1962ರ ಚೀನಾ-ಭಾರತ ಯುದ್ಧ: ಗಡಿಯಲ್ಲಿ ರಸ್ತೆ ನಿರ್ಮಿಸದಿದ್ದರೆ ಅಪಾಯ!
ನವದೆಹಲಿ, ನವೆಂಬರ್ 10: ಭಾರತ ಚೀನಾ ನಡುವಿನ ಟಿಬೆಟ್ ಗಡಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ನಿರ್ಮಾಣ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಚೀನಾದಿಂದ ನಡೆಸಲಾಗುತ್ತಿರುವ ಕಾಮಗಾರಿಗಳ ಮೇಲೆ ಲಕ್ಷ್ಯವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಕಳೆದ 1962ರ ಭಾರತ-ಚೀನಾ ನಡುವಿನ ಯುದ್ಧದ ಪರಿಸ್ಥಿತಿಯು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯ ದೊಡ್ಡ ವಾಹನಗಳ ಸಂಚಾರಕ್ಕೆ ಅಗತ್ಯವಿರುವ ರಸ್ತೆಗಳ ನಿರ್ಮಾಣ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ನೂತನ ಭೂ ಗಡಿ ಕಾನೂನನ್ನು ಅಂಗೀಕರಿಸಿದ ಚೀನಾ
ಭಾರತೀಯ ಸೇನೆಯು ಎಲ್ಲ ರೀತಿಯ ತುರ್ತು ಸಂದರ್ಭಗಳನ್ನು ಎದುರಿಸುವುದಕ್ಕೆ ಸದಾ ಸನ್ನದ್ಧವಾಗಿರಬೇಕು. ಈ ಹಿಂದೆ 1962ರಲ್ಲಿ ನಡೆದುಕೊಂಡಂತೆ ಮೈಮರೆತು ಕುಳಿತುಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಎದುರು ಹೇಳಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ಸೂರ್ಯಕಾಂತ್, ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠದ ಎದುರು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದರು. ಭಾರತ-ಚೀನಾ ನಡುವಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಭಾರತೀಯ ಸೇನೆಗೆ ಉತ್ತಮ ರಸ್ತೆಗಳ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದು ವಾದಿಸಿದರು.
ಒಂದು ಕಡೆಯಲ್ಲಿ ರಸ್ತೆ, ರೈಲ್ವೆ, ಹೆಲಿಪ್ಯಾಡ್ ನಿರ್ಮಾಣ
"ಚೀನಾ ಭಾಗದಲ್ಲಿ ಒಂದು ಕಡೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ನಿರ್ಮಾಣ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಚೀನಾ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದ್ದು, ಏರ್ಸ್ಟ್ರಿಪ್ಗಳು, ಹೆಲಿಪ್ಯಾಡ್ಗಳು, ರಸ್ತೆಗಳು, ರೈಲ್ವೆ ಲೈನ್ ನೆಟ್ವರ್ಕ್ಗಳನ್ನು ನಿರ್ಮಿಸಿದ್ದಾರೆ. ಅವುಗಳು ಅಲ್ಲಿಯೇ ಶಾಶ್ವತವಾಗಿ ಇರುತ್ತವೆ ಎಂಬ ಊಹೆಯ ಮೇಲೆ ಮುಂದುವರಿಸಲಾಗುತ್ತಿದೆ," ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹೇಳಿದ್ದಾರೆ.
ಭಾರತ-ಚೀನಾ ಗಡಿ ಬಿಕ್ಕಟ್ಟು: ಪ್ರತಿಬಾರಿಯೂ ಅನುಕೂಲಕರ ಫಲಿತಾಂಶ ಸಿಗದು ಎಂದ ಸೇನಾ ಮುಖ್ಯಸ್ಥರು!
ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್ಗೆ ಮಾಹಿತಿ
ರಿಷಿಕೇಶದಿಂದ ಗಂಗೋತ್ರಿ, ರಿಷಿಕೇಶದಿಂದ ಮನ, ತನಕ್ಪುರದಿಂದ ಪಿಥೋರಗಢ್ಗೆ ಚೀನಾದ ಉತ್ತರದ ಗಡಿಗೆ ಹೋಗುವ ಫೀಡರ್ ರಸ್ತೆಗಳು ಡೆಹ್ರಾಡೂನ್ ಮತ್ತು ಮೀರತ್ನಲ್ಲಿರುವ ಸೇನಾ ಶಿಬಿರಗಳನ್ನು ಕ್ಷಿಪಣಿ ಉಡಾವಣೆ ಮತ್ತು ಭಾರೀ ಫಿರಂಗಿಗಳ ನೆಲೆಗಳನ್ನು ಸಂಪರ್ಕಿಸುತ್ತವೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ವೇಳೆ ರಾಷ್ಟ್ರದ ರಕ್ಷಣೆ ಮತ್ತು ವಾತಾವರಣದ ರಕ್ಷಣೆಯೊಂದಿಗೆ ಎಲ್ಲಾ ಅಭಿವೃದ್ಧಿಯು ಸಮರ್ಥನೀಯ ಮತ್ತು ಸಮತೋಲಿತವಾಗಿರಬೇಕು. ನ್ಯಾಯಾಲಯವು ದೇಶದ ರಕ್ಷಣಾ ಅಗತ್ಯಗಳನ್ನು ಎರಡನೇ ಬಾರಿಗೆ ಊಹಿಸಲು ಸಾಧ್ಯವಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಗಮನಿಸಿದೆ.
ಈ ಹಿಂದಿನ ಆದೇಶ ಮಾರ್ಪಾಡಿಗೆ ಅಟಾರ್ನಿ ಜನರಲ್ ಮನವಿ
ಚೀನಾ ಗಡಿಯವರೆಗೆ ಹೋಗುವ ಮಹತ್ವಾಕಾಂಕ್ಷೆಯ ಚಾರ್ಧಾಮ್ ಹೆದ್ದಾರಿ ಯೋಜನೆಯಲ್ಲಿ 2018ರ ಸುತ್ತೋಲೆಯ 5.5 ಮೀಟರ್ ಕ್ಯಾರೇಜ್ವೇ ಅಗಲವನ್ನು ಅನುಸರಿಸಲಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು(MoRTH) ಸೆಪ್ಟೆಂಬರ್ 8, 2020ರ ಆದೇಶವನ್ನು ಮಾರ್ಪಡಿಸುವಂತೆ ಸರ್ಕಾರದ ಪರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಕೋರಿದ್ದಾರೆ. ಆಯಕಟ್ಟಿನ 900-ಕಿಮೀ ಯೋಜನೆಯು ಉತ್ತರಾಖಂಡದ ನಾಲ್ಕು ಪವಿತ್ರ ಪಟ್ಟಣಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಗಳಿಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಗಡಿಯಲ್ಲಿ ಭಾರತ ಸೇನೆ ಎದುರಿಸುವ ಸಮಸ್ಯೆಗಳೇನು?
ಭಾರತೀಯ ಸೇನೆಯು ಟ್ಯಾಂಕರ್, ಭಾರಿ ಫಿರಂಗಿ, ಸೇನೆ ಮತ್ತು ಯಂತ್ರೋಪಕರಣಗಳನ್ನು ಗಡಿ ಪ್ರದೇಶಕ್ಕೆ ಸ್ಥಳಾಂತರಿಸಬೇಕಾಗುತ್ತದೆ. 1962ರಲ್ಲಿ ಚೀನಾದ ಗಡಿಯವರೆಗೂ ಕಾಲ್ನಡಿಗೆಯಲ್ಲೇ ಸಾಗಿ ಪಡಿತರವನ್ನು ಸರಬರಾಜು ಮಾಡುವಂತಹ ಪರಿಸ್ಥಿತಿಯನ್ನು ಎದುರಿಸಲಾಗಿತ್ತು. ಇಂದು ರಸ್ತೆಯು ದ್ವಿಪಥವಾಗದಿದ್ದರೆ ಅಲ್ಲಿ ರಸ್ತೆಯನ್ನು ಹೊಂದಿರುವ ಉದ್ದೇಶವೇ ವ್ಯರ್ಥವಾಗುತ್ತದೆ. ಆದ್ದರಿಂದ ಡಬಲ್ ಲೇನಿಂಗ್ ಅನ್ನು 7 ಮೀಟರ್ ಅಗಲದ ರಸ್ತೆಗೆ ಅನುಮತಿ ನೀಡಬೇಕು," ಎಂದು ಕೆ.ಕೆ ವೇಣುಗೋಪಾಲ್ ಹೇಳಿದ್ದಾರೆ.
ಗಡಿಯಲ್ಲಿ ಶತ್ರುವಿನ ಬಗ್ಗೆ ನಿರ್ಲಕ್ಷ್ಯ ವಹಿಸಲಾಗದು
ಕಳೆದ 1962ರ ಭಾರತ ಮತ್ತು ಚೀನಾ ಯುದ್ಧದ ನಂತರ ಮೂಲಸ್ವರೂಪದಿಂದ ಯಾವುದೇ ರೀತಿ ಬದಲಾವಣೆಗಳನ್ನು ಕಾಣದ ಗಡಿಯಲ್ಲಿ ಸೇನೆಗೆ ಉತ್ತಮ ರಸ್ತೆಗಳ ಅಗತ್ಯವಿದೆ. ಎರಡು ರಾಷ್ಟ್ರಗಳ ಗಡಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ ಶತ್ರುವಿದೆ ಎಂಬ ಅಂಶವನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗ್ರೂನ್ ಡೂನ್ ಎನ್ಜಿಒ ಸಿಟಿಜನ್ಸ್ ಪರ ಹಾಜರಾದ ಹಿರಿಯ ವಕೀಲ ಕೊಲಿನ್ ಗೊನ್ಸಾಲ್ವಿಸ್ ಅವರು, ಗಡಿಯಲ್ಲಿ ವಿಶಾಲವಾದ ರಸ್ತೆಗಳ ಅಗತ್ಯವಿಲ್ಲ. ಸೈನ್ಯವನ್ನು ವಿಮಾನದಲ್ಲಿ ತರಬಹುದು ಎಂದು ಹಿಂದಿನ ಸೇನಾ ಮುಖ್ಯಸ್ಥರು ಹೇಳಿರುವ ಬಗ್ಗೆ ಉಲ್ಲೇಖಿಸಿದರು. ಈ ವೇಳೆ ಪೀಠವು ಹೇಳಿಕೆ ಸಂಪೂರ್ಣವಾಗಿ ಸರಿಯಾಗುವುದಿಲ್ಲ ಎಂದು ತಿಳಿಸಿದೆ.
ಗಡಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ
ಹಿಮಾಲಯದಲ್ಲಿ ಇರುವ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಚಂಡೀಗಢದಿಂದ ಗಡಿ ಪ್ರದೇಶಕ್ಕೆ ಒಂದೇ ಬಾರಿ ವಿಮಾನ ಪ್ರಯಾಣದಲ್ಲಿ ಸ್ಥಳಾಂತರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅವರು ನಡುವೆ ಒಗ್ಗಿಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಆಟ್ರಿಷನ್ ದರವು ತುಂಬಾ ಹೆಚ್ಚಾಗಿರುತ್ತದೆ. ನಾವು C130 ಹರ್ಕ್ಯುಲಸ್ನಂತಹ ಭಾರೀ ಸಾರಿಗೆ ವಿಮಾನಗಳನ್ನು ಹೊಂದಬಹುದು, ಆದರೆ ಸೈನ್ಯವನ್ನು ಸಜ್ಜುಗೊಳಿಸಲು ಇನ್ನೂ ಸಮಯ ಬೇಕಾಗುತ್ತದೆ. ಟ್ರೆಕ್ಕಿಂಗ್ ಮಾಡುವ ಜನರು ಸಹ ಆ ಪರ್ವತಗಳಿಗೆ ಹೋಗುವ ಮೊದಲು ಒಗ್ಗಿಕೊಳ್ಳಲು ಹೋಗಬೇಕೆಂದು ಕೇಳಲಾಗುತ್ತದೆ," ಎಂದು ಪೀಠ ಹೇಳಿದೆ.
ಭಾರತೀಯ ಸೇನೆಯು ತನ್ನ ಟಟ್ರಾ ಟ್ರಕ್ಗಳು ಮತ್ತು ಇತರ ಭಾರೀ ಯಂತ್ರೋಪಕರಣಗಳನ್ನು ಸ್ಥಳಾಂತರಿಸುವ ಅಗತ್ಯವಿದೆ. ನಮ್ಮ ಸೇನೆಯು ಚೀನಾ ಗಡಿಯವರೆಗೆ ಹೋಗುವ ಅಗತ್ಯವಿರುವುದಿಲ್ಲ. ಈ ಕಾರ್ಯತಂತ್ರದ ಫೀಡರ್ ರಸ್ತೆಗಳು 1962 ರಿಂದ ಯಾವುದೇ ಬದಲಾವಣೆಗಳು ನಡೆದಿಲ್ಲ ಎಂಬ ಅಂಶವನ್ನು ಗಮನಿಸಬೇಕಾಗಿದೆ.
3 ತಿಂಗಳಿನಲ್ಲೇ ರಸ್ತೆಗಳು ಕುಸಿದು ಹಾಳಾಗುತ್ತವೆ
ಹಿಮಾಲಯ ಪ್ರದೇಶದಲ್ಲಿ ಇಂತಹ ರಸ್ತೆಗಳ ನಿರ್ಮಾಣದ ಪರಿಣಾಮದಿಂದ ವಿಶ್ವದ ಅತ್ಯಂತ ಕಿರಿಯ ಪರ್ವತಗಳಲ್ಲಿ ಒಂದಾಗಿರುವ ಈ ಪ್ರದೇಶವನ್ನು ಅಸ್ಥಿರಗೊಳಿಸುತ್ತದೆ ಎಂದು ಗೊನ್ಸಾಲ್ವೆಸ್ ಹೇಳಿದ್ದಾರೆ. ಪರ್ವತ ಸಾಲಿನಲ್ಲಿ ನಿರ್ಮಾಣ ಆಗುತ್ತಿರುವ ಈ ರಸ್ತೆಗಳ ಸ್ಥಿತಿ ಕೇವಲ ಮೂರು ತಿಂಗಳ ಮಾತ್ರ ಸುಸ್ಥಿರವಾಗಿರುತ್ತವೆ. ಮಳೆಗಾಲದಲ್ಲಿ ರಸ್ತೆಗಳು ಸಂಪೂರ್ಣ ಕುಸಿಯಲಿದ್ದು, ಏನೂ ಉಳಿಯುವುದಿಲ್ಲ ಎಂದು ಅವರು ಹೇಳಿದರು.
ಹಿಮಾಲಯದಲ್ಲಿ ಭಯ ಹುಟ್ಟಿಸಿದ ರಸ್ತೆ ನಿರ್ಮಾಣ ಕಾರ್ಯ
"ಹಿಮಾಲಯದ ಮೇಲೆ ಮತ್ತು ಕೆಳಗೆ SUV ಗಳು ಚಲಿಸುವ ರಸ್ತೆಗಳನ್ನು ನಿರ್ಮಿಸಲು ಪರ್ವತಗಳನ್ನು ಒಡೆದು ಹಾಕಲಾಗಿತ್ತು. ಕಳೆದ 2013ರಲ್ಲಿ ಕೇದಾರನಾಥ ಪ್ರವಾಹದ ದುರಂತ ಕಂಡ ಉತ್ತರಾಖಂಡದ ಜನರು ಈಗ ಈ ರಸ್ತೆಗಳನ್ನು ನಿರ್ಮಿಸಲು ಮಾಡುವ ಸ್ಫೋಟದಿಂದಾಗಿ ನಿರಂತರ ಭಯದಲ್ಲಿದ್ದಾರೆ. ಈ ವಾಹನಗಳಿಂದ ಹೊರಸೂಸುವ ಕಪ್ಪು ಮಸಿಯು ಹಿಮನದಿಗಳ ಮೇಲೆ ಅಂಟಿಕೊಳ್ಳುತ್ತದೆ. ಅದು ಶಾಖವನ್ನು ಹೀರಿಕೊಳ್ಳುವ ಮೂಲಕ ಕರಗುತ್ತಿದೆ," ಎಂದು ಹೇಳಿದ ಅವರು ಭೂಕುಸಿತದ ವೀಡಿಯೊ ಕ್ಲಿಪ್ಗಳನ್ನು ತೋರಿಸಿದರು.
ವೇಣುಗೋಪಾಲ್ ಗೊನ್ಸಾಲ್ವಿಸ್ ಮಧ್ಯಪ್ರವೇಶಿಸಿ, 2020ರ ಸೆಪ್ಟೆಂಬರ್ 8 ರ ಆದೇಶದಿಂದ ರಸ್ತೆ ನಿರ್ಮಾಣ ಕಾರ್ಯವು ಸ್ಥಗಿತಗೊಂಡಿದೆ. ಯಾವುದೇ ನಿರ್ವಹಣಾ ಕಾರ್ಯವನ್ನು ಮಾಡಲಾಗಲಿಲ್ಲ, ಇದು ಭೂಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದರು. ಹಿಮ ಕರಗುವಿಕೆಗೆ ಕೇವಲ ಕಪ್ಪು ಮಸಿ ಮಾತ್ರವಲ್ಲದೆ ಬೇರೆ ಬೇರೆ ಕಾರಣಗಳಿವೆ ಎಂದು ಪೀಠ ಹೇಳಿದೆ.
ಈ ಹಿಂದಿನ ಆದೇಶದ ಬಗ್ಗೆ ವಿಚಾರಣೆ ನಡೆಸುತ್ತಿರುವ ಕೋರ್ಟ್
ಚಾರ್ಧಾಮ್ ಹೆದ್ದಾರಿ ಯೋಜನೆಯಲ್ಲಿ 2018ರ ಸುತ್ತೋಲೆ 5.5 ಮೀಟರ್ ಕ್ಯಾರೇಜ್ವೇ ಅಗಲವನ್ನು ಅನುಸರಿಸಲು MoRTH ಅನ್ನು ಕೇಳಿರುವ ಸೆಪ್ಟೆಂಬರ್ 8, 2020ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಕೇಂದ್ರದ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ರಕ್ಷಣಾ ಸಚಿವಾಲಯವು (MoD) ಸುಪ್ರೀಂ ಕೋರ್ಟ್ನ ಸೆಪ್ಟೆಂಬರ್ 8ರ ಆದೇಶವನ್ನು ಮಾರ್ಪಾಡು ಮಾಡಲು ಕೋರಿದೆ. ತನ್ನ ಅರ್ಜಿಯಲ್ಲಿ, MoD ಈ ಹಿಂದೆ ಸೆಪ್ಟೆಂಬರ್ 8ರ ಆದೇಶವನ್ನು ಮಾರ್ಪಾಡು ಮಾಡಲು ಮತ್ತು ರಿಷಿಕೇಶದಿಂದ ಮನ, ರಿಷಿಕೇಶದಿಂದ ಗಂಗೋತ್ರಿ ಮತ್ತು ತನಕ್ಪುರದಿಂದ ಪಿಥೋರಗಢದವರೆಗಿನ ರಾಷ್ಟ್ರೀಯ ಹೆದ್ದಾರಿಗಳನ್ನು ದ್ವಿಪಥ ಸಂರಚನೆಗೆ ಅಭಿವೃದ್ಧಿಪಡಿಸಬಹುದು ಎಂದು ತಿಳಿಸಲಾಗಿದೆ.