Get Updates
Get notified of breaking news, exclusive insights, and must-see stories!

ಶನಿದೇವರಿಗೇಕೆ ಎಳ್ಳೆಣ್ಣೆ ಅಭಿಷೇಕ? ಇಲ್ಲಿದೆ ಪೌರಾಣಿಕ ಕಥೆ

ಶನಿದೇವರ ಕಾಡಾಟದಲ್ಲಿ ಶನಿಮೂರ್ತಿಗೆ ಹಾಗೂ ವೃಶ್ಚಿಕ ಲಗ್ನದಲ್ಲಿ ಜನಿಸಿದ ಹನುಮನಿಗೆ ಎಲ್ಲರೂ ಕಪ್ಪು ಬಟ್ಟೆಯಲ್ಲಿ ಕಪ್ಪು ಎಳ್ಳು ಬತ್ತಿ ಹಚ್ಚಿ ಬೆಳಗುತ್ತಾರೆ. ಇದೇ ರೀತಿ ಶನಿದೇವರ ಅಭಿಷೇಕಕ್ಕಾಗಿ ತಮ್ಮ ಕೈಲಾದಷ್ಟು ಎಳ್ಳೆಣ್ಣೆ ಕೊಡುವ ಪದ್ಧತಿ ಕೆಲವರು ಮಾಡುತ್ತಾರೆ. ಅಭಿಷೇಕ ಮಾಡಿದ್ದ ಎಳ್ಳೆಣ್ಣೆಯನ್ನು ತಲೆಗೆ ಹಾಗೂ ಮೈಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಶನಿದೇವರ ಕುದೃಷ್ಟಿ ಸ್ವಲ್ಪನಾದರೂ ಕಮ್ಮಿಯಾಗುತ್ತದೆ ಎಂಬ ನಂಬಿಕೆ ಆಸ್ತಿಕರದು. ಇದೇ ರೀತಿ ಕೈ, ಕಾಲು, ಮತ್ತು ಕೀಲು ನೋವುಗಳಿದ್ದ ಸ್ಥಳದಲ್ಲಿ ಆ ಎಳ್ಳೆಣ್ಣೆಯನ್ನು ಹಚ್ಚುವುದರಿಂದ ನೋವು ಮಂಗಮಾಯವಾಗುತ್ತದೆ ಎಂಬ ನಂಬಿಕೆ ಶನಿದೇವನ ಭಕ್ತರದು.

ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮುಂದೆಯೂ ನಡೆದುಕೊಂಡು ಹೋಗುತ್ತದೆ. ಆದರೆ ಈ ಪದ್ಧತಿಯನ್ನು ಶನಿದೇವರ ಕಾಡಾಟದಿಂದ ತಪ್ಪಿಸಿಕೊಳ್ಳಬೇಕೆನ್ನುವವರು ಮಾಡಲೇಬೇಕು. (ರೋಗವಿದ್ದವರು ಹುಷಾರಾಗಬೇಕಂದ್ರೆ ವೈದ್ಯರು ಸೂಚಿಸಿದ ಮಾತ್ರೆ ತೆಗೆದುಕೊಂಡಂತೆ) ಇಲ್ಲಾಂದ್ರೆ ಕಷ್ಟಗಳ ಸಾಲನ್ನು ಹಾಗೂ ದೇಹದ ಅಂಗಾಂಗಗಳ ನೋವನ್ನು ಅನುಭವಿಸಬೇಕು.

ಶನಿಕಾಡಾಟದಲ್ಲಿರುವವರಿಗೆ ಈಗ ಇರೋದು ಎರಡೇ ದಾರಿ. ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿಕೊಳ್ಳುವುದು ಅವರವರಿಗೆ ಬಿಟ್ಟದ್ದು. ಏಕೆಂದರೆ ಶನಿದೇವರು ತನ್ನ ಗೋಚಾರದಲ್ಲಿ ಕಡೆಯ ಆರು ತಿಂಗಳು ತುಂಬಾ ಶಕ್ತಿವಂತನಾಗಿ ತನ್ನ ಫಲಗಳನ್ನು ನೀಡುತ್ತಾನೆ. [ಸಾಡೇಸಾತಿ ಏನು, ಏನಿದರ ಮರ್ಮ?]

Sade Sati : Why sesame oil is used for Shani

ಶನಿದೇವನಿಗೆ ಎಳ್ಳೆಣ್ಣೆಯಿಂದ ಮಾತ್ರ ಅಭಿಷೇಕ ಮಾಡಲು ಪೌರಾಣಿಕ ಹಿನ್ನೆಲೆ ಕಥೆಯ ಕಾರಣವಿದೆ. ನಾವ್ಯಾರೂ ಇಲ್ಲಿ ಚಿರಂಜೀವಿಗಳಾಗಿರಲ್ಲ. ಹಿಂದಿನವರೂ ಕೂಡ ಈಗಿಲ್ಲ. ಆದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಆಸ್ತಿಕತೆಯಿಂದ ಬದುಕು ಸಾಗಿಸುತ್ತಿದ್ದೇವೆ ಅಷ್ಟೇ. ನಮ್ಮ ಮುಂದಿನ ಪೀಳಿಗೆಯವರು ಸುದಾರಿಯಲ್ಲಿ ನಡೆದರೆ ತಮ್ಮ ಜೀವನ ಪಾವನ ಮಾಡಿಕೊಳ್ಳುತ್ತಾರೆ. ಇಲ್ಲಾಂದ್ರೆ ಹಾಳಾಗ್ತಾರೆ. [ಶನಿದೇವನಿಗೆ ಹೆದರಬೇಕಾಗಿಲ್ಲ]

ಇರಲಿ, ಈ ಪೌರಾಣಿಕ ಕಥೆಯೂ ರಾಮಾಯಣಕ್ಕೆ ಸಂಬಂಧಪಟ್ಟದ್ದು.

ಶನಿಮಹಾತ್ಮನು ಚಿಕ್ಕವನಿದ್ದಾಗ ಅತೀ ಉತ್ಸುಕತೆಯಿಂದ ಇರುತ್ತಿದ್ದನು. ವಿಪರೀತ ಮೊಂಡುತನದಿಂದ ಎಲ್ಲರೊಂದಿಗೆ ವರ್ತಿಸುತ್ತಿದ್ದನು. ಇವನೊಂದಿಗೆ ಆಟವಾಡಲೂ ಅವನ ವಾರಿಗೆಯವರು ಕೂಡ ಮುಖ ತಿರುಗಿಸಿಕೊಳ್ಳುವಷ್ಟು ವಿಚಿತ್ರ ಸ್ವಭಾವ ಇವನಿಗಿತ್ತು. ಇದರಿಂದ ಆದಷ್ಟು ಇವನಿಂದ ದೂರವಿರಲು ಎಲ್ಲರೂ ಪ್ರಯತ್ನಿಸುತ್ತಿದ್ದರು. ಇಲ್ಲಾಂದ್ರೆ ಇವನ ಕಿಡಿಗೇಡಿತನಕ್ಕೆ ಉಳಿದವರು ಶಿಕ್ಷೆ ಅನುಭವಿಸುವಂತಾಗುತ್ತಿತ್ತು. ಇದೇ ರೀತಿ ಎಲ್ಲೆಡೆ ಇವನ ಕಾಡಾಟದಿಂದ ಎಲ್ಲರಿಗೂ ಸಾಕು ಸಾಕಾಗಿ ಹೋಗಿತ್ತಂತೆ.

ಹೀಗಿರುವಾಗ, ರಾಮಭಕ್ತ ಹನುಮನು ಬೆಟ್ಟವೊಂದರ ಮೇಲೆ ಧ್ಯಾನಾಸಕ್ತನಾಗಿ "ಶ್ರೀರಾಂ..ಮ್, ಜೈ ರಾಂ...ಮ್, ಜೈ ಜೈ ರಾಮ್" "ಶ್ರೀರಾಂ..ಮ್, ಜೈ ರಾಂ...ಮ್, ಜೈ ಜೈ ರಾಮ್" ಎಂದು ಎಂದಿನಂತೆ ಜಪ ಮಾಡುತ್ತಿದ್ದನು. ಆಗ ಶನಿದೇವನು ಹನುಮನಿದ್ದ ಸ್ಥಳಕ್ಕೆ ಬಂದು ಸಿಕ್ಕಾಪಟ್ಟೆ "ಮಂಗನಾಟ", ಕುಚೇಷ್ಟೆ ಮಾಡಲಾರಂಭಿಸಿದನು. ಇಷ್ಟಕ್ಕೂ ಸುಮ್ಮನಾಗದ ಮಹಾತ್ಮನು ಅಲ್ಲಿರುವ ಅನೇಕ ವಸ್ತುಗಳನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬಿಸಾಕಹತ್ತಿದ್ದನಂತೆ.

ಇದರಿಂದ ಧ್ಯಾನಮಗ್ನನಾದ ಹನುಮನು ಬೇಸತ್ತು ಎಚ್ಚೆತ್ತುಕೊಂಡು ಶನಿದೇವನಿಗೆ ಕಿತಾಪತಿ ಮಾಡದೇ ಸುಮ್ಮನೆ ಆಟವಾಡಿಕೊಂಡು ಹೋಗು ಎಂದು ಪರಿಪರಿಯಾಗಿ ತಿಳಿಸಿ ಹೇಳಿದನಂತೆ. ಆದರೆ ಹನುಮನ ಮಾತನ್ನು ಆಲಿಸದೇ ಶನಿದೇವನು ತನ್ನ ಕಾಡಾಟವನ್ನು ದುಪ್ಪಟ್ಟು ಮಾಡಿದನಂತೆ.

ಹೆಚ್ಚಾಗಿ ಹನುಮನು ಧ್ಯಾನಾಸಕ್ತನಾಗಿಯೇ ಇರುತ್ತಾನೆ. ಹನುಮನು ಈಗಲೂ ಚಿರಂಜೀವಿಯಾಗಿದ್ದಾನೆ ಎಂದು ಪ್ರತೀತಿ ಇದೆ. ಆದ್ದರಿಂದ ಹನುಮನ ದೇವಸ್ಥಾನದಲ್ಲಿ ಗಂಟೆ ಬಾರಿಸಬಾರದು ಎನ್ನುವುದು. ಇದರಿಂದ ಹನುಮನ ಧ್ಯಾನ ಭಗ್ನವಾಗುತ್ತದೆ ಎಂಬ ನಂಬಿಕೆಯಿದೆ. ಐತಿಹಾಸಿಕ ತಾಣ ಹಂಪಿಯಲ್ಲಿರುವ ಯಂತ್ರೋದ್ಧಾರಕ ಹನುಮನ ಕಲ್ಲಿನ ಚಿತ್ರದಲ್ಲೂ ಕೂಡ ಹನುಮನು ಧ್ಯಾನದಲ್ಲೇ ಮಗ್ನನಾಗಿದ್ದಾನೆ. ಇದೇ ಹಂಪಿ ಹತ್ತಿರದಲ್ಲಿರುವ ಹನುಮನು ಜನಿಸಿದ ಸ್ಥಳವೆಂದು ಪ್ರಸಿದ್ಧಿಯಾಗಿರುವ, ವಿದೇಶಿ ಪ್ರವಾಸಿಗರಿಂದ ತುಂಬಿ ತುಳುಕುವ ಅಂಜನಾದ್ರಿ ಬೆಟ್ಟದ 575 ಮೆಟ್ಟಲು ಹತ್ತಿದ್ರೆ ಸಿಗುವ ಹನುಮನ ದೇವಸ್ಥಾನದಿಂದಲೂ ಕೂಡ ಹನುಮನ ಪ್ರಭಾವ ತಿಳಿದುಕೊಳ್ಳಬಹುದು.

ಈ ಬೆಟ್ಟ ಹತ್ತಿ ಅಲ್ಲಿರುವ ಹನುಮನ ದರ್ಶನ ಮಾಡಿದರೆ ಹನುಮನ ಶಕ್ತಿಯ ಅನುಭವವಾಗುತ್ತದೆ ಜೊತೆಗೆ ನಿಮ್ಮಲ್ಲಿರುವ ಶಕ್ತಿ, ಸಾಮರ್ಥ್ಯವೂ ಗೊತ್ತಾಗುತ್ತದೆ. ಶನಿ ಕಾಡಾಟದಲ್ಲಿರುವವರು ಒಮ್ಮೆ ಕಷ್ಟಪಟ್ಟು ಬೆಟ್ಟ ಹತ್ತಿದರೆ ಮುಂಬರುವ ಕಷ್ಟಗಳು ಅಷ್ಟೊಂದು ನೋವು ಕೊಡಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ಈಗ ಕಥೆ ಏನಾಯ್ತು ಎಂಬುದನ್ನು ನೋಡೋಣ.

ಶನಿದೇವನ ಕಿಡಿಗೇಡಿತನದಿಂದ ಬೇಸತ್ತು ಉಗ್ರನಾದ ಹನುಮನು ತನ್ನ ದೇವರಾದ ಶ್ರೀರಾಮನ ಧ್ಯಾನಕ್ಕೆ ತೊಂದರೆಯಾಗಿದ್ದಕ್ಕೆ ತುಂಬಾ ನೊಂದುಕೊಂಡನು. ಇದನ್ನೂ ಕೂಡ ಮೂದಲಿಸಿದ ಶನಿದೇವನ ಮೇಲೆ ಮತ್ತಷ್ಟು ಸಿಟ್ಟು ಬಂದಿತು ಹನುಮನಿಗೆ. ಕೂಡಲೇ ಹನುಮನು ಸಿಟ್ಟು ತಡೆಯಲಾರದೇ ತನ್ನ ಬಾಲದಿಂದ ಶನಿದೇವನನ್ನು ಬಿಗಿಯಾಗಿ ಸುತ್ತಿದನು. ನಂತರ ಶನಿದೇವನನ್ನು ಬಾಲದಿಂದ ಅಷ್ಟದಿಕ್ಕುಗಳಲ್ಲೂ ತಿರುವಾಡಿಸಿ ದೂರ ಬಿಸಾಕಿದನು.

ತುಂಬಾ ಮೇಲಿನಿಂದ ಬಿದ್ದುದಕ್ಕೆ ಮೈತುಂಬ ಗಾಯಗಳಾದವು ಶನಿದೇವನಿಗೆ. ತನ್ನ ದೇಹದಲ್ಲೆಲ್ಲಾ ರಕ್ತ ಮತ್ತು ಗಾಯವನ್ನು ನೋಡಿಕೊಂಡು ತಾನು ಮಾಡಿದ ತಪ್ಪಿನ ಅರಿವು ಮಾಡಿಕೊಂಡನು. ಇನ್ನು ಹನುಮನು ನನ್ನನ್ನು ಬಿಡುವುದಿಲ್ಲ ಎಂದು ಮನವರಿಕೆಯಾಯಿತು ಶನಿದೇವರಿಗೆ. ನೋವಿನಲ್ಲೇ ಎದ್ದು ಹನುಮನ ಬಳಿ ಬಂದು ವಿನಮ್ರತೆಯಿಂದ ಕರ ಮುಗಿದು ಬೇಡಿಕೊಂಡು ತನ್ನನ್ನು ಇಷ್ಟಕ್ಕೆ ಬಿಟ್ಟು ಬಿಡು ಎಂದು ಭಿನ್ನವಿಸಿಕೊಂಡನು.

ಮಾಡಿದ ತಪ್ಪನ್ನು ಒಪ್ಪಿಕೊಂಡು ಮನ್ನಿಸೆಂದು ಕೇಳಿಕೊಂಡ ಶನಿದೇವನ ಮುಗ್ಧತೆಗೆ ಹನುಮನು ಪ್ರಸನ್ನನಾದನು. ಕ್ರಮೇಣ ಸಿಟ್ಟನ್ನು ಹತೋಟಿಗೆ ತಂದುಕೊಂಡನು. ಅಲ್ಲದೇ ಶನಿದೇವರಿಗೆ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಿರುತ್ತಾರೋ ಅವರನ್ನು ನೀನು ಯಾವತ್ತಿಗೂ ಕಾಡಬಾರದು ಎಂದು ಭಾಷೆ ತೆಗೆದುಕೊಂಡನು. ಇದಕ್ಕೊಪ್ಪಿದ ಶನಿದೇವರು, ನಿನ್ನನ್ನು ಶನಿವಾರ ಪೂಜಿಸಿದರೆ ಅವರಿಗೆ ನಾನು ಯಾವುದೇ ರೀತಿಯಲ್ಲಿ ತೊಂದರೆ ಮಾಡುವುದಿಲ್ಲ. ಈಗ ನನ್ನ ನೋವನ್ನು ಕಡಿಮೆ ಮಾಡಿಕೊಳ್ಳುವ ಪರಿ ಹೇಗೆಂದು ಗಾಯಗೊಂಡ ಶನಿದೇವರು ಕೇಳಿಕೊಂಡನು.

ಆಗ ಹನುಮನು, ಶನಿದೇವರ ಮೈಗೆಲ್ಲಾ ಎಳ್ಳೆಣ್ಣೆ ಹಚ್ಚಿ ಮೇಲಿಂದ ಬಿದ್ದು ಆಗಿರುವ ಗಾಯವನ್ನು ವಾಸಿ ಮಾಡಿದನು. ಇದರಿಂದ ನೋವಿನಿಂದ ನರಳುತ್ತಿದ್ದ ಶನಿದೇವರಿಗೆ ಸಂತೃಪ್ತವಾಗಿ ತುಂಬಾ ಆನಂದವಾಯಿತು. ಗಾಯದಿಂದ ನೊಂದಿದ್ದ ದೇಹ ಮತ್ತೆ ಹುರುಪಾಯಿತು. ಇದು ಶನಿದೇವರ ಎಳ್ಳೆಣ್ಣೆ ಅಭಿಷೇಕದ ಕುರಿತು ಪೌರಾಣಿಕ ಕಥೆಯ ಸಂಕ್ಷಿಪ್ತ ಸಾರ. ಆದ್ದರಿಂದ ಶನಿದೇವರಿಗೆ ಇಂದಿಗೂ ಕೂಡ ಎಳ್ಳೆಣ್ಣೆ ಅಭಿಷೇಕ ಮಾಡಿ ಅವನನ್ನು ಆನಂದಗೊಳಿಸುತ್ತಾರೆ.

ಇನ್ನು ಕೆಲ ತಿಂಗಳುಗಳಲ್ಲಿ ಶನಿದೇವರು ತನ್ನ ಶತ್ರು ರಾಶಿಯಾದ ವೃಶ್ಚಿಕಕ್ಕೆ ಪ್ರವೇಶ ಮಾಡುತ್ತಾನೆ. ಆ ಸಂದರ್ಭದಲ್ಲಂತೂ ಕೆಟ್ಟವರಿಗೆ ಹೆಡಮುರಿ ಕಟ್ಟಿ ಬಕಬರಲೆ ಬೀಳುವಂಗೆ ಮಾಡಿ ಶಿಕ್ಷಿಸಿ ಶನಿದೇವರು ಹುರಿಮೀಸೆ ತಿರುವುತ್ತಾನೆ. ದೇವರಿದ್ದಾನೆಯೇ ಎನ್ನುವವರಿಗೆ ಆವಾಗಲೇ ಅರ್ಥವಾಗತ್ತೆ. ಯಾಕೆಂದ್ರೆ ಕೆಟ್ಟವರೆನ್ನುವವರಿಗೆ ಮನುಷ್ಯರಿಂದ ಶಿಕ್ಷೆ ಕೊಡಲು ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ದೇವರೇ ಶಿಕ್ಷೆ ನೀಡುತ್ತಾನೆ ಎಂಬುದು ಚಿಕ್ಕಮಕ್ಕಳಿಗೂ ಗೊತ್ತಿರುವ ವಿಷಯ. ಶಿಕ್ಷೆ ಕೊಡುವ ದೇವರೆಂದರೇನೆ ಶನಿದೇವರು! [ಶನಿ ಬಗ್ಗೆ ತಪ್ಪು ಕಲ್ಪನೆ ಬಿಡಿ]

ಆದ್ದರಿಂದ ಒಳ್ಳೆಯತನ ನಮ್ಮಲ್ಲಿದೆ ಎಂದು ಆತ್ಮವಿಶ್ವಾಸದಿಂದ ಒಪ್ಪಿಕೊಳ್ಳುವವರು ಬಿಂದಾಸ್ ಆಗಿ ಶನಿದೇವರ ಭಯವಿಲ್ಲದೆ ಆರಾಮಾಗಿರಿ. ಎಂದಿನಂತೆ ಪೂಜೆ, ಪುನಸ್ಕಾರಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಆಸ್ತಿಕತೆಯ ಹಾದಿಯಲ್ಲಿ ಬದುಕು ಬಂಗಾರ ಮಾಡಿಕೊಂಡಿರಿ. ಆದರೂ ಕೆಲವರು ವಿಪರೀತ ಆಸ್ತಿಕತೆಯ ಮನೋಭಾವದಿಂದ ಮನೆ ದೇವರನ್ನೇ ಮರೆತಿರುತ್ತಾರೆ. ಹೀಗಾಗಿ "ಊರ ಮಾರಿ ನಂಬಿಕೊಂಡು ಮನೆ ದೇವರನ್ನು ಮರೆಬಾರದು". ಆದ್ದರಿಂದ ಮನೆದೇವರನ್ನೂ ಪೂಜಿಸಲು ಮರೆಯಬಾರದು. [ನಾಸ್ತಿಕರನ್ನೂ ಆಸ್ತಿಕರನ್ನಾಗಿಸುವ ಶನಿದೇವ]

ಇನ್ನು ನಾಸ್ತಿಕತೆಯ ಮನಸ್ಸಿನಿಂದ ಆಸ್ತಿಕರ ಹಾಗೂ ಶನಿದೇವನ ಪ್ರಭಾವ ಪ್ರಶ್ನಿಸಿಸುವವರನ್ನು "ಕೆದರಿ ಕೇರ್ ಹಾಕಿಸಿಕೊಂಡರು" ಎನ್ನಬೇಕಾಗುತ್ತದೆ. ಏಕೆಂದರೆ ಶನಿದೇವರು ಇಂಥವರಿಗೆ ಮೀಸೆ ತಿರುವಿಕೊಂಡು ಬೆನ್ನತ್ತಿದರೆ ಮುಗೀತು ಅವರ ಕಥೆ ಆ ಶಿವನ ಪಾದದಲ್ಲಿರುತ್ತಾರೆ.

"50 ರಿಂದ 70 ವಯಸ್ಸಿನವರಿಗೆ ಸಾಡೇಸಾತಿ ಪ್ರಭಾವ" ಎಂಬುದು ಮುಂದಿನ ಲೇಖನದಲ್ಲಿ (ಒನ್‌ಇಂಡಿಯಾ)

ವಾಸ್ತು ಟಿಪ್ಸ್ : ಮನೆಯಲ್ಲಿ ವಾರಕ್ಕೊಮ್ಮೆಯಾದರೂ ಮಹಾಶಿವನ ಸಂಪ್ರೀತಿಗಾಗಿ ರುದ್ರಪಠಣದ ಕ್ಯಾಸೆಟ್ ಹಚ್ಚಿ ಕೇಳಬೇಕು.

ಶನಿಕೃಪೆಗೆ : ನಾಸ್ತಿಕರ ಸ್ನೇಹವಿದ್ದರೆ ಬಿಡಬೇಕು. ಅವರ ಅರಿಷ್ಟತನ ನಿಮಗೆ ಹತ್ತಬಾರದೆಂದರೆ ಅವರನ್ನು ಹತ್ತಿರವೂ ಕೂಡ ಸೇರಿಸಬಾರದು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+