ಅಮಿತ್ ಶಾ ಪೋಟೋ ತೋರಿಸಿ ಕೋಟಿ ಗಳಿಸಿದ್ದ "ಕಿಲಾಡಿ ರಾಜ" ಸೆರೆ
ಬೆಂಗಳೂರು, ಡಿಸೆಂಬರ್ 16: ಕೇಂದ್ರದ ಪ್ರಭಾವಿ ರಾಜಕಾರಣಿಗಳ ಜತೆ ತೆಗೆಸಿಕೊಂಡಿರುವ ಪೋಟೋ ತೋರಿಸಿ ಜನರಿಗೆ ಟೋಪಿ ಹಾಕುತ್ತಿದ್ದ ಕಿಲಾಡಿ ರಾಜ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಟ ರಜನಿಕಾಂತ್ ಇಂತಹ ಪ್ರಭಾವಿಗಳ ಜತೆ ತೆಗೆಸಿಕೊಂಡಿರುವ ಪೋಟೋಗಳೇ ಈತನಿಗೆ ಬಂಡವಾಳ. ಸರ್ಕಾರಿ ಕೆಲಸ ಕೊಡಿಸುತ್ತೇನೆ, ಸರ್ಕಾರಿ ಟೆಂಡರ್ ಕೊಡುತ್ತೇನೆ ಎಂದು ನಂಬಿಸಿ ಹಣ ಪಡೆಯುತ್ತಿದ್ದ. ಈತನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಸಿಕ್ಕಿರುವ ಚೆಕ್ ಗಳ ಮೌಲ್ಯವೇ 91 ಕೋಟಿ ರೂಪಾಯಿ !
ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಒಮ್ಮೆ ನೋಡಿ. ಹಣೆಯಲ್ಲಿ ಕುಂಕುಮ, ಬಿಳಿ ಪಂಚೆ, ಖಾದಿ ಬಟ್ಟೆ, ಥೇಟ್ ಆರ್ಎಸ್ಎಸ್ ನಾಯಕನ ಮುಖವಾಡ. ಅದನ್ನು ಜನ ನಂಬುವಂತಹ ಸಂಪರ್ಕ ಇರುವ ಚಿತ್ರಗಳು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಚಿತ್ರ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಕ್ಕದಲ್ಲೇ ನಿಂತು ಕೈ ಕುಲುಕುತ್ತಿರುವ ಚಿತ್ರ. ಬಸವರಾಜ್ ಯತ್ನಾಳ್ ಅವರ ಜತೆ ಮುಖಾ ಮುಖಿ ಭೇಟಿ, ಧರ್ಮಸ್ಥಳ ಮಂಜುನಾಥ್ ಸ್ವಾಮಿ ದೇಗುಲದ ಡಾ. ವೀರೇಂದ್ರ ಹೆಗಡೆ ಅವರ ಸಹೋದರನಂತೆ ಪಕ್ಕದಲ್ಲಿ ನಿಂತು ಕೊಡುತ್ತಿರುವ ಪೋಟೋಗಳು. ಇಷ್ಟೆಲ್ಲಾ ತೋರಿಸಿದರೆ ಈ ವ್ಯಕ್ತಿಯ ಬಗ್ಗೆ ಯಾರಿಗೆ ತಾನೆ ಅಪ ನಂಬಿಕೆ ಮೂಡಲು ಸಾಧ್ಯ.
ಅಮೆರಿಕನ್ ಜಾಕ್ಪಾಟ್ನಲ್ಲಿ 520 ಮಿಲಿಯನ್ ಡಾಲರ್ ಗೆಲ್ಲಲು ಅವಕಾಶ
ಯುವರಾಜ ಅಲ್ಲ ಕಿಲಾಡಿ ರಾಜ:
ಈ ವ್ಯಕ್ತಿಯ ಹೆಸರು ಯುವರಾಜ. ನಾಗರಭಾವಿಯಲ್ಲಿ ವಾಸವಾಗಿದ್ದಾರೆ. ಆರ್ಎಸ್ಎಸ್ ಮುಖಂಡನಂತೆ ಗೆಟಪ್ ಮಾಡಿಕೊಂಡು ಓಡಾತ್ತಿದ್ದ ಯುವರಾಜ ಕೆಎಸ್ ಆರ್ಟಿಸಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವುದಾಗಿ ನಂಬಿಸಿ ಒಂದು ಕೋಟಿ ರೂಪಾಯಿ ಪಡೆದು ಬೆತ್ತಲಾಗಿದ್ದಾನೆ. ಈಮೂಲಕ ರಾಜ್ಯಕ್ಕೆ ಇದೇ ಮೊದಲ ಬಾರಿ ಪರಿಚಯವಾಗಿದ್ದಾರೆ. ದೆಹಲಿಗೆ ವಿಮಾನದಲ್ಲಿ ಹೋಗುವಾಗ ಪರಿಚಯವಾದ ಉದ್ಯಮಿ ಸುಧೀಂದ್ರರೆಡ್ಡಿ ಎಂಬುವರಿಗೆ ಕೆಎಸ್ ಆರ್ಟಿಸಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ಸುಧೀಂದ್ರರೆಡ್ಡಿ ಒಂದು ಕೋಟಿ ರೂಪಾಯಿ ನೀಡಿದ್ದರು. ಆದರೆ, ಕೆಎಸ್ಆರ್ಟಿಸಿಅಧ್ಯಕ್ಷ ಪೋಸ್ಟ್ ಎಲ್ಲಿಂದ ಸಿಗಬೇಕು. ಸಿಕ್ಕಿಲ್ಲ, ನಿಮಗೆ ಬೇರೆ ನಿಗಮದ ಅಧ್ಯಕ್ಷ ಮಾಡುವುದಾಗಿ ಯುವರಾಜ ಸುಳ್ಳು ಹೇಳಿ ಕೆಲವು ದಿನ ಕಾಲ ತಳ್ಳಿದ್ದಾರೆ. ಅಂತಿಮವಾಗಿ ಮೋಸ ಹೋಗಿರುವ ಸಂಗತಿ ಅರಿತು ಸುಧೀಂದ್ರರೆಡ್ಡಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಸಿಬಿ ದಾಳಿ:
ಕಿಲಾಡಿ ರಾಜನ ಹಿನ್ನೆಲೆ ಹುಡುಕಿದ ಸಿಸಿಬಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಇಂದು ನಾಗರಭಾವಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಯುವ ರಾಜನ ಅಸಲಿ ಮುಖವಾಡ ಬಯಲಿಗೆ ಬಿದ್ದಿದೆ. ಸುಧೀಂದ್ರ ರೆಡ್ಡಿ ಅವರಿಗೆ ಮಾತ್ರವಲ್ಲ, ಅನೇಕ ಮಂದಿಗೆ ಮೋಸ ಮಾಡಿದ್ದಾರೆ.ಮನೆಯಲ್ಲಿ ಬರೋಬ್ಬರಿ 91 ಕೋಟಿ ಮೌಲ್ಯದ ಚೆಕ್ ಗಳು ಸಿಕ್ಕಿವೆ. ಅವೆಲ್ಲವೂ ಯುವರಾಜ ಹೆಸರಿಗೆ ಬೇರೆ ವ್ಯಕ್ತಿಗಳು ನೀಡಿರುವ ಚೆಕ್ ಗಳು. ಒಂದು ವರ್ಷದಿಂದ ಈಚೆಗೆ ಯುವ ರಾಜನನ್ನು ನಂಬಿ ನಾನಾ ವ್ಯವಹಾರಕ್ಕೆ ಕೊಟ್ಟಿರುವ ಚೆಕ್ ಗಳು. ನಗದು 26 ಲಕ್ಷ ರೂ ಹಾಗೂ ಮಹತ್ವದ ದಾಖಲೆಗಳು ಸಿಕ್ಕಿವೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಆರೋಪಿ ಯುವರಾಜನ್ನು ಬಂಧಿಸಿದ್ದೇವೆ ಎಂದು ಅಪರಾಧ ವಿಭಾಗದ ಡಿಸಿಪಿ ರವಿಕುಮಾರ್ ತಿಳಿಸಿದ್ದಾರೆ.
ಫ್ಲೈಟ್ ನಲ್ಲಿ ಡೀಲ್ :
ನಕಲಿ ಆರ್ಎಸ್ಎಸ್ ಮುಖಂಡ ಯುವರಾಜ ಬೆಂಗಳೂರಿನಿಂದ ದೆಹಲಿಗೆ ಯಾವಾಗಲೂ ವಿಮಾನದಲ್ಲೇ ಪ್ರಯಾಣ ಮಾಡುತ್ತಿದ್ದರು. ಪ್ರಯಾಣದ ವೇಳೆ ಪಕ್ಕದಲ್ಲಿ ಕೂರುವ ವ್ಯಕ್ತಿಗಳನ್ನು ಈತನೇ ಪರಿಚಯ ಮಾಡಿಕೊಳ್ಳುತ್ತಿದ್ದ. ನಾನು ಆರ್ಎಸ್ಎಸ್ ನಾಯಕ. ನನಗೆ ಕೇಂದ್ರ ಸಚಿವರಿಂದ ಹಿಡಿದು ಎಲ್ಲರೂ ಪರಿಚಯವಿದ್ದಾರೆ. ರಾಜ್ಯಗಳ ರಾಜ್ಯಪಾಲರ ಬದಲಾವಣೆ ಹುದ್ದೆಯಿಂದ ಎಲ್ಲವನ್ನೂ ತೀರ್ಮಾನ ಮಾಡುವುದು ನಾನೇ ಎಂದು ಬೂಚಿ ಬಿಡುತ್ತಿದ್ದ. ಯಾರಾದರೂ ಜತೆಗೆ ಬಂದರೆ, ಕೇಂದ್ರ ಬಿಜೆಪಿ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿ ಕೂರಿಸಿ ಒಳಗೆ ಹೋಗಿ ಬರುತ್ತಿದ್ದ ಎನ್ನಲಾಗಿದೆ.
ಇದನ್ನೇ ನಂಬಿ ಎಷ್ಟೋ ಮಂದಿ ಸರ್ಕಾರಿ ಉದ್ಯೋಗ ಕೊಡಿಸುವಂತೆ ಲಕ್ಷ ಲಕ್ಷ ಹಣ ನೀಡಿದ್ದಾರೆ. ನಿಗಮ ಮಂಡಳಿ, ಅಧ್ಯಕ್ಷ ಮಾತ್ರವಲ್ಲ ಸಚಿವರನ್ನಾಗಿ ಮಾಡುವುದಾಗಿ ನಂಬಿಸಿ ಸಾಕಷ್ಟು ಮಂದಿಗೆ ಮೋಸ ಮಾಡಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಚಾಲಕನಿಗೆ ಮೋಸ :
ಯುವರಾಜ ತನ್ನ ಕಾರು ಚಾಲಕ ಉಮೇಶ್ ಹೆಸರಿನಲ್ಲಿ ಆತನಿಗೆ ಗೊತ್ತಿಲ್ಲದೇ ಬ್ಯಾಂಕ್ ಖಾತೆ ತೆಗೆದಿದ್ದ. ಅಲ್ದದೇ ಈ ಖಾತೆಯಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮೊತ್ತ ವಹಿವಾಟು ನಡೆಸಿದ್ದ. ಈ ಬಗ್ಗೆ ಮಾಹಿತಿ ಪಡೆದಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉಮೇಶ್ ಗೆ ನೋಟಿಸ್ ನೀಡಿದ್ದರು. ಈ ಬಗ್ಗೆ ಕೇಳಿದರೆ, ಹತ್ಯೆ ಮಾಡುವುದಾಗಿ ಯುವರಾಜ ಹೆದರಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಗೊತ್ತಿದ್ದು, ಅವರ ನೆರವಿನಿಂದ ಸುಳ್ಳು ಕೇಸು ದಾಖಲಿಸುವುದಾಗಿಯೂ ಹೆದರಿಸಿದ್ದನಂತೆ. ಇಷ್ಟಾಗಿಯೂ ಯುವರಾಜ್ ವಿರುದ್ಧ ಉಮೇಶ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬೆಳವಣಿಗೆ ನಡುವೆ ಉಮೇಶ್ ಮೇಲೆ ಹಲ್ಲೆ ನಡೆಸಿದ್ದ ಯುವರಾಜ್ ಮೇಲೆ ಅನ್ನಪೂರ್ಣೇಶ್ವರಿನಗರ ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ.
ಪೊಲೀಸರಿಗೂ ವಂಚನೆ:
ಆರ್ಎಸ್ಎಸ್ ನಕಲಿ ನಾಯಕನ ನಂಬಿ ಕೆಲವು ಪೊಲೀಸ್ ಅಧಿಕಾರಿಗಳು ಕೂಡ ವರ್ಗಾವಣೆ ಬಯಿಸಿ ಹಣ ಕೊಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಾಕಷ್ಟು ಮಂದಿಗೆ ಕೆಲಸ ಕೊಡಿಸುವುದಾಗಿ, ಟೆಂಡರ್ ಕೊಡಿಸುವುದಾಗಿಯೂ ಮೋಸ ಮಾಡಿದ್ದು, ದಾಖಲೆಗಳು ಲಭ್ಯವಾಗಿವೆ.
ಸಿಸಿಬಿ ದಾಳಿ ಬಳಿಕ ಅನೇಕರು ದೂರು ನೀಡಲು ಮುಂದೆ ಬಂದಿದ್ದು, ಮುಂದಿನ ತನಿಖೆಯಲ್ಲಿ ಮತ್ತಷ್ಟು ಅಕ್ರಮಗಳು ಬಯಲಿಗೆ ಬರಲಿವೆ ಎಂದು ಅಪರಾಧ ವಿಭಾಗದ ಡಿಸಿಪಿ ಕೆ.ಪಿ. ರವಿಕುಮಾರ್ ತಿಳಿಸಿದ್ದಾರೆ.