ಅಂದಿನ ಕಾಲದ ದೂರವಾಣಿ ಸಂಭಾಷಣೆಗಳಲ್ಲಿ ಏನು ಮಜವಿತ್ತು!
"ಹಲೋ ಇಸ್ ಇಟ್ 26206"
"ಹಾಯ್ ಸಂಜು"
"ಹಾಯ್ ಗೀತಾ"
ಈ ಹಾಡು ನೆನಪಿದೆ ಅಲ್ವಾ ನಿಮಗೆ? ಹಳೇ ಕಾಲದ "ಗೀತಾ" ಚಿತ್ರದ್ದು. ಹಾಡನ್ನ ಸಿಕ್ಕಾಪಟ್ಟೆ ಹುಚ್ಚುಚ್ಚಾಗಿ ಮನನ ಮಾಡೋರಿಗೆ ಇದರಲ್ಲಿ ಬರುವ ದೂರವಾಣಿ ಸಂಖ್ಯೆಯೂ ನೆನಪಿರುತ್ತದೆ. 5 ಸಂಖ್ಯೆ ಇರುವ ದೂರವಾಣಿ ಸಂಖ್ಯೆ ಇರುವ ಕಾಲದಿಂದ ನಾವೀಗ 8 ಸಂಖ್ಯೆ ಲ್ಯಾಂಡ್ ಲೈನ್ ಜೊತೆ ಜೊತೆಗೆ 10 ಸಂಖ್ಯೆಯ ಮೊಬೈಲಿನವರೆಗೆ ಆದಷ್ಟು ನೆನಪು ಮಾಡಿಕೊಂಡು ಇರುತ್ತೇವೆ. ಆದರೆ ಆಗಿನ ಕಾಲದ ದೂರವಾಣಿ ಸಂಭಾಷಣೆಗಳು ಕೇಳೋದಕ್ಕೆ ಖುಷಿಯಾಗಿರುತ್ತದೆ.
ಅಪ್ಪ 1997ರಲ್ಲಿ ಅಮೆರಿಕಾಗೆ ಹೋದಾಗ, ನಮ್ಮ ಮನೆಯಲ್ಲಿ ಇನ್ನೂ ಲ್ಯಾಂಡ್ ಲೈನ್ ಬಂದಿರಲ್ಲಿಲ್ಲ. ಅದನ್ನ ಒಂದಷ್ಟು ವರುಷಗಳ ಮುಂಚೆಯೇ ಬುಕ್ ಮಾಡಬೇಕಂತ ಇತ್ತು. ಎದುರು ಮನೆಯ ಶ್ರೀಕಂಠಿ ಅಂಕಲ್ ಮನೆಗೆ ಅಪ್ಪ ಕರೆ ಮಾಡಿ, ಇನ್ನು ಹತ್ತು ನಿಮಿಷ ಬಿಟ್ಟು ಮಾಡ್ತೀನಿ ತಿಳಿಸಿ ಅಂದಾಗ ಅಂಕಲ್ ಓಡಿ ಓಡಿ ಬಂದು ಕರೆಯುತ್ತಿದ್ದರು. 10 ನಿಮಿಷದಲ್ಲಿ ಮನೆಯವರೆಲ್ಲರೂ ಮಾತಾಡಬೇಕಿತ್ತು. ಅದಾದ ನಂತರ 5 ಅಥವಾ 6 ದಿವಸಕೊಮ್ಮೆ ಮಾತು ಅಷ್ಟೆ. ಪತ್ರಗಳನ್ನ ಬರೆಯೋದು ತಾತ ಕಲಿಸಿಕೊಟ್ಟಿದ್ದರಿಂದ ಅವುಗಳಲ್ಲೇ ಸಂಭಾಷಣೆಗಳು ಜಾಸ್ತಿ ಆಗಿದ್ದವು.

ನಂತರ ಮನೆಗೆ ಲ್ಯಾಂಡ್ ಲೈನ್ ಬಂತು. ಅದು ಬಂದಮೇಲೆ ಏನ್ ಮಜಾ ಗೊತ್ತಾ? ಎಲ್ಲರಿಗೂ ಶಾಲೆಯಲ್ಲಿ ನಮ್ಮ ಮನೆಯಲ್ಲಿಯೂ ಫೋನ್ ಇದೆ ಎಂದು ನಂಬರ್ ಕೊಟ್ಟು ಬರುವಷ್ಟು ಖುಷಿ. ಒಂದಾದರೂ ನನಗಂತಾನೆ ಕರೆ ಬಂದರೆ ಖುಷಿಯೋ ಖುಷಿ. ಯಾವಾಗಲೂ ಆ ಫೋನ್ ರಿಂಗ್ ಆಗ್ತಾನೆ ಇರ್ಬೇಕು ಅಂತ 161 ಒತ್ತಿ, ಅದು ಫೋನ್ ರಿಂಗ್ ಆದ್ರೆ ಏನೋ ನಮಗೆ ಫೋನ್ ಬಂದ ಹಾಗೆ ಖುಷಿ. ನಮ್ಮ ಈ ಎಲ್ಲಾ ಹುಚ್ಚಾಟಗಳನ್ನ ಕಂಡ ಬಿ ಎಸ್ ಎನ್ ಎಲ್ 161ಗೆ ಕಾಲ್ ಚಾರ್ಜ್ ಹಾಕೋಕೆ ಶುರುಮಾಡಿತ್ತು. ಆಗ ಆ 161ಗೆ ಕರೆಮಾಡೋದು ನಿಲ್ಲಿಸಿದ್ವಿ. ತದನಂತರ 9 ಘಂಟೆಯ ಮೇಲೆ ಕಡಿಮೆ ಕಾಲ್ ಚಾರ್ಜ್ ಎಂದು ಆಗ ಕರೆ ಮಾಡಿ ಮಾತಾಡುತ್ತಿದ್ವಿ.
ಒಂದು ಥರಹದ ರೇಷನ್ ಥರಹದ ಜೀವನ. ಇನ್ನು ಮನೆಯಲ್ಲಿ ಗೊತ್ತಾಗದೇ ಕರೆ ಮಾಡಬೇಕಿದ್ದರೆ ಅಂಗಡಿಯ ಹತ್ತಿರ ಇರುತ್ತಿದ್ದ ಕಾಯಿನ್ ಬೂತಿನಲ್ಲಿ ಒಂದೊಂದು ರುಪಾಯಿ ಹಾಕಿ ಕರೆ ಮಾಡಬೇಕಿತ್ತು. ನಾಳೆ ಶಾಲೆಗೆ 4 ಜನ ಗೆಳತಿಯರಿಗೂ ಹೊಟ್ಟೆ ನೋವು ಬಂದು ಮನೆಯಲ್ಲಿ ಸೇರಿ ಏನೇನು ಮಾಡಬೇಕೆಂದು ಚರ್ಚೆಯಾಗುತ್ತಿದ್ದದ್ದು ಆ ಕಾಯಿನ್ ಬೂತಿನ ಫೋನಿನಲ್ಲಿಯೇ. ಆ ಕಾಯಿನ್ ಬೂತ್ ಮಾಲಿಕ ಒಂದು ಥರಹ ಎಲ್ಲ ಹುಡುಗ ಹುಡುಗಿಯರ ರಹಸ್ಯ ಪಾಲಕ. ಅಲ್ಲಿ ಕರೆ ಮಾಡುತ್ತಿದ್ದ ಎಲ್ಲರ ಸಂಭಾಷಣೆಯೂ ಅವನಿಗೆ ಗೊತ್ತಾಗುತ್ತಿತ್ತು. ತೀರ ಗಂಭೀರ ಅಥವಾ ಚೆಲ್ಲಾಟ ವಿಷಯವಾಗಿದ್ದಾಗ ಅದನ್ನ ಮೆಲ್ಲಗೆ ಅವರವರ ಮನೆಗೆ ದಾಟಿಸುವ ಪ್ರಯತ್ನ ಮಾಡುತ್ತಿದ್ದ.

ಒಂದೇ ಕಡೆ ಕೂತು ಕೂರು ಬೋರಾಗಿದ್ದ ರಿಸೀವರ್ ಗೆ ಕಾರ್ಡ್ಲೆಸ್ ಫೋನ್ ಬಂದಿದ್ದು ಒಂದು ತರಹ ಮರುಭೂಮಿಯ ಓಯಸಿಸ್ ಇದ್ದಂಗೆ. ಮನೆಯಲ್ಲಿ ಅದು ಅಡುಗೆ ಮನೆಯಲ್ಲಿಯೇ ಇರುತ್ತಿತ್ತು. ಅಜ್ಜಿ ಅಡುಗೆ ಮಾಡಿಕೊಂಡೇ ಮಗಳ ಹತ್ತಿರ ಮಾತಾಡಬಹುದು ಎಂಬ ಖುಷಿ. ಆಗ ಬರುತ್ತಿದ್ದದ್ದು ಬಿಳಿಯ ಕಾರ್ಡ್ಲೆಸ್ ಮಾತ್ರ. ಎಲ್ಲಾರೂ ಒಂದೇ ಫೋನಿನಲ್ಲಿ ಎಲ್ಲರೂ ಮಾತಾಡುವುದರಿಂದ ಅದಕ್ಕೆ ಎಣ್ಣೆ, ಅರಿಶಿನ, ಕೈಯಲ್ಲಿನ ಮೆಣಸಿನಪುಡಿ, ಮಕ್ಕಳ ಶಾರ್ಪನರ್ ಲೆಡ್ ತುಣುಕಳೆಲ್ಲಾ ಮೆತ್ತಿಕೊಂಡಿರುತ್ತಿತ್ತು. ಆಯುಧ ಪೂಜೆಯಲ್ಲಿ ಅದಕ್ಕು ಅರಿಶಿನ, ಕುಂಕುಮದ ಗುರುತಿರುತ್ತಿತ್ತು. ಇನ್ನು ಮಕ್ಕಳಿಗೆ ಫೋನ್ ಕೊಡದಿದ್ದ ಕೋಪವನ್ನ ಕಾರ್ಡ್ಲೆಸ್ ನಲ್ಲಿ ಕದ್ದು ಸಂಭಾಷಣೆಯನ್ನ ಆಲಿಸಿ ಅಲ್ಲೇನಾದ್ರೂ ರಹಸ್ಯವಿದ್ದರೆ ಅದನ್ನ ಹೇಳುತ್ತೇವೆಂಬ ಭಯ ಹುಟ್ಟಿಸಿ ಫೋನ್ ಮತ್ತೆ ಬಂದರೆ ನಮಗೇ ಎಂದು ಇಸ್ಕೊತಿದ್ವಿ.
ಆದಾದ ನಂತರ ಜಗತ್ತು ಬಹುಬೇಗ ಬೆಳೆಯಿತು. ಮಳೆ ಬಂದರೆ ಫೋನ್ ಡೆಡ್ ಆಗುವ ಸಮಯದಿಂದ, ಮಳೆಯಲ್ಲಿ ನಿಂತೂ ಏನು ಆಗದ ಫೋನ್ ಸೆಟ್ ಕಾಲಕ್ಕೆ ಬಂದು ನಿಂತಿದ್ದೇವೆ. ಇಲ್ಲಿ ಸಂಭಾಷಣೆಗಳು ಕೆಲವು ಕೃತಕ ಅನ್ನಿಸುತ್ತದೆ. ಅಮ್ಮ ಒಮ್ಮೊಮ್ಮೆ ಹೇಳುತ್ತಿರುತ್ತಾರೆ, "ಮುಂಚೆ ಮನೆಗೆ ಕರೆ ಮಾಡಿದರೆ ಯಾರು, ಏನು ಎತ್ತ ಎಲ್ಲಾ ಗೊತ್ತಾಗುತ್ತಿತ್ತು. ಈಗ ಯಾರು ನಿಮ್ಮ ಸ್ನೇಹಿತರೋ, ಅಲ್ವೋ ಒಂದು ಗೊತ್ತಾಗಲ್ಲ, ಒಬ್ಬೊಬ್ಬರಿಗೂ ಒಂದಲ್ಲಾ ಎರಡು ಫೋನ್ ಗಳು. ಮಾತು ನಿಲ್ಲೋದೆ ಇಲ್ಲ" ಎನ್ನುವ ಮಾತು ಬಹು ಸತ್ಯವಾಗಿದೆ. ನನಗೀಗಲೂ ತುಂಬಾ ಹತ್ತಿರದ ಗೆಳತಿಯರ ಮನೆಯ ಲ್ಯಾಂಡ್ ಲೈನ್ ನಂಬರೇ ಇನ್ನೂ ನೆನಪಿರೋದು, ಆ ಸಂಭಾಷಣೆಗಳು ಕಿವಿಯಲ್ಲಿ ರಿಂಗಣಿಸುತ್ತಲೇ ಇರುತ್ತದೆ. ಇನ್ನು ಕೆಲವು ಸಂಭಾಷಣೆಗಳು ಕಡ್ಡಾಯವಾಗಿ ಮರೀಲೇಬೇಕಾಗುತ್ತದೆ. ಕೆಲವರ ಹೆಸರು, ದೂರವಾಣಿ ನಂಬರ್ ಮನದಲ್ಲಿ ಅಚ್ಚಳಿಯದೇ ಇರುತ್ತದೆ. ಕೆಲವರ ಹೆಸರುಗಳು ನಮ್ಮ ಫೋನಿನಲ್ಲಿ ಮತ್ತೆ ಕಾಣಲಿ ಎಂದು ಬಯಸುತ್ತೇವೆ, ಕೆಲವನ್ನ ನಾವು ಬೇಕಂತಲೇ ದೂರವಿಡಬೇಕಾಗುತ್ತದೆ.

ಒಂದು ಸಂಜೆ ಜಿಟಿ ಜಿಟಿ ಮಳೆ ಬರುತ್ತಿತ್ತು. ಹಾಗೆ ನಡೆದುಕೊಂಡು ಹೋಗುತ್ತಿರುವಾಗ ಹಳೇ ಅಂಗಡಿಯಲ್ಲಿ ಒಂದು ಕಾಯಿನ್ ಹಾಕಿ ಕರೆಮಾಡುವ ಫೋನ್ ಕಾಣಿಸಿತು. ಚಕ್ಕನೆ ಹೋಗಿ ಮರೆತು ಹೋದ ಗೆಳೆಯನಿಗೋ, ಗೆಳತಿಗೋ ಕರೆ ಮಾಡುವ ಮನಸ್ಸಾಯಿತು. ಒಂದು ವರ್ಷದಿಂದ ಮಾತೇ ಆಡದಿದ್ದ ಗೆಳೆಯನ ಹತ್ತಿರ ಮಾತಾಡಿದಾಗ ತಿಳಿದ ವಿಷಯ ಕೆಲವರು ಇನ್ನೂ ಅದೇ ಮುಗ್ಧತೆಯಿಂದ ಮಾತಾಡುತ್ತಾರೆ, ಕೆಲವರು ಕರೆ ಮಾಡಿಲ್ಲವೆಂದೇ ರಂಪ ಮಾಡಿ ಮಾತಾಡದೇ ಇರುವವರಿದ್ದಾರೆ, ಇನ್ನು ಕೆಲವರು ಕರೆ ಮಾಡಿಲ್ಲವೆಂದರೆ ಎಲ್ಲಾ ಮುಗಿದಿಲ್ಲ ಎನ್ನುವವರೂ ಇರುತ್ತಾರೆ. ಒಟ್ಟಿನಲ್ಲಿ ಈ ಫೋನಿನ ಸಂಭಾಷಣೆ ನಮ್ಮನ್ನ ಯಾವುದೋ ಲೋಕಕ್ಕೆ ಕರೆದೊಯ್ಯುತ್ತದೆ. ಹಳೆಯದನ್ನ ಕೆದಕಿ ಮತ್ತೆ ನಮ್ಮ ಮನಸ್ಸನ್ನ ತಾಜಾಗೊಳಿಸುತ್ತದೆ.
ನಿಮಗೆ ಅಚಾನಕ್ಕಾಗಿ ಹೀಗೊಂದು ಯಾವುದಾದರೂ ಕಾಯಿನ್ ಬೂತ್ ಫೋನ್ ಸಿಕ್ಕರೆ ಯಾರಿಗೆ ಕರೆ ಮಾಡಿ ಮಾತಾಡುತ್ತೀರಿ?
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications