ಕೋಟಿ ತಂದುಕೊಟ್ಟವನು ಕೊಳೆಗೇರಿಯಲ್ಲೇ ಇದ್ದಾನೆ!

ಆ ಚಿತ್ರ ತೆರೆಕಂಡದ್ದೇ ತಡ, ನಿರ್ದೇಶಕಿ ಮೀರಾ ನಾಯರ್-ದೇಶಾದ್ಯಂತ ಮಾತ್ರವಲ್ಲ; ಜಗತ್ತಿನಾದ್ಯಂತ ಸುದ್ದಿಯಾದಳು. ಅವಾರ್ಡುಗಳು ಆಕೆಯನ್ನು ಹುಡುಕಿಕೊಂಡು ಬಂದವು. ಆಕೆಯ ಬಗ್ಗೆ ಸುದ್ದಿ ಪ್ರಕಟಿಸಲೆಂದು ಪತ್ರಿಕೆಗಳು ವಾರಕ್ಕೆ ಇಂತಿಷ್ಟು ಜಾಗವನ್ನು ಮೀಸಲಾಗಿಟ್ಟವು. ಆಕೆಯ ಸಂದರ್ಶನಕ್ಕಾಗಿ ವರದಿಗಾರರು ಕ್ಯೂ ನಿಂತರು. ಆಕೆ ಕೆಮ್ಮಿದ್ದು, ಕ್ಯಾಕರಿಸಿದ್ದು, ವಟವಟ ಮಾತಾಡಿದ್ದು; ಮಾತೇ ಆಡದೆ ಸುಮ್ಮನಿದ್ದದ್ದು ಕೂಡ ಸುದ್ದಿಯಾಯಿತು. ಕಾರ್ಪೊರೇಟ್ ಸಂಸ್ಥೆಗಳು ಆಕೆಯನ್ನು ತಮ್ಮ ಕಂಪನಿಯ ರಾಯಭಾರಿ ಮಾಡಿಕೊಳ್ಳಲು ಸ್ಪರ್ಧೆಗಿಳಿದವು. ಆಕೆಯನ್ನು ಸಮಾರಂಭಗಳಿಗೆ ಕರೆದು ಸನ್ಮಾನಿಸಿ ತಮ್ಮ ಸ್ಕೋಪ್ ಹೆಚ್ಚಿಸಿಕೊಂಡವು. ಈ ಮಧ್ಯೆ ಮೀರಾನಾಯರ್ಳ ಮಹಾನ್ (?) ಸಾಧನೆಯನ್ನು ಗುರುತಿಸಿ, ಮಹಾರಾಷ್ಟ್ರ ಸರಕಾರ ಆಕೆಗೆ ಸೈಟ್ ನೀಡಿತು. ಒಂದು ಅಪಾರ್ಟ್ಮೆಂಟನ್ನೂ ಉಡುಗೊರೆಯಾಗಿ ನೀಡಿತು. ಅಷ್ಟೇ ಅಲ್ಲ, ಮುಂಬಯಿ ಒಂದು ರಸ್ತೆಗೆ ಮೀರಾನಾಯರ್ಳ ಹೆಸರಿಡುವವರೆಗೂ ಈ ಹುಚ್ಚಾಟ ಮುಂದುವರಿಯಿತು. ಒಂದೇ ಒಂದು ಸಿನಿಮಾ ನಿರ್ಮಾಣ- ನಿರ್ದೇಶನದ ಮೂಲಕ, ಒಂದಲ್ಲ ಎರಡು ಜನ್ಮಕ್ಕೆ, ಆಗಿ ಮಿಗುವಷ್ಟು ಖ್ಯಾತಿ ಮತ್ತು ಹಣವನ್ನು ಮೀರಾನಾಯರ್ ಸಂಪಾದಿಸಿಬಿಟ್ಟಳು.
ಆದರೆ, ಅದೇ ಸಲಾಂ ಬಾಂಬೆ' ಸಿನಿಮಾದ ಹೀರೋ ಕೃಷ್ಣನ ಪಾತ್ರದಲ್ಲಿ ನಟಿಸಿದ್ದ ಷಫಿ ಎಂಬ ಬಾಲಕನ ಬದುಕು ಬರ್ಬಾದ್ ಆಗಿ ಹೋಗಿತ್ತು. ಮೂಲತಃ ಬೆಂಗಳೂರಿನವನಾದ ಷಫಿಗೆ ಸಲಾಂ ಬಾಂಬೆ' ಚಿತ್ರದ ನಟನೆಗೆಂದು ನೀಡಿದ ಒಟ್ಟು ಹಣದ ಮೊತ್ತ 15000. ಮುಂದೆ ಈತನಿಗೆ ಅತ್ಯುತ್ತಮ ಬಾಲನಟ ಎಂಬ ರಾಷ್ಟ್ರಪ್ರಶಸ್ತಿ ಕೂಡ ಬಂತು. ಆ ದಿನಗಳಲ್ಲಿ ಎಲ್ಲ ಪತ್ರಿಕೆಗಳಲ್ಲೂ ಮೇಲಿಂದ ಮೇಲೆ ಈ ಹುಡುಗನ ಫೋಟೊ ಪ್ರಕಟವಾಯಿತು. ಆತನ ಸಂದರ್ಶನಗಳೂ ಬಂದವು. ಕಡುಬಡವರ ಮನೆಯ ಹುಡುಗ ಷಫಿ, ಪ್ರಶಸ್ತಿ ಪಡೆಯುವ ನೆಪದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಿದ್ದೂ ಆಯ್ತು.
ಮುಂದೆ, ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆದಾಗ ಅಲ್ಲಿ ಸಲಾಂ ಬಾಂಬೆ' ಕೂಡ ಪ್ರದರ್ಶನವಾಯಿತು. ಆ ಸಂದರ್ಭದಲ್ಲೇ ಒಂದೆರಡು ಪತ್ರಿಕೆಗಳಲ್ಲಿ ಷಫಿಯ ಕೌಟುಂಬಿಕ ಹಿನ್ನೆಲೆಯ ವಿವರಣೆ ಪ್ರಕಟವಾಯಿತು. ತಕ್ಷಣವೇ ಮಹಾದಾನಿಗಳಂತೆ ಫೋಸ್ ನೀಡಿದ ಕೆಲವರು, ಷಫಿಗೆ ಲಕ್ಷ ಲಕ್ಷ ರೂ. ನೆರವು ನೀಡಲು ನಾವು ಸಿದ್ಧ ಎಂದು ಘೋಷಿಸಿದರು. ಅದೇ ಮಾತನ್ನು ಪತ್ರಿಕೆಗಳ ಮುಂದೆಯೂ ಹೇಳಿ ಫೋಟೊ ತೆಗೆಸಿಕೊಂಡರು. ಕೆಲವರಂತೂ ಇನ್ನೂ ನಾಲ್ಕು ಹೆಜ್ಜೆ ಮುಂದೆ ಹೋಗಿ, ಷಫಿಯ ಕಾಲೇಜು ವ್ಯಾಸಂಗದವರೆಗೂ ತಾವು ಧನಸಹಾಯ ಮಾಡುವುದಾಗಿ ಘೋಷಿಸಿಬಿಟ್ಟರು. ಇನ್ಯಾರೋ- ಆ ಹುಡುಗನಿಗೆ ನಾವು ಮನೇನೇ ಕಟ್ಟಿಸಿಕೊಡ್ತೇವೆ ಬಿಡ್ರಿ' ಎಂದು ಬೂಸಿ ಹೊಡೆದು ಸುದ್ದಿಯಾದರು.
ಹೀಗಿದ್ದಾಗಲೇ ಯಡವಟ್ಟಾಗಿ ಹೋಯಿತು. ಕೋಲ್ಕತ್ತಾದಲ್ಲಿ ಚಿತ್ರೋತ್ಸವಕ್ಕೆಂದು ಹೋಗಿದ್ದನಲ್ಲ? ಅಲ್ಲಿಯೇ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತನಗೆ ದೊರಕಿದ್ದ ಅತ್ಯುತ್ತಮ ಬಾಲನಟ' ಪ್ರಶಸ್ತಿ ಪತ್ರವನ್ನೇ ಈ ಅಮಾಯಕ ಷಫಿ ಕಳೆದುಕೊಂಡುಬಿಟ್ಟ. ಅಲ್ಲಿಂದ ಹಿಂದಿರುಗುವ ವೇಳೆಗೆ ಮೀರಾನಾಯರ್ಗೆ ಈ ಹುಡುಗನ ಕಡೆಯಿಂದ ಆಗಬೇಕಾದ್ದೇನೂ ಇರಲಿಲ್ಲವಲ್ಲ? ಅದೇ ಕಾರಣದಿಂದ- ಟಾಟಾ ಸೀಯೂ ಬೈ ಬೈ...' ಎಂದು ಮೆಲ್ಲಗೆ ಜಾರಿಕೊಂಡಳು. ತನ್ನ ಅದ್ಭುತ ಅಭಿನಯದಿಂದ ಕೇವಲ ಮುಂಬಯಿಯಲ್ಲ; ಇಡೀ ಭಾರತದ ಜನರ ಮನಗೆದ್ದಿದ್ದ ಷಫಿ ಅಕ್ಷರಶಃ ಬೀದಿಗೆ ಬಿದ್ದಿದ್ದ. ಸರ್ಟಿಫಿಕೇಟ್ ಇರಲಿಲ್ಲವಲ್ಲ? ಅದೇ ಕಾರಣದಿಂದ ಸಲಾಂ ಬಾಂಬೆ'ಯ ಹೀರೋ ನಾನೇ ಎಂದು ಈ ಹುಡುಗ ಹೇಳಿದರೆ- ಅದನ್ನು ನಂಬಲು ಭಗವಂತ ಕೂಡ ತಯಾರಿರಲಿಲ್ಲ. ಷಫಿಗೆ ಮನೆ ಕೊಡಿಸ್ತೀವಿ. ಕಾಲೇಜಿಗೆ ಕಳಿಸ್ತೀವಿ, ಖರ್ಚಿಗೆ ಕಾಸು ಕೊಡ್ತೇವೆ ಎಂದಿದ್ದರಲ್ಲ? ಅವರೆಲ್ಲ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದ ಮರುದಿನದಿಂದಲೇ ನಾಪತ್ತೆಯಾಗಿದ್ದರು!
ಕಡೆಗೆ ಏನಾಯಿತೆಂದರೆ, ಸಲಾಂ ಬಾಂಬೆಯ ಹೀರೋ ಷಫಿ; ಬಾಂಬೆಗೆ ಕಡೆಯ ಸಲಾಂ ಹೊಡೆದು ಸೀದಾ ಬೆಂಗಳೂರಿಗೆ ಬಂದ. ಇಲ್ಲಿ ಅದೆಷ್ಟು ಸಂಕಟ ಅನುಭವಿಸಿದನೋ; ಭಗವಂತ ಬಲ್ಲ. ಮುಂದೆ ಹೊಟ್ಟೆಪಾಡಿನ ಕಾರಣಕ್ಕೆ, ಆಟೊ ಓಡಿಸಲು ನಿಂತ. ಈ ಮಧ್ಯೆ ಅದ್ಯಾರೋ- ಹೇಗಿದ್ರೂ ನೀನು ರಾಷ್ಟ್ರಪ್ರಶಸ್ತಿ ತಗೊಂಡವನು ತಾನೆ? ಒಂದು ಅರ್ಜಿ ಹಾಕು, ಬಿಡಿಎ ಸೈಟ್ ಸಿಗುತ್ತೆ ಅಂದಿದ್ದಾರೆ. ಷಫಿ ಅರ್ಜಿಯ ಹಿಂದೆಯೇ ಐದಾರು ವರ್ಷ ಅಲೆದಾಡಿದ್ದಾನೆ. ಉಹುಂ, ಏನೆಂದರೆ ಏನೂ ಉಪಯೋಗವಾಗಿಲ್ಲ.
ಒಂದು ಕಾಲದಲ್ಲಿ ದೇಶದ ಅಷ್ಟೂ ದಿನ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ರಾರಾಜಿಸಿದ ಷಫಿ- ಈಗ ಬೆಂಗಳೂರಿನಲ್ಲಿ ಆಟೊ ಓಡಿಸಿಕೊಂಡಿದ್ದಾನೆ. ಕನಕಪುರ ರಸ್ತೆ, ಅಂಜನಾಪುರ ಸಮೀಪದ ಆವನಹಳ್ಳಿಯಲ್ಲಿ ಒಂದು ಪುಟ್ಟ ಮನೆಯಲ್ಲಿ ಅವನ ವಾಸ. 98457 79057 ನಂಬರಿಗೆ ಫೋನ್ ಮಾಡಿ- ಹಲೋ ಷಫೀ ಅಂದರೆ, ಎರಡನೇ ನಿಮಿಷದ ಹೊತ್ತಿಗೆ ಜನ್ಮಾಂತರದ ಬಂಧುವೇನೋ ಎಂಬಂತೆ ಆತ ಮಾತಿಗೆ ಶುರು ಮಾಡುತ್ತಾನೆ. ಆತನ ಮಾತುಗಳಲ್ಲಿ ಸಂಭ್ರಮ, ಸಡಗರ, ಅನುಮಾನ, ಕುತೂಹಲ, ಒಂದು ಬೆರಗು, ಸಣ್ಣದೊಂದು ಅನುಮಾನ, ಸಾಗರದಷ್ಟು ಪ್ರೀತಿ ಮತ್ತು ತನ್ನ ಸಂಕಟದ ಬದುಕಿನ ಕುರಿತು ಒಂದು ವಿಷಾದ- ಇರುತ್ತದೆ. ಆದರೆ, ತಾನೇ ಬಡವ ಎಂದು ಗೊತ್ತಿದ್ದರೂ- ಮನುಷ್ಯ ಜನ್ಮ ಒಂದೇ ಸಾರ್. ಈ ಜನ್ಮದಲ್ಲಿ ಹತ್ತು ಜನ್ಮಕ್ಕಾದ್ರೂ ನಾನು ಸಹಾಯ ಮಾಡ್ಬೇಕು' ಎನ್ನುತ್ತಾನೆ ಷಫಿ. ಆ ಮಾತು ಕೇಳಿದಾಗ ಮಾತ್ರ ಹೀರೋ ಅಂದ್ರೆ ಇವನೇ' ಎಂದು ಉದ್ಗರಿಸುವಂತಾಗುತ್ತದೆ.
***
ದುರಾದೃಷ್ಟ ಎಂಬುದು ವಕ್ಕರಿಸಿಕೊಂಡರೆ ಏನಾಗುತ್ತೆ ಎಂಬುದಕ್ಕೆ ಉದಾಹರಣೆಯಾಗಿ ಸಲಾಂ ಬಾಂಬೆ'ಯ ಷಫಿ'ಯ ಬದುಕಿನ ಕಥೆ ಹೇಳಬೇಕಾಯಿತು ಅಷ್ಟೆ. ಈ ವಾರ ಹೇಳಲು ಹೊರಟಿರುವುದು ಸ್ಲಂಡಾಗ್ ಮಿಲೇನಿಯರ್ ಚಿತ್ರದ ಮೂವರು ಬಾಲನಟರ ಪೈಕಿ ಒಬ್ಬನಾದ ಅಜರುದ್ದೀನ್ ಇಸ್ಮಾಯಿಲ್ ಷೇಕ್ನ ಬದುಕಿನ ಕಥೆಯನ್ನ.
ಈಗ, ಜಗತ್ತಿಗೇ ಗೊತ್ತಿರುವಂತೆ- ಸ್ಲಂಡಾಗ್...' ಸಿನಿಮಾಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ಬಂದಿವೆ. ಏಳು ಬ್ರಿಟೀಷ್ ಅಕಾಡೆಮಿ ಪ್ರಶಸ್ತಿಗಳೂ ಲಭಿಸಿವೆ. ಚಿತ್ರ ತೆರೆಕಂಡು ಆಗಲೇ ಮೂರು ತಿಂಗಳು ಕಳೆದು ಹೋಗಿದ್ದರೂ ಈಗಲೂ ಎಲ್ಲರ ಮನೆಯಲ್ಲೂ ಸ್ಲಂಡಾಗ್' ಕುರಿತು ಚರ್ಚೆ ಆಗುತ್ತಲೇ ಇದೆ. ಕೇವಲ ಹದಿನೈದು ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಈವರೆಗೆ 150 ಕೋಟಿ ರೂ.ಗೂ ಹೆಚ್ಚು ಹಣ ಸಂಪಾದಿಸಿದೆ. ಮುಂದಿನ ಆರು ತಿಂಗಳಲ್ಲಿ ಈ ಲಾಭದ ಮೊತ್ತವೇ 300 ಕೋಟಿ ರೂ.ಗೆ ತಲುಪಬಹುದೆಂದು ಹಾಲಿವುಡ್ ಚಿತ್ರರಂಗದ ಪ್ರಮುಖರು ಅಂದಾಜು ಮಾಡಿದ್ದಾರೆ. ಈ ಚಿತ್ರಕ್ಕೆ ಸಂಗೀತ ನೀಡಿದ ರೆಹಮಾನ್ ಬೆಲೆ ಕೂಡ ಚಿತ್ರವೊಂದಕ್ಕೆ ಒಂದು ಕೋಟಿ +++ ಆಗಿ ಹೋಗಿದೆ.
ಹೀಗೆ, ಪ್ರತಿಯೊಂದು ವ್ಯವಹಾರವೂ ಕೋಟಿ ಕೋಟಿಯ ಲೆಕ್ಕದಲ್ಲೇ ನಡೆಯುತ್ತಿರುವಾಗಲೇ- ಅಜರುದ್ದೀನ್ ಇಸ್ಮಾಯಿಲ್ ಷೇಕ್, ಮುಂಬಯಿಯ ಕೊಳೆಗೇರಿಯಲ್ಲೇ ಉಳಿದು ಹೋಗಿದ್ದಾನೆ. ಹೇಳಿದರೆ ಅವನ ಬದುಕಿನದು- ಚೆಂದದ ಕತೆಯೂ ಹೌದು; ಕರುಣ ಕಥೆ ಕೂಡ ಹೌದು. ಈ ಅಜರುದ್ದೀನ್ ಇಸ್ಮಾಯಿಲ್ ಷೇಕ್, ಮುಂಬಯಿಯ ಕೊಳೆಗೇರಿಯಲ್ಲೇ ಹುಟ್ಟಿ ಬೆಳೆದ ಬಾಲಕ. ಮುಂಬಯಿ ಷೇರುಪೇಟೆಗೆ ತುಂಬ ಹತ್ತಿರದಲ್ಲೇ ಆ ಕೊಳೆಗೇರಿಯಿದೆ. ಸ್ಲಂ ಡಾಗ್' ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಿದ್ದಾಳಲ್ಲ ರುಬೀನಾ ಆಲಿ, ಆಕೆ ಈ ಹುಡುಗನ ಕ್ಲಾಸ್ಮೇಟ್. ಇಬ್ಬರೂ ಅದೇ ಕೊಳೆಗೇರಿಯಲ್ಲಿರುವ ಮುನ್ಸಿಪಲ್ ಶಾಲೆಯಲ್ಲಿ ಓದುತ್ತಿದ್ದಾರೆ.
ಒಂದು ಕ್ಷಣದ ಮಟ್ಟಿಗೆ ಸ್ಲಂ ಡಾಗ್...'ನ ಹೀರೋ ಜಮಾಲ್ನ ಅಣ್ಣನ ಪಾತ್ರದಲ್ಲಿರುವ ಅಜರುದ್ದೀನ್ನ ನಟನೆಯ ಸ್ಯಾಂಪಲ್ಗಳನ್ನು ನೆನಪಿಸಿಕೊಳ್ಳಿ: ಜಮಾಲ್ ತುಂಬಾ ಕಷ್ಟಪಟ್ಟು ಅಮಿತಾಭ್ ಬಚ್ಚನ್ನ ಆಟೊಗ್ರಾಫ್ ಹಾಕಿಸಿಕೊಂಡು ಬಂದರೆ- ಅದನ್ನು ಈತ, ಜಾಸ್ತಿ ದುಡ್ಡು ಕೊಟ್ಟ ಯಾರೋ ಒಬ್ಬನಿಗೆ ಮಾರಿಬಿಡುವ ಸಂದರ್ಭ; ಕಥಾನಾಯಕಿ ಲತಿಕಾ ಕೈಗೆ ಒಂದು ಹಸುಗೂಸು ನೀಡಿ ಇದನ್ನು ಎತ್ಕೊಂಡೇ ಭಿಕ್ಷೆ ಬೇಡಲು ಹೋಗು. ಆಗ ನಿನಗೆ ಎರಡು ಪಟ್ಟು ಭಿಕ್ಷೆ ಸಿಗುತ್ತೆ ಎನ್ನುವ ಸನ್ನಿವೇಶ; ಚಲಿಸುತ್ತಿರುವ ರೈಲಿನ ಮೇಲೆ ಹಗ್ಗ ಹಿಡಿದು ನಿಂತು, ತಿಂಡಿ ಲಪಟಾಯಿಸಲು ತಮ್ಮನಿಗೆ ಹೇಳುವ ಮತ್ತೊಂದು ಸಂದರ್ಭ, ಹೀಗೇ... ಈಗ ಏನಾಗಿದೆ ಅಂದರೆ- ಚಿತ್ರದ ನಿರ್ಮಾಪಕರು ಮೂಟೆ ಮೂಟೆ ದುಡ್ಡಿನೊಂದಿಗೆ, ನಿರ್ದೇಶಕರು ವಿಪರೀತ ಖ್ಯಾತಿಯೊಂದಿಗೆ ಹಾಲಿವುಡ್ ಸೇರಿಕೊಂಡಿದ್ದಾರೆ. ಪ್ರಶಸ್ತಿ ಪಡೆಯುವ ನೆಪದಲ್ಲಿ ಅಜರುದ್ದೀನ್ ಕೂಡ ವಿದೇಶಕ್ಕೆ ಹೋಗಿ ಬಂದಿದ್ದಾನೆ. ಆತನ ಕೈಯಲ್ಲಿ ಪ್ರಶಸ್ತಿ ಪತ್ರವಿದೆ. ಪತ್ರಿಕೆಗಳಲ್ಲಿ ಆತನ ಫೋಟೊ, ಸಂದರ್ಶನ ಬಂದಿದೆ. ಈ ಹುಡುಗನಿಗೆ ಮುಂಬಯಿ ಸರಕಾರ ಒಂದು ಫ್ಲ್ಯಾಟ್ ನೀಡಿ ಗೌರವಿಸಿದೆ; ಸ್ಲಂಡಾಗ್...' ಚಿತ್ರದ ನಿರ್ಮಾಪಕರೂ ಒಂದು ಫ್ಲ್ಯಾಟ್ ಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲ ಪತ್ರಿಕೆಗಳಲ್ಲೂ ವರದಿಯಾಗಿದೆ. ಅಷ್ಟೇ ಅಲ್ಲ; ಸ್ಲಂ ಡಾಗ್...' ಚಿತ್ರದಿಂದ ಬಂದ ಲಾಭದ ಹಣದಲ್ಲಿ ಒಂದು ಭಾಗವನ್ನು ಸ್ಲಂನಲ್ಲಿರುವ ಮಕ್ಕಳ ಉದ್ಧಾರಕ್ಕೆ ಬಳಸಲಾಗುವುದು ಎಂಬ ಬಿಟ್ಟಿ ಹೇಳಿಕೆಯನ್ನೂ ಆ ಚಿತ್ರದ ನಿರ್ಮಾಪಕರು ನೀಡಿದ್ದಾರೆ. ಅದೂ ಪ್ರಕಟವಾಗಿದೆ. ಈ ಮಧ್ಯೆಯೇ ಒಂದಿಬ್ಬರು ಕುಬೇರರು- ನಾವು ಅಜರುದ್ದೀನ್ ಮತ್ತು ರುಬೀನಾ ಆಲಿಯ ಜೀವಿತಾವಧಿಯ ಶಿಕ್ಷಣದ ವೆಚ್ಚ ಕೊಡುತ್ತೇವೆ' ಎಂದು ಹೇಳಿ ಸುದ್ದಿ ಮಾಡಿದ್ದಾರೆ!
ಆದರೆ, ಸತ್ಯ ಏನೆಂದರೆ - ಇಂದು ಕೂಡ ಅಜರುದ್ದೀನ್ ಇಸ್ಮಾಯಿಲ್ ಷೇಕ್ನ ಕುಟುಂಬಕ್ಕೆ ಯಾರಿಂದಲೂ ನಯಾಪೈಸೆಯ ನೆರವೂ ಸಿಕ್ಕಿಲ್ಲ. ಈ ಹುಡುಗನ ತಂದೆ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಾನೆ. ಅವರ ಮನೆಗೆ ಬಾಗಿಲಿಲ್ಲ, ಕಿಟಕಿಯಿಲ್ಲ. ಗೋಡೆಯೂ ಇಲ್ಲ. ಮೇಲ್ಚಾವಣಿಯ ರಕ್ಷಣೆಯೂ ಇಲ್ಲ. ಬಾಗಿಲಿನ ರೂಪದಲ್ಲಿ ಒಂದು ಪರದೆಯಿದೆ. ಮೇಲ್ಚಾವಣಿಯ ರೂಪದಲ್ಲಿ ಒಂದು ದೊಡ್ಡ ಪ್ಲಾಸ್ಟಿಕ್ ಹಾಳೆಯಿದೆ. 7 13 ಚರದಡಿ ವಿಸ್ತಾರದ ಕಪ್ಪೆಗೂಡಿನಂಥ ಆ ಮನೆಯೊಳಗೆ ಅಜರುದ್ದೀನ್ ಷೇಕ್ನ ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ ಇದ್ದಾರೆ! ಐದು ಜನ ಅಂಟಂಟಿಕೊಂಡಂತೆಯೇ ಮಲಗುತ್ತಾರೆ. ಮಳೆಗಾಲದಲ್ಲಿ ಹೇಗಿರ್ತೀರಿ ಅಂದರೆ- ಆಗ ನಮ್ಮ ಪಾಡು ಅಲ್ಲಾಹುದಿಗೇ ಪ್ರೀತಿ ಎಂದು ಕಣ್ಣೀರಾಗುತ್ತಾಳೆ ಅಜರ್ನ ಅಮ್ಮ. ಈ ಕುಟುಂಬದ ಜನ ರಾತ್ರಿ ವೇಳೆ- ಆಹ್, ಇನ್ನೇನು ನಿದ್ರೆ ಬಂತು ಎನ್ನುವಷ್ಟರಲ್ಲಿ ಇಲಿಗಳ ಸೈನ್ಯ ಆಹಾರ ಹುಡುಕಿಕೊಂಡು ಬರುತ್ತವೆ. ಕೊಳೆಗೇರಿಯ ಮನೆಯಲ್ಲಿ ಕಾಳೆಲ್ಲಿ ಸಿಗುತ್ತೆ ಹೇಳಿ? ಬಂದ ಇಲಿಗಳು ಮಲಗಿದ್ದವರ ಕೈ ಕಾಲು ಕಿವಿಯನ್ನೇ ಕಚ್ಚಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ!
ಅರೆ, ಇದೆಲ್ಲ ನಿಜವಾ? ಸ್ಲಂಡಾಗ್...' ಸಿನಿಮಾ ಈ ಹುಡುಗನ ಬಾಳಿಗೆ ಬೆಳಕು ತರಲಿಲ್ವಾ? ಎಂದು ಪ್ರಶ್ನಿಸುವವರಿಗೆ ಉತ್ತರ ಇಷ್ಟೆ: ಇಲ್ಲಿ ಬರೆದಿರುವುದೆಲ್ಲ ಸತ್ಯ ಮತ್ತು ಇದಷ್ಟೇ ಸತ್ಯ. ಅಜರುದ್ದೀನ್ನ ಬಡತನದ ಬದುಕನ್ನೂ ಮೀರಿದ ವ್ಯಂಗ್ಯವೊಂದಿದೆ. ಏನೆಂದರೆ- ಲಾಸ್ ಏಂಜಲೀಸ್ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸ್ಲಂಡಾಗ್ ಚಿತ್ರದ ಬಾಲನಟರಿಗೆ ಪ್ರಶಸ್ತಿ ವಿತರಿಸುತ್ತಾ, ಅವರ ಬಡತನ ನಿವಾರಣೆಯ ಬಗ್ಗೆ ವೇದಿಕೆಯಲ್ಲಿದ್ದವರು ಭಾಷಣ ಮಾಡುತ್ತಿದ್ದಾಗಲೇ, ಇಲ್ಲಿ ಮುಂಬಯಿ ನಗರ ಪಾಲಿಕೆಯ ಅಧಿಕಾರಿಗಳು ಅಜರುದ್ದೀನ್ ಷೇಕ್ ವಾಸವಿದ್ದ ಕೊಳಗೇರಿಗೆ ಬುಲ್ಡೋಜರ್ ನುಗ್ಗಿಸಿದ್ದರು. ಆ ಸಂದರ್ಭದಲ್ಲಿ ಅಜರುದ್ದೀನ್ ಸಂಗ್ರಹಿಸಿದ್ದ ಆಟದ ಸಾಮಾನುಗಳು, ಅವನ ಕನಸು ತುಂಬಿಕೊಂಡಿದ್ದ ಒಂದಷ್ಟು ಪುಸ್ತಕಗಳು ಬೀದಿ ಪಾಲಾಗಿದ್ದವು. ನಮ್ಮ ಮಗ ಸಿನಿಮಾದಲ್ಲಿ ಮಾಡ್ತಿದಾನೆ... ಎಂದು ಹೇಳಲು ಹೋದ ಅಜರ್ ತಂದೆ ಇಸ್ಮಾಯಿಲ್ಗೆ ಭರ್ತಿ ಒದೆ ಬಿದ್ದವು!
ಈಗ ಅಜರುದ್ದೀನ್ ಷೇಕ್ನ ಕುಟುಂಬ ಕೊಳೆಗೇರಿಯ ಇನ್ನೊಂದು ಮೂಲೆಯಲ್ಲಿ ವಾಸ್ತವ್ಯ ಹೂಡಿದೆ. ಜಾತ್ರೆಯಲ್ಲಿ ಕಳೆದು ಹೋದ ಕಂದಮ್ಮನಂತೆ, ಆ ಹುಡುಗ ದಿಕ್ಕು ತೋಚದೆ ನಿಂತುಬಿಟ್ಟಿದ್ದಾನೆ. ಕೆಲವೇ ದಿನಗಳ ಹಿಂದೆ ಆ ಹುಡುಗನ ಉದ್ಧಾರದ ಬಗ್ಗೆ ಮಾತಾಡಿದರಲ್ಲ- ಅವರಿಗೆಲ್ಲ ತಮ್ಮ ಮಾತು ಮರೆತು ಹೋಗಿದೆ. ಬದುಕಿನಲ್ಲಿ ಧುತ್ತನೆ ಎದುರಾಗುವ ಇಂಥ ವಿಪರ್ಯಾಸಗಳಿಗೆ ಏನೆನ್ನೋಣ?
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications