ಗೋಪಾಲಕೃಷ್ಣ ಅಡಿಗರ ‘‘ನನ್ನ ಅವತಾರ’’ ಕವನದ ಒಂದು ಅಧ್ಯಯನ
- ಎಸ್.ಕೆ.ಹರಿಹರೇಶ್ವರ, ಸ್ಟಾಕ್ಟನ್, ಕ್ಯಾಲಿಫೋರ್ನಿಯಾ
ನನ್ನ ಕಣ್ಣ ಮುಂದೆಯೇ ಮೊಳೆತು ಬೆಳೆದ ರೀತಿಯ.
ನನ್ನ ಹಾಗೆ ಅವನು ಕೂಡ ಉಣ್ಣುತ್ತಿದ್ದ ತಿನ್ನುತ್ತಿದ್ದ ;
ಚಂದ್ರನನ್ನು ತಾ ಎಂದು ತಾರುಮಾರು ತೊದಲುತ್ತಿದ್ದ ;
ಹೀಗೇ ಇರಲು ದೇವತ್ವದ ತರಿಸಲೀಟಿ ತುದಿಯನೇರಿ ಅವನ ಮನ
ಮುಗಿಲ ಚುಚ್ಚಿ ಮುಂದುವರಿದ ಆ ಮಹಾ ಪ್ರತೀತಿಯ
ಕಣ್ಣಾರೆ ಕಂಡೆನಯ್ಯ ; ಹೊಗಳಲೆನಲು ಆಡಲಿಲ್ಲ ಈ ನನ್ನ ನಾಲಗೆ
ಉಳಿದೆ ನಾನು ಆಗಲೂ ಈಗ ಇಲ್ಲಿ ಕೊಳೆವೊಲು....’
- ಎಂದು ಪ್ರಾರಂಭವಾಗುತ್ತದೆ, ಕನ್ನಡ ನವ್ಯ ಕಾವ್ಯದ ಹೆಸರಾಂತ ಕವಿ, ಪ್ರಾಧ್ಯಾಪಕ ಗೋಪಾಲಕೃಷ್ಣ ಅಡಿಗರ ‘ ನಡೆದು ಬಂದ ದಾರಿ’ಯಲ್ಲಿನ ಕವನ- ‘ ನನ್ನ ಅವತಾರ’.
ಅವರ ಎತ್ತರಕ್ಕೆ ನಾವೇಕೆ ಏರಲಿಲ್ಲ ..
ನಾವು ಹಲವರು ಗಮನಿಸಿದ್ದೇವೆ: ನೆನ್ನೆ ಮೊನ್ನೆ ನಮ್ಮ ಸಹೋದ್ಯೋಗಿಗಳಾಗಿದ್ದವರು, ನಾವು ಅತಿ ಕಷ್ಟವೆಂದು ಕೈಬಿಟ್ಟ ಕೆಲಸಗಳನ್ನು ತಾವು ಕೈಗೊಂಡು ಸಾಧಿಸಿ, ಇಲ್ಲಿಂದ ಅಲ್ಲಿ ಹಾರಿ, ಅಲ್ಲಿಂದ ಮತ್ತೆಲ್ಲೋ ಜಾರಿ, ಅಥವಾ ನಾವಿದ್ದೆಡೆಗೇ ಸಾರಿ, ನಮ್ಮ ಕಣ್ಣೆದುರಿಗೇ ಮೇಲೆ ಏರಿ, ನಮ್ಮ ಮೇಲಧಿಕಾರಿ (ಬಾಸ್) ಆಗಿಬಿಡುವುದನ್ನು ಅಥವಾ ಬೇರೊಂದು ಸಂಸ್ಥೆಯಲ್ಲಿ ಉನ್ನತ ಹುದ್ದೆಗೆ, ಎತ್ತರದ ಗದ್ದುಗೆಗೆ, ಸ್ಥಾನಕ್ಕೆ ಮಾನಕ್ಕೆ ಪಾತ್ರರಾಗುವುದನ್ನು ಕಂಡಿದ್ದೇವೆ ; ಸೌಜನ್ಯಕ್ಕೆ ಅವರಿಗೆ ಅಭಿನಂದನೆಗಳನ್ನೂ ಶುಭಾಶಯಗಳನ್ನೂ ಕಳಿಸಿದ್ದೇವೆ ; ಜೊತೆಗೆ, ಆಗ ನಾವು ಕೆಲವೊಮ್ಮೆ ಒಳಗೊಳಗೇ ಕರುಬಿದ್ದೇವೆ, ಕೂಡ !
‘‘ ಅವರಂತೆ ನಾನೂ ಮಾಡಲು ಸಾಧ್ಯವಿತ್ತು ; ಮಾಡಬಹುದಿತ್ತು. ಆದೇನು ಮಹಾ ! ಆದರೆ, ನೆಲ ಡೊಂಕಿತ್ತಲ್ಲ ; ಅದಕ್ಕೇನೇ ಸರಿಯಾಗಿ ಕುಣಿಯಲಾಗಲಿಲ್ಲ ’’- ಎಂದು ಕೆಲವರು ಕೊಡುವ ಸಮಜಾಯಿಷಿ, ತಲೆ ತಲಾಂತರದ ಗಾದೆಯ ಕೊಂಕು ನುಡಿ. ‘‘ ಗೊತ್ತಾ ? ಮೇಲೆ ಮೇಲೆ ಹೋದಾಗ ಜವಾಬ್ದಾರಿ ಜಾಸ್ತಿ ; ನನಗದು ಬೇಕಿಲ್ಲ. ಎಲ್ಲರನ್ನು ಓಲೈಸಿಕೊಂಡು, ತಲೆ ಬಿಸಿಯಾಗಿಯೇ ಇರಿಸಿಕೊಂಡು ಮೂರು ಹೊತ್ತೂ ‘ ಬಿಜಿ’ ಯಾಗಿದ್ದುಕೊಂಡು, ಪಡೆವ ಕೃತಕ ನೆಮ್ಮದಿ ನನಗೆ ಬೇಕೇ ಇಲ್ಲ. ಈಗ ನಾನು ಹೇಗಿದ್ದೇನೋ ನನಗಷ್ಟೇ ಸಾಕು. ನಾನು ಅಲ್ಪ ತೃಪ್ತ ! ’’ - ಎನ್ನುವವರು ಇನ್ನು ಕೆಲವರು. ‘ ತನ್ನ ಮುಖ ಅಷ್ಟು ಚೆನ್ನಾಗಿಲ್ಲ ’ - ಎಂದು ಮನವರಿಕೆ ಆದ ಮೇಲೆ, ತನಗೆ ಉಪಯೋಗವಿಲ್ಲದ ಶೃಂಗಾರ ಸಾಧನೆಗಳನ್ನೇ ಹೀಯಾಳಿಸಿದಂತೆ ಮತ್ತೆ ಕೆಲವು ಸೋಮಸುಂದರಿಯರ ನಿಲುವು - ಹೀಗೆ ಅವಕಾಶ ಸಿಗದವರು, ಅವಕಾಶ ಸಿಕ್ಕೂ ಕೈ ತಪ್ಪಿ ಹೋದವರು ಮತ್ತು ಅವಕಾಶ ಬಾಗಿಲು ತಟ್ಟಿದಾಗ ಎದ್ದು ಹೋಗಿ ಬಾಗಿಲು ತೆರೆಯದೆ ಕುಳಿತಲ್ಲಿಯೇ ಕುಳಿತ ಸೋಮಾರಿಗಳು, ನಮ್ಮಲ್ಲಿ ಹಲವಾರು ಮಂದಿ ಇದ್ದಾರಲ್ಲ, ಅವರನ್ನು ಕುರಿತ ವಿಡಂಬನೆ ಈ ಕವನ.
ನನ್ನ ಅವತಾರ
ವಾರ್ತಾ
ಸಂಚಯ
ಅಡಿಗರ
ಸಂಕ್ರಾಂತಿ
ಸೂರ್ಯ
ಅಡಿಗರ
ಕವನಗಳು
ನವ್ಯವೋ?
ನವೋದಯವೋ?