ಯುಪಿ ಬಿಜೆಪಿ ಸರ್ಕಾರ ಬ್ರಾಹ್ಮಣ ಮತ್ತು ದಲಿತ ವಿರೋಧಿ: ಬಿಎಸ್ಪಿ ನಾಯಕ ಕಿಡಿ
ಲಕ್ನೋ, ಆ.02: ಭಾನುವಾರದಂದು ಬಹುಜನ ಸಮಾಜ ಪಕ್ಷದ ನಾಯಕ ಸತೀಶ್ ಚಂದ್ರ ಮಿಶ್ರಾ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾನ್ಪುರದ ಬಿಕ್ರು ಪ್ರಕರಣದಲ್ಲಿ ಹಲವಾರು "ಮುಗ್ಧ" ಬ್ರಾಹ್ಮಣರ ವಿರುದ್ದ ದೂರು ದಾಖಲು ಮಾಡಲಾಗಿದೆ. ''ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ದಲಿತ ವಿರೋಧಿ ಮಾತ್ರವಲ್ಲದೇ ಬ್ರಾಹ್ಮಣ ವಿರೋಧಿ ಕೂಡಾ ಹೌದು,'' ಎಂದು ಆರೋಪಿಸಿದ್ದಾರೆ.
ದರೋಡೆಕೋರ ವಿಕಾಸ್ ದುಬೆ ಎಂಬಾತನ ಪತ್ನಿ ಖುಷಿ ದುಬೆ ವಿರುದ್ದ "ಅನಗತ್ಯವಾಗಿ" ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದ ಬಿಎಸ್ಪಿ ನಾಯಕ, ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ದ ವಾಕ್ ಪ್ರಹಾರ ನಡೆಸಿದರು.
ಕಳೆದ ವರ್ಷ ಜುಲೈ 3 ರಂದು, ಕಾನ್ಪುರ ಜಿಲ್ಲೆಯ ಬೈಕ್ರು ಗ್ರಾಮದಲ್ಲಿ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿತ್ತು, ಈ ಘಟನೆಯಲ್ಲಿ ಎಂಟು ಪೊಲೀಸರು ಕೊಲ್ಲಲ್ಪಟ್ಟರು. ನಂತರದ ಜುಲೈ 10 ರಂದು, ದರೋಡೆಕೋರನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಕಾನ್ಪುರ ಬಳಿಯ ಭರ್ತಿ ಪ್ರದೇಶದಲ್ಲಿ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಆ ಸಂದರ್ಭದಲ್ಲಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಬೆನ್ನಲ್ಲೇ ಯೋಗಿ ಸರ್ಕಾರದ ವಿರುದ್ದ ಬ್ರಾಹ್ಮಣ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಯೋಗಿ ಆಡಳಿತದಲ್ಲಿ ಬ್ರಾಹ್ಮಣ ಸಮುದಾಯದ ಮೇಲೆ ದೌರ್ಜನ್ಯ ಅಧಿಕವಾಗುತ್ತಿದೆ ಎಂದು ಬ್ರಾಹ್ಮಣ ನಾಯಕರು ಹೇಳಿದ್ದಾರೆ. ಇದನ್ನೇ ರಾಜಕೀಯ ತಂತ್ರವಾಗಿ ಬಳಸಿಕೊಳ್ಳುತ್ತಿರುವ ವಿರೋಧ ಪಕ್ಷಗಳು ಬ್ರಾಹ್ಮಣ ಸಮುದಾಯದ ಸಮಾವೇಶಗಳು, ಸಭೆಗಳನ್ನು ನಡೆಸುತ್ತಿದೆ.
ಯೋಗಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಬಿಎಸ್ಪಿ ನಾಯಕ ಸತೀಶ್ ಚಂದ್ರ ಮಿಶ್ರಾ, ಪ್ರಸ್ತುತ ಬಿಜೆಪಿ ಸರ್ಕಾರವು ಬ್ರಾಹ್ಮಣ ವಿರೋಧಿ ಮತ್ತು ದಲಿತ ವಿರೋಧಿಯಾಗಿದೆ. ಈ ಎರಡೂ ಸಮುದಾಯದ ವಿರುದ್ದ ದೌರ್ಜನ್ಯಗಳು ನಡೆಸಲಾಗುತ್ತಿದೆ ಎಂದು ಪ್ರಬುದ್ಧ ವರ್ಗ ಸಮ್ಮೇಳನದಲ್ಲಿ ಮಿಶ್ರಾ ಆರೋಪ ಮಾಡಿದ್ದಾರೆ.
ಬಿಕ್ರು ಘಟನೆಯಲ್ಲಿ ಅನೇಕ "ಮುಗ್ಧ" ಬ್ರಾಹ್ಮಣರ ವಿರುದ್ದ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ದೂರಿದ ಮಿಶ್ರಾ, "ಅದೇ ಘಟನೆಯಲ್ಲಿ, ಖುಷಿ ದುಬೆರನ್ನು ಅನಗತ್ಯವಾಗಿ ಎಳೆ ತಂದು ಪ್ರಕರಣ ದಾಖಲು ಮಾಡಿದ್ದಾರೆ," ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ನಾಯಕ ಹೇಳಿದರು.
"ಖುಷಿ ದುಬೈರನ್ನು ಸರ್ಕಾರವು ಅನಗತ್ಯವಾಗಿ ಬಂಧಿಸಿದೆ" ಎಂದು ಹೇಳಿದ ಮಿಶ್ರಾ, ಈ ಸಂದರ್ಭದಲ್ಲೇ, "ಬಿಎಸ್ಪಿ ಯಾವಾಗಲೂ ಬ್ರಾಹ್ಮಣರನ್ನು ಬೆಂಬಲಿಸಿದೆ ಮತ್ತು ಪಕ್ಷದಲ್ಲಿ ಬ್ರಾಹ್ಮಣರಿಗೆ ಗೌರವ ನೀಡಲಾಗಿದೆ. ಬ್ರಾಹ್ಮಣರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗಿದೆ,'' ಎಂದರು.
"ಬಿಎಸ್ಪಿ ಅಧಿಕಾರದಲ್ಲಿ ಸಂದರ್ಭದಲ್ಲಿ ಮಥುರಾ-ವೃಂದಾವನ, ವಾರಣಾಸಿ ಮತ್ತು ಅಯೋಧ್ಯಾ ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ," ಎಂದ ಮಿಶ್ರಾ, ಬ್ರಾಹ್ಮಣರು ಬಿಎಸ್ಪಿಯನ್ನು ಬೆಂಬಲಿಸಲು ಒತ್ತಾಯಿಸಿದರು. "ಬ್ರಾಹ್ಮಣರು ಮುಂಬರುವ 2022 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬಿಎಸ್ಪಿ ಜೊತೆಗೆ ಕೈ ಜೋಡಿಸಬೇಕು," ಎಂದು ಮನವಿ ಮಾಡಿದರು.

ಯೋಗಿ ಸರ್ಕಾರದ ವಿರುದ್ದ ಬ್ರಾಹ್ಮಣ ಸಮುದಾಯ ಅಸಮಾಧಾನ
2017 ರಿಂದ, ಬ್ರಾಹ್ಮಣ ಸಮುದಾಯವು ಉತ್ತರಪ್ರದೇಶದಲ್ಲಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ ಹಾಗೂ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಬ್ರಾಹ್ಮಣ ಸಮುದಾಯವು ಹೊರಗುಳಿಯುತ್ತಿದೆ ಎಂಬ ಭಾವನೆಯೂ ಸಮುದಾಯದೊಳಗೆ ಹುಟ್ಟಿಕೊಂಡಿದೆ. ಈ ಸಮುದಾಯದಲ್ಲಿ ಅಸಮಾಧಾನ ಹುಟ್ಟಿಕೊಳ್ಳಲು ಪ್ರಮುಖ ಕಾರಣ ದರೋಡೆಕೋರ ವಿಕಾಸ್ ದುಬೆ ಎನ್ಕೌಂಟರ್ ಆಗಿದೆ. ಹಲವಾರು ಬ್ರಾಹ್ಮಣ ಸಂಘಟನೆಗಳು ಎನ್ಕೌಂಟರ್ ಅನ್ನು ಖಂಡಿಸಿವೆ ಮತ್ತು ಈ ವಿಷಯದಲ್ಲಿ ನ್ಯಾಯಯುತ ವಿಚಾರಣೆಗೆ ಮನವಿ ಮಾಡಿದೆ.
"ಆದಿತ್ಯನಾಥ್ ಸರ್ಕಾರದ ಆಡಳಿತದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 500 ಕ್ಕೂ ಹೆಚ್ಚು ಬ್ರಾಹ್ಮಣರು ಹತರಾಗಿದ್ದಾರೆ," ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ (ರ) ಅಧ್ಯಕ್ಷ ರಾಜೇಂದ್ರ ನಾಥ್ ತ್ರಿಪಾಠಿ ಆರೋಪಿಸಿದ್ದಾರೆ. ಹಿಂದಿನ ಸರ್ಕಾರಗಳಲ್ಲೂ ಬ್ರಾಹ್ಮಣರ ಮೇಲೆ ದೌರ್ಜನ್ಯ ನಡೆದಿತ್ತು. ಆದರೆ "ಈ ಸರ್ಕಾರದ ಅಡಿಯಲ್ಲಿ ಇಂತಹ ಘಟನೆಗಳ ಸಂಖ್ಯೆ ತೀವ್ರತರವಾಗಿ ಹೆಚ್ಚಾಗಿದೆ," ಎಂದು ತ್ರಿಪಾಠಿ ಆರೋಪಿಸಿದ್ದಾರೆ. ಹಿಂದಿನ ಸರ್ಕಾರಗಳಲ್ಲೂ ಬ್ರಾಹ್ಮಣರ ಮೇಲೆ ದೌರ್ಜನ್ಯ ನಡೆದಿತ್ತು. ಆದರೆ "ಈ ಸರ್ಕಾರದ ಅಡಿಯಲ್ಲಿ ಇಂತಹ ಘಟನೆಗಳ ಸಂಖ್ಯೆ ತೀವ್ರತರವಾಗಿ ಹೆಚ್ಚಾಗಿದೆ. ಹಾಗೆಯೇ ಬ್ರಾಹ್ಮಣ ಸಮುದಾಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ದದ ಭುಗಿಳೆದ್ದ ಆಕ್ರೋಶಕ್ಕೆ ಇದು ಮುಖ್ಯ ಕಾರಣವಾಗಿದೆ," ಎಂದು ತ್ರಿಪಾಠಿ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications