ಕನಸುಗಳು ನನಸಾಗುತ್ತವೆ, ಕಾಣುವ ಧೈರ್ಯವಿದ್ದರೆ ಮಾತ್ರ!

ಒಂದೂವರೆ ವರ್ಷದ ಹಿಂದೆ ಬಾರ್ಸಿಲೋನಾದ 160, ಕರೀರ್ ದಿ ಪದಿಯಾದ ಸಣ್ಣ ಕೋಣೆಯಲ್ಲಿ 2 ಸೆಮಿಸ್ಟರಿನ ಪರೀಕ್ಷೆ ಮುಗಿಸಿ ಕೂತಿದ್ದೆ. ಬಾರ್ಸಿಲೋನಾದಲ್ಲಿ ಅಥವಾ ಯುರೋಪಿನಲ್ಲಿ ಪರೀಕ್ಷೆ ಮುಗಿದ ನಂತರ ದೊಡ್ಡ ಪಾರ್ಟಿ, ಒಂದು ಸಂಗೀತ ಕಾರ್ಯಕ್ರಮ ಕಡ್ಡಾಯವಾಗಿ ಆಗುತ್ತಿತ್ತು. ಮೊದಲ ಸೆಮಿಸ್ಟರಿನ ಪರೀಕ್ಷೆಯ ನಂತರ ಈ ಸಮಾರಂಭದಲ್ಲಿ ಭಾಗಿಯಾಗಿದ್ದೆ.

ಎರಡನೇ ಸೆಮಿಸ್ಟರಿನ ನಂತರ, ಅದಕ್ಕಿಂತ ಮನೆಯಲ್ಲಿ ನಡೆದ ಯುಗಾದಿಯ ಹೋಳಿಗೆ ಮತ್ತು ಮನೆಯಲ್ಲಿ ಎಲ್ಲರೂ ಸೇರಿದ್ದ ಫೋಟೋ ತುಂಬಾ ನೆನಪಾಗುತ್ತಿತ್ತು. ಮಧ್ಯರಾತ್ರಿಯಾದರೂ ಅದೇ ಅದೇ ಫೋಟೋವನ್ನ ತಿರುಗಿಸಿ ಮರುಗಿಸಿ ನೋಡುತ್ತಿದ್ದೆ. ಕನ್ನಡ ಹೇಳಿಕೊಡುವ ಗುಂಪೂ ಸಹ ಅವತ್ತು ಬಹಳ ನಿಶ್ಶಬ್ದವಾಗಿತ್ತು. ಬೆಂಗಳೂರಿನಲ್ಲಿ ಮುಂಜಾವವಾಗಿದ್ದರಿಂದ ಎಬ್ಬಿಸುವ ಮನಸ್ಸಾಗಿರಲ್ಲಿಲ್ಲ. ಇನ್ನು ಹೊಸದಾಗಿ ಕೊಂಡುಕೊಂಡ ಮ್ಯಾಕ್ ಬುಕ್ ಗೆ ಕನ್ನಡವೇ ಗೊತ್ತಿರಲ್ಲಿಲ್ಲ. ಭಾರತದಲ್ಲಿನ ಗೆಳೆಯ ಗೆಳತಿಯರೆಲ್ಲ ಮಲಗಿದ್ದರು, ಅಮೇರಿಕಾದ ಸ್ನೇಹಿತರಿಗೆ ಇನ್ನೂ ಆಫೀಸಿನ ಕೆಲಸ, ಯುರೋಪಿನವರು ಆ ಪಾರ್ಟಿಯಲ್ಲಿದ್ದರು. ಸುಮಾರು ವರ್ಷದಿಂದ ಪರಿಚಯವಿದ್ದ ಶಾಮ್ ಸರ್ ಗೆ ಮೆಸೆಂಜರ್ ನಲ್ಲಿ ಬರುವ ನೂರಾರು ಮೆಸೇಜ್ ಗಳಲ್ಲಿ ಅವತ್ತು ನನ್ನದೂ ಬಹು ಸಂಕೋಚವಾಗಿ ಬರೆದ ಮೆಸೇಜ್ ಒಂದು ಬಂದಿತ್ತು.

"I think I can write something up about growing up in a ooru called bengalooru" ಇದಷ್ಟನ್ನ ಬರೆದು ತಾತ ಬರೆದ ಯಾವುದೋ ಹಳೆಯ ಬರಹವನ್ನ ಓದುತ್ತಾ ಕೂತು ಹಾಗೆ ಒಂದಷ್ಟು ವರ್ಷಗಳ ಹಿಂದೆ ನಡೆದ ಘಟನೆ ನೆನಪಿಸಿಕೊಂಡೆ.

If you dare to dream you can create yourself

ನಾನು ಶಾಲೆಯಲ್ಲಿದ್ದಾಗ ಎಲ್ಲಾ ಕಾರ್ಯಕ್ರಮದಲ್ಲಿಯೂ ಭಾಗವಹಿಸುತ್ತಿದ್ದೆ. ಟೀಚರ್ಸ್ ಅಂತೂ ಎಲ್ಲಾ ಕಾರ್ಯಕ್ರಮಕ್ಕೂ ನನ್ನನ್ನ ಸೇರಿಸಿಕೊಳ್ಳುತ್ತಿದ್ದರು. ಯಾವುದೇ ಭಯವಿಲ್ಲದೆ ಸ್ಟೇಜ್ ಮೇಲೆ ಮಾತಾಡುವ ಕಲೆ ಗೊತ್ತಿತ್ತು. ಕನ್ನಡ ತಿದ್ದೋದಕ್ಕೆ ತಾತ ಮತ್ತು ಅಮ್ಮ ಇದ್ದರು. ಹಾಗಾಗಿ ಭಾಷಣ, ಹಾಡು, ನಿರೂಪಣೆ ಎಲ್ಲದಕ್ಕೂ ನನ್ನದೇ ಅಧಿಪತ್ಯ. ಆದರೂ ನನಗೆ ಡ್ಯಾನ್ಸ್ ಮಾಡುವ ಹುಚ್ಚಿತ್ತು. ಅದೊಂದಕ್ಕೆ ಮಾತ್ರ ನನ್ನನ್ನ ಕರೀತಿರಲ್ಲಿಲ್ಲ. ಕರೀಲಿ ಅನ್ನೋ ಮನಸ್ಸಾಗಿತ್ತು. ಆದರೆ ಪ್ರತಿ ವರ್ಷವೂ ಅವಕಾಶ ಸಿಗುತ್ತಿರಲ್ಲಿಲ್ಲ.

ಭಾಷಣ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬಂದ್ದದ್ದನ್ನು ದೊಡ್ಡ ನೋಟೀಸ್ ಬೋರ್ಡಿನ ಮೇಲೆ ಹಾಕಿದ್ದನ್ನು ಅಮ್ಮ ಮನೆಯಲ್ಲಿ ಹೇಳುತ್ತಿದ್ದಾಗ ನಾನು ಮುಖ ಸಪ್ಪೆ ಮಾಡಿಕೊಂಡು ತಾತನ ವರಾಂಡ ರೂಮಿಗೆ ಹೋದೆ. ಎಂದಿನಂತೆ ಗುಡ್ಡಿಯ ಕಥೆ ಕೇಳಲು ತಾತ ಕಾದಿದ್ದರು. "ದೊಡ್ಡ ಭಾಷಣವಂತೆ ಇವತ್ತು" ಎಂದು ರೇಗಿಸುತ್ತಿದ್ದರು. ಇದೇನು ಪ್ರೈಝ್ ಬಂದಿದ್ದರೂ ಮುಖ ಗಂಟುಹಾಕಿದ್ದಾಳೆ ಎಂದು ಕೇಳಿದಾಗ "ನನ್ನನ್ನ ಒಂದು ಸರ್ತಿನೂ ಡ್ಯಾನ್ಸ್ ಗೆ ಸೇರ್ಸ್ಕೊಳಲ್ಲ ತಾತ" ಎಂದು ಕೋಪದಿಂದ ಅಂದೆ.

ತಾತ ನೀ ಹಾಡ್ತೀಯ, ಮಾತಾಡ್ತೀಯ ಎಂದು ಸಮಾಧಾನ ಪಡಿಸಿದರೂ ನಾ ಕೇಳಲು ತಯಾರಿರಲ್ಲಿಲ್ಲ. ನಂತರ "ನೋಡು ಗುಡ್ಡಿ, ನಿನಗೇನು ಬೇಕೋ ಅದನ್ನ ಗಳಿಸಿಕೊಳ್ಳಲು ಈ ಜಗತ್ತಲ್ಲಿ ಅವಕಾಶವಿದೆ, ಒಮ್ಮೆ ಕೇಳಿದರೆ ಕೆಲವೊಂದು ಸಾಧ್ಯವಾಗುತ್ತದೆ, ಕೇಳದೇ ನಿನ್ನ ಮನಸ್ಸಿನ ಇಚ್ಛೆಯನ್ನ ಮತ್ತ್ಯಾರೋ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕೂರಬಾರದು" ಎಂದು ಹೇಳಿ ಬಹುಮಾನ ಬಂದಿದ್ದಕ್ಕೆ ಕಲ್ಲುಸಕ್ಕರೆ ಕೊಟ್ಟು ಗಲ್ಲ ಸವರಿ ಕಳಿಸಿದ್ದರು ತಾತ. ಆ ಮಾತು ನನ್ನ ಮನಸಲ್ಲಿಯೇ ಯಾವಾಗಲೂ ಇತ್ತು. ಇದೇ ನೆನೆಸಿಕೊಂಡು ಬರೀತೀನಿ ಎಂದು ಶ್ಯಾಮ್ ಸರ್ ಗೆ ಬರೆದೆ. ಉತ್ತರ ಅಪೇಕ್ಷೆ ಇರಲ್ಲಿಲ್ಲ, ಆದರೂ ಪ್ರಯತ್ನ ಮಾಡೋಣ ಎಂದಷ್ಟೆ ನನ್ನ ಮನಸ್ಸು ಹೇಳುತ್ತಿತ್ತು.

If you dare to dream you can create yourself

ಬಾರ್ಸಿಲೋನಾ ಬೆಳಗ್ಗಿನ ಸಮಯಕ್ಕೆ ಉತ್ತರ ಬಂದಿತ್ತು. ಶ್ಯಾಮ್ ಸರ್ ಉತ್ತರ ಬರೆದು ಪ್ರಸಾದ್ ಸರ್ ನ ಪರಿಚಯ ಮಾಡಿಕೊಟ್ಟರು. ಪ್ರತಿವಾರ ಅಂಕಣ ಬರೆಯುವ ಅವಕಾಶ, ಹೆಸರು 'ಜಯನಗರದ ಹುಡುಗಿ'ಯೆಂದು ನಾನೇ ಸೂಚಿಸಿ ಬರೆಯಲು ಶುರು ಮಾಡು ಅಂದರು. ಮೊದಲ ಬರಹ ಬರೆಯುವ ಹೊತ್ತಿಗೆ ನನ್ನ ಹೊಟ್ಟೆಲಿ ಚಿಟ್ಟೆ ಬಿಟ್ಟಂಗಾಗಿತ್ತು. ಇದು ಸರಿಯೋ ತಪ್ಪೋ ಅವೆಲ್ಲಾ ಯೋಚನೆಗಳೂ ಶುರುವಾಗಿತ್ತು. ಇದೆಲ್ಲ ಕಳಿಸೋದಕ್ಕೆ ಮುಂಚೆ ತಾತ ಒಮ್ಮೆ ಓದಿದ್ದರೆ ಚೆಂದ ಇರುತ್ತಿತ್ತು ಎಂದೂ ಅನಿಸಿದರೂ ಕಳಿಸಿದ್ದೆ.

ಒಂದು 4 ಲೇಖನ ಬರೆಯಬಹುದು ಎಂದು ಅಂದಾಜು ಮಾಡಿದ್ದೆ. ಆದರೆ ಮೇಘನಾಳನ್ನು ಶಾಶ್ವತವಾಗಿ ಜಯನಗರದ ಹುಡುಗಿಯಾಗಿ ಮಾಡುವ ಎಲ್ಲಾ ಹುನ್ನಾರವೂ ಒನ್ಇಂಡಿಯಾಗೆ ಇದೆ ಎಂದು ಗೊತ್ತಾಯಿತು. 75 ವಾರಗಳ ಕಾಲ ನಾ ಹೋದಲ್ಲೆಲ್ಲ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗುವಹಾಗೆ ಮಾಡಿದ್ದು ಈ ಕಾಲಂ. ಬೆಂಗಳೂರು, ಮೈಸೂರು, ಶಿವಮೊಗ್ಗ, ಬಾರ್ಸಿಲೋನಾ, ದೆನ್ ಹಾಗ್, ಬೆಲ್ಜಿಯಂ, ರೋಮ್, ಅರ್ಡೆನಸ್, ಸ್ವಿಸ್, ಎಲ್ಲಾ ಕಡೆ ಎಲ್ಲಾ ಜನರಲ್ಲಿಯೂ ಅಂಕಣಕ್ಕೆ ಹೊಸ ವಿಷಯ ಹುಡುಕುವ ಪ್ರಯತ್ನ ಮಾಡುತ್ತಾ ಇದ್ದೇನೆ.

ಅಂಕಣದ ಸೆಟ್ ಅಪ್ ತುಂಬಾ ಪ್ರೊಫೆಶನಲ್. ನಮ್ಮ ಆಫೀಸಿನ ಥರವೇ ಇಲ್ಲೂ ಲೇಖನ ಬರಿಯಬೇಕು, ಪೋರ್ಟಲ್ ಗೆ ಸಬ್ಮಿಟ್ ಮಾಡಬೇಕು. ರೆವ್ಯೂ ಆಗತ್ತೆ. ಥೇಟ್ ನಮ್ಮ ಐಟಿ ಮಂದಿಯ ಕೋಡ್ ರೆವ್ಯೂ ಥರಹ. ಅದೂ ನನ್ನ ರೆವ್ಯೂ ಪ್ರಸಾದ್ ಸರ್ ಮಾಡುವುದರಿಂದ ನನಗೆ ಪ್ರತಿ ಬುಧವಾರ ಅಗ್ನಿ ಪರೀಕ್ಷೆ. ನನ್ನ ಕಛೇರಿಯಲ್ಲಿ ಸಹ ನಾನು ನೇರವಾಗಿ ಸಿಟಿಓಗೆ ರಿಪೋರ್ಟ್ ಆಗುವುದರಿಂದ ಇಲ್ಲೂ ಅಲ್ಲೂ ಒಂದೇ ಅನುಭವ. ಆದರೆ ದೊಡ್ಡ ಸ್ಥಾನದಲ್ಲಿ ಕೂತಿರುವವರು ಬಹಳ ವಿನಯವಂತರಾಗಿರುತ್ತಾರೆ ಎಂದು ಇವರನ್ನ ನೋಡಿಯೇ ಕಲಿತ್ತಿದ್ದೇನೆ.

If you dare to dream you can create yourself

ಇನ್ನು ಜೋಗಿ ಸರ್ ಅಂತೂ ನಮ್ಮಂಥ ಚಿಕ್ಕವರಿಗೆ ದಾರಿದೀಪ. ಅವರ ಮುಂದೆ ಬರಹ ಹಿಡಿದು ನಿಂತರೆ, ಓದಿ ಒಂದಷ್ಟು ಮೆಚ್ಚುಗೆಯೋ ಅಥವಾ ಕರೆಕ್ಷನ್ನನ್ನೋ ಹೇಳುವ ಸ್ವಭಾವ. ಗುರುಗಳು ಎಂದರೂ ತಪಲ್ಲ. ಪುಸ್ತಕ ಮಾಡು ಎಂದು ಹುರಿದುಂಬಿಸಿದ್ದು ಅವರೇ.

ಜಯನಗರದ ಹುಡುಗಿಯ ಪ್ರತಿ ಲೇಖನದಲ್ಲಿಯೂ ಒಂದೊಂದು ಪಾತ್ರವಿದೆ, ಕಥೆಯಿದೆ, ನೆನಪಿದೆ. ಇವೆಲ್ಲವನ್ನ ಸಾವಣ್ಣ ಪ್ರಕಾಶನದ ಜಮೀಲ್ ಸರ್ ಪ್ರಕಟಿಸುತ್ತಿದ್ದಾರೆ. ಇವರಷ್ಟು ಸಮಯ ಪರಿಪಾಲನೆ, ಶಿಸ್ತು ಮತ್ತು ಪ್ರೀತಿಯನ್ನು ನಾನು ಎಲ್ಲಿಯೂ ನೋಡಿಲ್ಲ. ಅವರ ಆಫೀಸಿಗೆ ಹೋದಾಗ ನಾ ತಿಂದ ಪುಳಿಯೋಗರೆ, ಕುಡಿದ ಜ್ಯೂಸ್ ಮತ್ತು ಮಜ್ಜಿಗೆಗಳೆಷ್ಟೋ.

ಅಪ್ಪ, ಅಮ್ಮ, ಮಾಧುರ್ಯ, ಅಜ್ಜಿಯರು, ಅತ್ತೆ, ಮಾವ, ಅಕ್ಷರ, ಆದಿತ್ಯ, ಶ್ರವಣ್, ಪ್ರಸಾದ್, ರುತುಪರ್ಣ, ನವ್ಯ, ಸ್ಪರ್ಶ, ಮಾನಸ, ಶ್ರೀಧರ, ಸುಷ್ಮಾ, ಕೃಷ್ಣಕಾಂತ, ಕೆಜಿ ತಂಡ, ಇವರೆಲ್ಲಾ ಪುಸ್ತಕ ಬಿಡುಗಡೆಗೆ ಅವರ ಸಿಕ್ಕಾಪಟ್ಟೆ ಸಮಯ ಹಾಗೂ ಪ್ರೋತ್ಸಾಹವನ್ನ ನೀಡಿದ್ದಾರೆ. ಸೆಪ್ಟೆಂಬರ್ ಮೂವತ್ತಕ್ಕೆ ನಿಮ್ಮನ್ನೆಲ್ಲ ನೋಡಲು ಕಾಯುತ್ತಿದ್ದೇನೆ. ಪುಸ್ತಕ ಬಿಡುಗಡೆ ಸೆ.30ರ ಭಾನುವಾರ, ಜಯನಗರದ ಎಚ್ಎನ್ ಕಲಾಕ್ಷೇತ್ರದಲ್ಲಿ, ಬೆಳಿಗ್ಗೆ 10.30ಕ್ಕೆ. ಪುಸ್ತಕ ಬಿಡುಗಡೆಗೆ ಬನ್ನಿ, ನಿಮ್ಮ ಹುಡುಗಿಯನ್ನ ಹರಸಿ.

- ಇತಿ ನಿಮ್ಮ ಜಯನಗರದ ಹುಡುಗಿ ಮೇಘನಾ ಸುಧೀಂದ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+