ಬಹುಭಾಷಾ ಪಂಡಿತ ಮಾಹುಲಿ ಗೋಪಾಲಾಚಾರ್ಯರು

ಬೆಳಗಾವಿಯ ಸಮೀಪದಲ್ಲಿರುವ ಐನಾಪುರಗ್ರಾಮದವರಾದ ಪಂ. ಗೋಪಾಲಾಚಾರ್ಯರು ಶ್ರೀ ಸತ್ಯಧ್ಯಾನತೀರ್ಥರಲ್ಲಿ ಶ್ರೀಮನ್ಯಾಯಸುಧಾ ಓದಿದ ವಿದ್ವಾಂಸರ ಪರಂಪರೆಗೆ ಸೇರಿದವರು. ಉಡುಪಿಯ ಪೇಜಾವರಮಠದ ಶ್ರೀಗಳಿಗೆ ಪಾಠ ಹೇಳಿದ ಶ್ರೀ ವಿದ್ಯಾಮಾನ್ಯತೀರ್ಥರೂ ಶ್ರೀ ಸತ್ಯಧ್ಯಾನತೀರ್ಥರ ಶಿಷ್ಯರಾಗಿದ್ದರು. ಪಂ. ಗೋಪಾಲಾಚಾರ್ಯರಲ್ಲಿ ಇನ್ನೊಂದು ವೈಶಿಷ್ಟ್ಯವಿತ್ತು. ಅವರು ಮುಂಬೈ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ.ಎ.ಪದವಿಯನ್ನೂ ಪಡೆದಿದ್ದರು. ಅವರಿಗೆ ಸುಲಭವಾಗಿ ಯಾವುದೇ ಕಾಲೇಜಿನಲ್ಲಿ ಪ್ರಾಧ್ಯಾಪಕ ಕೆಲಸ ದೊರೆಯಬಹುದಾಗಿತ್ತು. ಆದರೆ ಅವರಿಗೆ ನೌಕರಿ-ಚಾಕರಿ ಮಾಡುವ ಮನಸ್ಸಿರಲಿಲ್ಲ. ತಾವು ಒಂದು ಗುರುಕುಲವನ್ನು ಸ್ಥಾಪಿಸಿಬೇಕು, ಅಲ್ಲಿ ವಿದ್ಯಾರ್ಥಿಗಳಿಗೆ ವೈದಿಕ ವಿದ್ಯೆಯನ್ನು ಉಚಿತವಾಗಿ ಕೊಡಬೇಕು ಎಂಬ ಮಹದಾಸೆಯಿತ್ತು- ಇದೇ ಅವರ ಜೀವನದ ಗುರಿಯಾಗಿತ್ತು. ಅವರು ಭಾರತದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾದ ಮುಂಬಾಪುರಿಯನ್ನೇ ಆರಿಸಿಕೊಂಡರು. ತಮ್ಮ ಸ್ವರೂಪೋದ್ಧಾರಕರಾದ ಸತ್ಯಧ್ಯಾನತೀರ್ಥರನ್ನು ಕಂಡು ತಮ್ಮ ಜೀವನದ ಧ್ಯೇಯದ ಬಗ್ಗೆ ಹೇಳಿದಾಗ ಗುರುಗಳು ಅವರಿಗೆ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು. ಏಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಮುಂಬೈಗೆ ಬಂದರು. ಅದರ ಫಲವಾಗಿ ವಾಣೀವಿಹಾರ ವಿದ್ಯಾಲಯ 1936ರಲ್ಲಿ ಪ್ರಾರಂಭವಾಯ್ತು, ಆಗ ಆಚಾರ್ಯರಿಗೆ 27 ವರ್ಷ. ಅವರ ಧರ್ಮಪತ್ನಿ ವಿದ್ಯಾರ್ಥಿಗಳಿಗೆಲ್ಲ ತಾಯಿಯ ಮಮತೆ ತೋರಿದರು.
1956ರಲ್ಲಿ ತಮ್ಮ ಗುರುಗಳ ಹೆಸರಿನಲ್ಲಿ ಶ್ರೀ ಸತ್ಯಧ್ಯಾನ ವಿದ್ಯಾಪೀಠವನ್ನು ಪ್ರಾರಂಭಿಸಿದರು. ಈ ವರ್ಷ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಸುವರ್ಣಮಹೋತ್ಸವವನ್ನೂ ಆಚರಿಸುತ್ತಿದ್ದಾರೆ, ಜೊತೆಗೆ ಪಂ. ಗೋಪಾಲಾಚಾರ್ಯರ ಜನ್ಮಶತಮಾನೋತ್ಸವವೂ ಇದೆ (1909-1984). ಇಂದು ಎರಡು ನೂರರಷ್ಟು ಉದ್ಯಾರ್ಥಿಗಳು ಇಲ್ಲಿ ಉಚಿತವಾಗಿ ಸಂಸ್ಕೃತ ಹಾಗೂ ವೇದಾಂತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮಾತುಂಗಾದ ಜಾಗೆ ಚಿಕ್ಕದಾಯಿತು ಎಂದು ಗೋಪಾಲಾಚಾರ್ಯರು ಮುಳುಂದ ಉಪನಗರದಲ್ಲಿ ದೊಡ್ಡ ಕಟ್ಟಡವನ್ನು ರೂಪಿಸಿ ಅಲ್ಲಿ ನವವೃಂದವನವನ್ನು ಸ್ಥಾಪಿಸಿದ್ದರು. ಅವರ ಚಿರಂಜೀವರಾದ ಪಂ. ಮಾಹುಲಿ ವಿದ್ಯಾಸಿಂಹಾಚಾರ್ಯರು ಆ ಕಟ್ಟಡಕ್ಕೆ ಹೊಸರೂಪ, ವಿರಾಟರೂಪ ಕೊಟ್ಟಿದ್ದಾರೆ ಮತ್ತು ಶ್ರೀವೇಂಕಟೇಶ್ವರ ದೇವಾಲಯವನ್ನೂ ಸ್ಥಾಪಿಸಿದ್ದಾರೆ. ಅದರ ಪ್ರಾರಂಭೋತ್ಸವ ಉತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥದಿಂದ ಜರುಗಿತು(1-5-2009). ಶ್ರೀಸತ್ಯಾತ್ಮರು ಸತ್ಯಧ್ಯಾನ ವಿದ್ಯಾಪೀಠದ ವಿದ್ಯಾರ್ಥಿಯಾಗಿದ್ದರು. ಪಂ. ಗೋಪಾಲಾಚಾರ್ಯರು ಶ್ರೀಗಳ ಪೂರ್ವಶ್ರಮದ ಮಾತಾಮಹರು.
1960ರಲ್ಲಿ ಮಾಟುಂಗಾದ ಖಾಲ್ಸಾ ಕಾಲೇಜಿನ ಕನ್ನಡ ಪ್ರಾಧ್ಯಾಪಕನಾಗಿ ನೌಕರಿಗೆ ಸೇರಿದಾಗ ನಾನು ಮುಂಬೈಯಲ್ಲಿ ಮೊದಲು ಕಂಡ ಮಹಾಚೇತನೆರೆಂದರೆ ಪಂ. ಗೋಪಾಲಚಾರ್ಯರು. ಅವರ ವಿಲಕ್ಷಣ ಪ್ರತಿಭೆಯ ಅಯಾಸ್ಕಾಂತದ ಪ್ರಭಾವಕ್ಕೆ ಸಿಲುಕಿದೆ, ಅವರ ಶಿಷ್ಯತ್ವವಹಿಸಿದೆ, ಅವರ ಕೃಪೆಯಿಂದ, ಆಶೀರ್ವಾದದಿಂದ ಪುನೀತನಾದೆ. ನನಗೆ ಕಾಲೇಜಿನ ಹಾಸ್ಟೇಲಿನಲ್ಲಿ ವಾಸಕ್ಕೆ ಅನುಕೂಲತೆ ಒದಗಿತ್ತು. ಪ್ರತಿನಿತ್ಯ ಆಚಾರ್ಯರ ಮನೆಗೆ ಬರುತ್ತಿದ್ದೆ, ಪ್ರವಚನಗಳನ್ನು ಕೇಳುತ್ತಿದ್ದೆ. ಪ್ರತಿ ರವಿವಾರ ಪೋದಾರ್ ಕಾಲೇಜಿನಲ್ಲಿ ನಡೆಯುತ್ತಿದ್ದ ಅವರ ಇಂಗ್ಲಿಷ್ ಪ್ರವಚನಗಳನ್ನು ಕೇಳುವ ಭಾಗ್ಯ ನನಗೆ ಲಭಿಸಿತು. ಆ ದಿನಗಳಲ್ಲಿ ಕನ್ನಡದಲ್ಲಿ ಯಾವುದೇ ಸಭೆ ನಡೆದರೂ ಹೆಚ್ಚಾಗಿ ಪಂ.ಗೋಪಾಲಚಾರ್ಯರೇ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದರು. ಅವರಿಗೆ ಕನ್ನಡ ಸಾಹಿತ್ಯದಲ್ಲಿಯೂ ಅಭಿರುಚಿಯಿತ್ತು. ವಿಶೇಷವಾಗಿ ದಾಸಸಾಹಿತ್ಯದ ಮೇಲೆ ಅವರು ಅಧಿಕಾರವಾಣಿಯಿಂದ ಮಾತಾಡುತ್ತಿದ್ದರು.
ಅವರದು ಮುಕ್ತ ಮನಸ್ಸು, ವಿಶಾಲ ಮನೋಭಾವ. ಅವರು ಕಟ್ಟಾ ಮಾಧ್ವರಾದರೂ ಅದ್ವೈತ, ವಿಶಿಷ್ಟಾದ್ವೈತ, ಹಾಗೂ ಇತರ ಸಂಪ್ರದಾಯದ (ಸ್ವಾಮಿನಾರಾಯಣ ಮುಂ.) ಪಂಡಿತರೂ ಅವರ ಬಳಿ ವೇದಾಂತದ ಪಾಠಹೇಳಿಸಿಕೊಳ್ಳಲು ಬರುತ್ತಿದ್ದರು. (ಜಸ್ಟಿಸ್ ಶ್ರೀಕೃಷ್ಣ ಅವರಲ್ಲಿ ಪಾಠ ಹೇಳಿಸಿಕೊಂಡಿದ್ದಾರೆ.) ವರಕವಿ ಬೇಂದ್ರೆ ಹಾಗೂ ಗೋಕಾಕರನ್ನು ಖಾಲ್ಸಾ ಕಾಲೇಜಿಗೆ ಕರೆಸಿದಾಗ, ಪಂ.ಗೋಪಾಲಚಾರ್ಯರು ತಮ್ಮ ಮನೆಗೂ ಅವರನ್ನು ಕರೆಸಿಕೊಂಡು ಗೌರವಿಸಿದರು. ಅವರು ಗೋಪಾಲಚಾರ್ಯರ ಬೃಹತ್ ಲೈಬ್ರರಿಯನ್ನು ಕಂಡು ಕೊಂಡಾಡಿದ್ದರು. ಪಂಡಿತರ ವಾಚನಾಭಿರುಚಿ ತತ್ವಜ್ಞಾನಕ್ಕೇ ಸೀಮಿತವಾಗಿರಲಿಲ್ಲ. ಪೌರ್ವತ್ಯ ಹಾಗೂ ಪಾಶ್ಚಿಮಾತ್ಯ ವೇದಾಂತದ ಗ್ರಂಥಗಳಲ್ಲದೆ, ವಿಜ್ಞಾನದ ಗ್ರಂಥಗಳೂ ಇಲ್ಲಿವೆ. ಅವರಿಗೆ ಹೋಮಿಯೋಪತಿಯಲ್ಲಿ ವಿಶೇಷ ಆಸಕ್ತಿ ಇತ್ತು. ಕನ್ನಡ, ಮರಾಠಿ, ಇಂಗ್ಲಿಷ್, ಹಿಂದೀ ಸಾಹಿತ್ಯದ ಗ್ರಂಥಗಳೂ, ವಿಶ್ವಕೋಶಗಳೂ ಇವೆ. ತಮ್ಮ ವಿದ್ಯಾರ್ಥಿಗಳಿಗೆ ಹಿಂದಿ ಹಾಗೂ ಸಂಸ್ಕೃತದಲ್ಲಿ ಬನಾರಸ್ ಮೊದಲಾದ ವಿಶ್ವವಿದ್ಯಾಲಯಗಳಿಂದ ಎಂ.ಎ.ಪದವಿ ಗಳಿಸಲು ಪ್ರೋತ್ಸಾಹಿಸುತ್ತಿದ್ದರು. ಅವರ ವಿದ್ಯಾರ್ಥಿಗಳು ಭಾರತದ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಪಾಠಪ್ರವಚನ ನಡೆಸಿ ಸಂಸ್ಕೃತ ಹಾಗೂ ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿರುವುದು ಅಭಿಮಾನದ ಸಂಗತಿ.
ಮುಂಬೈಯಲ್ಲಿ ಇಂದು ಮನೆ ಪಡೆಯುವುದು ಎಷ್ಟು ಕಷ್ಟದ್ದೋ ಅಂದು ಕೂಡ ಕಷ್ಟದ್ದೇ ಆಗಿತ್ತು. ನಾನು 1964 ಮೇ 31 ವಿವಾಹಿತನಾಗಿ ಮುಂಬೈಗೆ ರಜೆ ಮುಗಿಸಿ ಧಾರವಾಡದಿಂದ ಮುಂಬೈಗೆ ಮರಳಿ ಬರುವವನಿದ್ದೆ. ಮೇ ತಿಂಗಳ ಪ್ರಾರಂಭಕ್ಕೆ ಪಂ. ಗೋಪಾಲಚಾರ್ಯರಿಗೆ ಒಂದು ಪತ್ರ ಬರೆದು ನನಗೆ ಒಂದು ಕೋಣೆಯ ಮನೆ ಬಾಡಿಗೆಗೆ ಕೊಡಿಸಲು ಸಹಾಯ ಮಾಡಲು ಕೇಳಿದ್ದೆ. ಅವರು ಆ ದಿಶೆಯಲ್ಲಿ ಪ್ರಯತ್ನಿಸಿ ನನಗೊಂದು ಪತ್ರ ಬರೆದಿದ್ದರು. ಪತ್ರ ಕನ್ನಡದಲ್ಲಿದೆ, ಅವರ ಹಸ್ತಾಕ್ಷರ ದೇವನಾಗರಿಯಲ್ಲಿದೆ. ನನಗೆ ಬರೆದ ವಿಳಾಸ ಇಂಗ್ಲೀಷಿನಲ್ಲಿದೆ. ಗೋಪಾಲಾಚಾರ್ಯರ ಹಸ್ತಾಕ್ಷರಗಳ ಅಪೂರ್ವ ದಾಖಲೆ ಅದರಲ್ಲಿದೆ. ಅವರ ಒಲುಮೆ, ಕಿರಿಯರ ಬಗ್ಗೆ ಇರುವ ಕಾಳಜಿ ಅನನ್ಯ. ಅವರ ವಿದ್ವತ್ತು, ಅವರ ತಪಸ್ಸು, ವಿದ್ಯಾದಾನದ ದಾಹ. ಲೋಕ-ವ್ಯವಹಾರ-ಸಂಪರ್ಕ ಚತುರತೆ, ಅಮೋಘವಾಗಿತ್ತು. ಅದರ ಫಲವೇ ಮುಳುಂದದಲ್ಲಿ ತಲೆ ಎತ್ತಿ ನಿಂತಿರುವ ಸತ್ಯಧ್ಯಾನ ವಿದ್ಯಾಪೀಠ.
ವಾಣೀವಿಹಾರ ವಿದ್ಯಾಲಯದ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಾನು ಗೋಪಾಲಾಚಾರ್ಯರ ಮೇಲೆ ಒಂದು ಕವನ ಬರೆದಿದ್ದೆ(1962ರಲ್ಲಿ). ಅದನ್ನಿಲ್ಲಿ ಉದ್ಧರಿಸುವೆ.
ನಾವು-ನೀವು
(ಪಂ. ಗೋಪಾಲಾಚಾರ್ಯರನ್ನು ಕುರಿತು)
ಆನಂದ-ತೀರ್ಥದಲಿ ಮಿಂದವರು ನೀವು
ವಿಷಯದೀ ತಾಪದಲಿ ನೊಂದವರು ನಾವು
ವೇದ-ಪಾರಂಗತರು ಜ್ಞಾನ-ನಿಧಿ ನೀವು
ತಮಸಿನಲ್ಲಿಯೆ ಕೊಳೆವ ಪಾಮರರು ನಾವು
**
ಮೇರೆಮೀರದೆ ಇರುವ ವಾರಿಧಿಯು ನೀವು
ಅರ್ಧಬಟ್ಟಲದಲ್ಲೆ ತುಳುಕಿದೆವು ನಾವು
ಬಾನಂಚಿಗೂ ಕೈಯ ಚಾಚಿದಿರಿ ನೀವು
ನೆಲದ ಮೇಲೆಯೆ ಕುಳಿತು ಕುಣಿದೆವಿದೊ ನಾವು
**
ಕೋಗಿಲೆಯು ಹಾಡಿದೊಡೆ ಮಧುಮಾಸ ಬಂತು
ಯೋಗಿಜನರಿದ್ದ ನೆಲ ಆಶ್ರಮವ ತಂತು
ತಾಯಿಜೇನಿದ್ದೆಡೆಗೆ ಮಧುಕರದ ಗುಂಪು
ನಿಮ್ಮ ಮನೆ ಜೀವಿಗಳಿಗೀಯುತಿದೆ ತಂಪು.
ಪಂ. ಮಾಹುಲಿಗೋಪಾಲಾಚಾರ್ಯರು ಸಂಧ್ಯಾರಹಸ್ಯ ಎಂಬ ಪುಸ್ತಕವನ್ನು ಕನ್ನಡದಲ್ಲಿ ಬರೆದಿದ್ದಾರೆ. ತಮ್ಮ ಗುರುಗಳಾಗಿದ್ದ ಶ್ರೀ ಸತ್ಯಧ್ಯಾನತೀರ್ಥರ ಬಗ್ಗೆ ಒಂದು ಪುಸ್ತಕವನ್ನು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ನೂರಾರು ಬಿಡಿ ಲೇಖನಗಳನ್ನು ಇಂಗ್ಲೀಷಿನಲ್ಲಿ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ. ಅವುಗಳನ್ನೆಲ್ಲ ಒಂದುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಅವಶ್ಯಕವಾಗಿದೆ. ಅವರ ಅತ್ಯಂತ ಮಹತ್ವದ ಕಾಣಿಕೆ ಎಂದರೆ The Heart of Rigveda (pages 464, Somaiya Paublications,1971) ಎಂಬ ಉದ್ಗ್ರಂಥ. ಇದು ಇಂದು ಲಭ್ಯವಾಗಿಲ್ಲ. ಇದರ ಮರುಮುದ್ರಣದ ಅವಶ್ಯಕತೆ ಇದೆ. ಈ ಗ್ರಂಥವನ್ನು ಬರೆಯಲು ಮುಂಬೈಯ ಪ್ರಸಿದ್ಧ ಉದ್ಯಮಿ ಆರ್.ಡಿ.ಚಾರ್ ಎಂಬವರು ಪ್ರೇರಣೆ ನೀಡಿದ್ದರು. ಅನೇಕ ವಿದೇಶೀಯ ವಿದ್ವಾಂಸರು ಋಗ್ವೇದವನ್ನು ಆಂಗ್ಲಭಾಷೆಗೆ ಅನುವಾದಿಸಿದ್ದಾರೆ. ಋಗ್ವೇದದ ಹತ್ತು ಮಂಡಲಗಳಿಂದ ನೂರು ಮಂತ್ರಗಳನ್ನು ಆಯ್ದು ಅವುಗಳ ಸರಿಯಾದ ದೋಷರಹಿತ ಆಂಗ್ಲ ಅನುವಾದ ಪಂ ಗೋಪಾಲಾಚಾರ್ಯರು ನೀಡಿದ್ದಾರೆ. ವಿಲ್ಸನ್, ಗ್ರಿಫಿತ್, ಮೆಕ್ಡೊನೆಲ್, ಒಲ್ಡೆನ್ಬರ್ಗ ಮುಂತಾದವರ ಆಂಗ್ಲ ಅನುವಾದಗಳನ್ನು ತುಲನೆಗಾಗಿ ನೀಡಿದ್ದಾರೆ. ವೇದಗಳ ಬಗ್ಗೆ ಯುರೋಪಿಯನ್ ವಿದ್ವಾಂಸರ ಮತವೇನಿತ್ತು ಎಂಬ ವಿಚಾರವಾಗಿ ಅಭ್ಯಾಸಪೂರ್ಣ ಅನುಬಂಧವನ್ನೂ ಬರೆದಿದ್ದಾರೆ.
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications