ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ತಮ್ಮ ಆದೇಶ ತಾವೇ ಉಲ್ಲಂಘಿಸಿದ ಸಿಎಂ ಬೊಮ್ಮಾಯಿ!
ಬೆಂಗಳೂರು, ಆ. 27: "ನಾನು ಎಲ್ಲರಂತಲ್ಲ, ಹಿಂದೆನಾಗಿದೆಯೋ ನಂಗೆ ಗೊತ್ತಿಲ್ಲ. ಆದರೆ ಮುಂದೆ ಆಡಳಿತದಲ್ಲಿ ಸುಧಾರಣೆ ಅತ್ಯಗತ್ಯ. ನಾವು ಮಾಡುವ ಆದೇಶಗಳ ಪಾಲನೆ ಆಗಬೇಕು. ಯಾವುದೇ ಕಾರಣಕ್ಕೂ ಅಸಡ್ಡೆಯನ್ನು ನಾನು ಸಹಿಸುವುದಿಲ್ಲ. ಸರ್ಕಾರದ ಆದೇಶಗಳನ್ನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಹೀಗಾಗಿ ಈಗಿನಿಂದಲೇ ಬದಲಾಗಿ" ಎಂದು ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಆದೇಶ ಮಾಡುತ್ತಾರೆ.
ಗುರುವಾರ ದೆಹಲಿಯಲ್ಲಿ ನಡೆದ ಕಾನೂನು ತಜ್ಞರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆಗಿದ್ದರು. ರಾಜ್ಯದ ಪರವಾಗಿ ವಕಾಲತ್ತು ವಹಿಸುವ ವಕೀಲರ ತಂಡಕ್ಕೆ ಬೊಮ್ಮಾಯಿ ಖಡಕ್ ಸಂದೇಶ ನೀಡಿದ್ದರು. "ನಾನು ಖಡಕ್ ಮುಖ್ಯಮಂತ್ರಿ. ಬೇರೆ ಮುಖ್ಯಮಂತ್ರಿಗಳಂತೆ ನಾನಲ್ಲ" ಎಂದಿದ್ದರು. ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಒಂದಿಲ್ಲೊಂದು 'ಜನಪ್ರೀಯ' ಹೊಸ ಆದೇಶಗಳ ಸುತ್ತೋಲೆ ಹೊರಡಿಸುತ್ತಿದ್ದಾರೆ.
ಸಿಎಂ ಬೊಮ್ಮಾಯಿ ಹೊರಡಿಸುತ್ತಿರುವ ಹೊಸ ಆದೇಶಗಳಿಗೆ ಜನ-ಸಾಮಾನ್ಯರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ತಾವೇ ಹೊರಡಿಸಿರುವ ಆದೇಶಗಳನ್ನು ಸ್ವತಃ ತಾವೇ ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಇದೀಗ ಎದುರಾಗಿದೆ. ಅಷ್ಟಕ್ಕೂ ಅವರು ಹೊರಡಿಸಿರುವ ಯಾವ ಆದೇಶವನ್ನು ಅವರೇ ಉಲ್ಲಂಘನೆ ಮಾಡಿದ್ದಾರೆ?

ಆದೇಶ ಉಲ್ಲಂಘನೆ ಪೊಲೀಸರ ಮೇಲೆ ಬೊಮ್ಮಾಯಿ ಗರಂ!
ಇತ್ತೀಚೆಗೆ ವಿಜಯಪುರಕ್ಕೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆ ಕಾರಣ ಶಿಷ್ಟಾಚಾರ ಪಾಲಿಸುವ ಕುರಿತು ಸಿಎಂ ಬೊಮ್ಮಾಯಿ ಹೊರಡಿಸಿದ್ದ ಆದೇಶವನ್ನು ವಿಜಯಪುರ ಜಿಲ್ಲಾ ಪೊಲೀಸರು ಉಲ್ಲಂಘನೆ ಮಾಡಿದ್ದು. ದಿನಕ್ಕೆ ಒಂದು ಬಾರಿ ಮಾತ್ರ ಸಿಎಂಗೆ ಪೊಲೀಸ್ ಗೌರವ ರಕ್ಷೆ ಕೊಡಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. ಆದರೆ ವಿಜಯಪುರ ಪೊಲೀಸರು ಎರಡನೇ ಬಾರಿ ಪೊಲೀಸ್ ಗೌರವ ರಕ್ಷೆ ಕೊಟ್ಟಿದ್ದರು. ಅದಕ್ಕೆ ಸಿಎಂ ಬೊಮ್ಮಾಯಿ ಗರಂ ಆಗಿದ್ದರು.
|
ಸಿಎಂ ಕ್ಷಮೆ ಕೇಳಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ!
ವಿಜಯಪುರ ಪೊಲೀಸರ ನಡೆಯಿಂದ ಸಿಎಂ ಬೊಮ್ಮಾಯಿ ಅಲ್ಲಿನ ಎಸ್ಪಿ ಎಚ್. ಡಿ. ಆನಂದ ಕುಮಾರರನ್ನು ತರಾಟೆ ತೆಗೆದುಕೊಂಡಿದ್ದರು. "ನಾನು ಈಗಾಗಲೇ ಆದೇಶ ಮಾಡಿದ್ದೇನೆ. ದಿನಕ್ಕೆ ಒಂದು ಬಾರಿ ಮಾತ್ರ ಪೊಲೀಸ್ ಗೌರ ವಂದನೆ ಸಾಕು. ಮತ್ತೆ ಅದನ್ನೇ ಮಾಡುತ್ತಿದ್ದೀರಿ ಯಾಕೆ?" ಎಂದು ಉತ್ತರ ವಲಯ ಐಜಿಪಿ ಎನ್. ಸತೀಶ ಕುಮಾರರನ್ನು ಖಾರವಾಗಿಯೇ ಪ್ರಶ್ನಿಸಿದ್ದರು. ತಮ್ಮ ಆದೇಶ ಉಲ್ಲಂಘಟನೆ ಮಾಡಿದ್ದು ಸಿಎಂ ಬೊಮ್ಮಾಯಿ ಗರಂ ಆಗಲು ಕಾರಣವಾಗಿತ್ತು. ಅದಕ್ಕೂ ಮೊದಲು ಮತ್ತೊಂದು ಜನಪ್ರೀಯ ಸುತ್ತೋಲೆಯನ್ನು ಸಿಎಂ ಬೊಮ್ಮಾಯಿ ಹೊರಡಿಸಿದ್ದರು. ಅದು ಹೀಗಿದೆ.

ಹೂಗುಚ್ಛ ನಿಷೇಧಿಸಿ ಸಿಎಂ ಬೊಮ್ಮಾಯಿ ಆದೇಶ!
ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದರು. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ತಾವು ಮಾಡಿದ್ದ ಆದೇಶದಲ್ಲಿ ಸಿಎಂ ಸೂಚಿಸಿದ್ದರು. ಜೊತೆಗೆ ಇನ್ನು ಮುಂದೆ ಹೂ ಗುಚ್ಚದ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಅದರಂತೆ ಸಿಎಂ ಬಸವರಾಜ ಬೊಮ್ಮಾಯಿ ನಡೆದುಕೊಂಡಿದ್ದರು.

ಉಪ ರಾಷ್ಟ್ರಪತಿಗಳ ಎದುರು ಆದೇಶ ಪಾಲನೆ ಮಾಡಿದ್ದ ಸಿಎಂ!
ಐದು ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ದೆಹಲಿಗೆ ಹಿಂದಿರುಗುವಾದ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೀಳ್ಕೊಟ್ಟಿದ್ದರು. ಆಗ ಪ್ರೈಡ್ ಆಂಡ್ ಪ್ರಿಜುಡಿಸ್ ಎಂಬ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ನೀಡಿ ಬೀಳ್ಕೊಟ್ಟಿದ್ದರು. ಹೂಗುಚ್ಚದ ಬದಲಿಗೆ ಪುಸ್ತಕ ಕೊಡುವ ಮೂಲಕ ತಾವು ಮಾಡಿದ್ದ ಆದೇಶವನ್ನು ಪ್ರದರ್ಶನ ಮಾಡಿ ಆದರ್ಶಪ್ರಾಯರಾಗಿದ್ದರು.

ತಮ್ಮ ಆದೇಶ ತಾವೇ ಪಾಲನೆ ಮಾಡಿದ್ದ ಸಿಎಂ ಬೊಮ್ಮಾಯಿ!
ಆ ಬಳಿಕ ಚೆನ್ನೈನಲ್ಲಿರುವ ರಿಪಬ್ಲಿಕ್ ಆಫ್ ಕೊರಿಯಾದ ಕಾನ್ಸಲ್ ಜನರಲ್ ಯಂಗ್ ಸ್ಯುಪ್ ಕ್ವನ್ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆಗಲೂ ಕೂಡ ಸಿಎಂ ಬೊಮ್ಮಾಯಿ ಪುಸ್ತಕದ ಕಾಣಿಕೆಯನ್ನು ಯಂಗ್ ಸ್ಯುಪ್ ಕ್ವನ್ ಅವರಿಗೆ ಕೊಟ್ಟಿದ್ದರು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಸುತ್ತೋಲೆ ಮೂಲಕ ಆದೇಶಗಳನ್ನು ಹೊರಡಿಸಿಸುವುದು ಮಾತ್ರವಲ್ಲ, ತಮ್ಮ ಆದೇಶ ತಾವೇ ಪಾಲನೆ ಮಾಡುವ ಮೂಲಕ ಮಾದರಿ ಆಗಿದ್ದಾರೆ ಎಂಬ ಮೆಚ್ಚುಗೆ ಮಾತುಗಳು ಕೇಳು ಬಂದಿದ್ದವು. ಆದರೆ ದೆಹಲಿಗೆ ತೆರಳುತ್ತಿದ್ದಂತೆಯೆ ತಮ್ಮ ಆದೇಶವನ್ನು ತಾವೇ ಉಲ್ಲಂಘನೆ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಜನರ ಟೀಕೆಗೆ ಗುರಿಯಾಗಿದ್ದಾರೆ.

ದೆಹಲಿಗೆ ಹೋಗಿ ತಮ್ಮ ಆದೇಶ ತಾವೇ ಉಲ್ಲಂಘಿಸಿದ ಬೊಮ್ಮಾಯಿ!
ರಾಷ್ಟ್ರೀಯ-ಅಂತಾರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದಾಗ ತಾವು ಮಾಡಿದ್ದ ಆದೇಶ ಪ್ರದರ್ಶನ ಮಾಡುವ ಮೂಲಕ ನಾಡಿನ ಜನರ ಮೆಚ್ಚುಗೆ ಗಳಿಸಿದ್ದರು. ಆದರೆ ಎರಡು ದಿನಗಳ ದೆಹಲಿ ಭೇಟಿಗೆ ತೆರಳಿದ್ದ ಸಿಎಂ ಬಸವರಾಜ ಬೊಮ್ಮಾಯಿ ತಾವು ಮಾಡಿದ್ದ ಆದೇಶವನ್ನು ರಾಜ್ಯಕ್ಕೆ ಸೀಮಿತ ಮಾಡಿದ್ದಾರೆ. ದೆಹಲಿಯಲ್ಲಿ ಕೇಂದ್ರ ನಾಯಕರನ್ನು, ಸಚಿವರನ್ನು ಭೇಟಿಯಾಗಲು ಹೋದಾಗ ಹೂಗುಚ್ಚ ತೆಗೆದುಕೊಂಡು ಹೋಗಿ ಕೊಡುವ ಮೂಲಕ ಜನರಲ್ಲಿ ದ್ವಂದ್ವ ಮೂಡಿಸಿದ್ದಾರೆ.

ಹೈಕಮಾಂಡ್ ನಾಯಕರೆದುರು ಆದೇಶ ಉಲ್ಲಂಘನೆ!
ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಗಜೇಂದ್ರ ಸಿಂಗ್ ಶೇಖಾವತ್, ಮನಸುಖ್ ಮಾಂಡವಿಯಾ, ಧರ್ಮೇಂದ್ರ ಪ್ರಧಾನ್, ಪಿಯೂಶ್ ಗೋಯಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೀಗೆ ಎಲ್ಲರನ್ನು ಭೇಟಿ ಮಾಡಿದಾಗಲೂ ಹೂಗುಚ್ಚ ನೀಡಿದ್ದಾರೆ. ಆ ಮೂಲಕ ತಾವು ಮಾಡಿದ್ದ ಆದೇಶವನ್ನು ತಾವೇ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಹೈಕಮಾಂಡ್ ನಾಯಕರ ಎದುರು ಸಿಎಂ ಬೊಮ್ಮಾಯಿ ತಮ್ಮ ಆದೇಶ ಬಿಟ್ಟುಕೊಟ್ಟರಾ? ಅದಕ್ಕೆ ಕಾರಣವಾದರೂ ಏನು? ಎಂದು ಜನ ಸಾಮಾನ್ಯರು ಚರ್ಚೆ ಮಾಡುವಂತಾಗಿದೆ.












Click it and Unblock the Notifications