ಮಹಿಳಾ ಕಾನ್ಸ್ಟೇಬಲ್ ಆ ಕಷ್ಟ, ಬಹುದಿನಗಳ ಸಮಸ್ಯೆಗೆ ಸಿಕ್ತು ಪರಿಹಾರ!
ಬೆಂಗಳೂರು, ಡಿಸೆಂಬರ್ 18: ಪ್ರತಿಭಟನೆ, ಬಂದ್ ಗೆ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿಗೆ ದೇಹ ಬಾಧೆ ಬಂದರೆ ಕಿಲೋಮೀಟರ್ ಗಟ್ಟಲೇ ಓಡಿ ಹೋಗಬೇಕು ! ತಲೆ ಸುತ್ತು ಬಂದು ಐದು ನಿಮಿಷ ವಿಶ್ರಾಂತಿ ಪಡೆಯಬೇಕಾದರೆ ಅವಕಾಶವಿಲ್ಲ, ಊಟದ ಪೊಟ್ಟಣ ಕೂಡ ಬಿಸಿಲಲ್ಲೇ ನಿಂತು ತಿನ್ನಬೇಕು. ಬೆಂಗಳೂರಿನಲ್ಲಿ ಬಂದೋಬಸ್ತ್ಗೆ ನಿಯೋಜನೆಗೊಳ್ಳುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಎದುರಿಸಲೇಬೇಕಾದ ಸವಾಲು. ಆದರೆ ಇದು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ತೋರಿದ ಧೈರ್ಯದಿಂದ ಈ ಸಮಸ್ಯೆ ದೂರವಾಗಿವೆ !
ಬಂದೋಬಸ್ತ್ ಗೆ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿಗೆ ನೆರವಾಗುವ ಮನೆ ಮಾದರಿ ಸೌಲಭ್ಯ ಇರುವ ಏಳು ಕಂಟೈನರ್ ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣ ಸಂಸ್ಥೆ ನೀಡಿದೆ. ಎಡಿಜಿಪಿ ಭಾಸ್ಕರ್ ರಾವ್ ಲೋಕಾರ್ಪಣೆ ಮಾಡಿದರು@BlrCityPolice @deepolice12 pic.twitter.com/VXz0mvcmSY
— oneindiakannada (@OneindiaKannada) December 18, 2020
ಬೆಂಗಳೂರಿನಲ್ಲಿ ಬಂದೋಬಸ್ತ್ ವೇಳೆ ಪೊಲೀಸ್ ಸಿಬ್ಬಂದಿ ನಡೆಸುವ ಬೀದಿ ಜೀವನಕ್ಕೆ ಇತಿಶ್ರೀ ಹಾಡಲು ಮುಂದಾಗಿರುವ ಪೊಲೀಸ್ ಇಲಾಖೆ ಮನೆ ಮಾದರಿಯ ಏಳು ಕಂಟೈನರ್ ಕೊಟ್ಟಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಏಳು ಕಂಟೈನರ್ ಗಳನ್ನು ಬೆಂಗಳೂರು ಪೊಲೀಸರಿಗೆ ಇಂದು ಹಸ್ತಾಂತರ ಮಾಡಿತು. ನಗರ ಪೊಲೀಸ್ ಆಯುಕ್ತ ಕಮಲಪಂತ್ ಹಾಗೂ ಎಡಿಜಿಪಿ ಭಾಸ್ಕರರಾವ್ ಅವರು ಲೋಕಾರ್ಪಣೆ ಮಾಡಿದರು. ಈ ಕಂಟೈನರ್ ಗಳನ್ನು ಎಡಿಜಿಪಿ ಭಾಸ್ಕರರಾವ್ ಲೋಕಾರ್ಪಣೆ ಮಾಡುವುದರ ಹಿಂದೆ ಒಂದು ರೋಚಕ ಸ್ಟೋರಿಯಿದೆ. ಸದ್ಯ ಈ ಏಳು ಕಂಟೈನರ್ ಮನೆ ಮಾದರಿಯಲ್ಲೇ ಶೌಚಾಲಯ, ನಾಲ್ಕು ವಿಶ್ರಾಂತಿ ಹಾಸಿಗೆ, ಕಿಚನ್, ಬಿಸಿ ನೀರಿನ ವ್ಯವಸ್ಥೆ ಹೊಂದಿವೆ. ಪ್ರತಿಭಟನೆ, ಬಂದ್, ಗಲಾಟೆ ಸಂದರ್ಭದಲ್ಲಿ ಬಂದೋಬಸ್ತ್ ಏರ್ಪಡಿಸುವ ಜಾಗಕ್ಕೆ ಈ ಕಂಟೇನರ್ ಗಳು ಹೋಗು ಹೋಗುತ್ತವೆ. ಪೊಲೀಸರು ವಿಶ್ರಾಂತಿ ಜತೆಗೆ ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಸೌಲಭ್ಯ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಭಾರಿಗ ಕಲ್ಪಿಸಲಾಗಿದೆ. ಭಾಸ್ಕರರಾವ್ ಪೊಲೀಸ್ ಕಮೀಷನರ್ ಆಗಿದ್ದ ವೇಳೆ ನಡೆದ ಒಂದು ಘಟನೆ ಇಂತಹ ಮಾನವೀಯ ಕಾರ್ಯಕ್ಕೆ ನಾಂದಿ ಹಾಡಿದೆ.

ಏನಿದು ಘಟನೆ :
ಬೆಂಗಳೂರಿನಲ್ಲಿ ಏಕ ರೂಪದ ನಾಗರೀಕ ಸಂಹಿತೆ ಜಾರಿ ವಿಚಾರವಾಗಿ ಹೋರಾಟ ಜೋರಾಗಿತ್ತು. ಟೌನ್ ಹಾಲ್, ಮೌರ್ಯ ಸರ್ಕಲ್, ಸ್ವಾತಂತ್ರ್ಯ ಉದ್ಯಾನವನ ಹೀಗೆ ಎಲ್ಲಾ ಕಡೆ ಪ್ರತಿಭಟನೆಗಳು ನಡೆಯುತ್ತಿದ್ದವು. ಶಾಂತಿ ಸುವ್ಯವಸ್ಥೆ ಕಾಪಾಡಲು ಮಹಿಳಾ ಸಿಬ್ಬಂದಿ ಸಮೇತ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಂದೋ ಬಸ್ತ್ ಪರಿಶೀಲಿಸಲು ಅಂದಿನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಲ್ಲಡೆ ರೌಂಡ್ಸ್ ಮಾಡುತ್ತಿದ್ದರು. ಟೌನ್ ಹಾಲ್ ಸಮೀಪ ಬಂದಾಗ ಎಲ್ಲಾ ಸಿಬ್ಬಂದಿ ಎದ್ದು ನಿಂತು ಪೊಲೀಸ್ ಸೆಲ್ಯೂಟ್ ಒಡೆದು ಗೌರವ ಅರ್ಪಿಸಿದ್ದರು. ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಕೂತ ಜಾಗದಿಂದ ಎದ್ದೇಳಲಿಲ್ಲ. ಇದರಿಂದ ಸಿಟ್ಟುಗೊಂಡ ಭಾಸ್ಕರರಾವ್ ಪ್ರಶ್ನೆ ಮಾಡಿದ್ದರು.

ಪೊಲೀಸ್ ಇಲಾಖೆ
ಪೊಲೀಸ್ ಇಲಾಖೆ ಹೇಳಿ ಕೇಳಿ ಶಿಸ್ತು ಇಲಾಖೆ. ಮೇಲಾಧಿಕಾರಿಗಳಿಗೆ ಸೆಲ್ಯೂಟ್ ಒಡೆದ ನಂತರವೇ ಮಾತು. ಆದರೆ ಮಹಿಳಾ ಸಿಬ್ಬಂದಿ ಪೊಲೀಸ್ ಆಯುಕ್ತರಿಗೆ ಗೌರವ ಸಲ್ಲಿಸದಿದ್ದರೆ ? ಆಯುಕ್ತರು ಕೋಪಗೊಂಡೇ ಕೇಳಿದರು. ಅದಕ್ಕೆ ಯಾವ ಮುಜಗರಕ್ಕೂ ಒಳಗಾಗದೇ ಮಹಿಳಾ ಸಿಬ್ಬಂದಿ ಆಯುಕ್ತರಿಗೆ ಉತ್ತರ ನೀಡಿದ್ದಳು. " ಸರ್. ಬೆಳಗಿನಿಂದ ಇಲ್ಲೇ ಬಂದೋಬಸ್ತ್ ನಲ್ಲಿದ್ದೇನೆ. ಬೆಳಗಿನಿಂದ ಹೊಟ್ಟೆನೋವು. ಐದು ನಿಮಿಷ ವಿಶ್ರಾಂತಿ ಪಡೆಯಲು ಆಗುತ್ತಿಲ್ಲ. ಮೂತ್ರ ವಿಸರ್ಜನೆಗೂ ಹೋಗಲಾಗಲಿಲ್ಲ. ಹೀಗಾಗಿ ಹೊಟ್ಟೆ ನೋವಿನಿಂದ ನಾನು ಮೇಲೆ ಏಳಲು ಆಗಲಿಲ್ಲ. ದಯವಿಟ್ಟು ಗೌರವ ಕೊಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷೆ ಕೊಡುವುದಿದ್ದರೆ ದಯವಿಟ್ಟು ಕೊಡಿ, ನಾನು ಸ್ವೀಕರಿಸುತ್ತೇನೆ" ಎಂದು ಹೇಳಿದ್ದಳು. ಭಾಸ್ಕರರಾವ್ ಆ ಮಹಿಳಾ ಪೇದೆಯ ಮಾತು ಕೇಳಿ ಮೌನಕ್ಕೆ ಶರಣಾಗಿದ್ದರು. ಈ ಘಟನೆಯನ್ನು ಕಂಟೈನರ್ ಲೋಕಾರ್ಪಣೆ ವೇಳೆ ಭಾಸ್ಕರರಾವ್ ಸ್ಮರಿಸಿದರು.

ರಸ್ತೆಯಲ್ಲಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ
ಅದೇ ದಿನ ಕಚೇರಿಗೆ ಬಂದು ಬಂದೋಬಸ್ತ್ ಗೆ ನಿಯೋಜನೆಗೊಳ್ಳುವ ಸಿಬ್ಬಂದಿ ರಸ್ತೆಯಲ್ಲಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬುದರ ಬಗ್ಗೆ ಆಲೋಚಿಸಿದರು. ಬಂದೋಬಸ್ತ್ಗೆ ನಿಯೋಜನೆಗೊಳ್ಳುವ ಸಿಬ್ಬಂದಿಗೆ ನೆರಳಾಗುವ ನಿಟ್ಟಿನಲ್ಲಿ ಕಂಟೈನರ್ ಕಲ್ಪನೆ ಹುಟ್ಟಿಕೊಂಡಿತು. ಗೃಹ ಇಲಾಖೆಯೇ ಮಾಡಬೇಕಿದ್ದ ಕೆಲಸ. ಯಾವ ರೀತಿಯ ಪರಿಶ್ರಮ ಹಾಕಿದರೋ ಎಡಿಜಿಪಿ ಭಾಸ್ಕರರಾವ್ ಅವರು ಅಂತೂ ಅಂದುಕೊಂಡಿದ್ದನ್ನು ಪರೋಕ್ಷವಾಗಿ ಮಾಡುವ ಮೂಲಕ ಪೊಲೀಸ್ ಇತಿಹಾಸದಲ್ಲೇ ಹೊಸ ಮಾನವೀಯ ಹಾದಿ ತೋರಿಸಿಕೊಟ್ಟಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಏಳು ಕಂಟೈನರ್ ಕೊಟ್ಟಿದೆ. ಮಹಿಳಾ ಪೇದೆ ಎದುರಿಸಿದ ಕಷ್ಟ ಪೊಲೀಸ್ ಸಿಬ್ಬಂದಿಯ ದೊಡ್ಡ ಸಮಸ್ಯೆಗೆ ಪರಿಹಾರ ಕೊಟ್ಟಿದೆ.

ಮಹಿಳಾ ಪೊಲೀಸ್ ಸಿಬ್ಬಂದಿ ಪಾಲಿಗಂತೂ ತುಂಬಾ ನೆರವಾಗಲಿವೆ
ಬಂದೋಬಸ್ತ್ಗೆ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿ ಇಂತಹ ಸಮಸ್ಯೆ ಇನ್ಮುಂದೆ ಎದುರಿಸುವ ಅಗತ್ಯವಿಲ್ಲ. ರಾಜಧಾನಿಯ ಹೃದಯ ಭಾಗದಲ್ಲಿ ಏಳು ಕಂಟೈನರ್ ಇರಲಿವೆ. ಮಹಿಳಾ ಪೊಲೀಸ್ ಸಿಬ್ಬಂದಿ ಪಾಲಿಗಂತೂ ತುಂಬಾ ನೆರವಾಗಲಿವೆ !












Click it and Unblock the Notifications