ವಸಂತ, ನೀನು ಸೊಂಟ ಚಿವುಟಿದ್ದರಿಂದಲೇ ನಾನು ತುಟಿ ಕಚ್ಚಿಕೊಂಡೆ
ವಸಂತ, ಪ್ರಿಯ ವಸಂತ,
ನೀನು ಬಂದುದು ನಮ್ಮ ಮನೆಗೇ ವಸಂತ ಬಂದಂತೆ ಅನಿಸಿತು. ಬಿಳಿ ಪಂಚೆ, ಅಂಗಿ ತೊಟ್ಟು ಬಂದಿದ್ದೆ. ಬಂದುದು ವಸಂತನಲ್ಲ, ನನ್ನ ಪ್ರೀತಿ ಈ ರೂಪದಲ್ಲಿ ಬಂದಿದೆ ಅನಿಸಿತು. ಧವಳ ಉಡುಗೆಯ ಪ್ರೀತಿ ಚಂದ್ರಾಮ ನೀನು. ನನ್ನನ್ನು ಕಾಮರೂಪಿ ಎಂದು ಕವಿತೆಯಲಿ ಹಾಡಿದ್ದೆ. ನೀನೇ ಕಾಮರೂಪಿ ಕಣೋ!
ಋತುಗಳ ರಾಜ ವಸಂತನ ಎಲ್ಲ ರೂಪ, ರಂಗು ನಿನಗಿದೆ. ನೀನು ಕಣ್ಣಲ್ಲಿ ನನ್ನ ಕುಣಿಸುತ್ತಿ. ನಗೆಯಲ್ಲಿ ಸವಿಯಾಗಿ ನರಳಿಸುತ್ತಿ. ಮಾತಿನಲ್ಲಿ ನನ್ನೆದೆಯ ಹೂವಾಗಿಸುತ್ತಿ. ನನ್ನ ಭಾವದ ನವಿಲು ನೀನು. ನನ್ನೆದೆಯ ತಾಪಕ್ಕೆ ತುಂತುರು ಮಳೆ ನೀನು. ನಲ್ಲೆಯ ಮನ ಬಲ್ಲ ನಲ್ಲ ನೀನು. ಶೃಂಗಾರ ಸಹಸ್ರನಾಮ ರಚಿಸುವ ಶಕ್ತಿ ನನಗಿದ್ದಿದ್ದರೆ ನಿನ್ನನ್ನು ಬಣ್ಣಿಸಿ ಬಣ್ಣಿಸಿ ತಣಿಯುತ್ತಿದ್ದೆ, ದಣಿಯುತಿದ್ದೆ ವಸಂತ.
ನಿನ್ನ ಪ್ರೀತಿಗೆ ಮಣಿವೆ, ಅದರ ರೀತಿಗೆ ಮಣಿವೆ. ನನ್ನ ಮನ್ಮಥ ಮಾರ ಸುಕುಮಾರ, ರಾಜ, ಚೆನ್ನರಸ, ತೊಳೆದ ಸ್ವಾತಿ ಮುತ್ತೇ, ನನ್ನ ಸರ್ವಸ್ವವೇ ಇನ್ನೆಷ್ಟು ದಿನ ಈ ಅಗಲಿಕೆ? ನನ್ನ ಸುಡುವ ಬಿಸಿಯುಸಿರು ತಂಪಾಗುವುದೆಂದಿಗೆ?

ನೀನು ಬರುವ ಸುದ್ದಿಯನ್ನು ಪತ್ರವೇನೋ ತಂದಿತು. ಬರುವ ಸುಳಿವು ಯಾವುದರಿಂದ ಸಿಕ್ಕೀತು ಎಂದು ಯೋಚಿಸುತ್ತಿದ್ದೆ. ರೈಲಿನ ಶಿಳ್ಳೆ? ಅದು ಅಕಸ್ಮಾತ್ ತಡವಾದರೆ, ನಿನಗೆ ಕಾಯುವ ತಾಳ್ಮೆಯಿರದೆ, ಮೂರು ಬಸ್ಸು ಬದಲಿಸಲು ಬೇಸರಿಸದೆ ಬಸ್ಸಿನಲ್ಲಿಯೇ ಬಂದುಬಿಟ್ಟರೆ? ನಮ್ಮೂರ ಮಣ್ಣುರಸ್ತೆಯಲ್ಲಿ ಅದು ಬರುವಾಗ ಎಬ್ಬಿಸಿದ ಧೂಳೆ? ಬಾಡಿಗೆ ಕಾರಿನಲ್ಲೇನಾದರೂ ಬಂದುಬಿಟ್ಟರೆ? ಮನೆ ಮುಂದೆ ನಿಲ್ಲುತ್ತ ಮಾಡುವ ಹಾರನ್ನೇ? ಎಲ್ಲ ಸಾದ್ಯತೆ ಇರುವಾಗ ಕಣ್ಣು, ಕಿವಿ, ಮೂಗು, ಮನಸ್ಸುಗಳನ್ನು ಜಾಗೃತಗೊಳಿಸಿ ಕಾಯುತ್ತಿದ್ದೆ.
ರೈಲಿನ ಶಿಳ್ಳು ಕೇಳಿಸಿತು. ನೀನು ರೈಲಿನಲ್ಲಿಯೇ ಬಂದಿದ್ದೆ. ನಡೆದು ಬರುವ ನೀನು ಕಣ್ಣಿಗೆ ಕಂಡೆ. ನೀನು ಹತ್ತಿರಾಗುತ್ತ ಆಗುತ್ತ, ಮನಸ್ಸು ಅರಳುತ್ತ ಅರಳುತ್ತ ನೀನು ನಗುವಾಗಲೇ ನನ್ನ ತುಟಿಯು ನಗೆ ಮುಡಿಯಿತು. ಬಂದೆ, ಬಂದೇಬಿಟ್ಟೆ ಸನಿಹ ಸನಿಹ. ನನ್ನ ಕಾತರದ ಕಣ್ಣಿಗೆ ಹಬ್ಬವಾಗಿಸಲೋ, ನಿನ್ನ ಕಾತರವೋ ಬಾಗಿಲಲ್ಲಿಯೇ ಚೀಲ ಕೈಗಿತ್ತೆ.
ನಾನು ಅಲ್ಲಿಯೇ ತೆರೆದು ನೋಡಿದೆ. ಜೋಡಿ ತಾವರೆ. ಒಳಬಂದು ಹೊರ ತೆಗೆದು ಕೈಲಿ ಹಿಡಿದಾಗ, ನೀನು, ಒಂದು ನಾನೆಂದು, ಇನ್ನೊಂದು ನೀನೆಂದು ಸನ್ನೆ ಮಾಡಿದೆ. ಅಷ್ಟು ಹೊತ್ತಿಗೆ ಅಮ್ಮ ಹೊರಬಂದಳು. ಅವಳ ಸೆರಗಿನ ಹಿಂದೆಯೇ ಅಪ್ಪ. ಇಬ್ಬರೂ ಕೂಡಿ ಅಳಿಯನಿಗೆ ಔತಣದಡುಗೆ ಮಾಡುತ್ತಿದ್ದರು.
ಅಪ್ಪ ಕೈ-ಕಾಲು ತೊಳೆಯೆಂದು ನಿನಗೆ ಹೇಳಿದರೆ, ಒಳಗೆ ಬಂದು ಪಾನಕ ತಂದು ಕೊಡೆಂದು ಅಮ್ಮ ಹೇಳಿದಳು. ಮತ್ತೆ ಅವರಿಬ್ಬರು ಅಡುಗೆಮನೆ ಸೇರಿಕೊಂಡರು.
ನೀನು ಪಾನಕದ ಲೋಟ ಹಿಡಿದು ನೀರು ಕುಡಿದಿದ್ದ ಲೋಟಕ್ಕೆ ಅರ್ಧ ಬಗ್ಗಿಸಿ ನನಗೆ ಕೊಟ್ಟು ಕುಡಿಯುತ್ತ, ತಾವರೆ ಚೆಂದವೆ? ನಮ್ಮ ಕೊಳದಲ್ಲಿ ಅರಳಿದ ನಿನ್ನ ತಾವರೆ ಎಂದೆ. ನಾನು, ಹೌದು ನನ್ನ ತಾವರೆ. ನೀ ನನ್ನ ತಾವರೆ ಎಂದೆ. ತಾವರೆಯನ್ನು ಹೋಲಿಸುವುದು ಹೆಣ್ಣಿಗೆ ಎಂದು ನನ್ನ ಸೊಂಟ ಚಿವುಟಿದೆ. ಹಾ ಎನ್ನುವವಳಿದ್ದು ತುಟಿ ಕಚ್ಚಿ ಹಿಡಿದೆ. ಆಗ ನೀನು ಅದು ನನ್ನದು ನೀನೇಕೆ ಈಗಲೇ ಕಚ್ಚಿದೆ ಎಂದು ಜಡೆ ಹಿಡಿದೆಳೆದು ಹೇಳಿದೆ. ಅಡುಗೆ ಮನೆ ಬಾಗಿಲಿಗೆ ಬಂದ ಅಮ್ಮ ಕೆಮ್ಮಿದಳು.
ಊಟಕ್ಕೆ ಕುಳಿತಾಗ ಅಪ್ಪ ಹೇಳಿದರು, ನಿಮ್ಮ ಕೆಂಚಪ್ಪನಿಗೆ ಸರಿ ಜೋಡಿ ಹೆಣ್ಣು ಇದ್ದಾಳೆ. ಬಡತನದಲ್ಲಿ ಬೆಳೆದ ಹುಡುಗಿ. ಹೊಂದಿಕೊಂಡು ಹೋಗುವ ಸ್ವಭಾವದಳು. ಸುಮ್ಮನೇ ಬಾ ಎಂದಿರುವೆವು. ಇನ್ನೇನು ಬಂದಾಳು. ನೀನು ಒಪ್ಪಿದರೆ ಆಯಿತೆಂದು ಶಕುಂತಲೆ ಹೇಳಿದಳು ಎಂದು ಹೇಳುತ್ತಿರುವಾಗಲೇ ಆ ಹುಡುಗಿ ನೀಲ ಬಂದೇಬಿಟ್ಟಳು. ಕೆಂಚಪ್ಪನ ಕಪ್ಪು ಮೈ ಬಣ್ಣವೇ ಅವಳದು. ಸುಂದರಿ.
ಸಂಜೆಗೆ ಹಿಂತಿರುಗುವ ಅದೇ ರೈಲಿಗೆ ನೀನು ಹೊರಟೆ. ಅಪ್ಪ ರೈಲು ನಿಲ್ದಾಣದವರೆಗೆ ನಿನಗೆ ಜೊತೆಯಾದರು. ಜೋಡಿ ತಾವರೆಯ ಕಂಡ ನೀಲ ಅದರಲ್ಲಿ ಒಂದನ್ನು ಎತ್ತಿಕೊಂಡು ಕೆನ್ನೆಗೆ ಸವರಿಕೊಂಡು, ನಿಮ್ಮೂರಿಂದಾ ಅಂದಳು. ನಿನ್ನೂರಿಂದೂನೂ ಅಂದೆ. ಅರ್ಥವಾಗದಿದ್ದರೂ ನಕ್ಕಳು. ನೀನು ಬಂದೆ, ಹೊರಟುಬಿಟ್ಟೆ. ನನಗೆ ನೀನು ಬಂದುದೇ ಕನಸು ಅನ್ನಿಸುತ್ತಿದೆ, ಏಕೆ ವಸಂತ?
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications