ಸ ರಘುನಾಥ ಅಂಕಣ; ಟ್ರಂಕು ಸೇರಿದ ಸದಾರಮೆ ನಾಟಕದ ನೋಟುಬುಕ್ಕು
ಯಾಲಗಿರೆಪ್ಪ ಹೋದ ಬಹಳ ಹೊತ್ತಿನವರೆಗೆ ಮುನೆಂಕಟೇಗೌಡ ಅಪ್ಪಯ್ಯನ ಜೊತೆ ಮಾತನಾಡುತ್ತ ಕುಳಿತಿದ್ದ. ಅಮ್ಮಯ್ಯನೂ ಕುಳಿತಿದ್ದಳು. ಯಾಲಗಿರೆಪ್ಪ ಮಾತಿಗೆ ತಪ್ಪೊ ಕುಳವಲ್ಲ ಅಂದಳು ಅಮ್ಮಯ್ಯ. ಇನ್ನು ಅವನೊಂದಿಗೆ ಕಂಟು (ಹಗೆ) ಕಟ್ಟಿಕೊಬೇಡ ಅಂದಳು. ನಾನೆಲ್ಲಿ ಕಟ್ಟಿಕೊಂಡಿದ್ದು ಅಮ್ಮಯ್ಯ? ಕೆಲಸಕ್ಕೆ ಬರದ ಮಾತಿಗೆ ಅವನೇ ಅಲ್ವ ಕಟ್ಟಿಕೊಂಡಿದ್ದು ಅಂದ.
ಮುಗೀತಲ್ಲ ಅದೇ ಸಂತೋಷ ಅಂದ ಅಪ್ಪಯ್ಯ. ಮುಗಿಸಿದೋನು ನರಸಿಂಗ ಅಂದ ಮುನೆಂಕಟೇಗೌಡ. ಯಾರೋ ಒಬ್ಬರು ಅಂದಳು ಅಮ್ಮಯ್ಯ. ಒಂದಿಬ್ಬರು ಕೂಲಿ ಆಳುಗಳನ್ನ ಹಿಡಕೊಂಡು ಇವತ್ತೇ ಕಾಲುವೆ ತೆಗಿಸಿಬಿಡ್ತೀನಿ ಅಂದ. ಮೊದಲು ಅದು ಮಾಡು ಹೋಗು ಅಂದ ಅಪ್ಪಯ್ಯ.
ಮುನೆಂಕಟೇಗೌಡ ಬಾಗಿಲು ದಾಟಿದ, ನರಸಿಂಗರಾಯ ಕೋಣೆಯಿಂದ ಹೊರಬಂದ. ಏನು ಮಾಡ್ತಿದ್ದೆ ಎಂದು ಕೇಳಿದಳು ಅಮ್ಮ. ಮಾಡೋಕೇನಿದೆ? ನಾಟಕದ ಕಥೆ ಮುಗೀತಲ್ಲ ಅಂದ ನಿರಾಸೆಯಿಂದ. ಎಲ್ಲಿ ಮುಗೀತು? ಒಂದು ವರ್ಷ ಮುಂದಕ್ಕೆ ಹೋಗಿದೆಯಷ್ಟೆ ಅಂದ ಅಪ್ಪ. ಪಿಲ್ಲಣ್ಣನ ತೋಟದ ಕಡೆ ಹೋಗಿ ಬರುವುದಾಗಿ ಹೇಳಿ ಹೊರಟ ನರಸಿಂಗರಾಯ.

ಪಿಲ್ಲಣ್ಣ, ಬೋಡೆಪ್ಪ ಸೀಬೆಮರದಡಿ ಕುಳಿತು ಊರದ್ಯಾವರ ಕುರಿತು ಹರಟುತ್ತಿದ್ದರು. ಅವರೊಂದಿಗೆ ಸೇರಿಕೊಂಡ ನರಸಿಂಗರಾಯ, ನಡೆದ ವ್ಯವಹಾರವನ್ನು ತಿಳಿಸಿದ. ಯಾಲಗಿರಿ ಒಪ್ಪಿದ್ದೆ ಹೆಚ್ಚು ಎಂದು ಗೆಳೆಯರು ಆಶ್ಚರ್ಯ ವ್ಯಕ್ತಪಡಿಸಿದರು. ಒಪ್ಪಿಕೊಂಡನಪ್ಪ ಅಂದ ನರಸಿಂಗರಾಯ.
ನಾಟಕ ನಿಂತಿತು. ನಿನ್ನ ಕೈ ಖಾಲಿ ಏನು ಮಾಡ್ತಿ ಎಂದು ಬೋಡೆಪ್ಪ ಕೇಳಿದ. ಅದೇ ತಿಳತಿಲ್ಲವೆಂದ ನರಸಿಂಗರಾಯ, ಕೊಂಚ ಹೊತ್ತು ಮೌನವಾಗಿದ್ದು, ಪಿಲ್ಲಣ್ಣ ನಿನ್ನ ಬಾವೀಲಿ ಎಷ್ಟು ನೀರಿರಬಹುದು ಅಂದ. ಯಾಕೆ ಕುಡೀತಿಯೇನು ಎಂದು ನಗಾಡಿದ ಬೋಡೆಪ್ಪ. ನೀನು ಅಮಿಕ್ಕೋತೀಯ? ಎರಡು ಮಟ್ಟು ಮೇಲೊಂದಿಷ್ಟು ಇದ್ದೀತು. ಯಾಕೆ ಅಂದ ಪಿಲ್ಲಣ್ಣ. ಮುವ್ವರು ಸೇರಿ ಏನಾದರು ಬೆಳೆಯೋಣ ಅಂತ.
ಯಾಕೆ ಇಂಗ್ಲಿಷ್ ಸಿನಿಮಾ ನೋಡ್ಬೇಕು ಅನ್ನಿಸ್ತಾ? ಕಿಚಾಯಿಸಿದ ಬೋಡೆಪ್ಪ. ಅತ್ತ ಗಮನ ಕೊಡದೆ, ಏನು ಬೆಳೆಯೋದು? ಕೇಳಿದ ಪಿಲ್ಲಣ್ಣ. ಹೂಕೋಸು ಅಂದ ನರಸಿಂಗರಾಯ. ಖರ್ಚು ಶಾನೆ ಬರುತ್ತೆ. ಅಷ್ಟು ಬಂಡ್ವಾಳ ಇದೆಯ? ಪ್ರಶ್ನೆ ಎಸೆದ ಬೋಡೆಪ್ಪ. ಅದಕ್ಕೆ ಏನಾದರು ಮಾಡೋಣ. ಮೊದಲು ಬೆಳೆ ಇಡೋದು ಅಂತ ತೀರ್ಮಾನವಾಗಲಿ ಅಂದ ಪಿಲ್ಲಣ್ಣ. ತೀರ್ಮಾನ ಮಾಡಲು ಗೆಳೆಯರು ನರಸಿಂಗನ ಮನೆಯನ್ನು ಆಯ್ದುಕೊಂಡು ಮೇಲೆದ್ದರು.
ಅಪ್ಪಯ್ಯ ತೊರವೆ ರಾಮಾಯಣ ಹಿಡಿದು ಕುಳಿತಿದ್ದ. ಅಮ್ಮಯ್ಯ, ಮುನೆಕ್ಕ, ಸುನಂದಾ ಊರುದ್ಯಾರು ನಡೆದ ಮಾತಿನಲ್ಲಿದ್ದರು. ಅಮ್ಮಾ ಕಾಫೀ ಕೊಡ್ತೀಯ? ಎಂದು ಕೇಳಿದ ನರಸಿಂಗರಾಯ. ಸುನಂದಾ ಅಡುಗೆ ಮನೆಗೆ ಹೋದಳು. ಬೋಡೆಪ್ಪ ನರಸಿಂಗರಾಯ ಹೇಳಿದ ಮಾತನ್ನು ಹೇಳಿದ. ಅಮ್ಮಯ್ಯ ಈರುಳ್ಳಿ ತೋಟ ನೋಡೋಕೆ ಚೆನ್ನಾಗಿರುತ್ತೆ ಅಂದಳು. ಅಮ್ಮೋ ಅದು ಮಾತ್ರ ಬೇಡವೆಂದರೆ ಬೇಡ ಅಂದ ಪಿಲ್ಲಣ್ಣ. ಹೂಕೋಸೊ? ಅಂದ ನರಸಿಂಗರಾಯ. ಬಂಡವಾಳ? ಅಂದ ಬೋಡೆಪ್ಪ. ಅದಾಗದೆಂದಾಯಿತು.
ಮುನೆಕ್ಕ ಕ್ಯಾರೆಟ್ಟು ಹಾಕಿದರೆ ಹೇಗೆ? ಅಂದಳು. ಅದೂ ಬಂಡವಾಳ ಬೇಡುತ್ತೆ ಅಂದ ಪುಸ್ತಕದಿಂದ ತಲೆಯೆತ್ತಿ ಅಪ್ಪಯ್ಯ. ಮತ್ತೇನು ಅಂದಳು ಸುನಂದಾ, ಎಲ್ಲರ ಕೈಗೂ ಕಾಫೀ ಲೋಟ ಕೊಟ್ಟು. ಹರಿವೆ ಸೊಪ್ಪು ಬಿತ್ತಬಹದು. ಮುವ್ವರ ಮನೆ ತಿಪ್ಪೆಗಳಲ್ಲಿ ಗೊಬ್ಬರವಿದೆ. ನಾನು ದೊಡ್ಡಕಡತೂರಿನಿಂದ ಬೀಜ ತಂದುಕೊಡ್ತೀನಿ. ಮೂರು ನಾಲ್ಕು ಕುಯ್ಲಿಗೆ ಮೋಸವಿಲ್ಲ. ಆದರೆ ಸೊಪ್ಪು ಇರೋವರೆಗೂ ಹುಳಿಸೊಪ್ಪು, ಬಸ್ತೆಸರಿಗೆ ಮುಫತ್ತು ಸೊಪ್ಪು ಕೊಡಬೇಕು ಅಂದ ಅಪ್ಪಯ್ಯ. ಆಗ ಹುಟ್ಟಿದ ನಗೆಯೊಂದಿಗೆ ಬಂಡವಾಳದ ಸಮಸ್ಯೆ ಬಗೆಹರಿಯಿತು.
ರಾತ್ರಿ ಮಲಗುವ ಮುಂಚೆ ನರಸಿಂಗರಾಯ ಸದಾರಮೆ ನಾಟಕದ ನೋಟು ಪುಸ್ತಕವನ್ನು ಟ್ರಂಕಿನಲ್ಲಿಟ್ಟು ನಿಟ್ಟುಸಿರು ಬಿಟ್ಟ.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications