ಜ್ಯೋತಿಷ್ಯ: ವಾರದ ಏಳು ದಿನದಲ್ಲಿ ಯಾವ ದಿನ, ಯಾವ ಕೆಲಸಕ್ಕೆ ಸೂಕ್ತ?
ವಾರದಲ್ಲಿ ಏಳು ದಿನ. ಯಾವ ದಿನ ಯಾವ ಕಾರ್ಯ ಮಾಡಿದರೆ ಶ್ರೇಷ್ಠ ಅಥವಾ ಅನುಕೂಲ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು. ಇಲ್ಲಿ ಯಾವ ವಾರದಂದು ಏನು ಕೆಲಸ ಮಾಡಬಹುದು ಎಂದು ತಿಳಿಸಲಾಗುತ್ತದೆ. ಇದರ ಹೊರತಾಗಿ ಆ ದಿನದ ತಿಥಿ ಯಾವುದು ಎಂಬುದನ್ನು ಒಮ್ಮೆ ನೋಡಿಕೊಳ್ಳಲೇ ಬೇಕು.
ಉದಾಹರಣೆಗೆ ಅಮಾವಾಸ್ಯೆ, ಅಷ್ಟಮಿ, ನವಮಿ, ಏಕಾದಶಿ ಹಾಗೂ ದ್ವಾದಶಿಗಳಂದು ಕೆಲವು ಕೆಲಸಗಳನ್ನು ಮಾಡುವುದಿಲ್ಲ. ಇನ್ನು ಕೃಷ್ಣ ಪಕ್ಷದಲ್ಲಿ ಕ್ಷೀಣ ಚಂದ್ರ ಎಂಬ ಕಾರಣಕ್ಕೆ ಕೆಲವು ಕಾರ್ಯಗಳನ್ನು ಮಾಡುವುದಿಲ್ಲ. ಆದ್ದರಿಂದ ಇವೆರಡೂ ಅಂಶಗಳನು ಗಮನದಲ್ಲಿಟ್ಟುಕೊಳ್ಳಿ.
ಬುಧವಾರ ವೃಶ್ಚಿಕ ರಾಶಿಗೆ ಶನಿ ಪ್ರವೇಶ, 12 ರಾಶಿಗೆ ಬದಲಾವಣೆ
ಜತೆಗೆ ತಾರಾಬಲವನ್ನು ಗಮನಿಸಬೇಕಾಗುತ್ತದೆ. ನೀವು ಅಂದುಕೊಂಡ ದಿನದಂದು ಇರುವ ನಕ್ಷತ್ರವು ನಿಮ್ಮ ಜನ್ಮ ನಕ್ಷತ್ರಕ್ಕೆ ಅನುಕೂಲಕರವಾಗಿ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಇಷ್ಟನ್ನು ಹೊರತುಪಡಿಸಿದರೆ ಯಾವ ದಿನವು ಯಾವ ಕೆಲಸಕ್ಕೆ ಸೂಕ್ತ ಎಂಬ ವಿಚಾರವನ್ನು ಇಲ್ಲಿ ತಿಳಿಸಲಾಗಿದೆ.
ವಿದ್ಯೆ, ಕೋರ್ಟ್ ವ್ಯಾಜ್ಯ, ಮದುವೆ ಸಂಬಂಧ, ಪ್ರಯಾಣ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುವಾಗ ಈ ಲೇಖನವನ್ನೊಮ್ಮೆ ಗಮನಿಸಿದರೆ ಅನುಕೂಲವಾಗುತ್ತದೆ.
ಸೋಮವಾರ
ಈ ದಿನಕ್ಕೆ ಚಂದ್ರ ಅಧಿಪತಿ. ಫಲಿತಾಂಶವನ್ನು ಶೀಘ್ರದಲ್ಲಿ ಕೊಡುವ ದಿನ. ಯಾವ ಕೆಲಸ ಶೀಘ್ರ ಮುಗಿಯುತ್ತದೋ ಅಥವಾ ಶೀಘ್ರ ಚಾಲನೆ ದೊರೆಯುತ್ತದೋ ಅಂಥದೇ ಕೆಲಸ ಮಾಡಬೇಕು. ವಾಹನ, ಬಟ್ಟೆ ಖರೀದಿ, ಪ್ರಯಾಣ, ಚಿತ್ರಕಲೆ ಹಾಗೂ ಔತಣಕೂಟ ಮಾಡುವುದಕ್ಕೆ ತುಂಬ ಪ್ರಶಸ್ತವಾದ ದಿನ.
ಶಿವನ ಆರಾಧನೆ ಮಾಡಿದರೆ ಹೆಚ್ಚಿನ ಫಲ. ಹೊಸ ವ್ಯಾಪಾರ ಅಥವಾ ಉದ್ಯೋಗವನ್ನು ಈ ದಿನ ಆರಂಭಿಸಬೇಡಿ. ಪೂರ್ವ ದಿಕ್ಕಿನ ಕಡೆಗೆ ಪ್ರಯಾಣ ಮಾಡುವುದಿದ್ದರೆ ಬೇಡ. ಈ ದಿನ ಕಪ್ಪು ಬಟ್ಟೆ ಧರಿಸಬೇಡಿ.
ಮಂಗಳವಾರ
ಈ ದಿನದ ಅಧಿಪತಿ ಕುಜ. ಈ ದಿನ ಆರಂಭಿಸಿದ ಕೆಲಸದ ಫಲಿತಾಂಶ ಮಧ್ಯಮ ವೇಗದಲ್ಲಿ ಇರುತ್ತದೆ. ತಾಂತ್ರಿಕ, ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ, ಔಷಧ ಮತ್ತು ಶಸ್ತ್ರಚಿಕಿತ್ಸೆಯ ಕೆಲಸಗಳಿಗೆ ಹೆಚ್ಚು ಸೂಕ್ತ. ಈ ದಿನ ಹನುಮಂತನ ಆರಾಧನೆ ಮಾಡುವುದರಿಂದ ಹೆಚ್ಚಿನ ಫಲ ದೊರೆಯುತ್ತದೆ.
ಶಿಕ್ಷಣ ಹಾಗೂ ಕೋರ್ಟ್ ವಿಚಾರಗಳನ್ನು ಆರಂಭಿಸುವುದಕ್ಕೆ ಇದು ಸೂಕ್ತ ದಿನವಲ್ಲ. ನೀಲಿ ಬಣ್ಣದ ಬಟ್ಟೆ ಧರಿಸಬೇಡಿ ಮತ್ತು ಉತ್ತರ ದಿಕ್ಕಿನ ಕಡೆ ಪ್ರಯಾಣಿಸಬೇಡಿ. ಮದುವೆ ನಂತರ ಹೆಣ್ಣುಮಕ್ಕಳನ್ನು ಒಪ್ಪಿಸಿಕೊಡುವ ಶಾಸ್ತ್ರ ಈ ದಿನ ಮಾಡಬೇಡಿ.
ಬುಧವಾರ
ಈ ದಿನದ ಅಧಿಪತಿ ಬುಧ. ಮನರಂಜನೆ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟ ಕೆಲಸಕ್ಕೆ ಈ ದಿನ ಸೂಕ್ತ. ಸಣ್ಣ ಪ್ರಮಾಣದ ಪ್ರಯಾಣ, ಸಂಗಿತ-ಕಲೆ, ಹೂಡಿಕೆ, ಕಬ್ಬಿಣದ ಖರೀದಿಗೆ ಸೂಕ್ತ. ವೃತ್ತಿ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಆರಂಭಿಸುವುದಕ್ಕೆ ಉತ್ತಮ ದಿನ.
ಈ ದಿನ ಉದ್ಯೋಗ ಆರಂಭಿಸಬೇಡಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕೆಲಸದ ಹಣ ಅಥವಾ ಸಾಲ ಮರುಪಾವತಿಯನ್ನು ಈ ದಿನ ಮಾಡಬೇಡಿ. ಉತ್ತರ ದಿಕ್ಕಿಗೆ ಪ್ರಯಾಣ ಬೇಡ.
ಗುರುವಾರ
ಈ ದಿನ ಗುರುವಿನ ಪ್ರಾಬಲ್ಯ ಇರುತ್ತದೆ. ಇದು ತುಂಬ ಒಳ್ಳೆ ದಿನ. ಈ ದಿನ ತುಂಬ ಶುದ್ಧವಾಗಿರಬೇಕು. ಈ ದಿನ ಬೆಲೆ ಬಾಳುವ ವಸ್ತುಗಳಾದ ಚಿನ್ನ-ಬೆಳ್ಳಿ ಖರೀದಿಗೆ, ಹೂಡಿಕೆಗೆ, ಮಕ್ಕಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಕ್ಕೆ ಸೂಕ್ತ ದಿನ. ಮದುವೆಗೆ ಸಂಬಂಧಿಸಿದ ಕೆಲಸವನ್ನು ಈ ದಿನ ಆರಂಭಿಸಬಹುದು. ಈ ದಿನ ಮದ್ಯ ಮತ್ತು ಮಾಂಸ ಸೇವನೆಯಿಂದ ದೂರ ಇದ್ದರೆ ಶುಭ. ಈ ದಿನ ದಕ್ಷಿಣ ದಿಕ್ಕಿಗೆ ಪ್ರಯಾಣಿಸಬೇಡಿ.
ಶುಕ್ರವಾರ
ಈ ದಿನಕ್ಕೆ ಶುಕ್ರ ಅಧಿಪತಿ. ಮನರಂಜನೆಗೆ ಪ್ರಶಸ್ತವಾದ ದಿನ. ವೈವಾಹಿಕ ಜೀವನ ಆರಂಭಕ್ಕೆ, ಪ್ರೀತಿ ಸಂಬಂಧಕ್ಕೆ ಮತ್ತು ಖರೀದಿ-ಮಾರಾಟಕ್ಕೆ ಸೂಕ್ತ ದಿನ. ಹಣ ಹೂಡಿಕೆ ಬೇಡ. ಮದುವೆಗೆ ಸಂಬಂಧಿಸಿದ ಸಮಸ್ಯೆಗಳ ಮಾತುಕತೆ ಮತ್ತು ಪಶ್ಚಿಮದ ಕಡೆಗೆ ಪ್ರಯಾಣ ಬೇಡ.
ಶನಿವಾರ
ಈ ದಿನ ಕ್ರೋಧ ಪ್ರವೃತ್ತಿ ಹೆಚ್ಚು. ವೇಗ ಕೂಡ ಕಡಿಮೆ ಇರುತ್ತದೆ. ಈ ದಿನ ಆರಂಭಿಸಿದ ಕೆಲಸ ತುಂಬ ದೀರ್ಘ ಕಾಲ ನಡೆಯುತ್ತದೆ ಮತ್ತು ಶೀಘ್ರ ಫಲ ನೀಡುತ್ತದೆ. ಉದ್ಯೋಗ ಆರಂಭಕ್ಕೆ, ದಾನಕ್ಕೆ ಸೂಕ್ತ ದಿನ. ಕೋರ್ಟ್ ಗೆ ಸಂಬಂಧಿಸಿದ ಕೆಲಸ, ಔಷಧದ ಕೆಲಸ ಆರಂಭಿಸಬಹುದು. ಪೂರ್ವ ದಿಕ್ಕಿನ ಕಡೆಗೆ ಪ್ರಯಾಣ ಬೇಡ. ಕಬ್ಬಿಣ ಖರೀದಿ ಹಾಗೂ ಮಾರಾಟಕ್ಕೆ ಈ ದಿನ ಸೂಕ್ತವಲ್ಲ.
ಭಾನುವಾರ
ಈ ದಿನ ಆರಂಭಿಸಿದ ಕೆಲಸ ಬೇಗ ಫಲ ನೀಡುತ್ತದೆ. ಸರಕಾರಕ್ಕೆ ಸಂಬಂಧಿಸಿದ ಕೆಲಸಕ್ಕೆ ಚಾಲನೆ ನೀಡಬಹುದು. ಔಷಧ ಮತ್ತು ಮರದ ಕೆಲಸಗಳನ್ನು ಈ ದಿನ ಆರಂಭಿಸಲು ಸೂಕ್ತ. ಶಿಕ್ಷಣ ಆರಂಭಿಸಲು ಮತ್ತು ಕಬ್ಬಿಣದ ಖರೀದಿ-ಮಾರಾಟಕ್ಕೆ ಸೂಕ್ತ ದಿನ. ಮದುವೆ, ಪ್ರೀತಿ-ಪ್ರೇಮಕ್ಕೆ ಸಂಬಂಧಿಸಿದ ವ್ಯವಹಾರಕ್ಕೆ ಈ ದಿನ ಸೂಕ್ತವಲ್ಲ. ಪಶ್ಚಿಮಕ್ಕೆ ಪ್ರಯಾಣ ಬೇಡ. ಈ ದಿನ ಬೀಳ್ಕೊಡುಗೆ ಕಾರ್ಯಕ್ರಮಗಳು ಬೇಡ.