ಚಂದ್ರನಲ್ಲಿಗೇ ಹೋಗಿ ತಣಿವಷ್ಟು ಬೆಳದಿಂಗಳ ಹಾಲು ಕುಡಿದು ಬರುವ
ನನ್ನ ಮನಕೊಳದ ಹಂಸ ವಸಂತ,
ಬಾಳ ಗೆಳೆಯನೇ ಪೂರ್ಣ ಚಂದ್ರನೆ, ತಾಳಲಾರೆನೋ ಈ ವಿರಹ ವೇದನೆ ಎಂದು ಮನಸ್ಸು ಆಲಾಪಿಸುತ್ತಿರುವಾಗ ನಿನ್ನ ಕಾಗದ ಕೈ ಸೇರಿತು. ಅದರಲ್ಲಿನ ಒಕ್ಕಣೆ ತಿಳಿದಿದ್ದರೂ ಓದುವಾಗ ಇದೇ ಮೊದಲು ತಿಳಿಯುತ್ತಿರುವಂತೆ ಸಂಭ್ರಮಿಸುತ್ತ ಓದಿದೆ. ನೀಲಳಲ್ಲೂ ಇದೇ ಸಂಭ್ರಮ. ಒಂದೇ ಚಪ್ಪರದಡಿ ಎರಡು ಜೋಡಿಯ ಮದುವೆ! ಅವಳೀಗ ಅವಳದೇ ಕನಸಿನ ಲೋಕದಲ್ಲಿ.
ವಸಂತ ಮನಸಲ್ಲಿ ಏನೋ ಹಗುರ ಭಾವ. ಆಕಾಶದ ನಕ್ಷತ್ರಗಳನ್ನೆಲ್ಲಾ ಬಾಚಿ ಸೆರಗಿನಲ್ಲಿ ಕಟ್ಟಿಕೊಂಡಂತೆ. ಮುಡಿದ ಮಲ್ಲಿಗೆ ಗಮಲು ಮೊದಲ ಸಲ ಗಾಳಿಗೆ ಮುನಿದು ನನ್ನನ್ನೇ ಅಪ್ಪಿ ಹಿಡಿದಂತೆ. ಆ ಅಪ್ಪುಗೆ ನಿನ್ನದೇ ಆಗಿರುವಂತೆ. ವಸಂತ ಕರೆಯುತಿದೆ ಕನಸು, ಕುಣಿಯುತಿದೆ ಮನಸು.
ಒಂದರ ಹಿಂದೆ ಸಾಲು ಗಟ್ಟಿ ಬರುತ್ತಿರುವ ಹಾಡು. ಯಾವುದನ್ನೂ ಪೂರ್ಣವಾಗಿ ಹಾಡಿಕೊಳ್ಳಲಾಗದ ಸ್ಥಿತಿ. ಪಲ್ಲವಿ ಬಂದರೆ ಚರಣದವರೆಗೆ ಕಾಯಲಾಗದು. ಚರಣ ನೆನಪಾದರೆ ಪಲ್ಲವಿಯನ್ನು ನೆನಪಿಸಿಕೊಳ್ಳಲು ಸಮಯವಿರದು. ಏಕೆ ಹೀಗೆಂಬ ಪ್ರಶ್ನೆಯೂ ಇಣುಕದು. ಸಂಭ್ರಮವೆಂದರೆ ಹೀಗೆಯೇನೊ? ನನಗೆ ಇಂಥ ಸಂಭ್ರಮ ತೀರಾ ಹೊಸತು ವಸಂತ.
ಹಾಲಧಾರೆಯಲ್ಲಿ ಮಿಂದು ಬಂದೆಯೋ, ಬಾಯಾರಿದೆಯೆ ಎಂದು ನೀನು ಬೊಗಸೆಯೊಡ್ಡಿ ಬೆಳದಿಂಗಳನು ತುಂಬಿ ನನಗೆ ಕುಡಿಸಿದೆ. ಜನ್ಮ ಜನ್ಮಗಳಿಂದ ಬಾಯಾರಿ ಇದ್ದವಳಂತೆ ನಾನು ಗಟಗಟ ಕುಡಿದೆ. ನಾನು ದಣಿದಿದ್ದೇನೆ ಶಕುಂತಲೆ ನನಗೆ ಕುಡಿಸುವೆಯಾ ಎಂದು ನೀನು ಕೇಳಿದ್ದೇ ತಡ ನನ್ನ ಬೊಗಸೆಯಲ್ಲಿ ಬೆಳದಿಂಗಳ ತುಂಬಿ ನಿನಗೆ ಕುಡಿಸಿದೆ. ನೀನು ಕುಡಿಯುತ್ತಲೇ ಇದ್ದೆ. ನನ್ನ ಬೊಗಸೆ ಬರಿದಾಗದು, ನಿನ್ನ ದಾಹ ತೀರದು. ಎಷ್ಟು ಹೊತ್ತೋ ಹೀಗೆ.....

ನಿನಗಾಗಿ ತಂದಿರುವೆ ಬಿಳಿಗುದುರೆ ಏರು. ಚಂದ್ರನಲ್ಲಿಗೇ ಹೋಗಿ ತಣಿವಷ್ಟು ಬೆಳದಿಂಗಳ ಹಾಲು ಕುಡಿದು ಬರುವ ಎಂದು ಮುಂದೆ ಕೂರಿಸಿಕೊಂಡು ನೀನು ನೆಗೆಸಿದೆ ಬಾನಿಗೆ. ಚಂದರನ ತಲುಪುವ ಮೊದಲು ಚುಕ್ಕಿಗಳ ತೋಟ ಹಾದು ಹೋಗುವಾಗ ಏನು ಆನಂದ, ಏನು ಸೋಜಿಗ!
ಯಾರೋ ಶ್ವೇತಕನ್ಯೆಯರು ಎದುರು ಬಂದರು. ಅವರಲ್ಲೊಬ್ಬಳು ನಿನ್ನನ್ನು ತಡೆದು, ರಾಜಕುವರನೋ ನೀನು, ಇವಳು ಒಲಿದ ರಾಜಕನ್ಯೆಯೋ? ವಿಹಾರಕ್ಕೆ ಬಂದಿರೋ ಎಂದು ಕೇಳಿದರೆ, ಇನ್ನೊಬ್ಬಳು, ರಾಜಕುಮಾರನ ವೇಷದ ಮಾಂತ್ರಿಕನೋ, ರಾಜಕುಮಾರಿಯ ಅಪಹರಿಸಿ ಬಚ್ಚಿಡಲು ಹೊರಟವನೋ ಎಂದು ಕೇಳಿದಳು. ನೀನು ಮುಗುಳು ನಗೆ ಬೀರಿದೆ.
ಅವರರಲ್ಲೊಬ್ಬಳು, ಹಾಯಿ ಹಲಾ, ಚೆಲುವ ಚತುರ ಮಾರರೂಪಿ ನರನೇ ಇವನು ಎಂದಳು. ಈ ಮಾತಿಗೆ ನಾನು ಹೆಮ್ಮೆಯಲಿ ಉಬ್ಬಿಹೋದೆ. ಒಬ್ಬಳು ತನ್ನ ದಿವ್ಯ ದೃಷ್ಟಿಯಿಂದ ತಿಳಿದು, ಹಲಾ ಇವರು ಚಂದಿರನ ಅತಿಥಿಗಳೇ ಎಂದಳು. ಅವರು ಹಲಾ ಹಲಾ ಎಂದು ಕಿಲಕಿಲಿಸುತ್ತ ಮಾಯವಾದರು.
ವಸಂತ ನೀನು ಕುದುರೆ ಸವಾರಿಯ ದಿಕ್ಕು ಬದಲಿಸಿದೆ. ಸುಣ್ಣ ಕಲೆಸಿದ ನೀರು ಚೆಲ್ಲಿದಂತೆ ಇರುವ ಈ ಲೋಕವೇನು ಚೆನ್ನವಿದೆ. ಕೆಳಗೆ ನೋಡೆಂದೆ. ಮೊದಲಿಗೆ ಕಂಡಿದ್ದು ನಮ್ಮೂರು. ನೀಲ ಜಗುಲಿಯಲಿ ಕುಳಿತು ಕನಸು ಕಾಣುತ್ತಿದ್ದಳು. ಅಪ್ಪನ ಗೊರಕೆ ಕೇಳಿಸುತ್ತಿತ್ತು. ಅಮ್ಮ ಮಗ್ಗುಲಾಗಿ ಮಲಗಿ ಎನ್ನುತ್ತಿದ್ದಳು. ನಿಮ್ಮೂರು ಕಂಡಿತು. ಜೋಳದ ತೋಟ, ತಾವರೆ ಕೊಳ. ಕೆಂಚಪ್ಪ ಅವನ ಮನೆಯಂಗಳದಲ್ಲಿ ಮಲಗಿ ಕಚ್ಚಿದ ಸೊಳ್ಳೆಗೆ ಟಪ್ಪೆಂದು ಬಡಿಯುತಿದ್ದ.
ನಾನು ತಾವರೆ ಕೊಳದ ಬಳಿಗೆ ಹೋಗೋಣ ಎಂದೆ. ನೀನು ಕಾಲಿನ ಹಿಮ್ಮಡಿಯಿಂದ ಕುದುರೆಯ ಪಕ್ಕೆ ಹೆಟ್ಟಿದೆ. ಅದು ನೇರ ಕೊಳದ ದಂಡೆಗೆ ಬಂದು ಮಾಯವಾಯಿತು. ನಾವು ಕೊಳದಲ್ಲಿ ಹೊರಳಾಡಿದೆವು. ನೀನು ತಾವರೆ ಹೂ ಕಿತ್ತು ಮುಡಿಸಿದೆ. ಮಲ್ಲಿಗೆ ನಾನು ಬೇಡವಾದನೆ ಎಂದಿತು. ನೀನು ಒಂದು ಮೊಗ್ಗು ತಂದು ಮುಡಿಸಿದಾಗ, ಕನಕಾಂಬರ ಇದು ಮೋಸ ಎಂದಿತು. ಅದನ್ನೂ ತಂದು ಮುಡಿಸಿದೆ.
ಕೊಳದ ನೀರು ಚಳಿ ಹುಟ್ಟಿಸಿತು. ನಾನು ಗಡಗಡ ನಡುಗಿದೆ. ಹಲ್ಲುಗಳು ಕಟಕಟ ಶಬ್ದ ಮಾಡಿದವು. ನಾನು ಚಳಿ ನೀಗುತ್ತೇನೆಂದು ನೀನು ಕಾವಲಿನ ಮಂಚಕೆ ಹತ್ತಿಸಿ ನನ್ನನ್ನು ಅಪ್ಪಿ ಮಲಗಿದೆ.
ಅಮ್ಮ ತುಳಸಿಕಟ್ಟೆಗೆ ಪ್ರದಕ್ಷಿಣೆ ಹಾಕುತ್ತ 'ತುಳಸೀ ಮಾತೆ ಸ್ವೀಕರಿಸು ಪೂಜೆ, ನೀಡು ಸೌಭಾಗ್ಯ ಬಾಳಿಗೆ' ಎಂದು ಹಾಡುತ್ತಿದ್ದ ಸ್ವರ ಕೇಳಿ ಎಚ್ಚರವಾಯಿತು. ಆದರೆ ಹಾಸಿಗೆ ಬಿಟ್ಟೇಳಬೇಕು ಅನ್ನಿಸಲಿಲ್ಲ. ಕನಸನ್ನೇ ನೆನೆಯುತ್ತ ಮಲಗಿದೆ.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications