ಎಲೆಕ್ಟ್ರಾನಿಕ್ ಸಿಟಿಯ ಪುರಾತನ ಹೆಸರು ಏನಿತ್ತು ಗೊತ್ತಾ?
ನಾನು ಸ್ಪೇನ್ ದೇಶದ ಬಾರ್ಸಿಲೋನದಲ್ಲಿದ್ದಾಗ ತುಂಬಾ ನೆನಪಾಗುತ್ತಿದ್ದಿದ್ದು ಅಥವಾ ಮಿಸ್ ಮಾಡಿಕೊಳ್ಳುತ್ತಿದ್ದಿದ್ದು ಕನ್ನಡ ಮಾತು ಹಾಗೂ ಬಾಳೆಲೆ ಊಟ. ಇಡೀ ಊರಿನಲ್ಲಿ ಮೂವರೆ ಕನ್ನಡಿಗರಿದ್ದ ಕಾರಣ, ಹಾಗೂ ಬೆಂಗಳೂರಿನ ಮೇಲೆ ಅವರಿಗಿದ್ದ ಅಪಾರ ದ್ವೇಷದ ಕಾರಣ ನನಗೆ 10 ನಿಮಿಷದ ನಂತರ ಅವರ ಜೊತೆ ಮಾತು ಕತೆ ಮುಂದುವರಿಯುತ್ತಿದ್ದದ್ದು ಕಡಿಮೆ.
ಒಂದೇ ದಿನದಲ್ಲಿ ಎಷ್ಟೊಂದು ಕಥೆ ಕೊಟ್ಟ ನಮ್ಮ ಮೆಟ್ರೋ!
ಸುಮಾರು ಒಂದು ವರ್ಷದ ನಂತರ ಭರ್ತಿ ಒಂದೂವರೆ ಘಂಟೆ ಬೆಂಗಳೂರಿನ ಇತಿಹಾಸದ ಬಗ್ಗೆ, ಅದನ್ನ ಬಯ್ಯದೆ ಇರುವ "ಮುನ್ನೋಟ" ಎನ್ನುವ ಪುಸ್ತಕ ಮಳಿಗೆಯಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಆಯೋಜಿಸಿದ್ದು ವಸಂತ್ ಶೆಟ್ಟರು, ನಡೆಸಿಕೊಟ್ಟಿದ್ದು ತೇಜಸ್ವಿ ಉಡುಪ.
ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು, ಭಾರತದಲ್ಲಿನ ಭಾಷೆಗಳ ಸಮಾನತೆಯ ಬಗ್ಗೆ ನನಗೆ ಅವರ ಸುಮಾರು ಬರಹಗಳ ಮೂಲಕ ತಿಳಿಸಿಕೊಟ್ಟಿದ್ದು ಶೆಟ್ಟರು. ಇನ್ನು ಉಡುಪರನ್ನು ನಾನು ರಸಪ್ರಶ್ನೆಗಳಲ್ಲಿ ನೋಡಿದ್ದೆ. ಅಸಾಮಾನ್ಯ ಪ್ರಶ್ನೆಗಳು, ಸಿಕ್ಕಾಪಟ್ಟೆ ಖುಷಿ ಕೊಡುತ್ತಿದ್ದ ಸ್ಪರ್ಧೆಗಳ ನೇತಾರರವರು.
ಅಲ್ಲಿದ್ದ ಸುಮಾರು ಜನ ಇವೆರಡನ್ನು ಸಮಾನವಾಗಿ ಇಷ್ಟ ಪಡುತ್ತಿದ್ದರಿಂದ ಮಾತುಕತೆ ತುಂಬಾ ಚೆನ್ನಾಗಿತ್ತು. ಮಾತುಕತೆ ಶುರು ಆದ್ದದ್ದೆ ನಮ್ಮ ಮನೆಯಲ್ಲಿ ನಡೆಯುವ ಚರ್ಚೆಯಿಂದ. ಬೆಂಗಳೂರಿಗೆ ತನ್ನದೇ ಆದ ವ್ಯಕ್ತಿತ್ವವಿಲ್ವಾ ಎಂದು.
ಜಯನಗರ 9ನೇ ಬ್ಲಾಕ್ ಮಾರುಕಟ್ಟೆಗೆ ಶರಣು ಶರಣಾರ್ಥಿ
ದೊಡ್ಡ ಬರಹಗಾರರು ಒಬ್ಬರು ಬೆಂಗಳೂರನ್ನು ಹಳ್ಳಿಗಳ ನಗರ ಎಂದಿದ್ದು, ವ್ಯಕ್ತಿತ್ವ ಇಲ್ಲದ್ದು ಎಂಬ ಸಾಲಿನಿಂದ ಶುರು ಆದ್ದದ್ದು. ಬೆಂಗಳೂರಿಗೆ ಪುರಾಣ ಇದೆ ಚರಿತ್ರೆ ಇಲ್ಲ ಎಂಬ ಚರ್ಚೆ ಸಹ ಆಯ್ತು. ಕೆಂಪೇಗೌಡರ ಕಥೆಯ ಜೊತೆ ಸುಮಾರು ಹೊಸ ವಿಷಯಗಳನ್ನ ನಾನು ನಮ್ಮೂರಿನ ಬಗ್ಗೆ ತಿಳಿದುಕೊಂಡೆ. ಬಡಾವಣೆಗಳ ನಗರ ಬೆಂಗಳೂರೆಂದು ಇಲ್ಲಿ ಚರ್ಚೆ ನಡೀತು.
ಅಪ್ಪಟ ಬೆಂಗಳೂರಿಗಳಾದ ನನಗೆ ಬೆಂಗಳೂರಿನ ಮೊದಲ ಬಡಾವಣೆ ಬಸವನಗುಡಿ ಹಾಗೂ ಮಲ್ಲೇಶ್ವರ ಅಂದುಕೊಂಡಿದ್ದೆ. ಆದರೆ ಸತ್ಯವೇನೆಂದರೆ ಅವು ಚಾಮರಾಜಪೇಟೆ ಹಾಗೂ ಶೇಷಾದ್ರಿಪುರ ಎಂದು ಗೊತ್ತಾಯ್ತು. ಇದು ನಾನು ಕಲಿತ ಹೊಸ ವಿಷಯ. ನಮ್ಮನ್ನು ಚೋಳರು, ಗಂಗರು ಹಾಗೂ ಹೊಯ್ಸಳರು ಆಳಿದ್ದರು, ಬೆಂದಕಾಳೂರು, ವೆಂಕಾಯಿಯಿಂದ ಬೆಂಗಳೂರಾಗಿದ್ದು ಇವೆಲ್ಲದರ ಉಲ್ಲೇಖಗಳು ಸಹ ಬಂದವು.
ತೀರ ಇಲೆಕ್ಟ್ರಾನಿಕ್ ಸಿಟಿ ಒಂದು ಕಾಲದಲ್ಲಿ ಕರಿಯಮ್ಮನ್ನ ಅಗ್ರಹಾರವಾಗಿತ್ತು ಎಂದು ಕೇಳಿ ಆಶ್ಚರ್ಯವಾಯಿತು. ನಮ್ಮ ರೈಲ್ವೆ ನಿಲ್ದಾಣ ಕೆಂಪಾಪುರ ಅಗ್ರಹಾರ ಎಂದು ಕರಿಸಿಕೊಂಡಿದ್ದು, ಮೆಜಸ್ಟಿಕ್ congress exhibition centre ಆಗಿತ್ತು, ಆ ತಿರುವುಗಳು ಬಸ್ಸುಗಳಿಗೆ ಅನುಕೂಲವಾಗುವುದಕ್ಕೆ ಅಲ್ಲ, ಅಲ್ಲಿನ ವಸ್ತುಗಳ ಪ್ರದರ್ಶನಕ್ಕೆ ಎಂದು ತಿಳಿದು ಅವಕ್ಕಾದೆ.
ಆವಾಗಿನ ಕಾಲದಲ್ಲಿಯೇ ನಮ್ಮ ಬಿಡಿಎದಲ್ಲಿ ನಡೆಯೋಹಾಗೆ ಸೈಟು ಹಂಚಿಕೆ ನಡೀತ್ತಿತ್ತು, ಈಗಿನ ಕಾಲದ ಹಾಗೆ ಆ ಪ್ರದೇಶಕ್ಕೆ ಹೆಮ್ಮೆ ತಂದ ಒಬ್ಬ ನಾಗರೀಕನಿಗೆ ಉಚಿತವಾಗಿ ಜಾಗವನ್ನ ನೀಡುವುದು ಸಹ ರೂಢಿಯಲ್ಲಿತ್ತಂತೆ. ಇನ್ನೊಂದು ಸ್ವಾರಸ್ಯಕರ ವಿಷಯವೇನೆಂದರೆ, ನಮ್ಮ ಬಡಾವಣೆಗಳನ್ನು ಮೇಲಿಂದ ನೋಡಿದರೆ ಹೇಗೆ ಕಾಣಿಸುತ್ತದೆ ಎಂದು.
ನೀವು ಚಾಮರಾಜಪೇಟೆಯನ್ನ ಒಮ್ಮೆ ನೆನಪಿಸಿಕೊಂಡರೆ ಅದರಲ್ಲಿ 7 ಮೇನ್ ಗಳು, 7 ಕ್ರಾಸ್ ಗಳಿವೆ. ಭಾಗಶಃ ಚದುರಂಗದ ಮಣೆಯ ಹಾಗೆ ಕಾಣುತ್ತದೆ. ಶೇಷಾದ್ರಿಪುರ ಒಲೆಯ ಥರಹ ಕಾಣುವುದು (Barbeque), ಬಸವನಗುಡಿ ಬ್ರಿಟೀಷರ ಯೂನಿಯನ್ ಜ್ಯಾಕ್ ಥರಹ ಕಾಣುವುದು, ಸೂಡಾನ್ ದೇಶದ ರಾಜಧಾನಿ ಸಹ ಹೀಗೆ ವಿನ್ಯಾಸ ಮಾಡಿದ್ದು. ಇವೆಲ್ಲ ಕೇಳಿ ನನಗೆ ಮೈ ರೋಮಾಂಚನವಾಗಿದ್ದು ಸುಳ್ಳಲ್ಲ.
ಮಲ್ಲೇಶ್ವರ ಬಸವನಗುಡಿ ಪ್ಲೇಗ್ ನಿಂದ ತಪ್ಪಿಸಿಕೊಳ್ಳಲು ಮಾಡಿದ ಬಡಾವಣೆಗಳಲ್ಲ, ಅದಕ್ಕೂ ಮುನ್ನ ವಿನ್ಯಾಸ ಮಾಡಿದ್ದು ಜಾಗ ಇತ್ತು ಎಂದು ಸೇರಿಕೊಂಡಿದ್ದು ಜನ ಎಂದು ಸಹ ಗೊತ್ತಾಯಿತು. ಅಂದ ಹಾಗೆ ನಮ್ಮ ಜಯನಗರ ತುಂಬಾ ಒಳ್ಳೆಯ ವಿನ್ಯಾಸ ಹೊಂದಿರುವ ಬಡಾವಣೆ ಎಂದು ತಿಳಿದು ಸಂತೋಷವಾಯಿತು.
ಒಂದು ರಾಜರ ಸಣ್ಣ ಊರಾಗಿ ಇಡೀ ದೇಶವೇ ತಿರುಗು ನೋಡೋ ಹಾಗೆ ಆಗಿರುವ ನಮ್ಮ ಊರಿನ ಬಗ್ಗೆ ನನಗೆ ಹೆಮ್ಮೆ ಇದೆ. ಮಾತಾಡುತ್ತ ಸಮುದ್ರ ಹೋಗಿ ಸಂದ್ರ ಆಯ್ತು ಸಂದ್ರ ಅಂದ್ರೆ ನೀರು ಇರುವ ಜಾಗ ಅವೆಲ್ಲವನ್ನು ಮುಚ್ಚಿ ದೊಡ್ಡ ದೊಡ್ಡ ಬಡಾವಣೆಗಳನ್ನ ಕಟ್ಟಿದ್ರೆ ಮಳೆಗಾಲದಲ್ಲಿ ನೀರು ತುಂಬೇ ತುಂಬತ್ತೆ ಅನ್ನೋ ಮಾತು ತುಂಬಾ ಸಮಂಜಸ ಅನ್ನಿಸ್ತು.
ಯಾವುದೇ ಊರಿಗೆ ಒಂದಷ್ಟು ನಿಗದಿತ ಜನರಿಗೆ ಅನುಕೂಲವಾಗುವ ಹಾಗೆ ವಿನ್ಯಾಸ ಮಾಡಲಾಗುತ್ತದೆ. ಅವೆಲ್ಲವನ್ನು ಮೀರಿದರೆ ವಿನ್ಯಾಸದ ಮಾದರಿಯನ್ನ ಸಹ ಬದಲಾಯಿಸಬೇಕಾಗುತ್ತದೆ. ಇದು ನಮ್ಮನ್ನ ಆಳುವವರು ಮರೆತ್ತಿದ್ದಾರೆ. ಒಂದು ಮಾತು ಅಲ್ಲಿ ಕೇಳಿದ್ದು ಬೆಂಗಳೂರು ಈ ದೊಡ್ಡ ಮನುಷ್ಯರಿಂದ ಕಾಸ್ಮೋಪಾಲಿಟನ್ ಆಗಿಲ್ಲ, ಇದು ಅಸ್ತಿತ್ವಕ್ಕೆ ಬಂದಾಗಲಿಂದಲೂ ಎಲ್ಲ ಕಡೆಯಿಂದ ಜನ ಬಂದಿದ್ದು ಅವಾಗ್ಲಿಂದಾನೇ ಕಾಸ್ಮೋಪಾಲಿಟನ್ ಎಂದು. ಹೌದು ನಮ್ಮೂರು ನಮಗೆ ಸವಿ ಬೆಲ್ಲ.