ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ಟಿನಲ್ಲಿ ಸೋತಿದ್ದಕ್ಕೆ ನಾರಾಯಣಮೂರ್ತಿ ಕುಟ್ಟಿದ ತವಡು!

By Staff
|
Google Oneindia Kannada News


Fine. ಭಾರತದ ನಗರಗಳ ರಸ್ತೆಗಳು ಚೆನ್ನಾಗಿಲ್ಲ, ನಮ್ಮ ಜನಕ್ಕೆ ಶಿಸ್ತಿಲ್ಲ, ನಾವೆಲ್ಲ ಪರಮ ಸೋಮಾರಿಗಳು, ನಮ್ಮ ತರಬೇತು ವಿಧಾನದಲ್ಲೇ ತಪ್ಪಿದೆ-ಎಲ್ಲವೂ ನಿಜ. ಆದರೆ ಸ್ವಾಮೀ, ನಮಗಿಂತ ಕೊಳಕಾದ, ದುರ್ಭರವಾದ ದೇಶಗಳು ಶ್ರೀಲಂಕಾ ಮತ್ತು ಬಾಂಗ್ಲಾದೇಶ್‌! ಅಲ್ಲಿ ರಸ್ತೆಗಳೇ ಇಲ್ಲ. ಲಂಕಾದಲ್ಲಿ ಶವಗಳನ್ನು ತೆಗೆಯೋದೇ ಕಷ್ಟ. ದೇಶದ ಅರ್ಧ ಭಾಗಕ್ಕೆ ಎಂಟ್ರಿಯೇ ಸಿಗುವುದಿಲ್ಲ. ಅಂಥ ದೇಶದಿಂದ ಅವನ್ಯಾವನ್ರೀ ಕಲರ್‌ ತಲೆಯ ಮಾಲಿಂಗ? ಎದ್ದು ಬಂದವನೇ ಎಲ್ಲ ಶಿಸ್ತಿನ ಸಿಪಾಯಿಗಳಂಥ ದೇಶಗಳವರನ್ನೂ ನಿಲ್ಲಿಸಿ ಅಂಡಿನ ಮೇಲೆ ಬರೆ ಮೂಡುವಂತೆ ಬಾರಿಸಿ ಕ್ಯಾಕೆ ಹೊಡೆದನಲ್ಲ? ಅವನೇನು ಇನ್ಫೋಸಿಸ್‌ನಲ್ಲಿ ತರಬೇತಿ ತಗೊಂಡಿದ್ದನಾ? ಸದರಿ ನಾರಾಯಣಮೂರ್ತಿಯವರು ಇನ್ನೊಂದು ಪ್ಯಾರಾ ಬರೆಯುತ್ತಾರೆ ನೋಡಿ:

‘ನೀವು ಒಬ್ಬರಿಗೆ ಒಂದು ಜವಾಬ್ದಾರಿ ಹೊರಿಸಿದ ಮೇಲೆ, ನಿಮ್ಮ ತೀರ್ಪು ಹೇಳಿದ ಮೇಲೆ ಯಾವುದೇ ರೀತಿ ಅದರೊಳಕ್ಕೆ ತಲೆಹಾಕದೆ ಅವರಿಗೆ ಕೆಲಸ ಮಾಡಲು ಬಿಡಿ. ನಮ್ಮ ಇನ್ಫೋಸಿಸ್‌ನಲ್ಲಿ ಮೊದಲು ಚರ್ಚೆ, ವಾದ-ಪ್ರತಿವಾದ ಎಲ್ಲವೂ ಮೊದಲೇ ಆಗಿ ಯಾರಿಗೆ ನಾವು ಒಂದು ಕೆಲಸದ ಜವಾಬ್ದಾರಿ ಹೊರಿಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ಒಮ್ಮೆ ತೀರ್ಮಾನಿಸಿದ ನಂತರ, ಒಬ್ಬ ವ್ಯಕ್ತಿಯನ್ನು ‘ಬಾಸ್‌’ ಅಂತ ಒಪ್ಪಿಕೊಂಡ ನಂತರ ಅಲ್ಲಿಗೆ ಎಲ್ಲ ವಾದಗಳೂ ಮುಗಿದು ಹೋಗಿ ಎಲ್ಲರೂ ಅವನ ಬೆನ್ನ ಹಿಂದೆ ನಿಲ್ತೇವೆ! ’ (ಹೀಗೆ ನಾವು ಮಾಡುತ್ತೇವಾದ್ದರಿಂದ ಕೋಚ್‌ನ ಬಗ್ಗೆ ನೀವು ತಕರಾರು ತೆಗೆಯಬಾರದು ಎಂಬುದು ಯಜಮಾನ್‌ ನಾರಾಯಣಮೂರ್ತಿಯವರ ಮಾತಿನ ಅರ್ಥ).

‘ನಂಗೊತ್ತು, ಪ್ರಕ್ರಿಯೆ ಅಥವಾ ಪ್ರೊಸೀಜರ್‌ ಎಂಬುದು ಗೇಲಿಯ ಸಂಗತಿಯಾಗಿ ಹೋಗಿದೆ. ಆದರೆ ನಮ್ಮ ಇನ್ಫೋಸಿಸ್‌ನಲ್ಲಿ ನಾವು ‘ಪ್ರಾಸೆಸ್‌’ನ್ನ ಬಲವಾಗಿ ನಂಬಿಕೊಂಡು ಅದನ್ನು ಫಾಲೋ ಮಾಡ್ತೇವೆ. ಇದರಿಂದ ನಮಗೆ ತುಂಬ ಸಹಾಯವಾಗಿದೆ. ಛಾಪೆಲ್‌ನ ‘ಪ್ರಾಸೆಸ್‌’ ಯಶಸ್ವಿಯಾಗಲಿಲ್ಲವೆಂದರೆ, ಬಹುಶಃ ಅದನ್ನು ನಮ್ಮವರು ಸರಿಯಾಗಿ ಫಾಲೋ ಮಾಡಿರಲಿಕ್ಕಿಲ್ಲ. ಅಥವಾ ಅದನ್ನು ಸಂಪೂರ್ಣವಾಗಿ ಜಾರಿಗೆ ತರಲಿಕ್ಕೆ ಅವಕಾಶ ಕೊಟ್ಟಿರಲಿಕ್ಕಿಲ್ಲ... ’ ಅಂತೆಲ್ಲ ಬರೆದು ಕಡೆಗೆ ಪ್ಲೇಯರುಗಳನ್ನು ಹೇಗೆ ಆಯ್ಕೆ ಮಾಡಬೇಕು, ಹೇಗೆ ತರಬೇತಿ ಕೊಡಬೇಕು, ಹೇಗೆ ಅವರ ಸಂಬಳಗಳನ್ನು ನಿಗದಿ ಮಾಡಬೇಕು, ಹೇಗೆ ನೌಕರಿಯಿಂದ ವಜಾ ಮಾಡಬೇಕು ಅಂತೆಲ್ಲ ವಿವರಿಸಿ ಕಡೆಗೆ ‘ಎಂಟೂ... ಎಂಟು ತಾಸು, ಎಂಟು ತಾಸು ಅವರಿಂದ ಕೆಲ್ಸ ಮಾಡ್ಸಿ ’ಎಂದು ಶುದ್ಧ ಇನ್ಫಿ ಧಣಿಯಂತೆ ಅಪ್ಪಣೆ ಕೊಡುತ್ತಾರೆ ನಾರಾಯಣಮೂರ್ತಿಗಳು.

ಯಾರಾದರೂ ಕ್ರಿಕೆಟ್ಟಿಗರು ಇದನ್ನು ಓದಿದ್ದಿದ್ದರೆ ಏನನ್ನುತ್ತಿದ್ದರೋ ಗೊತ್ತಿಲ್ಲ. ನಾರಾಯಣಮೂರ್ತಿಯವರ ಇನ್ಫೋಸಿಸ್ಸೂ ಹುಟ್ಟಿ ಹತ್ತು ವರ್ಷಗಳಾಗುವ ತನಕ ಮನೆಯ ಕರಿಬೇವು ಕೊತ್ತಂಬರಿಗೆ ಆಗುವಷ್ಟು ಲಾಭದ ಕಾಸು ಅದರಲ್ಲಿ ಹುಟ್ಟುತ್ತಿರಲಿಲ್ಲ ಎಂಬುದನ್ನು ಅವರು ಮರೆತಂತಿದೆ. ಇದೇ ಭಾರತವೆಂಬ ‘ಕಕ್ಕ ಕಕ್ಕ’ ದೇಶದ ರಸ್ತೆಗಳಿಂದ, ಕೊಳಕು ನಗರಗಳಿಂದ, ದಡ್ಡ ಕಾಲೇಜುಗಳಿಂದ ಅವರು ಇಂಜಿನೀರ್‌ಗಳನ್ನು ಆರಿಸಿಕೊಂಡು, ಅವರ ಕೈಲಿ most non creative ಎಂಬಂಥ ಕೆಲಸ ಮಾಡಿಸುತ್ತಿದ್ದಾರೆಂಬುದನ್ನು ಮರೆತಂತಿದೆ. ತಮ್ಮ ಪ್ರಾಸೆಸ್‌ ಮತ್ತು ಡಿಸಿಪ್ಲೀನುಗಳಿಗಿಂತಲೂ ಇನ್ಫೋಸಿಸ್‌ನ ದೈತ್ಯ ಲಾಭಗಳಿಗೆ ನಂದನ್‌ ನಿಲೇಕಣಿಯಂತಹ ಜೀನಿಯಸ್ಸುಗಳ, ಫಣೀಶ್‌ರಂತಹ ಚತುರ ಅಧಿಕಾರಿಗಳ ‘ಜೀನಿಯಸ್ಸು’-ಮೇಧಾಶಕ್ತಿ ಹೆಚ್ಚು ಕಾರಣ ಎಂಬುದನ್ನು ನಾರಾಯಣಮೂರ್ತಿ ಮರೆತಂತಿದೆ.

ಅಂತಿಮವಾಗಿ, ಕ್ರಿಕೆಟ್‌ನಂಥ ಆಟದ ಬಗ್ಗೆ ಕಾರ್ಪೊರೇಟ್‌ ಶೈಲಿಯ ಅಪ್ಪಣೆಗಳನ್ನು ನಾ.ಮೂ.ಜಾರಿ ಮಾಡುತ್ತಾರಲ್ಲ? ಅವರದೇ ಬೆಂಗಳೂರು ಕಚೇರಿಯಲ್ಲಿ ದೈತ್ಯ ಗಾತ್ರದ ಗಾಜಿನ ಗೋಪುರವೊಂದು ಕುಸಿದು ಬಿದ್ದು ಬಡಪಾಯಿ ಕೂಲಿ ಕಾರ್ಮಿಕರು ಸತ್ತು ಹೋದರು. ಯಾಕೆ ಸ್ವಾಮಿ, ಅದಕ್ಕೆ ಮುಂಚೆ ಗಾಜಿನ ಡೂಮ್‌ ಹೇಗೆ ಕೂಡಿಸಬೇಕು ಎಂಬುದರ ಕುರಿತು ಚರ್ಚೆ-ವಾದ-ಪ್ರತಿವಾದಗಳು ಆಗಿ ಆ ಕೆಲಸಕ್ಕೆ ಯಾರನ್ನು ‘ಬಾಸ್‌’ ಆಗಿ ನೇಮಿಸಬೇಕು, ಯಾರಿಗೆ ಕಾಂಟ್ರಾಕ್ಟು ಕೊಡಬೇಕು, ಅವರಿಗೆ ಮೆರಿಟ್ಟಿದೆಯಾ, ಎಂಟು ತಾಸು ಕೆಲಸ ಮಾಡುತ್ತಾರಾ, ಜಾಗತಿಕ ನಿಯಮಾವಳಿಗಳ ತರಬೇತಿ ಆಗಿದೆಯಾ ಅಂತೆಲ್ಲ ವಿಚಾರಿಸಿರಲಿಲ್ಲವಾ? ಕುಸಿದ ಡೂಮ್‌ನ ಮುಂದೆ ಕುಳಿತು ಮುಂಡಮೋಪಿ ಪ್ರಲಾಪ ಮಾಡಿದ್ದೇಕೆ? ಹಾಗಂತ ಕೇಳಿದರೆ ಸ್ವಾಮಿ ಉತ್ತರಿಸುವುದೇ ಇಲ್ಲ.

ಕ್ರಿಕೆಟ್ಟೆಂಬುದು ವಸಾಹತುಶಾಹಿ ದೇಶ ಹುಟ್ಟಿಸಿ ಕೈಬಿಟ್ಟ ಆಟ. ಅದರಲ್ಲಿ ಸಮೂಹ ಸಾಧನೆಯೂ ಇದೆ, ವ್ಯಕ್ತಿಗತ ಮೆರವಣಿಗೆಯೂ ಇದೆ. ಯಾವ ಕಾರ್ಪೊರೇಟ್‌ ಕಲ್ಚರೂ ಇಲ್ಲದ ಕಾಲದಲ್ಲೂ ಗುಂಡಪ್ಪ ವಿಶ್ವನಾಥ್‌, ಕಪಿಲ್‌ದೇವ್‌, ಪ್ರಸನ್ನ, ಲಿಟ್ಲ್‌ ಮಾಸ್ಟರ್‌ ಗವಾಸ್ಕರ್‌ ಮುಂತಾದವರು ಜಗತ್ತೇ ನಿಬ್ಬೆರಗಾಗುವಂತೆ ಗೆದ್ದಿದ್ದಾರೆ. ಅಂತೆಯೇ ಸರಕು ಮುಗಿದ ಮೇಲೆ ಬ್ಯಾಟು ಬಿಸಾಕಿ ಪೆವಿಲಿಯನ್‌ಗೆ ಹಿಂತಿರುಗಿದ್ದಾರೆ.

ಕ್ರಿಕೆಟ್ಟನ್ನೊಂದು ಶುದ್ಧ ಆಟ ಅಂತ ತೆಗೆದುಕೊಂಡರೆ ಮಾತ್ರ ಮನುಷ್ಯನ ಇತಿಮಿತಿಗಳು ಅರ್ಥವಾಗುತ್ತವೆ. ನಮಗಿಂತಲೂ ದರಿದ್ರ ದೇಶವಾದ ಪಾಕಿಸ್ತಾನ ಯಾಕೆ ಅಷ್ಟೊಂದು ಸಲ ಗೆದ್ದಿದೆ ಮತ್ತು ಯಾಕೆ ದಯನೀಯವಾಗಿ ಸೋತಿದೆ ಎಂಬುದು ಸ್ಪಷ್ಟವಾಗುತ್ತದೆ. After all, ಅದೊಂದು ಆಟ. ಆಟವೆಂಬುದು ಮನುಷ್ಯನ ಮಿಲನಮಹೋತ್ಸವದಂತಹುದು: ಒಮ್ಮೆ ಶೀಘ್ರ ಶೀಘ್ರ-ಮತ್ತೊಮ್ಮೆ ಪರಮ ಪಾಂಗಿತವಾಗಿ ಆಡಿ... ಶಾಂತಿಃ ಶಾಂತಿಃ ಶಾಂತಿಃ ಆದ್ದರಿಂದಲೇ ಅದನ್ನು ವಾತ್ಸಾಯನ ಕೆಲಸವೆನ್ನಲಿಲ್ಲ ನಾರಾಯಣಮೂರ್ತಿಯಂತೆ. ಅದಕ್ಕೆ ‘ರತಿಕ್ರೀಡೆ’ ಅಂತ ಹೆಸರಿಟ್ಟ. ಕ್ರೀಡೆಯಲ್ಲಿ ಗೆದ್ದರೂ, ಸೋತರೂ ಸುಖವಿರಬೇಕು ಎಂಬುದನ್ನು ಹಾಗೆ ವಿವರಿಸಿದ ಬುದ್ಧಿವಂತ ಆತ.

ನಾರಾಯಣಮೂರ್ತಿ ಹೇಳಿದ ಎಲ್ಲ ಅಂಶಗಳೂ ಸರಿಯಾಗಿವೆ. ಮೆರಿಟ್ಟು, ಶ್ರಮ, ಶಿಸ್ತು, ತರಬೇತು-ಎಲ್ಲ ಸರಿ. ಆದರೆ ಇವೆಲ್ಲ ಇದ್ದೂ ಜೀನಿಯಸ್‌ನ ಕೊರತೆಯಿದ್ದರೆ ಆಟದಂತಹವುಗಳಲ್ಲಿ(ಸಾಹಿತ್ಯ, ಸಂಗೀತ, ಚಿತ್ರಕಲೆ-ಎಲ್ಲವೂ ಅಷ್ಟೆ) ಸೋಲು ಅನಿವಾರ್ಯವಾಗುತ್ತದೆ. ಭಾರತಕ್ಕೆ ಆಗಿರುವುದು ಅಷ್ಟೇ.

ನಾರಾಯಣಮೂರ್ತಿಯ ಬದಲಿಗೆ ಬೆಂಗಳೂರಿನಲ್ಲೇ ಚೆಂದಾಗಿ ಕ್ರಿಕೆಟ್‌ ಆಡುವ ಹುಡುಗನೊಬ್ಬನ ಕೈಲಿ ಭಾರತದ ಸೋಲಿಗೆ ಕಾರಣವೇನು ಅಂತ ಬರೆಯಿಸಬೇಕಾಗಿತ್ತು. ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಯಥಾಪ್ರಕಾರ-ಜೀನಿಯಸ್‌ನ ಕೊರತೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X