ಗೋಪಿನಾಥನೆಂಬ ಹಳ್ಳಿ ರೈತ ಏರ್ಲೈನ್ಸ್ ಕಟ್ಟಿದ ಅಂದ್ರೆ!

* ವಿಶ್ವೇಶ್ವರ ಭಟ್
ಸುಮಾರು ಮೂರು ವರ್ಷಗಳ ಹಿಂದೆ ಏರ್ ಡೆಕ್ಕನ್ ಮುಖ್ಯಸ್ಥ ಕ್ಯಾಪ್ಟನ್ ಗೋಪಿನಾಥ್ ತಮ್ಮ ಆತ್ಮಕತೆ ಬರೆಯುತ್ತಿರುವ ಸಂಗತಿ ಗೊತ್ತಾದಾಗ ಕೆಲವು ಅಧ್ಯಾಯಗಳನ್ನು ಓದಲು ಕೊಟ್ಟಿದ್ದರು. ಅವರ ಹೆಲಿಕಾಪ್ಟರ್ ಹಾಗೂ ವಿಮಾನಗಳಲ್ಲಿ ಪಯಣಿಸಿದ್ದ ನನಗೆ ಅವರ ಬಗ್ಗೆ ತೀವ್ರ ಕುತೂಹಲವಿತ್ತು. ಒಬ್ಬ ಅಪ್ಪಟ ಕನ್ನಡಿಗ, ಹಳ್ಳಿಹೈದನೊಬ್ಬ ಆಕಾಶಕ್ಕೆ ನೆಗೆದ ಸಾಹಸ ಬೆರಗುಗೊಳಿಸಿತ್ತು. ಅವರ ಕುರಿತು ಆಗಲೇ ಕೆಲವು ಕತೆಗಳು, ದಂತಕತೆಗಳು, ಅಡಾಪಡಾ ಸುದ್ದಿ ಹಬ್ಬಿತ್ತು. ಕ್ಯಾಪ್ಟನ್ ಗೋಪಿನಾಥ್ ಆಗಲೇ ಸಿಲಬ್ರಿಟಿ' ಆಗಿದ್ದರು. ಅವರ ಅಗ್ಗದ ದರದ ವಿಮಾನಯಾನ ದೇಶಾದ್ಯಂತ ಜನಸಾಮಾನ್ಯನಲ್ಲೂ ರೋಮಾಂಚನ ಹುಟ್ಟಿಸಿತ್ತು. ನಮ್ಮ ಮನೆಯ ಕೆಲಸದ ಹೆಂಗಸು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೇವಲ ಐನೂರು ರೂ. ತೆತ್ತು ಡೆಕ್ಕನ್ ವಿಮಾನದಲ್ಲಿ ಬಂದ ಕತೆಯನ್ನು ರಸವತ್ತಾಗಿ ನಾಲ್ಕೈದು ತಿಂಗಳವರೆಗೆ ಮನೆಗೆ ಬಂದವರ ಮುಂದೆಲ್ಲ ಹೇಳುತ್ತಿದ್ದಳು. ಅವಳ ಪಾಲಿಗೆ ಈ ಜನ್ಮದಲ್ಲಿ ಅಸಾಧ್ಯವೆನಿಸುವ ಕನಸೊಂದು ನನಸಾಗಿತ್ತು.
ಇಂಥ ಸಹಸ್ರಾರು ಜನರ ಮನೋರಥ'ವನ್ನು ಕ್ಯಾಪ್ಟನ್ ಗೋಪಿನಾಥ್ ಆಕಾಶಕ್ಕೆ ಚಿಮ್ಮಿಸಿದ್ದರು. ಈ ದೇಶದ ಕಟ್ಟಕಡೆಯ ವ್ಯಕ್ತಿ ಕೂಡ ವಿಮಾನದಲ್ಲಿ ಪ್ರಯಾಣಿಸಬಹುದೆಂಬುದನ್ನು ಗೋಪಿನಾಥ್ ಸಾಧಿಸಿ ತೋರಿಸಿದ್ದರು. ವಿಮಾನ ಪ್ರಯಾಣವೆಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವೆಂಬುದನ್ನು ಅವರು ಧಿಕ್ಕರಿಸಿ ಅದನ್ನು ಎಲ್ಲರಿಗೂ ಮುಕ್ತಗೊಳಿಸಿದ್ದರು. ಆ ಮೂಲಕ ಭಾರತದ ಆಕಾಶವನ್ನು ಸಮಸ್ತರಿಗೂ ತೆರೆದಿಟ್ಟಿದ್ದರು. ಕ್ಯಾಪ್ಟನ್ ಗೋಪಿನಾಥ್ ಹೀಗೆ ದೇಶದೆಲ್ಲೆಡೆ ಒಬ್ಬ ಅಸಾಮಾನ್ಯ ಸಾಧಕನಾಗಿ, ಹಲವಾರು ಸಾಧ್ಯತೆಗಳನ್ನು ಸಾಕಾರಗೊಳಿಸಿದ್ದರು. ಸಹಜವಾಗಿ ಅವರು ಸುದ್ದಿಯಲ್ಲಿದ್ದರು. ಅವರ ಏರ್ಲೈನ್ ಸಂಸ್ಥೆಗೆ ಡಾ. ವಿಜಯ ಮಲ್ಯ ಅವರ ಬಂಡವಾಳವನ್ನೂ ಆಹ್ವಾನಿಸಿದ್ದರಿಂದ ಕಾರ್ಪೊರೇಟ್ ಜಗತ್ತಿನಲ್ಲಿ ಗೋಪಿನಾಥ್ ಸಂಚಲನವನ್ನುಂಟು ಮಾಡಿದ್ದರು.
ಆ ಸಂದರ್ಭದಲ್ಲಿ ಗೋಪಿನಾಥ್ ಆತ್ಮಕಥನ SIMPLY FLY ಇನ್ನೂ ಪುಸ್ತಕವಾಗಿ ಹೊರಬಂದಿರಲಿಲ್ಲ. ಅವರು ಕೊಟ್ಟ ಹಸ್ತಪ್ರತಿಗಳನ್ನೆಲ್ಲ ಓದಲಾರಂಭಿಸಿದೆ. ಕ್ಯಾಪ್ಟನ್ ಹೆಲಿಕಾಪ್ಟರ್ ಹಾಗೂ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ ನಂತರದ ವಿದ್ಯಮಾನಗಳು ಚೂರುಪಾರು ಗೊತ್ತಿದ್ದರೂ, ಅದಕ್ಕಾಗಿ ಅವರು ಪಟ್ಟ ಪರಿಶ್ರಮ, ಅನುಭವಿಸಿದ ಕಷ್ಟ, ಹೋರಾಟ, ಕಾಲುಜಗ್ಗಾಟ, ಕಲಿತ ಪಾಠ, ಅಂದುಕೊಂಡಿದ್ದನ್ನು ಈಡೇರಿಸುವ ಹಠ, ಸಾಧಿಸುವ ಛಲ... ಗೊತ್ತಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಹೆಲಿಕಾಪ್ಟರ್, ಏರ್ಲೈನ್ಸ್ ಶುರುಮಾಡುವುದಕ್ಕಿಂತ ಮೊದಲಿನ ಅವರ ಬದುಕಿನ ಹೆಜ್ಜೆಗಳ ಬಗ್ಗೆ ಹೆಚ್ಚಾಗಿ ಗೊತ್ತಿರಲಿಲ್ಲ.
ಸಾಮಾನ್ಯವಾಗಿ ನಮ್ಮವರೊಬ್ಬರು ಅಸಾಧ್ಯವೆನಿಸಿದ್ದನ್ನು ಸಾಧಿಸಿದಾಗ ಅವರ ಬಗ್ಗೆ ನಾವು ಇರುವುದಕ್ಕಿಂತ ತುಸು ಹೆಚ್ಚಿನದನ್ನೇ ಯೋಚಿಸುತ್ತೇವೆ ಹಾಗೂ ಹಾಗೇ ನಾಲ್ಕು ಜನರ ಮುಂದೆ ಹೇಳುತ್ತೇವೆ. ಅವರು ಹಾಗಿದ್ದರು, ಹೀಗಿದ್ದರು, ಇಪ್ಪತ್ತು ವರ್ಷಗಳ ಹಿಂದೆ ನೋಡಬೇಕಿತ್ತು ತೋಪ್ಡಾ ಆಗಿದ್ದರು, ಆಗ ನೋಡಿದ್ದರೆ ಏನು ಹೇಳುತ್ತಿದ್ದೆಯೋ... ಎಂದೆಲ್ಲ ನಮ್ಮ ಪರಿಚಯದವರ ಮುಂದೆ, ಸ್ವಲ್ಪ ಅತಿಯಾಗಿಯೇ ಬಣ್ಣಿಸುತ್ತೇವೆ. ಕ್ಯಾಪ್ಟನ್ ಗೋಪಿನಾಥ್ ಬಗ್ಗೆ ಸಹ ಇಂಥ ಕತೆಗಳು ಚಾಲ್ತಿಯಲ್ಲಿದ್ದವು. ಇವೆಲ್ಲ ವಾಸ್ತವಕ್ಕಿಂತ ಹೆಚ್ಚು ರಂಜಿತವಾಗಿರಬಹುದು, ಅತಿಶಯೋಕ್ತಿಯಿರಬಹುದು ಎಂದು ಒಳಮನಸ್ಸು ಹೇಳುತ್ತಿತ್ತು. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಿಗೆ ಒಳ ಹಾಗೂ ಹೊರ ವ್ಯಕ್ತಿತ್ವದ ಹಾಗೆ ಕಲ್ಪಿತ ವ್ಯಕ್ತಿತ್ವವೂ ಇರುತ್ತದೆ. ಇದು ಸುಖಾಸುಮ್ಮನೆ ಅನಗತ್ಯ ಪ್ರಭಾವಳಿಯನ್ನು ನಿರ್ಮಿಸಿರುತ್ತದೆ.
ಆದರೆ ಕ್ಯಾಪ್ಟನ್ ಗೋಪಿನಾಥ್ ಪುಸ್ತಕವನ್ನು ಓದಿದ ಬಳಿಕ ಅನಿಸಿದ್ದೇ ಬೇರೆ. ನಮಗೆ ಗೊತ್ತಿರುವುದಕ್ಕಿಂತ, ನಾವು ಭಾವಿಸಿರುವುದಕ್ಕಿಂತ ಅಥವಾ ತಿಳಿದುಕೊಂಡಿರುವುದಕ್ಕಿಂತ ಒಂದು ಕೈ ಜಾಸ್ತಿಯೇ ಇವರಿದ್ದಾರೆ ಎಂಬುದು. ಅಷ್ಟೇ ಅಲ್ಲ, ನಾವು ಇವರ ಬಗ್ಗೆ ತಿಳಿದುಕೊಂಡಿರುವುದು ಅತಿ ಕಡಿಮೆ. ಈ ಕೃತಿಯನ್ನು ಓದಿದ ಬಳಿಕ ಅದನ್ನು ಕನ್ನಡಕ್ಕೆ ಅನುವಾದಿಸಲೇಬೇಕೆಂದು ಅನಿಸಿತು. ಗೋಪಿನಾಥ್ ಕೂಡ ಸಮ್ಮತಿಸಿದರು. ಇಂಥದೊಂದು ಪುಸ್ತಕ ಕನ್ನಡದ ಹುಡುಗರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಯುವಕರಿಗೆ ತೀರಾ ಅಗತ್ಯವಿತ್ತು. ಹಳ್ಳಿಗಳಲ್ಲಿ ಹುಟ್ಟಿ, ಬೆಳೆದು, ಕನ್ನಡದಲ್ಲಿಯೇ ಓದಿದವರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದೆಂಬುದಕ್ಕೆ ಗೋಪಿನಾಥ್ ನಿದರ್ಶನ. ಈ ಪುಸ್ತಕ ಇನ್ನೊಂದು ದೃಷ್ಟಿಯಿಂದಲೂ ಬಹಳ ಮುಖ್ಯ ಎನಿಸಲು ಕಾರಣ, ಇದರ ಹೀರೊ ಕನ್ನಡಿಗ, ಅವರ ಭಾಷೆ ಕನ್ನಡ, ಅವರ ಸಾಧನೆಯ ಪರ್ವ ಶುರುವಾಗುವುದು ಕನ್ನಡದ ಮಣ್ಣಿನಲ್ಲಿ, ನಮ್ಮ ಮಧ್ಯದಲ್ಲಿಯೇ. ಆದರೆ ಅದರ ಫಲ ಸಿಗುವುದು ಇಡೀ ಮನುಕುಲಕ್ಕೆ. ಹೀಗಾಗಿ ಗೋಪಿನಾಥ್ ಆತ್ಮಕತೆಯೆಂದರೆ, ಕೇವಲ ಅವರದ್ದೊಂದೇ ಕತೆ ಅಲ್ಲ. ಅವರು ನಿಮಿತ್ತ ಮಾತ್ರ. ಹೀಗಾಗಿ ಇದು ಅಪ್ರತಿಮ ಕನ್ನಡಿಗನೊಬ್ಬನ ರೋಚಕ ಜೀವನಗಾಥೆ.
ಕ್ಯಾಪ್ಟನ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನವರು. ಅವರ ತಂದೆ ಕನ್ನಡ ಶಾಲೆಯ ಮೇಷ್ಟ್ರು. ಗೋಪಿನಾಥ್ ಕೂಡ ಅದೇ ಹಳ್ಳಿಯಲ್ಲಿ ಓದಿದರು. ಅಪ್ಪಟ ಗ್ರಾಮೀಣ ಪರಿಸರದಲ್ಲಿ ವಿದ್ಯಾರ್ಜನೆ. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ. ಹೈಸ್ಕೂಲು ಶಿಕ್ಷಣ ವಿಜಾಪುರದ ಸೈನಿಕ ಶಾಲೆಯಲ್ಲಿ. ಆನಂತರ ಪುಣೆಯ ಖಡಕ್ ವಾಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿ ಅಲ್ಲಿ ತರಬೇತಿ ಪಡೆದು ಭಾರತೀಯ ಸೇನೆಯನ್ನು ಸೇರಿದರು. ಅಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸಮರಾಂಗಣದಲ್ಲಿ ನಿಂತು ಹೋರಾಡಿದರು. ಸೇನೆಯಲ್ಲಿನ ಇತಿ-ಮಿತಿಗಳನ್ನು ಅರಿತು, ತಮಗೆ ಅನಿಸಿದ್ದನ್ನು ಮಾಡುವ ವಿಶಾಲ ಅವಕಾಶ ಹೊರಜಗತ್ತಿನಲ್ಲಿ ತೆರೆದಿರುವುದನ್ನು ಗಮನಿಸಿ ಅದನ್ನು ಸಾಧಿಸಲು ಸೇನೆಗೆ ರಾಜೀನಾಮೆ ನೀಡಿ ಮನೆಗೆ ಬಂದುಬಿಟ್ಟರು. ಹಳ್ಳಿ ಹೈದ ವಿಮಾನಯಾನ ಸಂಸ್ಥೆ ಕಟ್ಟಿದ್ದು ಹೇಗೆ? »
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications