Get Updates
Get notified of breaking news, exclusive insights, and must-see stories!

ಜಂಗಲ್ ಡೈರಿ: ಕಾರಣ ತಿಳಿಯದ ಕಾಡಿನ ಬೆಂಕಿಗೆ ಕಣ್ಮುಚ್ಚುತ್ತಿವೆ ಪ್ರಾಣಿ-ಪಕ್ಷಿ

ಬೇಸಿಗೆ ಆರಂಭದಲ್ಲೇ ಕರ್ನಾಟಕದ ವಿವಿಧ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ನೂರಾರು ಎಕರೆಯಷ್ಟು ಮರಗಳು ಬೆಂಕಿಗೆ ಆಹುತಿಯಾಗಿವೆ. ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿವೆ.

ಶಿವರಾತ್ರಿ ಕಳೆಯುವುದರೊಂದಿಗೆ ಚಳಿಯೂ ಶಿವ ಶಿವ ಎಂದು ಹೊರಟುಹೋಗಿದೆ. ಈಗ ಬೇಸಿಗೆಯ ಆರಂಭದ ದಿನಗಳು. ಆರಂಭದಲ್ಲೇ ಈ ಪರಿಯ ಬಿಸಿಲ ತಾಪ ಕಾಣಿಸಿಕೊಂಡಿದೆ. ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕುಸಿದುಹೋಗಿದೆ. ಇನ್ನೂ ಬಾಕಿಯಿರುವ ಬೇಸಿಗೆ ಅದಿನ್ನೆಷ್ಟು ಹೈರಾಣ ಮಾಡುತ್ತದೋ?

ನಾವು ಮನುಷ್ಯರು. ಬೇಸಿಗೆಯ ತಾಪದಿಂದ ತಪ್ಪಿಸಿಕೊಳ್ಳಲು ನಾನಾ ದಾರಿಯಿದೆ. ಆದರೆ ಕಾಡು ಒಣಗುತ್ತಿದೆ. ಪ್ರಾಣಿಗಳಿಗೆ ಆಹಾರ-ನೀರು ಸಿಗುವುದೇ ದುಸ್ತರವಾಗಿದೆ. ನೀರಿನ ಕೊಳಗಳು ಒಣಗುತ್ತಿವೆ. ಇನ್ನು ಒಣಗಿದ ಮರಗಳು ಗಾಳಿಗೆ ಪರಸ್ಪರ ಉಜ್ಜಿಕೊಂಡಾಗ ಚಿಕ್ಕ ಕಿಡಿಗಳಾಗಿ, ಕಾಳ್ಗಿಚ್ಚಾಗಿ ಹಬ್ಬುತ್ತಿದೆ.[ಜಂಗಲ್ ಡೈರಿ: ಇವುಗಳನ್ನು ಕೊಲ್ಲುವವರೇ ಇದ್ದಾರೆ, ಕಾಯೋರೆಲ್ಲಿ?]

ಹಿಂದೆ ಕಂಡಿರದಂಥ ದೊಡ್ಡ ಮಟ್ಟದ ಕಾಳ್ಗಿಚ್ಚು ಈಚೆಗೆ ಬಂಡೀಪುರದ ಕಲ್ಕೆರೆಯಲ್ಲಿ ಕಾಣಿಸಿಕೊಂಡಿತು. ಬಂಡೀಪುರ-ಊಟಿ ಮುಖ್ಯರಸ್ತೆಯ ರಾಷ್ಟ್ರೀಯ ಹೆದ್ದಾರಿ 766ರಿಂದ ಐದು ಕಿಲೋಮೀಟರ್ ಒಳಗೆ ಇದೆ ಕಲ್ಕೆರೆ. ಇಲ್ಲಿ ಪ್ರವಾಸಿಗರಿಗೂ ಪ್ರವೇಶಾವಕಾಶ ಇಲ್ಲ. ಇಲ್ಲಿ 700ರಿಂದ 1000 ಎಕರೆ ಕಾಡು ಬೆಂಕಿಗೆ ಆಹುತಿಯಾಯಿತು.

ಸ್ಥಳೀಯರೇ ಬೆಂಕಿ ಹಚ್ಚಿರಬಹುದು ಎಂಬ ಶಂಕೆ ಇದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವಾದ್ದರಿಂದ ಮನುಷ್ಯರ ಚಟುವಟಿಕೆಗಳಿಗೆ ಅವಕಾಶ ಇರೋದಿಲ್ಲ. ಆದ್ದರಿಂದ ಇಲ್ಲಿನ ಸ್ಥಳೀಯರನ್ನೂ ಸ್ಥಳಾಂತರಿಸಲಾಗಿದೆ. ಆ ಜನರು ಕಾಡನ್ನೇ ಅವಲಂಬಿಸಿದವರು. ಹೀಗೆ ಮಾಡಿದಾಗ ಆಕ್ರೋಶಗೊಂಡಿದ್ದವರು ಈ ರೀತಿ ಬೆಂಕಿ ಹೊತ್ತಿಸಿರುವ ಸಾಧ್ಯತೆ ಇದೆ.[ಭಲೇ ನಿಗೂಢ ಪ್ರಾಣಿ ಚಿರತೆಯ ಕುರಿತು ರೋಚಕ ಮಾಹಿತಿ]

ಎಲೆಯುದುರುವ ಕಾಡು, ಬೆಂಕಿ ವ್ಯಾಪಿಸುವುದು ಬೇಗ

ಎಲೆಯುದುರುವ ಕಾಡು, ಬೆಂಕಿ ವ್ಯಾಪಿಸುವುದು ಬೇಗ

ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಭದ್ರಾ, ಕುದುರೆಮುಖ ಮತ್ತು ದಾಂಡೇಲಿ ಹೀಗೆ 5 ರಾಷ್ಟ್ರೀಯ ಉದ್ಯಾನ ಮತ್ತು 27 ವನ್ಯಜೀವಿ ಅಭಯಾರಣ್ಯಗಳಿವೆ. ಬಂಡೀಪುರ ಮತ್ತು ನಾಗರಹೊಳೆ ಎಲೆಯುದುರುವ ಕಾಡುಗಳು. ಆದ್ದರಿಂದಲೇ ಚಳಿಗಾಲದ ಕೊನೆಯಲ್ಲಿ ಎಲೆಗಳು ಉದುರಿ, ಮರಗಳು ಬೋಳಾಗುತ್ತವೆ. ಬೆಂಕಿ ಹೊತ್ತಿಕೊಂಡಾಗ ಬೇಗನೇ ವ್ಯಾಪಿಸುತ್ತದೆ.

ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಕಲ್ಕೆರೆಯಲ್ಲಿ ಬೆಂಕಿ ಆರಿಸುವಾಗ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರುಪಾಯಿ ಪರಿಹಾರವೇನೋ ಘೋಷಣೆ ಮಾಡಲಾಗಿದೆ. ಆದರೆ ಆ ಕುಟುಂಬದವರ ದುಃಖಕ್ಕೆ ಮದ್ದೆಲ್ಲಿಯದು?

ಮಾನವ- ಪ್ರಾಣಿ ಸಂಘರ್ಷ

ಮಾನವ- ಪ್ರಾಣಿ ಸಂಘರ್ಷ

ಕಳೆದ ವರ್ಷ ಬೇಸಿಗೆಯಲ್ಲಿ ಬಂಡೀಪುರದ ಮೊಳೆಯಾರ್ ಪ್ರದೇಶದಲ್ಲಿ 500 ಎಕರೆ ಕಾಡಿಗೆ ಬೆಂಕಿ ಬಿದ್ದಿತ್ತು. ಪ್ರಾಣಿಗಳು ಇಂತಹ ಸನ್ನಿವೇಶದಲ್ಲಿ ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗುತ್ತವೆ. ಸಿಂಗಳೀಕಗಳು ಮರ ಹತ್ತಿಬಿಡುತ್ತವೆ. ಹೊಗೆಯಿಂದ ಉಸಿರುಗಟ್ಟಿ ಸಾಯುತ್ತವೆ. ಪಕ್ಷಿಗಳ ಗೂಡು ನಾಶವಾಗುತ್ತವೆ. ಗುಹೆ- ಗೂಡುಗಳಲ್ಲಿನ ಚಿಕ್ಕ ಮರಿಗಳು ಎಲ್ಲಿಯೂ ಹೋಗಲಾಗದೆ ಸಾಯುತ್ತವೆ. ಇನ್ನು ಬೇರೆ ಪ್ರಾಣಿಗಳು ಓಡಿ ಹೋಗುತ್ತವೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ಬರುತ್ತವೆ. ಆದರೆ ಇಂತಹ ಸಮಯದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಾಣಿಗಳು ನುಗ್ಗುವ ಸಾಧ್ಯತೆ ಇರುತ್ತದೆ. ಮಾನವ- ಪ್ರಾಣಿ ಸಂಘರ್ಷದ ಸಾಧ್ಯತೆ ಇರುತ್ತದೆ.

ಕಾಳ್ಗಿಚ್ಚು ತಡೆಯಲು ಹೊಸ ವಿಧಾನ

ಕಾಳ್ಗಿಚ್ಚು ತಡೆಯಲು ಹೊಸ ವಿಧಾನ

ಕಾಳ್ಗಿಚ್ಚನ್ನು ತಡೆಯಲು ಅರಣ್ಯ ಇಲಾಖೆ ಈ ವರ್ಷ ಹೊಸ ವಿಧಾನವನ್ನು ಅಳವಡಿಸಲು ಮುಂದಾಗಿದೆ. ಕಾಡನ್ನು 100 ರಿಂದ 200 ಎಕರೆಗಳಿಗೆ ವಿಂಗಡಿಸಿ, ಅವುಗಳನ್ನು ಬ್ಲಾಕ್ ಗಳಂತೆ ಮಾಡುತ್ತಾರೆ. ಅದರ ಸುತ್ತಲೂ ಇರುವ ಬೇಲಿ ಹಾಗೂ ಲಂಟಾನವನ್ನು ತೆಗೆದು ಹಾಕುತ್ತಾರೆ. ಈ ರೀತಿ ಮಾಡುವುದರಿಂದ, ಮರದಿಂದ ಮರಕ್ಕೆ ಬೆಂಕಿ ಹರಡುವುದನ್ನು ತಡೆಯಬಹುದು. ಈ ಕಾರ್ಯವನ್ನು ಈಗಿಂದಲೇ ಶುರು ಮಾಡಲಾಗುತ್ತದೆ. ಎಲ್ಲೆಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆಯೋ ಅಲ್ಲಿ ಮೊದಲು ಮಾಡಲಾಗುತ್ತದೆ.

ಅರಣ್ಯ ಇಲಾಖೆಯಿಂದ ನೀರಿನ ವ್ಯವಸ್ಥೆ

ಅರಣ್ಯ ಇಲಾಖೆಯಿಂದ ನೀರಿನ ವ್ಯವಸ್ಥೆ

ಬಂಡೀಪುರದ ಅರಣ್ಯದಲ್ಲಿ ಸುಮಾರು 370 ನೀರಿನ ಕೊಳಗಳಿವೆ. ಅಕ್ಟೋಬರ್ ಹೊತ್ತಿಗಾಗಲೇ ಶೇ 60ರಷ್ಟು ಕೊಳಗಳು ಒಣಗಿಹೋಗಿದ್ದವು. ಈಗಿನ ಸಂದರ್ಭದಲ್ಲಿ ಸುಮಾರು 10-12 ಕೊಳಗಳಲ್ಲಿ ನೀರಿರಬಹುದು ಎಂದು ಹೇಳಲಾಗುತ್ತಿದೆ. ಪ್ರಾಣಿಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆಯು ಅತಿ ಒಣಗಿದ 7 ಪ್ರದೇಶಗಳಲ್ಲಿ ಸೌರಶಕ್ತಿಯಿಂದ ಕೆಲಸ ನಿರ್ವಹಿಸುವ ಬೋರ್ ವೆಲ್ ವ್ಯವಸ್ಥೆ ಮಾಡಲಾಗಿದೆ. 10-12 ಪ್ಯಾನೆಲ್ ನಿರ್ಮಿಸಿದ್ದು, ಸೌರಶಕ್ತಿಯಿಂದ ಬೋರ್ ವೆಲ್ ಗಳನ್ನು ಕೆಲಸ ನಿರ್ವಹಿಸುತ್ತವೆ. ಕೊಳಗಳಿಗೆ ನೀರು ಬಿಡಲಾಗುತ್ತದೆ. ಈ ನೀರನ್ನು ಪ್ರಾಣಿಗಳು ಸಹ ಕುಡಿಯುತ್ತಿರುವುದು ಕ್ಯಾಮೆರಾ ಟ್ರ್ಯಾಪ್ ಗಳಲ್ಲಿ ಕಂಡುಬಂದಿವೆ.

300 ವಾಚರ್ಸ್ ನೇಮಕ

300 ವಾಚರ್ಸ್ ನೇಮಕ

ನಾಗರಹೊಳೆಗೆ ಈಗಾಗಲೇ 300 ವಾಚರ್ಸ್ ಗಳನ್ನು ವಿಶೇಷವಾಗಿ ನೇಮಕಗೊಳಿಸಲಾಗಿದೆ. 643 ಚದರ ಕಿಲೋಮೀಟರ್ ಇರುವ ಈ ಜಾಗದಲ್ಲಿ ಅಂತರಸಂತೆ, ಡಿ.ಬಿ ಕುಪ್ಪೆ ಮತ್ತು ವೀರನಹೊಸಳ್ಳಿ ಪ್ರದೇಶಗಳಲ್ಲಿ ಬೆಂಕಿ ಹಬ್ಬುವ ಸಾಧ್ಯತೆ ಹೆಚ್ಚಿದೆ. ಇವರು ವಾಚ್ ಟವರ್ ಗಳಲ್ಲಿ ಕೂತು ಕಾಡನ್ನು ಗಮನಿಸುತ್ತಿರುತ್ತಾರೆ. ಬೆಂಕಿ ಅಥವಾ ಯಾವುದೇ ಅವಘಡದ ಸಂಶಯಗಳು ಕಂಡುಬಂದಲ್ಲಿ, ಕೂಡಲೇ ಈ ವಿಚಾರವನ್ನು ಇಲಾಖೆಗೆ ತಿಳಿಸುತ್ತಾರೆ. ನಾಗರಹೊಳೆಯಲ್ಲಿ ಲಕ್ಷ್ಮಣತೀರ್ಥ, ಕಬಿನಿ ಸೇರಿದಂತೆ 40 ಇತರೆ ಚಿಕ್ಕ ಹೊಳೆಗಳಿದ್ದರೂ ಕಳೆದ 2 ವರ್ಷದಿಂದ ಸರಿಯಾಗಿ ಮಳೆ ಆಗದ ಕಾರಣಕ್ಕೆ ಇಂತಹ ಪರಿಸ್ಥಿತಿಯಾಗಿದೆ.

ಟ್ಯಾಂಕರ್ ಬಳಸಿ ನೀರು ಪೂರೈಕೆ

ಟ್ಯಾಂಕರ್ ಬಳಸಿ ನೀರು ಪೂರೈಕೆ

ನಾಗರಹೊಳೆಯಲ್ಲಿ ಹುಲಿಗಳ ಸಾಂದ್ರತೆ ಅತಿ ಹೆಚ್ಚು ಇದೆ. 100 ಚದರ ಕಿಲೋಮೀಟರ್ ಜಾಗದಲ್ಲಿ 12 ಹುಲಿ ಹಾಗೂ 900ಕ್ಕೂ ಹೆಚ್ಚು ಆನೆಗಳಿವೆ. 300ಕ್ಕೂ ಹೆಚ್ಚು ವಿವಿಧ ಪಕ್ಷಿಗಳಿವೆ. ಇವುಗಳ ಸಂರಕ್ಷಣೆಗೆ ಟ್ಯಾಂಕರ್ ಬಳಸಿ ಕೂಡ ಕೊಳಗಳಿಗೆ ನೀರು ಬಿಡಲಾಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಬೇಸಿಗೆ ಹೆಚ್ಚಾಗುತ್ತಿರುವುದರಿಂದ ನಿಮ್ಮ ಮನೆಗಳ ಮೇಲೆ ಪಕ್ಷಿಗಳಿಗೆ ನೀರು ಮತ್ತು ಧಾನ್ಯಗಳನ್ನು ಇಡಿ. ಇದರಿಂದ ಎಷ್ಟೋ ಹಕ್ಕಿಗಳನ್ನು ಉಳಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+