ಕತೆ ಜತೆ ಗೆಳೆತನ, ಓಡುತ್ತದೆ ಒಂಟಿತನ (ಭಾಗ 2)
ಒಂದೂರಿನಲ್ಲಿ ಇಬ್ಬರು ಪ್ರಾಣಸ್ನೇಹಿತರಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಅವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವುಂಟಾಯಿತು. ಮಾತು ಬಿಟ್ಟುಕೊಂಡರು. ಅನಂತರ ಇಬ್ಬರೂ ಪರಮಶತ್ರುಗಳಂತೆ ಪರಸ್ಪರರನ್ನು ದೂರುತ್ತಾ ದೂರವುಳಿದರು. ಸುಮಾರು ಮೂವತ್ತು ವರ್ಷ ಸಂಪರ್ಕವೇ ಇಲ್ಲ. ಅವರ ಪೈಕಿ ಒಬ್ಬ ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದ. ಈ ಸಂಗತಿ ಆತನ ಸ್ನೇಹಿತನಿಗೆ ಗೊತ್ತಾಯಿತು. ಆಸ್ಪತ್ರೆಗೆ ಹೋದ. ಮೂವತ್ತು ವರ್ಷಗಳ ನಂತರದ ಮಿಲನ. ಇಬ್ಬರೂ ಗಂಟೆಗಟ್ಟಲೆ ಮಾತಾಡಿದರು. ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡರು. ಸ್ನೇಹಿತ ಹೊರಡಲು ಮೇಲೆದ್ದಾಗ ಇಬ್ಬರ ಕೆನ್ನೆಗಳೂ ಒದ್ದೆ. ಸ್ನೇಹಿತ ಇನ್ನೇನು ಹೊರಡಲಿದ್ದಾಗ ಕಾಯಿಲೆಪೀಡಿತ ಸ್ನೇಹಿತ ಹೇಳಿದ - ಒಮ್ಮೆ ನಾನು ಸತ್ತರೆ, ನೀನು ಬಂದಿದ್ದು ಒಳ್ಳೆಯದಾಯಿತೆಂದು ತಿಳಿಯುತ್ತೇನೆ. ಸಾಯದಿದ್ದರೆ ನಿನ್ನೊಂದಿಗಿನ ವೈರತ್ವ ಮುಂದುವರಿಯುತ್ತದೆ."
***
ಹಡಗನ್ನು ಇಬ್ಬರು ನಾವಿಕರು ಚಲಾಯಿಸುತ್ತಿದ್ದರು. ರಾತ್ರಿ ಮಲಗುವ ಮೊದಲು ಅವರು ಪಾಳಿಪುಸ್ತಕದಲ್ಲಿ ತಮ್ಮ ಅಭಿಪ್ರಾಯವನ್ನು ಬರೆದಿಡಬೇಕಾಗಿತ್ತು. ಅದು ನಿಯಮ. ಎಂದೂ ಮದ್ಯ ಸೇವಿಸದ ಮೊದಲ ನಾವಿಕ ಅಂದು ಸ್ವಲ್ಪ ಏರಿಸಿದ. ಅದನ್ನು ಕಂಡು ಎರಡನೆಯವ ಪಾಳಿಪುಸ್ತಕದಲ್ಲಿ ಬರೆದ - ಇಂದು ಆತ ಸ್ವಲ್ಪ ಮದ್ಯ ಸೇವಿಸಿದ." ಇದನ್ನು ಓದಿದ ಮೊದಲನೆಯವನಿಗೆ ಕೋಪ ಬಂತು. ಹಾಗಂತ ಅವನು ಕುಡಿದಿದ್ದು ನಿಜ. ಕ್ಯಾಪ್ಟನ್ಗೆ ಗೊತ್ತಾದರೆ ಕೆಲಸಕ್ಕೆ ಕುತ್ತು ಬಂದೀತೆಂದು ಭಯಪಟ್ಟ. ಮರುದಿನ ಎರಡನೆಯವನಿಗೆ ಪಾಳಿ ಕೊಡುವ ಮೊದಲು ಪಾಳಿ ಪುಸ್ತಕದಲ್ಲಿ ಮೊದಲನೆಯವ ಬರೆದ - ಇಂದು ಆತ ಮದ್ಯ ಸೇವಿಸಿಲ್ಲ."
***
ಒಬ್ಬ ವ್ಯಕ್ತಿತ್ವ ವಿಕಸನ ಗುರು ಪಾಠ ಮಾಡುತ್ತಿದ್ದ - ಚಾರ್ಲ್ಸ್ ಸ್ವಾಬ್ ಎಂಬಾತನಿದ್ದ. ಜಗತ್ತಿನ ಅತಿ ದೊಡ್ಡ ಸ್ಟೀಲ್ ಕಂಪನಿ ಮಾಲೀಕ. ಕೊನೆಯಲ್ಲಿ ದಿವಾಳಿಯಾಗಿ ಹುಚ್ಚನಾದ. ವಿಶ್ವದ ಅತಿದೊಡ್ಡ ಗ್ಯಾಸ್ ಕಂಪನಿ ಮುಖ್ಯಸ್ಥ ಹೋವಾರ್ಡ್ ಹನ್ಸ್ ಕೂಡ ಹುಚ್ಚನಾಗಿ ಸತ್ತ. ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಅಧ್ಯಕ್ಷ ಸಾಯುವಾಗ ಭಿಕಾರಿಯಾದ. ಇಟಲಿಯ ಶ್ರೀಮಂತ ವಜ್ರ ವ್ಯಾಪಾರಿ ಸಾಯುವಾಗ ಅರೆಹುಚ್ಚನಾಗಿದ್ದ." ಅರ್ಧಗಂಟೆ ಪಾಠ ಮುಗಿಸಿದ ಗುರು, ಈ ಎಲ್ಲ ಕತೆಗಳನ್ನು ಕೇಳಿದರೆ ಏನನಿಸುತ್ತದೆ?" ಎಂದು ಕೇಳಿದ. ವಿದ್ಯಾರ್ಥಿಗಳು ಹೇಳಿದರು-ಶ್ರೀಮಂತರಾದರೆ ಹುಚ್ಚರಾಗುತ್ತಾರೆ." ಅದಕ್ಕೆ ಗುರು ಹೇಳಿದ-ಶ್ರೀಮಂತಿಕೆ ಹಾಗೂ ಶ್ರೀಮಂತನಾಗಬೇಕೆಂಬ ಹುಚ್ಚು ಬಿಡಿ'
***
ಎಲ್ಲರೂ ನನ್ನನ್ನೇ ನೋಡುತ್ತಿರಬೇಕು. ಆಗಲೇ ನನಗೆ ಖುಷಿ. ಒಂದು ಮೋಡ ಇನ್ನೊಂದಕ್ಕೆ ಹೇಳಿತು. ನಿನ್ನನ್ನು ಎಲ್ಲರೂ ನೋಡ್ತಾರೆ. ಆದರೆ ನೀನು ನಾಲ್ಕು ಹನಿ ಚೆಲ್ಲಬಾರದಾ?" ಎಂದು ಇನ್ನೊಂದು ಮೋಡ ಬುದ್ಧಿ ಹೇಳಿತು. ಅದಕ್ಕೆ ಮೊದಲ ಮೋಡ ಹೇಳಿತು - ಚೆಲ್ಲಿದರೆ ಯಾರೂ ನೋಡಲ್ಲ. ಅದಕ್ಕಾಗಿ ಮರುಭೂಮಿಯ ಮೇಲೆ ನಾನು ಇನ್ನೂ ತನಕ ಹನಿಗಳನ್ನು ಚೆಲ್ಲಿಲ್ಲ."












Click it and Unblock the Notifications