2015 ವರ್ಷ ಭವಿಷ್ಯ : ಧನಸ್ಸು ರಾಶಿಗೆ ಸಾಡೇಸಾತಿ ಆರಂಭ
ಮೂಲಾ, ಪೂರ್ವಷಾಢಾ ಮತ್ತು ಉತ್ತರಷಾಢಾ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದವರದು ಧನಸ್ಸು ರಾಶಿ. ಯೆ, ಯೊ, ಬ, ಬಿ, ಬು, ಧ, ಭ, ಢ, ಬೆ ಎಂಬಕ್ಷರಗಳಲ್ಲಿ ಈ ರಾಶಿಯವರಿಗೆ ಜನ್ಮನಾಮ ಇಡಬೇಕಾಗುತ್ತದೆ.
ಧನಸ್ಸು ರಾಶಿಯವರಿಗೆ 2015ನೇ ಹೊಸ ವರ್ಷವು ಶನಿಪ್ರಭಾವವನ್ನು ಅರ್ಥ ಮಾಡಿಕೊಳ್ಳುವ ವರ್ಷವೆನ್ನಬಹುದು. ಜುಲೈವರೆಗೂ ಗುರುಬಲ ಬೇರೆ ಇಲ್ಲ. ಹೀಗಾಗಿ ವರ್ಷದ ಮೊದಲಾರ್ಧ ಸ್ವಲ್ಪ ತಾಳ್ಮೆ, ಸಹನೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಜುಲೈ ನಂತರ ಗುರುಬಲ ಬರುವುದರಿಂದ ಸ್ವಲ್ಪ ನೆಮ್ಮದಿಯನ್ನು ಕಾಣಬಹುದಾಗಿದೆ. ಆ ಸಮಯದಲ್ಲಿ ತುಂಬಾ ಶುಭಕರವಾಗಿರುತ್ತದೆ ಎಲ್ಲ ವಿಷಯಗಳಲ್ಲಿ. ಅಲ್ಲಿಯವರೆಗೂ ಮಾತ್ರ ಜೀವನದಲ್ಲಿ ಇಕ್ಕಟ್ಟು ಇದ್ದಿದ್ದೇ. ಈ ವರ್ಷದ ಮೊದಲಾರ್ಧವು ಆರಂಭವಾಗುವ ಮುನ್ನವೇ ತೊಂದರೆಗಳ ಸರಮಾಲೆಯಲ್ಲಿಯೇ ಕಳೆಯಲಿದೆ ಎಂಬುದರ ಅರಿವು ಧನಸ್ಸು ರಾಶಿಯವರಿಗೆ ಅನುಭವಕ್ಕೆ ಬಂದಿರುತ್ತದೆ.
ಹೊಟ್ಟೆಗೆ ಸಂಬಂಧಪಟ್ಟ ರೋಗಗಳ ಕಾಡಾಟದಿಂದ ಬೇಸತ್ತಿರುವವರು ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಇದೂ ಅಲ್ಲದೆ ಕೆಲವರಿಗೆ ದುಡ್ಡಿನ ಸಮಸ್ಯೆಯೂ ಶುರುವಾಗುತ್ತದೆ. ಪಡೆದ ಹಣವನ್ನು ಮರಳಿ ಕೊಡಲಾರದೇ ತಿಣುಕಾಡುವ ಪರಿಸ್ಥಿತಿ. ಕೆಲಸದಲ್ಲಿಯೂ ಕಿರಿಕಿರಿಯಿಂದ ಗೊಂದಲ. ಬಾಸ್ನ ಕೆಂಗಣ್ಣಿಗೆ ಗುರಿಯಾಗಿದ್ದು ಯಾವಾಗ ಎಂಬುದು ಕೂಡ ಗೊತ್ತಾಗದಂಥ ಸ್ಥಿತಿ. ಪರಿಚಿತರಿಂದಲೇ ಮಾನ, ಮರ್ಯಾದೆಗೆ ಕುಂದು. ಕೆಲವೊಮ್ಮೆ ಆತ್ಮೀಯವಾಗಿ ನಡೆದುಕೊಳ್ಳುವ ಸಂಬಂಧಿಕರೂ ಕೂಡ ನಂಬಲಾರದಂಥ ಸ್ಥಿತಿ ಧನಸ್ಸು ರಾಶಿಯವರದು.
ಇನ್ನು, ಶನಿ ಸಾಡೇಸಾತಿ ಶುರುವಾಗಿರುವುದು ಕೆಲವರ ಗಮನಕ್ಕೆ ಬಂದಿರುವುದೇ ಇಲ್ಲ. ಈ ಸಮಯದಲ್ಲಿ ಕೆಲಸಗಾರರಿಗೆ ಕೆಲಸದಲ್ಲಿ ನಿರಾಸಕ್ತಿ ಮೂಡುತ್ತದೆ. ತಲೆಯಲ್ಲಿ ಏನೇನೋ ಯೋಚನೆಗಳು ಹೊಳೆದು ಏನೋ ಮಾಡಲು ಹೋಗಿ ಎಕ್ಕುಟ್ಟು ಹೋಗುವ ಸ್ಥಿತಿಗೆ ತಮ್ಮನ್ನೆ ತಾವು ತಂದುಕೊಳ್ಳುತ್ತಾರೆ. ಇವರ ಈ ಪರಿಸ್ಥಿತಿ ನೋಡಿ ಮನೆಯ ಹಿರಿಯರು, "ಹೆದರಬೇಡ, ದೇವರಿದ್ದಾನೆ, ದೇವರ ಮೇಲೆ ಭಾರ ಹಾಕು" ಎಂದು ಹುರಿದುಂಬಿಸುತ್ತಾರೆ. ಆದರೆ ಕೆಲವರು ದೇವರ ಮೂತಿಯನ್ನೇ ನೋಡಲು ಹೋಗಲ್ಲ. ದೇವರೆಲ್ಲಿದ್ದಾನೆ? ಎಂದು ಎಲ್ಲರಲ್ಲೂ ಪ್ರಶ್ನಿಸುತ್ತ ತಿರುಗಾಡುತ್ತಿರುತ್ತಾರೆ. ಹೀಗೆಲ್ಲಾ ಮಾಡದೇ ಕನಿಷ್ಠ ಪಕ್ಷ ಮನೆದೇವರಿಗಾದರೂ ಕಿಮ್ಮತ್ತು ಕೊಡಿ.
ಈ ಸಮಯ ಲಕ್ಗೆ ಲಕ್ವಾ ಹೊಡೆಸಬಹುದು ಎಂಬ ಅರಿವು ಧನಸ್ಸು ರಾಶಿಯವರು ಮೊದಲು ಅರಿತುಕೊಳ್ಳಬೇಕು. ಹಿಂದೆಂದೋ ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುವ ಸಮಯ ಬಂದಿದೆ. ಆದರೇನು ಮಾಡುವದು ಉಪ್ಪು ತಿಂದವ ನೀರು ಕುಡಿಯಲೇಬೇಕಲ್ಲವೇ?
ಕಷ್ಟದಿಂದ ಕೂಡಿಸಿಟ್ಟಿದ್ದ ಹಣವನ್ನು ಹುಷಾರಾಗಿ ವೆಚ್ಚ ಮಾಡಬೇಕು. ಹೊಸ ಹೊಸ ಯೋಜನೆಗಳನ್ನು ಹತ್ತತ್ತು ಬಾರಿ ಯೋಚಿಸಿಯೇ ಆರಂಭಿಸಬೇಕು. ಜತೆಯಲ್ಲಿದ್ದವರೇ ಕೆಲವೊಮ್ಮೆ ಕೈಕೊಡುವುದರಿಂದ ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು.
ಅನವಶ್ಯಕವಾಗಿ ಎಲ್ಲೆಲ್ಲಿಗೋ ಹೋಗುವುದನ್ನು ಬಿಡಬೇಕು. ಚಿಕ್ಕಪುಟ್ಟ ವಿಷಯಗಳಿಗೂ ತಲೆಕೆಡಿಸಿಕೊಂಡು ಮನಸ್ಸು ಕೆಡಿಸಿಕೊಳ್ಳಬಾರದು. ಎಲ್ಲವನ್ನೂ ಧೈರ್ಯದಿಂದ ಎದುರಿಸಬಲ್ಲೇ ಎಂಬ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಕೆಲಸದಲ್ಲಿ ತೊಂದರೆ ಬರಬಾರದೆಂದರೆ ಅತೀ ಸೂಕ್ಷ್ಮವಾಗಿ ನಿಮ್ಮ ಮೇಲೆ ನೀವೇನೆ ಒಂದು ಕಣ್ಣಿಟ್ಟುಕೊಳ್ಳಿ. ತಪ್ಪಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ.
ಏಕೆಂದರೆ ಶನಿಸಾಡೇಸಾತಿ ಮೊದಲನೇ ಹಂತ ಆರಂಭವಾಗಿದೆ. ಇನ್ನು ಎರಡು ಮತ್ತು ಮೂರು ಹಂತಗಳನ್ನು ಕಳೆಯಬೇಕಾಗಿದೆ ನೀವು. ಹೀಗಾಗಿ ಜೀವನವನ್ನು ಜಾಗೃತೆಯಿಂದ ನಡೆಸಿಕೊಂಡು ಹೋಗಲು ಆರಂಭಿಸಬೇಕು ಈ ವರ್ಷದಿಂದಲೇ ನೆನಪಿಟ್ಟುಕೊಂಡು.
ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ತೋರಿಸಲು ಗೊಣಗುವ ಮನೋಭಾವವನ್ನು ಬಿಡಬೇಕು. ಅತೀ ಹೆಚ್ಚಿನ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂಬುದು ಕೂಡ ಅರಿತುಕೊಂಡು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾವಾಗಲೂ ನಿಮ್ಮ ನಿರ್ಧಾರವೇ ಅಂತಿಮ ಎಂದುಕೊಳ್ಳಬೇಡಿ. ನೀವು ತೆಗೆದುಕೊಂಡ ನಿರ್ಧಾರ ಸೂಕ್ತವಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ನಿಮ್ಮ ನಂಬಿಗಸ್ಥರಲ್ಲಿ ಕೇಳಿ ತಿಳಿದುಕೊಳ್ಳಿ. ನಂತರವೇ ಮುಂದಿನ ಹೆಜ್ಜೆ ಇಡಿ.
ಸಾಮಾನ್ಯವಾಗಿ ನಯ, ನಾಜೂಕಿನಿಂದಿರಲು ಇಷ್ಟಪಡುವ ಧನಸ್ಸು ರಾಶಿಯವರು ಯಾರಿಗೆ ಆಗಲಿ ತಲೆಬಾಗುತ್ತಾರೆ. ಇವರ ಈ ಗುಣವೇ ಇವರನ್ನು ಬಹಳಷ್ಟು ಎತ್ತರಕ್ಕೆ ತಂದು ನಿಲ್ಲಿಸುತ್ತದೆ. ಇಂಥ ಸದ್ಗುಣಗಳನ್ನು ಈಗ ಹೆಚ್ಚಿಸಿಕೊಳ್ಳಬೇಕು.
ಕೆಂಪು, ಗುಲಾಬಿ, ಕೇಸರಿ ಬಣ್ಣದ ವಸ್ತು ಮತ್ತು ವಸ್ತ್ರಗಳನ್ನು ಹೆಚ್ಚಾಗಿ ಬಳಸಬಹುದು. ಗುರುವಾರ ಮತ್ತು ರವಿವಾರ ನೀವು ಖುಷಿಯಲ್ಲಿರುತ್ತೀರಿ. ಈ ದಿನಗಳಲ್ಲಿ ಹೆಚ್ಚಿನ ಕೆಲಸಗಳನ್ನು ಇಟ್ಟುಕೊಳ್ಳಿ. 1, 3, 4, 5 ಲಕ್ಕಿ ನಂಬರ್ಗಳು ಎನ್ನಬಹುದು. 3, 12, 21, 30 ನೇ ತಾರೀಖುಗಳು ನಿಮಗೆ ಶುಭಕರ.
ಮೇಷ ಮತ್ತು ಸಿಂಹ ರಾಶಿಯವರೊಂದಿಗೆ ನೀವು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತೀರಾ. ಆದರೆ ಕರ್ಕ, ವೃಶ್ಚಿಕ, ಮೀನ ರಾಶಿಯವರೊಂದಿಗೆ ಅಷ್ಟೊಂದು ಆತ್ಮೀಯತೆ ಇರಲ್ಲ. ಇದನ್ನು ಈ ಬಾರಿ ಪರೀಕ್ಷಿಸಿ ನೋಡಿಕೊಳ್ಳಿ ಬೇಕಾದವರು. ಶಂಭೋಲಿಂಗ ಮತ್ತು ಹನುಮನಾರಾಧನೆ ನಿಮಗೆ ಅತ್ಯಂತ ಖುಷಿ ನೀಡುತ್ತದೆ. ಅದನ್ನೇ ಮುಂದುವರಿಸಿ ಜೀವನಪರ್ಯಂತ ತಪ್ಪಿಸದೇ.