ಕರ್ಕಾಟಕ ವರ್ಷ ಭವಿಷ್ಯ: ಅಳತೆ ಮೀರದಿರಲಿ ಆಕಾರ, ಕನಸಾಗಲಿದೆ ಸಾಕಾರ
ಕರ್ಕಾಟಕ ರಾಶಿಯವರೆಂದರೆ ಮೃದು, ಚಂಚಲಚಿತ್ತರು, ಗ್ಯಾನ ಬಂದ ಗಿರಾಕಿಗಳು, ಸಮುದ್ರದ ಅಲೆಗಳಂತೆ ಭಾವನೆಗಳಲ್ಲಿ ವಿಪರೀತ ಏರಿಳಿತ ಇರುವಂಥವರು. ಖುಷಿಯಾದಾಗ ಅಥವಾ ವಿಪರೀತ ಬೇಸರವಾದಾಗ ಸಿಕ್ಕಾಪಟ್ಟೆ ತಿಂತೀನಿ, ಕಂಡದ್ದನ್ನೆಲ್ಲ ಕಬಳಿಸುತ್ತೀನಿ ಅಂದರೆ 2018ನೇ ಇಸವಿಯಲ್ಲಿ ತೂಕ ಹೆಚ್ಚಾಗಿಬಿಡುತ್ತದೆ.
ನೋಡನೋಡುತ್ತಲೇ ಬಟ್ಟೆಯ ಅಳತೆಯಲ್ಲಿ ಏರುಪೇರಾಗಿ, ಹೊಟ್ಟೆ ಆಕಾರ ಕಳೆದುಕೊಂಡು ಅಕರಾಳ ವಿಕರಾಳ ಆಗುತ್ತದೆ. ಒಟ್ಟಿನಲ್ಲಿ ಊಟ- ತಿಂಡಿ ವಿಚಾರದಲ್ಲಿ ಎಚ್ಚರ ಇರಿ. ಎರಡು-ಮೂರು ಇಂಚಿನ ನಾಲಗೆಯ ಬಯಕೆಗೆ ಓಗೊಡಬೇಡಿ. ಇನ್ನು ಅವಿವಾಹಿತರಿಗೆ ವಿವಾಹ ನಿಶ್ಚಯ ಆಗುವ ಸಾಧ್ಯತೆ ಇದೆ.
ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?
ಆದರೆ, ಮದುವೆಯ ದಿನಾಂಕ ಮತ್ತಿತರ ವಿಚಾರಗಳಲ್ಲಿ ತಲೆ ಕೆಟ್ಟು ಮೊಸರು ಗಡಿಗೆ ಆಗಿ, ವಿಪರೀತ ಗೊಂದಲಗಳಾಗುತ್ತವೆ. ಎಲ್ಲವೂ ಸಲೀಸಾಗಿ ಆಗಬೇಕು ಅಂತ ನೀವೂ ಬಯಸಿದರೆ ಮಹಾಗಣಪತಿಯನ್ನು ಶ್ರದ್ಧಾ-ಭಕ್ತಿಯಿಂದ ಆರಾಧನೆ ಮಾಡಿ. ಯಾವುದೇ ವಿಘ್ನ ಇಲ್ಲದಂತೆ ಮದುವೆ ನೆರವೇರುವಂತೆ ಪ್ರಾರ್ಥಿಸಿ. ಅವನ ಅನುಗ್ರಹದಿಂದ ಎಲ್ಲ ಸರಾಗವಾಗಿ ನೆರವೇರುತ್ತದೆ.
ಇನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಿ ಎಂಬ ಸುಳಿವು ದೊರೆಯುತ್ತಿದೆ. ನೋಡನೋಡುತ್ತಿದ್ದಂತೆ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಅನುಭವಕ್ಕೆ ಬರುತ್ತದೆ. ತೀರಾ ಕನಿಷ್ಠ ಅಂದರೂ ನಿಮ್ಮ ವರ್ಕ್ ಸ್ಟೇಷನ್ ಅಥವಾ ಕ್ಯಾಬಿನ್ ಆದರೂ ಬದಲಾಯಿಸಲಾಗುತ್ತದೆ. ಮತ್ತು ಈ ಬದಲಾವಣೆಯಲ್ಲಿ ನಿಮ್ಮ ಮೇಲಧಿಕಾರಿಗಳ ಪ್ರಭಾವ ಇರುತ್ತದೆ.
ವಿದೇಶ ಪ್ರಯಾಣ ಸುಲಭ
ಬಹಳ ಕಾಲದಿಂದ ನಿರೀಕ್ಷೆಯಲ್ಲಿದ್ದ ವಿದೇಶ ಪ್ರಯಾಣ ಬಹಳ ಸುಲಭ ಆಗಲಿದೆ. ಒಂದೇ ಕಡೆ ನೆಲೆ ನಿಂತು, ಕೆಲಸ- ಕಾರ್ಯಗಳನ್ನು ಮಾಡುತ್ತಿರುವವರಾದರೆ ಉದ್ಯೋಗ ಅಥವಾ ವ್ಯಾಪಾರ- ವ್ಯವಹಾರ ನಿಮಿತ್ತ ಓಡಾಟಗಳು ಹೆಚ್ಚಾಗುತ್ತವೆ. ಲಾಭ-ನಷ್ಟದ ವಿಚಾರ ನಂತರದ್ದು. ಆದರೆ ಪ್ರಯಾಣವಂತೂ ಇದ್ದೇ ಇರುತ್ತದೆ.
ವೃತ್ತಿ ಜೀವನದಲ್ಲಿ ಗೌರವ-ಮರ್ಯಾದೆ
ನ್ಯಾಯಾಲಯದಲ್ಲಿ ನನೆಗುದಿಗೆ ಬಿದ್ದಿದ್ದ ವಿಚಾರಗಳು ಮತ್ತೆ ಚಿಗುರುತ್ತವೆ. ಇನ್ನೂ ಕಾದರೆ ಕೆಲಸ ಆಗೋದಿಲ್ಲ ಎಂದು ನೀವೇ ನ್ಯಾಯಾಲಯದ ಮೆಟ್ಟಿಲು ಹತ್ತಬಹುದು. ವೃತ್ತಿ ಜೀವನದಲ್ಲಿ ನೀವು ಬಯಸಿದ ಗೌರವ- ಮರ್ಯಾದೆಗಳು, ಪ್ರಾಮುಖ್ಯ ಹಾಗೂ ಅದರ ಜೊತೆಯಲ್ಲಿ ಬಡ್ತಿ ಸಹ ಸಿಗುತ್ತದೆ.
ವರ್ಗಾವಣೆ ಆಗುತ್ತದೆ
ಬೇರೆ ಜಾಗಕ್ಕೆ ವರ್ಗಾವಣೆ ಬಯಸಿದಲ್ಲಿ ಅದು ಸುಲಭವಾಗಿ ಆಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಕೆಲವರಿಗೆ ಇಷ್ಟ ಇಲ್ಲದಿದ್ದರೂ ವರ್ಗಾವಣೆ ಆಗುತ್ತದೆ. ತಾಯಿಯ ಮನೆಯಿಂದ ಆಸ್ತಿ ಇತ್ಯಾದಿ ಸಿಗದೆ ಪರದಾಡುತ್ತಿದ್ದ ವಿವಾಹಿತ ಸ್ತ್ರೀಯರಿಗೆ ಹಿರಿಯರ ಮಧ್ಯಸ್ಥಿಕೆಯಿಂದ ಕಾರ್ಯ ಸಿದ್ಧಿ ಆಗುತ್ತದೆ.
ಸಂತಾನ ಅಪೇಕ್ಷಿತರಿಗೆ ಸೂಕ್ತ ಸಮಯ
ಮದುವೆಯಾಗಿ ಬಹಳ ಸಮಯವಾಯಿತು. ಯಾವುದೇ ವೈದ್ಯಕೀಯ ಸಮಸ್ಯೆಗಳು ಇಲ್ಲದಿದ್ದರೂ ಮಕ್ಕಳಾಗಿಲ್ಲ ಎಂದು ಯೋಚಿಸುತ್ತಿರುವವರು ಹಾಗೂ ಸಂತಾನ ಅಪೇಕ್ಷಿತರಾಗಿದ್ದಲ್ಲಿ ಜಾತಕದಲ್ಲಿ ದೋಷಗಳಿದ್ದಲ್ಲಿ ಅವುಗಳನ್ನು ಪರಿಹಾರ ಮಾಡಿಕೊಂಡು ಪ್ರಯತ್ನಿಸಿದಲ್ಲಿ ಯಶಸ್ಸು ಇದೆ. ಜ್ಯೋತಿಷಿಗಳ ಬಳಿ ನಿಮ್ಮ ಜಾತಕ ತೋರಿಸಿಕೊಳ್ಳಿ.
ಪ್ರೇಮಿಗಳಿಗೆ ಕಷ್ಟ ಕಾಲ
ಇನ್ನು ಪ್ರೀತಿ- ಪ್ರೇಮ ಎಂದು ಕಷ್ಟಪಡುತ್ತ ಇರುವವರಿಗೆ ಕಿರಿಕಿರಿ ಹೆಚ್ಚು ಕಾಣುತ್ತಿದೆ. ಈಗಲೇ ಮದುವೆ ಆಗುವುದಾ ಅಥವಾ ಮನೆಯಲ್ಲಿ ಪೋಷಕರ ಗಮನಕ್ಕೆ ತಂದು ಮನವೊಲಿಸುವ ಪ್ರಯತ್ನ ಮಾಡಬಹುದಾ ಇತ್ಯಾದಿಯಾಗಿ ಯಾವುದೇ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗದೇ ಬಹಳ ಕಷ್ಟ ಆಗುತ್ತದೆ.
ಅತಿ ಆತ್ಮವಿಶ್ವಾಸ ಒಳ್ಳೆಯದಲ್ಲ
ವಿದ್ಯಾರ್ಥಿಗಳಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸ್ನೇಹಿತರ ಆಯ್ಕೆ ವಿಚಾರದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಗುರು-ಹಿರಿಯರಿಗೆ ಹಾಗೂ ತಂದೆ-ತಾಯಿಗಳಿಗೆ ಗೌರವ ನೀಡದೆ ಇದ್ದರೆ ನೀವು ಏನೇ ಸಾಧನೆ ಮಾಡಿದರೂ ಅದು ವ್ಯರ್ಥವಾಗುತ್ತದೆ. ಆದ್ದರಿಂದ ಉಡಾಫೆ ವರ್ತನೆ ಬೇಡ.
ಪರಿಹಾರ ಏನು?
ಈ ವರ್ಷ ಪೂರ್ತಿ ಜನ್ಮ ರಾಶಿಯಲ್ಲಿ ರಾಹು ಇರುತ್ತದೆ. ಆದ್ದರಿಂದ ರಾಹು ಶಾಂತಿ ಹವನ ಸಹಿತ ತ್ರಿಗುಣಾತ್ಮಿಕಾ ಪಂಚದುರ್ಗಾ ಹವನ ಸಹಿತ ಶ್ರೀ ಸೂಕ್ತ ಹವನ ಕಡ್ಡಾಯವಾಗಿ ಮಾಡಿಸಿ. ಅಷ್ಟೇ ಅಲ್ಲ, ನಿತ್ಯ ಲಕ್ಷ್ಮೀ ನಾರಾಯಣ ಹೃದಯ ಪಠಣ ಅಥವಾ ಶ್ರವಣ ಮಾಡುವುದರಿಂದ ಆರ್ಥಿಕ ಹಾಗೂ ದಾಂಪತ್ಯ ಸಮಸ್ಯೆಗಳು ತಕ್ಷಣ ಕಡಿಮೆ ಆಗುತ್ತವೆ. ರುದ್ರ ಮಂತ್ರಗಳಿಂದ ಅಭಿಮಂತ್ರಿತ ವ್ಯಾಘ್ರ ನೇತ್ರ ರತ್ನ ಮಾಲೆ ಧಾರಣೆ ರಕ್ಷಣೆ ನೀಡುತ್ತದೆ.