ಗುಲಗಂಜಿಯಲ್ಲಿ ಕಪ್ಪಿದ್ದ ಹಾಗೆ ನನ್ನ ಜೀವನವೂ!
(ಮಾಸ್ಟರ್ ಹಿರಣ್ಣಯ್ಯ ಸಂದರ್ಶನದ 3ನೇ ಭಾಗ)
ಒನ್ಇಂಡಿಯಾ : ಲಂಚ ಸಣ್ಣದಿರಲಿ ದೊಡ್ಡದಿರಲಿ, ಎಷ್ಟು ಪಡೆದರೂ ಲಂಚವೇ ಅಲ್ಲವೆ? ಸಣ್ಣ ಲಂಚ ತಗೊಳ್ಳೋದನ್ನ ನೀವು ಒಪ್ತೀರಾ?
ಹಿರಣ್ಣಯ್ಯ : ನಮ್ಮೂರಲ್ಲಿ ಒಂದು ಗಾದೆಯಿದೆ. ಬೆತ್ತಲೆ ಇರುವವರ ಊರಲ್ಲಿ ಬಟ್ಟೆ ಹಾಕೊಳ್ಳೋನು ಮೂರ್ಖ ಅಂತ. ವ್ಯವಸ್ಥೆಯೇ ಕೆಟ್ಟಾಗ ಏನು ಮಾಡೋಕಾಗತ್ತೆ. ವ್ಯವಸ್ಥೆಯಲ್ಲೇ ಇರಬೇಕಾದರೆ ತಗೊಳ್ಳಲೇಬೇಕಾಗತ್ತೆ. ಲೀವ್ ಅಂಡ್ ಲೆಟ್ ಲೀವ್ ಅನ್ನುವುದು ನನ್ನ ಪಾಲಿಸಿ. ಇನ್ನೊಬ್ಬರಿಗೆ ತೊಂದರೆಯಾಗದಂತೆ ತಗೊಂಡರೆ ತಪ್ಪೇನಿಲ್ಲ. ಜಪಾನ್ ನಲ್ಲಿ ಕೂಡ ಲಂಚವಿದೆ. ಬದುಕೋಕೆ ಬಿಡಬೇಕು. ನನ್ನ ಸುಳ್ಳು ಇನ್ನೊಬ್ಬರಿಗೆ ಅನ್ನ ಕೊಡಿಸುತ್ತದಾರೆ ಅದು ಅಸತ್ಯ. ಒಬ್ಬನ ಅನ್ನ ಕಿತ್ತುಕೊಳ್ಳುತ್ತದಾರೆ ಅದು ಮಹಾಪಾಪ. ಹಾಗಾಗಿ ಸತ್ಯವೇ ಪಾಪ.
ಲಂಚ ಎಲ್ಲಿಲ್ಲ ಹೇಳಿ? ರಾಜಕೀಯ, ಶಿಕ್ಷಣ ಕ್ಷೇತ್ರ, ಧಾರ್ಮಿಕ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರವಿದೆ. ಮಠಗಳಲ್ಲೇ ಭ್ರಷ್ಟಾಚಾರ ಜಾಸ್ತಿ. ನಮ್ಮ ಮಠಗಳು ಇಂಡಿಯನ್ ಸ್ವಿಸ್ ಬ್ಯಾಂಕ್ ಇದ್ದಂತೆ. ಅಷ್ಟೇ ಏಕೆ? ಸ್ವಿಸ್ ಬ್ಯಾಂಕಲ್ಲಿ ಹಣ ಇಟ್ಟಿರುವ 180 ರಾಷ್ಟ್ರಗಳಲ್ಲಿ ಭಾರತ ಅಗ್ರಗಣ್ಯ. ಅದರಲ್ಲೂ ಕರ್ನಾಟಕದ ನಾಲ್ಕು ಮಠಗಳು ಟಾಪ್ ನಲ್ಲಿವೆ. ಅವರು ಯಾರು ಅಂತ ಅವರ ಹೆಸರು ಹೇಳುವ ಹಾಗಿಲ್ಲ, ಮುಂಡೇವು.
ಒನ್ಇಂಡಿಯಾ : ಲಂಚಾವತಾರ ನಾಟಕ ಮಾಡಿರುವ ನೀವು, ಭ್ರಷ್ಟಾಚಾರದ ವಿರುದ್ಧ ಭಾಷಣ ಬಿಗಿಯುವ ನೀವು, ನಿಮ್ಮ ಜೀವನದಲ್ಲಿ ಎಂದಾದರೂ ಲಂಚ ನೀಡಿದ್ದೀರಾ?
ಹಿರಣ್ಣಯ್ಯ : ಪ್ರತಿಬಾರಿ! ಪೊಲೀಸಿನವರ ಹತ್ತಿರ ಲೈಸೆನ್ಸಿಗೆ ಹೋಗಲೇಬೇಕು. ಅವರು ಎನ್ಓಸಿ ಕೊಡದೆ ನಾಟಕ ನಡೆಯಲ್ಲ. ಥಿಯೇಟರ್ ಗಟ್ಟಿಮುಟ್ಟಾಗಿದೆ ಅಂತ ಮುನ್ಸಿಪಾಲ್ಟಿಯವನು ಸರ್ಟಿಫಿಕೇಟ್ ಕೊಡಬೇಕು, ಶುರ್ಚಿಭೂತವಾಗಿದೆ ಅಂತ ಹೆಲ್ತ್ ನವನು ಪ್ರಮಾಣಪತ್ರ ನೀಡಬೇಕು, ನಂತರ ಕೆಇಬಿಯವನು ಬರ್ತಾನೆ. ಅವರಿಗೆಲ್ಲ ಅಷ್ಟುಇಷ್ಟು ಲಂಚ ಕೊಡದೆ ಹೋದರೆ ನಾಟಕ ಮುಂದುವರಿಯಲ್ಲ. ಬದುಕಿಗೆ ಅನಿವಾರ್ಯ ಬಂದಾಗ ಮಾತ್ರ ಲಂಚ ಕೊಟ್ಟಿದ್ದೇನೆ. ಅದು ನನ್ನ ಪುಣ್ಯ. ಕೃಷ್ಣ ಹೇಗೆ ಧರ್ಮರಾಯನನ್ನೂ ಲೋಕದ ಹಿತಕ್ಕಾಗಿ ಸುಳ್ಳು ಮಾಡಿದನೋ, ಹಾಗೆಯೆ ಇವರಿಗೆಲ್ಲ ಲಂಚ ಕೊಡಲಿಕ್ಕೆಂದೇ ಒಬ್ಬನನ್ನು ಇಟ್ಟುಕೊಂಡಿದ್ದೆ.
ಒನ್ಇಂಡಿಯಾ : ಇದು ನಿಮ್ಮ ಜೀವನದ ವಿಡಂಬನೆ, ನಿಮ್ಮ ಬದುಕಿನ ವ್ಯಂಗ್ಯ ಅಲ್ಲವೆ?
ಹಿರಣ್ಣಯ್ಯ : ಹೌದುಹೌದು, ಇದು ಒಂದು ರೀತಿ ನನ್ನ ಜೀವನದ ವಿಡಂಬನೆಯೆ. ಊರಿಗೆ ನೀತಿ ಹೇಳುವವನು ಹೀಗೆ ಇದ್ದೀನಲ್ಲ ಅಂತ. ಶುದ್ಧವಾಗಬೇಕು ಅಂತ ಶುದ್ಧವೂ ಆದೆ. ಆದರೆ ಗುಲಗಂಜಿಯಲ್ಲಿ ಒಂದು ಕಪ್ಪು ಇದ್ದಹಾಗೆ ನನ್ನ ಜೀವನವೂ. ಮನದಲ್ಲಿ ಎಲ್ಲೋ ಒಂದು ಕಡೆ ಚುಚ್ಚತ್ತೆ. ಆದರೆ, ಬದುಕಲೇಬೇಕಲ್ಲ? ಆಗ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ಗಾಯವೂ ನನ್ನದೇ, ಮುಲಾಮು ಕೂಡ ನನ್ನದೆ.
ಒನ್ಇಂಡಿಯಾ : ನಿಮ್ಮ ನಾಟಕಗಳಲ್ಲಿ ರಾಜಕಾರಣಿಗಳನ್ನ ಅತ್ಯಂತ ತುಚ್ಛವಾಗಿ ತೆಗಳಿದ್ದೀರಿ, ಛೀಥೂ ಅಂದಿದ್ದೀರಿ, ಸ್ಟೇಜಿನ ಮೇಲೆ ಮಾನ ಹರಾಜು ಹಾಕಿದ್ದೀರಿ. ಆದರೆ, ಅಂಥ ರಾಜಕಾರಣಿಗಳು ನೇರವಾಗಿ ಎಂದಾದರೂ, 'ದಯವಿಟ್ಟು ಹಾಗೆ ಮಾಡಬೇಡಿ' ಎಂದು ನಿಮ್ಮನ್ನು ಅಂಗಲಾಚಿದ್ದಾರಾ?
ಹಿರಣ್ಣಯ್ಯ : ನೇರವಾಗಿ ಯಾರೂ ಹೇಳಿಲ್ಲ. ತೆರೆಯ ಮರೆಯಲ್ಲಿ ತೊಂದರೆ ಕೊಟ್ಟಿದ್ದಾರೆ. ನನ್ನ ಬಾಯಿ ಮುಚ್ಚಿಸಿದರೆ ನಾನು ಪಾರಾಗುತ್ತೇನೆ ಎಂದು ಏನೆಲ್ಲಾ ಮಾಡಿದ್ದಾರೆ. ನಾನು ಅನ್ನುವಿಕೆಗಿಂತ ಹಣ, ಅಧಿಕಾರ, ಶೋಕಿ ಆಕರ್ಷಣೆ ಆಗಿರುವುದರಿಂದ ನಾನು ಗೌಣವಾದೆ. ಲೈಸೆನ್ಸ್ ರದ್ದು ಮಾಡಿದರೆ, ಫ್ಯೂಸ್ ಕಿತ್ತು ಹಾಕಿದರು, ಹೈಕೋರ್ಟಲ್ಲಿ ಕೇಸ್ ಹಾಕಿದರು, ಕಾರಿಗೆ ಕಲ್ಲು ಹೊಡೆದರು. ಆದರೆ, ಯಾವಾಗ ನನ್ನ ಹಿಂದೆ ಜನರ ಸೈನ್ಯ ಬರಲು ಶುರುವಾಯಿತೋ, ನನ್ನ ಮಾತನ್ನೇ ಇವರು ಆಡುತ್ತಿರುವುದು ಎಂಬುದು ಜನರಿಗೆ ಮನದಟ್ಟಾಯಿತೋ ನನ್ನ ಹಿಂದೆ ಗುಂಪು ಬಂತು. ಜೊತೆಗೆ ಪೊಲೀಸ್ ಮತ್ತು ನ್ಯಾಯಾಂಗ ನನ್ನನ್ನು ಕಾಪಾಡಿದೆ. ಎಲ್ಲ ಕಡೆಯಿಂದ ಸಪೋರ್ಟ್ ಸಿಕ್ಕಿದ ಮೇಲೆ ಅಪಾಯ ತಪ್ಪಿತು.