂದೆ ವೈದ್ಯಕೀಯ ಸಲಹೆಗಳನ್ನು 'ಕ್ಯಾಲಿಗ್ರಫಿ'ಯಲ್ಲಿ ಮುದ್ದಾಗಿ ಬರೆಯುತ್ತಿದ್ದರು. ಬಿಡುವಿನ ವೇಳೆಯಲ್ಲಿ ಚೀಟಿಯ ಹಿಂದೆ ಆರೋಗ್ಯಕಾರಕ ಅಡುಗೆಗಳನ್ನು ತಯಾರಿಸುವ ಕ್ರಮಗಳನ್ನೂ ಬರೆಯುತ್ತಿದ್ದರು.

ಪುದೀನ, ಶುಂಠಿ ಚಟ್ನಿ ಮಾಡುವುದನ್ನು, ಅದರ ವೈದ್ಯಕೀಯ ಗುಣಗಳನ್ನು ಬರೆಯುತ್ತಿದ್ದರು. ಆರೋಗ್ಯಕಾರಕ ಅಡುಗೆಗಳ ವಿವರಗಳನ್ನೂ ಬರೆಯುತ್ತಿದ್ದರು. ನೋಡಬೇಕಾದ ರೋಗಿಗಳಿಲ್ಲದಿದ್ದರೆ ಪರೀಕ್ಷಿಸುತ್ತಿದ್ದ ರೋಗಿಯಿಂದ ಅದನ್ನು ಓದಿಸಿ, ಚಟ್ನಿ ಮಾಡಿ ತಿನ್ನುವಂತೆ ಸೂಚಿಸುತ್ತಿದ್ದರು.

ರೋಗಿಗಳು ತಮ್ಮ ಮುಂದೆ ಕುಳಿತಾಗ ಮೊದಲು ಎರಡೂ ಅಂಗೈಗಳನ್ನು ತೋರಿಸೆಂದು ಕೇಳುತ್ತಿದ್ದರಂತೆ. ಇದೇನು ಈ ಡಾಕ್ಟರು ಕೈ ಹಿಡಿದು ನಾಡಿ ನೋಡುವ ಬದಲು ಅಂಗೈ ಪರಿಕ್ಷಿಸುತ್ತಿದ್ದಾರಲರಲ್ಲ ಎಂದು ಆಶ್ಚರ್ಯಪಟ್ಟರೂ ಪ್ರಶ್ನಿಸಲಾಗದೆ ಅಂಗೈಗಳನ್ನು ಚಾಚಿದಾಗ ನೋಡಿ, ಕೈ ಇಷ್ಟು ಕೊಳೆಯಾಗಿದ್ದರೆ ರೋಗ ಬರದೆ ಇನ್ನೇನು ಎಂದು ಕೈ ತೊಳೆಯುವುದನ್ನು ಹೇಳಿಕೊಡುತ್ತಿದ್ದರಂತೆ.

Salute to all good doctors who are people friendly

ಅವರ 'ಪ್ರಿಸ್ಕ್ರಿಪ್ಷನ್'ನ ವೈಶಿಷ್ಟ್ಯವೆಂದರೆ ತೇದಿಯನ್ನು ಕನ್ನಡ ಅಂಕಿಗಳಲ್ಲಿ ಬರೆಯುತ್ತಿದ್ದುದು. ಇದಕ್ಕೆ ಇಂದಿನ 'ಬಿಸಿ'(ಬ್ಯುಸಿ) ವೈದ್ಯರು 'ಪೇಷೆಂಟುಗಳಿಲ್ಲದೆ ನೊಣ ಹೊಡೆಯುತ್ತಿದ್ದ ಡಾಕ್ಟರೇನೊ?' ಎಂದು ವ್ಯಂಗ್ಯವಾಡಬಹುದು. ಆದರೆ ಅವರು ರೋಗಿಗಳ ವೈದ್ಯ ಮತ್ತು ಆಪ್ತ ಸಮಾಲೋಚಕರಾಗಿದ್ದರು. ಜೊತೆಗೆ ಜನಪರ ಚಿಂತಕ ವೈದ್ಯರಾಗಿದ್ದರು.

ಇವರ ವಿಷಯವನ್ನು ಕೇಳಿಸಿಕೊಂಡಾಗ ನನ್ನ ವೈದ್ಯ ಮಿತ್ರರೂ ಆಗಿರುವ, ಡಾ. ವೇದಾಂತಂ ಅವರಂತೆ 'ಪ್ರಿಸ್ಕ್ರಿಪ್ಷನ್'ನ ಹಿಂಭಾಗದ ಖಾಲಿ ಜಾಗವನ್ನು ವೈದ್ಯಕೀಯ ಸಲಹೆಗಳಿಗಾಗಿ ಬಳಸುವ, ಶ್ರೀನಿವಾಸಪುರದ ಡಾ. ವೈ.ವಿ.ವೆಂಕಟಾಚಲ ನೆನಪಾದರು.

ಜಂತು ಹುಳುಗಳಿಂದಾಗುವ ಆರೋಗ್ಯ ಹಾನಿ, ಅದರ ನಿವಾರಣೆಗೆ ಸ್ವಯಂ ರೋಗಿಯೇ ವಹಿಸಬಹುದಾದ ಮುಂಜಾಗ್ರತೆ, ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿ ಮುದ್ರಿಸಲು ಪ್ರಾರಂಭಿಸಿ, ಸಕ್ಕರೆ ಕಾಯಿಲೆ, ಸ್ವಯಂಶುಚಿತ್ವ, ಡೆಂಗ್ಯೂ, ಚಿಕೂನ್ ಗುನ್ಯಾ, ಪರಿಸರ ನೈರ್ಮಲ್ಯ, ಸೊಳ್ಳೆಗಳ ಬೆಳವಣಿಗೆ ನಿಯಂತ್ರಣ ಹೀಗೆ ಅನೇಕ ಆರೋಗ್ಯ ಪರ ಮಾಹಿತಿಗಳನ್ನು ಮುದ್ರಿಸಿ ರೋಗಿಗಳಿಗೆ ಉಪಕರಿಸುತ್ತಿದ್ದಾರೆ.

Salute to all good doctors who are people friendly

ಈ ಪ್ರದೇಶದಲ್ಲಿ ಹೊಸತಾಗಿ ರೋಗವೊಂದು ಅವರ ಗಮನಕ್ಕೆ ಬಂದರೆ ತಕ್ಷಣವೇ ಅದರ ಕುರಿತಾದ ಮಾಹಿತಿ ಮುದ್ರಣಕ್ಕೆ ಹೋಗಿಬಿಡುತ್ತದೆ. ಈ ಮಾದರಿಯ ಅನೇಕ ವೈದ್ಯರು ಇನ್ನೂ ಅನೇಕರಿದ್ದಾರು. ಕೋಲಾರದ ಬ್ರಾಹ್ಮಣ ಬೀದಿಯಲ್ಲಿರುವ ಸೀತಾರಾಮ ಪಂಡಿತರ ಮಗ ಡಾ. ಕೃಷ್ಣಮೂರ್ತಿ, ಆಂಧ್ರದ ಅನಂತಪುರಂನಲ್ಲಿದ್ದ ಡಾ. ಚಲಪತಿ, ಅಲ್ಲಿಯೇ ಇರುವ 'ಪ್ರಜಾ ಆಸುಪತ್ರಿ'ಯ ಡಾ. ಪ್ರಸೂನ ನಾನು ಬಲ್ಲಂತಹ ಇಂಥ ವೈದ್ಯರು.

ಇಂದಿಗೂ ಬಡವರ ವೈದ್ಯರಾಗಿಯೇ ಉಳಿದವರ ಪರೀಕ್ಷಾ ಶುಲ್ಕ ಹತ್ತು ರುಪಾಯಿಗಳನ್ನೂ ದಾಟಿರದು! ಇಂಥ 'ಧನ್ವಂತರಿ'ಗಳಿಗೆ ಕೃತಜ್ಞತೆಯಾಗಿ ಈ ಲೇಖನವನ್ನು ಸಮರ್ಪಿಸುತ್ತಿರುವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+