ಶಿವ ಪುರಾಣ ಪ್ರಕಾರ ಯಾವ ರೀತಿಯ ಶಿವನ ಪೂಜೆಗೆ ಏನು ಫಲ?
Recommended Video

ಎಲ್ಲ ದೇವತಾರಾಧನೆಗೂ ವಿಶೇಷ ಪ್ರಾಶಸ್ತ್ಯವಿದೆ. ಅದರ ಜತೆಗೆ ಆರಾಧನಾ ಕ್ರಮವೂ ಇದೆ. ಎಲ್ಲ ದೇವತಾರಾಧನೆ ಕ್ರಮವೂ ಒಂದೇ ಬಗೆಯದಲ್ಲ. ಇಂದಿನ ಲೇಖನದಲ್ಲಿ ಶಿವನ ಆರಾಧನೆ ವಿಚಾರವಾಗಿ ಕೆಲವು ಮುಖ್ಯ ಸಂಗತಿಗಳನ್ನು ತಿಳಿಸಲಾಗುವುದು. ಇದರ ಪ್ರಸ್ತಾವವು ಶಿವ ಪುರಾಣದಲ್ಲೇ ಆಗಿದೆ. ಆ ಪ್ರಕಾರವಾಗಿ ಶಿವನನ್ನು ಒಲಿಸಿಕೊಳ್ಳಲು ಯಾವ ಬಗೆಯ ಆರಾಧನೆ ಮಾಡಬೇಕು ಎಂದು ತಿಳಿದುಕೊಳ್ಳಿ.
ಯಾರಿಗೆ ಮೋಕ್ಷ ಪಡೆಯಬೇಕು ಎಂಬ ಉದ್ದೇಶ ಇರುತ್ತದೋ ಅಂಥವರು ಆ ಶಿವನನ್ನು ದರ್ಭೆಯಲ್ಲಿ ಪೂಜಿಸಬೇಕು. ದೀರ್ಘವಾದ ಆಯಸ್ಸು ಬಯಸುವವರು ಗರಿಕೆಗಳಿಂದ ಪೂಜೆ ಮಾಡಬೇಕು. ಗಂಡು ಮಗು ಬೇಕು ಎಂಬ ಅಭಿಲಾಷೆ ಉಳ್ಳವರು ಕೆಂಪು ತೊಟ್ಟು ಉಳ್ಳ ಧತ್ತೂರ ಪುಷ್ಪದಲ್ಲಿ ಶಿವನನ್ನು ಅರ್ಚಿಸಬೇಕು.
ಭೋಗ ಹಾಗೂ ಮೋಕ್ಷ ಈ ಎರಡೂ ಬೇಕು ಎಂದು ಬಯಸುವವರು ತುಳಸಿಯಲ್ಲಿ ಅಥವಾ ಕೆಂಪು ಹೂವು, ಬಿಳಿ ಎಕ್ಕ ಉತ್ತರಣೆ ಹಾಗೂ ಬಿಳಿಯ ಕಮಲ ಪುಷ್ಪಗಳಿಂದ ಶಿವನನ್ನು ಅರ್ಚಿಸಬೇಕು. ಶತ್ರು ಬಾಧೆಗಳು ನಿವಾರಣೆ ಆಗಬೇಕು ಎಂದಾದಲ್ಲಿ ಕೆಂಪು ದಾಸವಾಳ ಹೂವಿನಲ್ಲಿ ಪೂಜಿಸಬೇಕು. ಇನ್ನು ಕರವೀರ ಪುಷ್ಪಗಳಿಂದ ಶಿವನ ಅರ್ಚನೆ ಮಾಡಿದರೆ ಸಕಲ ರೋಗ ನಿವಾರಣೆ ಆಗುತ್ತದೆ.

ಬಂದೂಕ ಪುಷ್ಪದಿಂದ ಪೂಜಿಸಿದರೆ ಒಡವೆ ಪ್ರಾಪ್ತಿ
ಮಧ್ಯಾಹ್ನದ ವೇಳೆಯಲ್ಲಿ ಅರಳುವ ಬಂದೂಕ ಪುಷ್ಪಗಳಿಂದ ಶಿವನನ್ನು ಪೂಜಿಸಿದರೆ ಒಡವೆಗಳು ಪ್ರಾಪ್ತಿ ಆಗುತ್ತವೆ. ಮಲ್ಲಿಗೆ ಹೂವಿನಿಂದ ಶಿವನ ಪೂಜಿಸಿದರೆ ವಾಹನ ಪ್ರಾಪ್ತಿ ಹಾಗೂ ಶುಭ ಲಕ್ಷಣ ಉಳ್ಳ ಹೆಣ್ಣು ಪತ್ನಿಯಾಗಿ ದೊರೆಯುತ್ತಾಳೆ. ಶಮೀ ಪತ್ರೆಗಳಿಂದ ಶಿವನ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ

ಪಾರಿಜಾತದಿಂದ ಪೂಜಿಸಿದರೆ ಸುಖ- ಸಂಪತ್ತು ವೃದ್ಧಿ
ಜಾಜಿ ಹೂವುಗಳಿಂದ ಶಿವನ ಪೂಜಿಸಿದರೆ ಮನೆಯಲ್ಲಿ ದರಿದ್ರ ನಿವಾರಣೆ ಆಗಿ, ಅನ್ನ ಪ್ರಾಪ್ತಿಯಾಗುತ್ತದೆ. ಕಣಗಲೆ ಹೂವಿನಿಂದ ಶಿವನನ್ನು ಅರ್ಚಿಸಿದರೆ ನೂತನ ವಸ್ತ್ರ ಪ್ರಾಪ್ತಿಯಾಗುತ್ತದೆ. ಬಿಲ್ವಪತ್ರೆಗಳಿಂದ ಶಿವನನ್ನು ಪೂಜಿಸಿದರೆ ಸಕಲ ಬಯಕೆಗಳು ಈಡೇರುತ್ತವೆ. ಪಾರಿಜಾತದಿಂದ ಶಿವನ ಪೂಜಿಸಿದರೆ ಸುಖ- ಸಂಪತ್ತು ವೃದ್ಧಿಸುತ್ತವೆ. ಸಾಸಿವೆ ಹೂಗಳಿಂದ ಶಿವನ ಪೂಜಿಸಿದರೆ ಶತ್ರುತ್ವ ನಾಶವಾಗುತ್ತದೆ

ಶಿವನಿಗೆ ಮಂಗಳಾರತಿ ಮಾಡುವ ಕ್ರಮ ಹೇಗೆ?
ಶಿವನಿಗೆ ಮಂಗಳಾರತಿಗಳಲ್ಲಿ ಪಂಚಾರತಿ ಶ್ರೇಷ್ಠ. ಕಾಲ ಬಳಿ ನಾಲ್ಕು ಬಾರಿ, ನಾಭಿ ಮಂಡಲದಲ್ಲಿ ಎರಡು ಬಾರಿ, ಮುಖದ ಬಳಿ ಒಮ್ಮೆ ಹಾಗೂ ಸಂಪೂರ್ಣ ಅಂಗಗಳ ಬಳಿ ಏಳು ಬಾರಿ ಆರತಿಯನ್ನು ಮಾಡುವುದು ಹೇಳಿರುವ ಕ್ರಮ. ಇವುಗಳನ್ನು ಅನುಸರಿಸಿದರೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿದಂತಾಗುತ್ತದೆ.

ಮೃತ್ಯುಂಜಯ ಜಪಕ್ಕೆ ಹೇಳಿರುವ ವಿಶೇಷ ಫಲ
ನಪುಂಸಕತ್ವ ನಿವಾರಣೆಗಾಗಿ ಹತ್ತು ಸಾವಿರ ಸಂಖ್ಯೆಯಲ್ಲಿ ಮೃತ್ಯುಂಜಯ ಜಪ ಮಾಡಿ, ಶಿವನಿಗೆ ತುಪ್ಪದಲ್ಲಿ ಅಭಿಷೇಕ ಮಾಡಿ, ಹನ್ನೊಂದು ಮಂದಿ ಬ್ರಾಹ್ಮಣರಿಗೆ ಊಟ ಹಾಕಬೇಕು. ಬುದ್ಧಿಮಾಂದ್ಯ ಆಗಿದ್ದಲ್ಲಿ ಸಕ್ಕರೆಯನ್ನು ಹಾಲಿನಲ್ಲಿ ಬೆರೆಸಿ, ಆ ಹಾಲಿನಿಂದ ಮೃತ್ಯುಂಜಯ ಜಪ ಹತ್ತು ಸಾವಿರ ಸಂಖ್ಯೆಯಲ್ಲಿ ಮಾಡುತ್ತಾ, ಶಿವನಿಗೆ ಅಭಿಷೇಕ ಮಾಡಬೇಕು, ಹನ್ನೊಂದು ಜನ ಋತ್ವಿಜರಿಗೆ ಊಟ ಹಾಕಬೇಕು.

ಗಂಗಾ ಜಲದಿಂದ ಶಿವನಿಗೆ ಅಭಿಷೇಕ
ಮನೆಯಲ್ಲಿ ಜಗಳ, ಕಲಹ, ದುಃಖ ಉಂಟಾಗಿ ನೆಮ್ಮದಿ ಇಲ್ಲದೇ ಇದ್ದಲ್ಲಿ ಹತ್ತು ಸಾವಿರ ಸಂಖ್ಯೆಯಲ್ಲಿ ಮೃತ್ಯುಂಜಯ ಜಪ ಮಾಡುತ್ತಾ ಶಿವನಿಗೆ ಹಾಲಿನ ಅಭಿಷೇಕ ಅಥವಾ ಪರಿಮಳ ಭರಿತ ತೈಲದಿಂದ ಅಭಿಷೇಕ ಮಾಡಬೇಕು. ಕ್ಷಯ ರೋಗ ನಿವೃತ್ತಿಗೆ ಹತ್ತು ಸಾವಿರ ಸಂಖ್ಯೆಯಲ್ಲಿ ಮೃತ್ಯುಂಜಯ ಜಪ ಮಾಡುತ್ತಾ ಶಿವನಿಗೆ ಜೇನು ತುಪ್ಪದಲ್ಲಿ ಅಭಿಷೇಕ ಮಾಡಿ, ಹನ್ನೊಂದು ಜನ ಋತ್ವಿಜರಿಗೆ ಊಟ ಹಾಕಿಸಬೇಕು. ಮೃತ್ಯುಂಜಯ ಮಂತ್ರವನ್ನು ಹತ್ತು ಸಾವಿರ ಬಾರಿ ಜಪಿಸುತ್ತಾ ಶಿವನಿಗೆ ಗಂಗಾ ಜಲದಲ್ಲಿ ಅಭಿಷೇಕ ಮಾಡಿಸಿ, ಹನ್ನೊಂದು ಜನ ಋತ್ವಿಜರಿಗೆ ಭೋಜನ ಹಾಕಿಸಿದಲ್ಲಿ ಮೋಕ್ಷ ಪ್ರಾಪ್ತಿ ಹಾಗೂ ಎಲ್ಲಾ ಸುಖ ಭೋಗ ಪ್ರಾಪ್ತಿ.

ನಂಬಿಕೆ, ಶ್ರದ್ಧೆ ಹಾಗೂ ವಿಶ್ವಾಸವಿರಲಿ
ವಿಷ್ಣು ಅಲಂಕಾರಪ್ರಿಯನಾದರೆ, ಶಿವನು ಅಭಿಷೇಕಪ್ರಿಯ ಎಂಬ ನಂಬಿಕೆ ಇದೆ. ತಂದೆಯ ಎದುರು ಮಕ್ಕಳು ತಮಗೆ ಬೇಕಾದ ನ್ಯಾಯಯುತ ಹಾಗೂ ಪೂರೈಸಬಹುದಾದ ಕೋರಿಕೆಯನ್ನು ಹೇಗೆ ಸಲ್ಲಿಸುತ್ತಾರೋ ಹಾಗೇ ಆ ದೇವರ ಎದುರು ಬೇಡುವುದು ಉಂಟು. ಅವುಗಳ ಪೈಕಿ ಕೆಲವು ಇಹಕ್ಕೆ ಸಂಬಂಧಿಸಿದ್ದಾದರೆ, ಕೆಲವು ಪರಕ್ಕೆ ಸಂಬಂಧಿಸಿದವು. ಶ್ರದ್ಧೆ- ಭಕ್ತಿಯಿಂದ ಸಲ್ಲಿಸಿದ ಪ್ರಾರ್ಥನೆಗೆ ಆ ದೇವರು ಓಗೊಡುತ್ತಾನೆ. ನಂಬಿಕೆ, ಶ್ರದ್ಧೆ ಹಾಗೂ ವಿಶ್ವಾಸವಿರಲಿ.












Click it and Unblock the Notifications