ಮಕ್ಕಳ ದಿನಾಚರಣೆ ಕಾಂಗ್ರೆಸ್ಸೀಕರಣ ಅಂತೀರಾ?
ಇಷ್ಟಕ್ಕೂ 'ಭಯೋತ್ಪಾದನೆ ಅಳಿಸಿ, ದೇಶ ಉಳಿಸಿ' ಆಂದೋಲನದಲ್ಲಿ ಹೇಳುತ್ತಿರುವುದಾದರೂ ಏನು?" ನಿಮ್ಮ ಸಿಮ್ ಕಾರ್ಡನ್ನು ಯಾರಿಗೂ ಹಸ್ತಾಂತರಿಸಬೇಡಿ, ನಿಮ್ಮ ಮನೆಯನ್ನು ಅಪರಿಚಿತರಿಗೆ ಬಾಡಿಗೆಗೆ ಕೊಡಬೇಡಿ, ಯಾರ ಬಗ್ಗೆಯಾದರೂ ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಿ" ಎಂಬ ಸಂದೇಶ ಹೇಗೆ ಕೇಸರೀಕರಣವಾಗುತ್ತದೆ?
* ವಿಶ್ವೇಶ್ವರ ಭಟ್
2008, ಜುಲೈ 26ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಸರಣಿ ಬಾಂಬ್ ಸ್ಫೋಟಗಳಾದವು. ಎರಡು ದಿನದ ಬಳಿಕ ಪೊಲೀಸರು ಸಂಭವನೀಯ ಪಿತೂರಿದಾರನೊಬ್ಬನ ರೇಖಾಚಿತ್ರವನ್ನು ಬಿಡುಗಡೆ ಮಾಡಿದರು. 'ಅಪರಾಧಿಗಳನ್ನು ಕೂಡಲೇ ಪತ್ತೆ ಹಚ್ಚಬೇಕೆಂದು' ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪೊಲೀಸರಿಗೆ ನಿರ್ದೇಶನ ನೀಡಿದರು. ಒಟ್ಟು ಹನ್ನೆರಡು ಸ್ಫೋಟಗಳ ಹಿಂದೆ ನೂರಕ್ಕೂ ಹೆಚ್ಚು ಜನರ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದರು. ಸುಮಾರು ಮೂವತ್ತು ಜನರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದರು. ಆದರೆ ಸುಳಿವು ಸಿಗುವ ಯಾವ ಸೂಚನೆಯೂ ಕಾಣದಾಯಿತು.
ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಭರೂಚ್ನಿಂದ ಕರೆಯೊಂದು ಬಂತು. ಅಲ್ಲಿನ ನಿವಾಸಿಯೊಬ್ಬನ ಕರೆ ಅದಾಗಿತ್ತು. ಅಹಮದಾಬಾದ್ ಬಾಂಬ್ ಸ್ಫೋಟಕ್ಕೆ ಬಳಸಿಕೊಂಡಿರುವ ಕಾರು ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯದ್ದು ಎಂದು ಆತ ಹೇಳಿದ. ಗುಜರಾತ್ ಕ್ರೈಮ್ ಬ್ರಾಂಚ್ನ ಉಪ ಆಯುಕ್ತ ಅಭಯ್ ಚೂಡಾಸಮ ಅವರಿಗೆ ಆಶಾಕಿರಣವೊಂದು ಗೋಚರಿಸಿದಂತಾಯಿತು. ಆ ಎಳೆಯನ್ನೇ ಹುಡುಕಿಕೊಂಡು ಹೊರಟರು. ಬಾಡಿಗೆಗೆ ಇದ್ದ ವ್ಯಕ್ತಿಯ ಫೋನ್ ನಂಬರ್ ಮಾಲೀಕನ ಬಳಿ ಇತ್ತು. ಆದರೆ ಜುಲೈ 26ರ ನಂತರ ಬಾಡಿಗೆಗೆ ಇದ್ದ ವ್ಯಕ್ತಿಯೂ ಇರಲಿಲ್ಲ, ಆತನ ಫೋನ್ ಕೂಡ ಕಾರ್ಯಚಾಲನೆಯಲ್ಲಿರಲಿಲ್ಲ. ಇತ್ತ ಸಂಭವನೀಯ ಪಿತೂರಿದಾರರ ವಿಚಾರಣೆ ನಡೆಸಿದ ಪೊಲೀಸರು ಕಲೆ ಹಾಕಿದ್ದ ಐದು ದೂರವಾಣಿ ಸಂಖ್ಯೆಗಳಲ್ಲಿ ಭರೂಚ್ ನಿವಾಸಿಯ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯದ್ದೂ ಒಂದಾಗಿತ್ತು. ಹಾಗಾಗಿ ಬಾಂಬ್ ಸೋಟಕ್ಕೂ ಈ ವ್ಯಕ್ತಿಗೂ ಸಂಬಂಧವಿದೆ ಎಂದು ಖಚಿತವಾಯಿತು. ಜುಲೈ 7ರಿಂದ 26ವರೆಗೆ ಈ ಐದೂ ನಂಬರ್ಗಳಿಗೆ ಬಂದಿದ್ದ ಹಾಗೂ ಹೊರಹೋಗಿದ್ದ ಕರೆಗಳ ದಾಖಲೆಯನ್ನು ತರಿಸಿಕೊಂಡರು. ಆದರೆ ಪಿತೂರಿದಾರರು
ಬಹಳ ಬುದ್ಧಿವಂತಿಕೆ ತೋರಿದ್ದರು. ಕರೆ ಮಾಡುವಾಗ ಸಾರ್ವಜನಿಕ ದೂರವಾಣಿಗಳನ್ನೇ ಉಪಯೋಗಿಸಿಕೊಂಡಿದ್ದರು. ಆದರೂ ಒಂದು ತಪ್ಪಾಗಿತ್ತು. ಭರೂಚ್ನಲ್ಲಿದ್ದ ವ್ಯಕ್ತಿಯ ಮೊಬೈಲ್ಗೆ ಜುಲೈ 19ರಂದು ಮುಂಬೈನಿಂದ ಕರೆಯೊಂದು ಬಂದಿತ್ತು. ಉತ್ತರ ಪ್ರದೇಶದ ಮೊಬೈಲ್ ಸಂಖ್ಯೆಯೊಂದರಿಂದ ಆ ಕರೆಯನ್ನು ಮಾಡಲಾಗಿತ್ತು. ಹಾಗೆ ಭರೂಚ್ಗೆ ಕರೆ ಮಾಡಿದ ನಂತರ ಅದೇ ಮೊಬೈಲ್ನಿಂದ ದಿಲ್ಲಿಯ ಜಾಮಿಯಾ ನಗರದ ನಿವಾಸಿ ಮೊಹಮದ್ ಆತಿಫ್ ಅಮೀನ್ಗೆ ಕರೆ ಮಾಡಿದ್ದರು.
ಅಹಮದಾಬಾದ್ ಸ್ಫೋಟ ಹಾಗೂ ಜಾಮಿಯಾ ನಗರಕ್ಕೂ ಸಂಬಂಧ ಸೃಷ್ಟಿಯಾಯಿತು. ಆದರೆ ಪೊಲೀಸರು ಮೊಹಮದ್ ಆತಿಫ್ ಅಮೀನನ ತಂಟೆಗೆ ಹೋಗಲಿಲ್ಲ. ಬದಲಾಗಿ ಆತನ ಮೊಬೈಲ್ ಮೇಲೆ ನಿಗಾ ಇಟ್ಟರು. ಒಂದಲ್ಲ ಒಂದು ದಿನ ಪಿತೂರಿದಾರರು ಆತಿಫ್ನ ಮೊಬೈಲ್ಗೆ ಮತ್ತೆ ಕರೆ ಮಾಡಬಹುದು ಎಂಬ ಯೋಚನೆ ಪೊಲೀಸರದ್ದಾಗಿತ್ತು. ತಿಂಗಳುಗಳೇ ಉರುಳಿದವು, ಯಾವ ಸುಳಿವೂ ಸಿಗಲಿಲ್ಲ ಇಷ್ಟಾಗಿಯೂ ಪೊಲೀಸರು ಮಾತ್ರ ಆತಿಫ್ನನ್ನು ಮಾತನಾಡಿಸಲಿಲ್ಲ. ಇತ್ತ 2008 ಸೆಪ್ಟೆಂಬರ್ನಲ್ಲಿ ಮುಂಬೈ ಕ್ರೈಮ್ ಬ್ರ್ಯಾಂಚ್ನ ಮುಖ್ಯಸ್ಥ ರಾಕೇಶ್ ಮರಿಯಾ ಅವರು ಜಿಹಾದಿ ರಿಯಾಜ್ ಭಟ್ಕಳ್ನ ಬಲಗೈ ಬಂಟ ಅಫ್ಜಲ್ ಉಸ್ಮಾನಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮುಖ್ಯ ಕಮಾಂಡರ್ ಬಶೀರ್ ಹಾಗೂ ಆತನ ತಂಡದವರು ಜುಲೈ 26ರ ಅಹಮದಾಬಾದ್ ಸ್ಫೋಟದ ನಂತರ ಜಾಮಿಯಾ ನಗರದಲ್ಲಿರುವ ಸುರಕ್ಷಿತ ತಾಣವೊಂದಕ್ಕೆ ತೆರಳಿದ್ದಾರೆ ಎಂಬ ವಿಷಯ ತಿಳಿದುಬಂತು. ಆಗ, ಅತಿಫ್ ಅಮೀನ್ನೇ ಬಶೀರ್ಗೆ ಆಶ್ರಯ ನೀಡಿರಬೇಕು ಅಥವಾ ಆತನೇ ಬಶೀರ್ ಎಂಬ ಮತ್ತೊಂದು ಹೆಸರು ಹೊಂದಿರಬೇಕು ಎಂಬ ಸಂಶಯ ಪೊಲೀಸರನ್ನು ಕಾಡತೊಡಗಿತು.
ಇಂತಹ ಮಾಹಿತಿಯೊಂದಿಗೆ ಸೆಪ್ಟೆಂಬರ್ 19ರಂದು ಜಾಮಿಯಾ ನಗರದ ಬಾತ್ಲಾ ಹೌಸ್ನ ಕದ ತಟ್ಟಿದವರೇ ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ. ಪೊಲೀಸರು ಕದ ತಟ್ಟಿದ್ದೇ ತಡ ಪಿಸ್ತೂಲಿನ ಆರ್ಭಟ ಆಮಂತ್ರಣ ನೀಡತೊಡಗಿತು. ಒಂದು ಗುಂಡು ಮೊಹನ್ ಚಂದ್ ಶರ್ಮಾ ಅವರ ಭುಜವನ್ನು ಸೀಳಿಕೊಂಡು ಹೋದರೆ, ಮತ್ತೊಂದು ಹೊಟ್ಟೆಯನ್ನು ಹೊಕ್ಕಿ ಬೆನ್ನಿನ ಕೆಳಭಾಗದಲ್ಲಿ ಹಾದು ಹೋಯಿತು. ಕೂಡಲೇ ಪ್ರತಿ ದಾಳಿ ಮಾಡಿದ ವಿಶೇಷ ಪೊಲೀಸ್ ತಂಡ, ಮೊಹಮದ್ ಸಾಜಿದ್ ಮತ್ತು ಅತೀಫ್ ಅಮೀನ್ನನ್ನು ಕೊಂದು ಹಾಕಿತು. ಅಷ್ಟರಲ್ಲಿ ಮೊಹಮದ್ ಸೈಫ್ ಎಂಬಾತ ಟಾಯ್ಲೆಟ್ನೊಳಕ್ಕೆ ನುಸುಳಿ ಚಿಲಕ ಹಾಕಿಕೊಂಡರೆ ಆರಿಫ್ ಎಂಬವನು ಚಾವಣಿಯ ಮೇಲಿನಿಂದ ಪರಾರಿಯಾದ. ಸೈಫ್ನನ್ನು ಬಂಧಿಸಿ ತಂದ ಪೊಲೀಸರು, ಆರಿಫ್ನನ್ನು ಹಿಡಿಯುವಲ್ಲಿಯೂ ಯಶಸ್ವಿಯಾದರು. ಆದರೆ ಮುಸ್ಲಿಮರಿಂದಲೇ ಕೂಡಿರುವ ಜಾಮಿಯಾ ನಗರದ ನಿವಾಸಿಗಳು ಗುಂಡಿನ ಚಕಮಕಿ ಶಬ್ದ ಕೇಳಿ ಮನೆಯಿಂದ ಹೊರಬಂದವರೇ ಪೊಲೀಸರನ್ನೇ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು. ಘೇರಾವ್ ಮಾಡಿ, 'ಅಮಾಯಕರನ್ನುಕೊಂದುಹಾಕಲಾಗಿದೆ' ಎಂದು ಪ್ರತಿಭಟಿಸಲಾರಂಭಿಸಿದರು. ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಕಮ್ರಾನ್ ಸಿದ್ಧಿಕಿ, ಪ್ರಶಾಂತ್ ಭೂಷಣ್, ಶಬ್ಮಮ್ ಹಷ್ಮಿ, ಅಂಜಲಿ ದೇಶಪಾಂಡೆ, ದೀಪಾಂಕರ್ ಭಟ್ಟಾಚಾರ್ಯ ಮುಂತಾದ ಸಮಾಜ ಗಣ್ಯ' ವ್ಯಕ್ತಿಗಳು ದೊಡ್ಡ ಪ್ರತಿಭಟನೆಯನ್ನೇ ಮಾಡಿದರು, ಅದೊಂದು 'ನಕಲಿ' ಎನ್ಕೌಂಟರ್ ಎಂದು ತೀರ್ಪನ್ನೂ ನೀಡಿದರು. ಅದರಲ್ಲೂ ಕೆಲವು ಪತ್ರಕರ್ತರಂತೂ, "ಗೃಹ ಸಚಿವ ಶಿವರಾಜ್ ಪಾಟೀಲ್ ಅವರ ಅಸಮರ್ಥತೆಯನ್ನು ಮುಚ್ಚಿಹಾಕಲು ನಡೆಸಿದ ಪ್ರಯತ್ನವಿದು" ಎಂದು ಬರೆದುಬಿಟ್ಟರು. "ಎನ್ಕೌಂಟರ್ ಸ್ಪೆಷಲಿಸ್ಟ್ ಎಂ.ಸಿ. ಶರ್ಮಾ ಅವರ ಎದೆಗೆ ಗುಂಡುಹೊಕ್ಕಿತು ಎನ್ನುವುದಾದರೆ ಅವರ ಹಿಂಬದಿಯಲ್ಲೇಕೆ ದೊಡ್ಡ ಗಾಯವಾಗಿದೆ. ಪೊಲೀಸರೇ ಶರ್ಮಾ ಅವರ ಬೆನ್ನಿಗೆ ಹಿಂದಿನಿಂದ ಗುಂಡು ಹಾರಿಸಿ ಸಾಯಿಸಿದ್ದಾರೆ. ನಕಲಿ ಎನ್ಕೌಂಟರ್ ಅಲ್ಲ ಎಂದು ಸಾಬೀತು ಮಾಡುವ ಪ್ರಯತ್ನವದು" ಎಂಬ ಹೊಸ ವಾದವನ್ನು ಮುಂದಿಟ್ಟರು. ಆದರೆ ಗುಂಡು, ಹೊಕ್ಕುವ ಸ್ಥಳಕ್ಕಿಂತ ಸೀಳಿಕೊಂಡು ಹೋಗುವಾಗ, ದೇಹದಿಂದ ಹೊರ ಸಾಗುವಾಗ ಹೆಚ್ಚಿನ ಗಾಯವನ್ನುಂಟು ಮಾಡುತ್ತದೆ ಎಂಬ ಕನಿಷ್ಠ ಜ್ಞಾನವೂ ಇಂತಹ ಪತ್ರಕರ್ತರಿಗಿರಲಿಲ್ಲ!!
ಇತ್ತ ಬಾತ್ಲಾ ಹೌಸ್ ಎನ್ಕೌಂಟರ್ನಲ್ಲಿ ಸತ್ತವರು ಹಾಗೂ ಬಂಧಿತರಿಬ್ಬರೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂದು ಗೊತ್ತಾದ ಕೂಡಲೇ, 'ಅವರು ಅಮಾಯಕ ವಿದ್ಯಾರ್ಥಿಗಳು' ಎಂದು ಕಥೆ ಹೇಳಲಾರಂಭಿಸಿದ ವಿವಿಯ ಕುಲಪತಿ ಮೊಷಿರುಲ್ ಹಸನ್, "ವಿವಿ ಖರ್ಚಿನಲ್ಲೇ ಬಂತರಿಗೆ ಕಾನೂನು ಸಹಾಯ ನೀಡಲಾಗುವುದು. ಅಷ್ಟಕ್ಕೂ ಯಾರೇ ಆಗಲಿ ಅಪರಾಧ ಸಾಬೀತಾಗುವವರೆಗೂ ಅವರು ಅಮಾಯಕರು" ಎಂದು ನ್ಯಾಯದ ಮಾತನಾಡಿದರು.
2004ರಲ್ಲಿ ಮುಂಬೈ ಖಾಲ್ಸಾ ಕಾಲೇಜಿನ ವಿದ್ಯಾರ್ಥಿನಿ ಇಸ್ರತ್ ಜೆಹಾನ್ ಪೊಲೀಸರ ಗುಂಡಿಗೆ ಬಲಿಯಾದಾಗಲೂ ಹೀಗೆಯೇ ಕೆಲವರು 'ಅಮಾಯಕತೆ'ಯ ಮಾತನಾಡಿದ್ದರು. ಆದರೆ 1996ರಷ್ಟು ಹಿಂದೆಯೇ ಉತ್ತರ ಪ್ರದೇಶದಲ್ಲಿ ತಲೆಯೆತ್ತಿದ ಸಿಮಿ' ಎಂಬ ದೇಶದ್ರೋಹಿ ಸಂಘಟನೆ ಬಿತ್ತಿರುವ ಬೀಜಗಳು ಈಗ ದೇಶದ ಹಲವಾರು ಕಾಲೇಜು ಹಾಗೂ ವಿವಿಗಳಲ್ಲಿ ಮೊಳಕೆಯೊಡೆದಿರುವುದು ಆಗಾಗ್ಗೆ ಸಾಬೀತಾಗುತ್ತಿದೆ. ಜಾಮಿಯಾ
ಮಿಲಿಯಾ ವಿವಿಯ ವಿದ್ಯಾರ್ಥಿಗಳ ಅಮಾಯಕತೆಯ ಬಗ್ಗೆ ಯಾರೆಷ್ಟೇ ಹೇಳಿದರೂ ಬಂತ ಮೊಹಮದ್ ಸೈಫ್ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. 2006ರಲ್ಲಿ ಇಪ್ಪತ್ತೊಂದು ಜನರನ್ನು ಬಲಿತೆಗೆದು ಕೊಂಡ ವಾರಾಣಸಿ ಬಾಂಬ್ ಸೋಟದ ಹಿಂದೆ ತಾನು ಹಾಗೂ ಆತಿಫ್ ಅಮೀನ್ ಭಾಗಿಯಾಗಿದ್ದೆವು ಎಂಬುದನ್ನು ಒಪ್ಪಿಕೊಂಡಿದ್ದಾನೆ. 'ಇಂಡಿಯನ್ ಮುಜಾಹಿದೀನ್'ನ ಇ-ಮೇಲ್ಗಳನ್ನು ಕಳುಹಿಸುತ್ತಿದ್ದ 'ಯಾಹೂ' ಕಂಪನಿಯ ಉದ್ಯೋಗಿ ಮೊಹಮದ್ ಪೀರ್ಬಾಯ್ ಎಂಬ ಸಾಫ್ಟ್ವೇರ್ ಎಂಜಿನಿಯರ್ ಸಿಕ್ಕಿಬಿದ್ದಿದ್ದಾನೆ.
ಈ ಹಿಂದೆ ಬಡತನ, ನಿರುದ್ಯೋಗ, ಅನಕ್ಷರತೆಗಳೇ ಭಯೋತ್ಪಾದನೆಯತ್ತ ಆಕರ್ಷಿತರಾಗಲು ಕಾರಣ ಎನ್ನುತ್ತಿದ್ದರು. ಆದರೆ ಅತ್ಯಂತ ವಿದ್ಯಾವಂತರು ಹಾಗೂ ವಿದ್ಯಾರ್ಥಿಗಳೇ ಇಂದು ಭಯೋತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಿಂದ ಫೆಬ್ರವರಿ28ರವರೆಗೂ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಭಯೋತ್ಪಾದನೆ ಅಳಿಸಿ, ದೇಶ ಉಳಿಸಿ' ಎಂಬ ಆಂದೋಲನ ಕೈಗೊಂಡಿದೆ. ಆದರೆ ದೇಶಾದ್ಯಂತ ಸಂಭವಿಸುತ್ತಿರುವ ಬಾಂಬ್ ಸೋಟಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಕಂಡುಬರುತ್ತಿರುವುದರಿಂದ
ವಿದ್ಯಾರ್ಥಿಗಳಲ್ಲೇ ಅರಿವು ಮೂಡಿಸಲು, ಭಯೋತ್ಪಾದನೆಯಿಂದ ದೇಶದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಲು ಮುಂದಾದರೆ ಅದರಲ್ಲೂ ತಪ್ಪು ಹುಡುಕುವಂಥದ್ದೇನಿದೆ? ಭಯೋತ್ಪಾದನೆ ದೇಶಕ್ಕೆ ಮಾರಕ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಅದ್ಯಾವ ದೃಷ್ಟಿಯಲ್ಲಿ ಕೇಸರೀಕರಣವಾಗುತ್ತದೆ? ಭಯೋತ್ಪಾದನೆ ಯನ್ನು ಮಟ್ಟಹಾಕಬೇಕು ಎನ್ನುವುದು ಕೇಸರೀಕರಣವಾದರೆ, ಭಯೋತ್ಪಾದನೆಯನ್ನು ಬೆಳೆಯಲು ಬಿಡಿ ಎನ್ನುವುದು ಯಾವ "....ಕರಣ"?
ಪ್ರತಿ ವರ್ಷ ಮೇ21ರಂದು ದೇಶಾದ್ಯಂತ ರಾಜೀವ್ ಸದ್ಭಾವನಾ ದಿನ'ವನ್ನು ಆಚರಣೆ ಮಾಡಲಾಗುತ್ತದೆ. ನವೆಂಬರ್14ರಂದು ಎಲ್ಲ ಶಾಲೆ, ಕಾಲೇಜುಗಳಲ್ಲೂ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ, ಸಭೆ-ಸಮಾರಂಭಗಳು ನಡೆಯುತ್ತವೆ. ಮಕ್ಕಳಿಗೆ ಚಾಚಾ ನೆಹರು ಅವರ ಸಾಧನೆ, ಸಾಮರ್ಥ್ಯ ಬಗ್ಗೆ ಹೇಳಲಾಗುತ್ತದೆ, ಕನಸಿನ ಭಾರತದ ನಿಜವಾದ ನಿರ್ಮಾತೃ ಎಂದು ವರ್ಣಿಸಲಾಗುತ್ತದೆ. ನೆಹರು ಹಾಗೂ ರಾಜೀವ್ ಗಾಂಧಿ ಯಾರು? ಕಾಂಗ್ರೆಸ್ಸಿಗರಲ್ಲವೆ? ಎಳೆಯ ಮಕ್ಕಳಿಗೆ ಇವರಿಬ್ಬರ ಬಗ್ಗೆ ಒಳ್ಳೆಯ ಕಲ್ಪನೆ ನೀಡುವುದು ಮಕ್ಕಳಿಗೆ ಕಾಂಗ್ರೆಸ್ ಬಗ್ಗೆ ಸದಭಿಪ್ರಾಯ ಮೂಡಿಸುವ ಪ್ರಯತ್ನ, ಅದೂ ಒಂದು ರೀತಿಯ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಎಂದು ಟೀಕಿಸಿದರೆ? ತೀರಾ ಬಾಲಿಶವೆನಿಸುತ್ತದೆಯಲ್ಲವೆ? ಹಾಗೆಯೇ ಪ್ರಸ್ತುತ ಕರ್ನಾಟಕದ ಕಾಂಗ್ರೆಸ್ಸಿಗರು 'ಭಯೋತ್ಪಾದನೆ ಅಳಿಸಿ, ದೇಶ ಉಳಿಸಿ' ಎಂಬ ಆಂದೋಲನದ ಬಗ್ಗೆ ಪ್ರತಿಭಟಿಸುತ್ತಿರುವುದೂ ಅಷ್ಟೇ ಬಾಲಿಶವೆನಿಸುತ್ತಿದೆ. ಒಂದು ವೇಳೆ ನಿಮ್ಮ ಮನೆಗೆ ಕಳ್ಳಕಾಕರೋ, ಡಕಾಯಿತರೋ, ಭಯೋತ್ಪಾದಕರೋ ನುಗ್ಗಿದರೆ ಏನು ಮಾಡುತ್ತೀರಿ? ನುಗ್ಗಿದವನ ಜಾತಿಯೇನು, ಆತ ಹಿಂದೂನಾ, ಮುಸಲ್ಮಾನನಾ ಎಂದು ಕೇಳುತ್ತೀರಾ? ಆತ ನಮ್ಮ ದೇಶದವನಾ, ಪಾಕಿಸ್ತಾನದವನಾ ಎಂದು ವಿಚಾರಿಸುತ್ತೀರಾ? ಅಥವಾ ಅವನನ್ನು ನೀನು ಕಾಂಗ್ರೆಸ್ಸಿನವನಾ, ಬಿಜೆಪಿಯವನಾ, ಜೆಡಿಎಸ್ನವನಾ ಎಂದು ವಿಚಾರಿಸುತ್ತೀರಾ? ನಿಮ್ಮ ಮನೆಯೊಳಗೆ ನುಗ್ಗಿ ಬಂದವ ಯಾರೇ ಆಗಿರಲಿ ಅವನನ್ನು ಹಿಮ್ಮೆಟ್ಟಿಸುತ್ತೀರಿ, ಸದೆಬಡಿಯುತ್ತೀರಿ ತಾನೆ? ಅಥವಾ ಭಯೋತ್ಪಾದಕನ ಮುಂದೆ ನಿಮ್ಮ ಮನೆಮಂದಿ ರಾಜಕೀಯ, ವೈಮನಸ್ಸು, ದ್ವೇಷ, ವಿರಸಗಳನ್ನೆಲ್ಲ ಚರ್ಚಿಸುತ್ತಾ ಕುಳಿತುಕೊಳ್ಳುವುದಿಲ್ಲ ತಾನೆ? ಅಥವಾ ಹಾಗೆ ಮಾಡುತ್ತೀರಾ? ಇಲ್ಲ ಅಂತ ಅಂದುಕೊಂಡಿದ್ದೇನೆ. ಈ ಪ್ರಶ್ನೆಗೆ ಯಾರನ್ನೇ ಕೇಳಿದರೂ ಅವರೂ ಹಾಗೇ ಹೇಳಬಹುದು ಅಂದುಕೊಂಡಿದ್ದೇನೆ.
ಈ ಪ್ರಶ್ನೆಗಳನ್ನು ಯಾಕೆ ಕೇಳುತ್ತಿದ್ದೇನೆ ಅಂದ್ರೆ, ಈ ಪ್ರಶ್ನೆಗಳು ಯಾಕೆ ಮುಖ್ಯವಾಗುತ್ತವೆ ಅಂದ್ರೆ, ಈ ವಿಷಯದ ಬಗ್ಗೆ ರಾಜ್ಯದ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ. ಬಿಜೆಪಿ ಸರಕಾರ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಭಯೋತ್ಪಾದನಾ ವಿರೋಧಿ ಆಂದೋಲನಕ್ಕೆ ಕಾಂಗ್ರೆಸ್ ತೀವ್ರ ಪ್ರತಿಭಟನೆ, ಪ್ರತಿ ಚಳವಳಿ ನಡೆಸುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟವೂ ನಮ್ಮ ರಾಜಕಾರಣಿಗಳಿಗೆ ರಾಜಕೀಯದ ದಾಳವಾಗುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ನಿದರ್ಶನ. ಭಯೋತ್ಪಾದನೆ ವಿರುದ್ಧ ಯಾರೇ ಹೋರಾಡಲಿ ಅದನ್ನು ಬೆಂಬಲಿಸಬೇಕಾದುದು ಪ್ರತಿಯೊಬ್ಬನ ಕರ್ತವ್ಯ. ಹಾಗೆ ನೋಡಿದರೆ ಪ್ರತಿಯೊಬ್ಬನೂ ಈ ಪಿಡುಗಿನ ವಿರುದ್ಧ ಹೋರಾಡಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಭಯೋತ್ಪಾದನೆ ವಿರುದ್ಧ ಕೇವಲ ಸೈನಿಕರು, ಕಮಾಂಡೋಗಳು, ಪೊಲೀಸರಷ್ಟೇ ಅಲ್ಲ ಪ್ರತಿಯೊಬ್ಬರೂ ಸೆಣಸಬೇಕಾಗಿದೆ. ಈ ವಿಷಯದಲ್ಲಿ ಪ್ರತಿಯೊಬ್ಬರೂ ಸೈನಿಕರೇ.
ಭಯೋತ್ಪಾದನೆಯೆಂಬುದು ಇಂದು ಕಾಶ್ಮೀರಕ್ಕೋ, ಅಸ್ಸಾಮಿಗೋ, ದಿಲ್ಲಿಗೋ ಸೀಮಿತವಾಗಿಲ್ಲ. ಭಯೋತ್ಪಾದಕ ನಮ್ಮ ಮನೆಯ ಅಂಗಳ ದಾಟಿ ಹೆಬ್ಬಾಗಿಲ ಬಳಿಯೇ ನಿಂತಿದ್ದಾನೆ. ಇದೊಂದು ಮಹಾಪಿಡುಗಾಗಿ, ಮಾರಿಯಂತೆ ನಮ್ಮನ್ನು ಕಾಡುತ್ತಿದೆ. ಹೀಗಿರುವಾಗ ಭಯೋತ್ಪಾದನೆ ವಿರುದ್ಧ ಹೋರಾಡುವುದೇ ತಪ್ಪು, ಕಾಲೇಜು ಕ್ಯಾಂಪಸ್ಸಿನ ಕೇಸರೀಕರಣ, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸೆಳೆದುಕೊಳ್ಳುವ ತಂತ್ರ ಎಂದೆಲ್ಲ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿರುವುದನ್ನು ನೋಡಿದರೆ ನಗುವೂ ಬರೊಲ್ಲ, ಅಳುವೂ ಬರೊಲ್ಲ. ಬರುವುದೇನಿದ್ದರೂ ಆಕ್ರೋಶ. ಇಂಥ ಹೋರಾಟವನ್ನು ಬಿಜೆಪಿ ವಿರೋಸಿದ್ದರೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಏಕೆಂದರೆ ಭಯೋತ್ಪಾದನೆ ರಾಜಕೀಯ ಮಾಡುವ ವಿಷಯವಲ್ಲ. ಈ ವಿಷಯದಲ್ಲಿ, ಇಂದಿನ ಸನ್ನಿವೇಶದಲ್ಲಿ ಯಾರೇ ರಾಜಕೀಯ ಮಾಡಿದರೂ ಅದನ್ನು ವಿರೋಧಿಸಬೇಕು, ಪ್ರತಿಭಟಿಸಬೇಕು. ನಮ್ಮ ದೇಶ ಈಗಾಗಲೇ ಭಯೋತ್ಪಾದನೆಯಿಂದ ಜರ್ಝರಿತವಾಗಿದೆ. ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ, ತಮ್ಮದಲ್ಲದ ತಪ್ಪಿಗೆ. ಭಯೋತ್ಪಾದನೆ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು, ಜಾಗೃತಿ ಮೂಡಿಸಬೇಕಾದ ಅನಿವಾರ್ಯ ಒದಗಿ ಬಂದಿದೆ. ಅಮೆರಿಕದಲ್ಲಿ 9/11ರ ಘಟನೆಯ ಬಳಿಕ ಇಡೀ ದೇಶ ಮೈಕೊಡವಿ ಎದ್ದುಕೊಂಡ ರೀತಿ ನಮಗೆ ಮಾದರಿಯಾಗಬೇಕು. ಪ್ರಾಥಮಿಕ ಶಾಲೆಯ
ಮಕ್ಕಳಲ್ಲೂ ಭಯೋತ್ಪಾದಕತೆಯ ಆಪಾಯದ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು. ಭಯೋತ್ಪಾದಕರ ದುರುದ್ದೇಶಗಳನ್ನು ಅವರಿಗೆ ಆ ಹಂತದಲ್ಲಿಯೇ ಮಾಡಿಸಲಾಯಿತು. ಯುವಜನರಲ್ಲಿ ಈ ಸಮಸ್ಯೆಯ ತೀವ್ರತೆಯನ್ನು ಬಿಂಬಿಸಲಾಯಿತು. ಪರಿಣಾಮವಾಗಿ, 9/11ಅನಂತರ ಅಮೆರಿಕದಲ್ಲಿ ಮತ್ತೊಂದು ಅಂಥ ಘಟನೆ ಸಂಭವಿಸಲಿಲ್ಲ. ಸರಕಾರವೊಂದೇ ಅಲ್ಲ, ಅಲ್ಲಿನ ಜನರೆಲ್ಲ ಈ ಸಮಸ್ಯೆಯ ವಿರುದ್ಧ ಎದ್ದು ನಿಂತರು. ಇಂದು ಒಸಾಮ ಬಿನ್ ಲಾಡೆನ್ ತಿಪ್ಪರಲಾಗ ಹಾಕಿದರೂ ಅಮೆರಿಕದೊಳಗೆ ನುಸುಳಲಾರ. ಸೊಳ್ಳೆ, ಜಿರಳೆಯಾಗಿಯೂ ಆ ದೇಶದೊಳಗೆ ಎಂಟ್ರಿ ಪಡೆಯಲಾರ. ಅಷ್ಟರಮಟ್ಟಿಗೆ ಅಮೆರಿಕ ಭಯೋತ್ಪಾದನೆಯಿಂದ ಸುರಕ್ಷಿತ ಹಾಗೂ ಸುಭದ್ರ!
ಆದರೆ ನಾವು ಭಯೋತ್ಪಾದನೆಯಿಂದ ಯಾವ ಪಾಠ ಕಲಿತಿದ್ದೇವೆ? ಬಿಲ್ಕುಲ್ ಇಲ್ಲ. ಭಯೋತ್ಪಾದಕ ಸೊಳ್ಳೆ ರೂಪದಲ್ಲಾಗಲಿ, ಸೊಳ್ಳೆ ಭಯೋತ್ಪಾದಕನ ರೂಪದಲ್ಲಾಗಲಿ ಬರುವುದು ಸುಲಭ. ಅದಕ್ಕೆ ಬೇರಾರೂ ಅಲ್ಲ ನಮ್ಮ ದೇಶದವರೇ ನೆರವಾಗುತ್ತಾರೆ. ಒಬ್ಬ ಭಯೋತ್ಪಾದಕನಿಗೆ ಈ ದೇಶದ ಗಡಿಯೊಳಗೆ ನುಸುಳಿ ಬರುವುದು ಏನೇನೂ ಕಷ್ಟವಲ್ಲ. ಭಯೋತ್ಪಾದಕ ಕೃತ್ಯ ಎಲ್ಲೇ ನಡೆದರೂ ನಾಲ್ಕು ದಿನ ತಲೆಕೆಡಿಸಿ ಕೊಳ್ಳುತ್ತೇವೆ. ಅನಂತರ ಎಲ್ಲವೂ ಎಂದಿನಂತೆ. ಮುಂಬಯಿ ಮೇಲೆ ಉಗ್ರರ ದಾಳಿಯನ್ನು ನಾವು ಮರೆಯುವ ಕಾಲ ಹೆಚ್ಚು ದೂರವಿಲ್ಲ. ಅಷ್ಟರಮಟ್ಟಿಗೆ ಭಯೋತ್ಪಾದನೆಗೆ ನಾವು ಒಗ್ಗಿಕೊಂಡಿದ್ದೇವೆ ಹಾಗೂ ಆ ಸಮಸ್ಯೆಯನ್ನು ಅಷ್ಟೊಂದು ಲಘುವಾಗಿ ಪರಿಗಣಿಸಿದ್ದೇವೆ. ಮುಂದೊಂದು ದಿನ ಅಂಥ ಘಟನೆ ಸಂಭವಿಸಿದಾಗಲೇ ನಾವು ಎಚ್ಚರವಾಗೋದು.
ಈ ಹಿನ್ನೆಲೆಯಲ್ಲಿ "ಭಯೋತ್ಪಾದನೆ ಅಳಿಸಿ, ದೇಶ ಉಳಿಸಿ" ಕಾರ್ಯಕ್ರಮ ಪ್ರಮುಖವಾಗುತ್ತದೆ. ಆದರೆ ಈ ಆಂದೋಲನಕ್ಕೆ ಎಬಿವಿಪಿಯವರನ್ನು ಬಳಸಿಕೊಳ್ಳಲಾಗುತ್ತಿದೆ. ಆ ಕಾರಣಕ್ಕಾಗಿ ನಾವು ವಿರೋಧಿಸುತ್ತಿದ್ದೇವೆ' ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಒಂದೊಮ್ಮೆ ಎಬಿವಿಪಿಯವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದೇ ಇಟ್ಟುಕೊಳ್ಳಿ. ಕಾಂಗ್ರೆಸ್ಸಿಗರೂ ಕೂಡ ತಮ್ಮ ವಿದ್ಯಾರ್ಥಿಸಂಘಟನೆಯಾದ ಎನ್ಎಸ್ಯುಐ ಅನ್ನು ಬಳಸಿಕೊಂಡು ಇಂತಹದ್ದೇ ಜಾಗೃತಿ ಜಾಥಾವನ್ನು ನಡೆಸಬಹುದಲ್ಲವೆ? ಇಷ್ಟಕ್ಕೂ ಕರ್ನಾಟಕ ಸರಕಾರ ಮಾಡುತ್ತಿರುವ ಆಂದೋಲನದಲ್ಲಿ ಹೇಳುತ್ತಿರುವುದಾದರೂ ಏನು? "ನಿಮ್ಮ ಸಿಮ್ ಕಾರ್ಡ್ನ್ನು ಯಾರಿಗೂ ಹಸ್ತಾಂತರಿಸಬೇಡಿ, ನಿಮ್ಮ ಮನೆಯನ್ನು ಅಪರಿಚಿತರಿಗೆ ಬಾಡಿಗೆಗೆ ಕೊಡಬೇಡಿ, ಯಾರ ಬಗ್ಗೆಯಾದರೂ ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಿ" ಎಂಬ ಸಂದೇಶ ಹೇಗೆ ಕೇಸರೀಕರಣವಾಗುತ್ತದೆ? ಜಗತ್ತಿನ ಯಾವುದೇ ಭಾಗದಲ್ಲಿ ನಡೆದಿರುವ ಕ್ರಾಂತಿಗಳನ್ನು ತೆಗೆದುಕೊಳ್ಳಿ, ಅವುಗಳಲೆಲ್ಲ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಿದ್ದಾರೆ. ಆ ಕಾರಣಕ್ಕಾಗಿಯೇ ಸರಕಾರ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿ ಸಲು ಮುಂದಾಗಿದೆ.
ಇತ್ತೀಚಿನ ಮರು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ರಾಜ್ಯ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಹೆಣಗಾಡುತ್ತಿದೆ, ಅದರ ನೂತನ ನೇತಾರರಿಗೊಂದು 'ಇಶ್ಯೂ'ಬೇಕು ಎಂಬುದು ಎಂಥವರಿಗೂ ಅರ್ಥವಾಗುವಂತಹ ಸಂಗತಿಯೇ. ಆದರೆ ಭಯೋತ್ಪಾದನೆಯ ವಿಚಾರದಲ್ಲಿ ರಾಜಕಾರಣ ಮಾಡುವುದು ಸಲ್ಲ.
(ಸ್ನೇಹಸೇತು : ವಿಜಯ ಕರ್ನಾಟಕ)












Click it and Unblock the Notifications