ಮಕರ ರಾಶಿಗೆ ವಿಳಂಬಿ ಸಂವತ್ಸರ ಫಲ ಹೇಗಿದೆ ನೋಡಿ...
ಈ ದಿನದ ಲೇಖನದಲ್ಲಿ ವಿಳಂಬಿನಾಮ ಸಂವತ್ಸರದಲ್ಲಿ ಮಕರ ರಾಶಿಯವರ ಆದಾಯ, ಆರೋಗ್ಯ, ಸನ್ಮಾನ- ಗೌರವಗಳು ಹಾಗೂ ಕೆಲ ಸಾಮಾನ್ಯ ಫಲಗಳು ಹೇಗಿರುತ್ತವೆ ಎಂಬುದನ್ನು ನೋಡೋಣ. ಉತ್ತರಾಷಾಢ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಶ್ರವಣ ನಕ್ಷತ್ರದ ಒಂದರಿಂದ ನಾಲ್ಕನೇ ಪಾದ, ಧನಿಷ್ಠಾ ನಕ್ಷತ್ರದ ಒಂದು ಮತ್ತು ಎರಡನೇ ಪಾದ ಮಕರ ರಾಶಿ ಆಗುತ್ತದೆ.
ಈ ರಾಶಿಯ ಅಧಿಪತಿ ಶನಿ. ಸದ್ಯದ ಗೋಚಾರ ಸ್ಥಿತಿಯನ್ನು ಗಮನಿಸಿದರೆ, ಮಕರ ರಾಶಿಯಲ್ಲೇ ಕೇತು ಗ್ರಹ ಇದೆ. ಅಲ್ಲಿಂದ ಏಳನೇ ಮನೆಯಲ್ಲಿ ರಾಹು ಇದೆ. ಹನ್ನೆರಡನೇ ಸ್ಥಾನದಲ್ಲಿ ಶನಿ ಇದ್ದು, ಸಾಡೇ ಸಾತ್ ಶನಿಯ ಆರಂಭ ಘಟ್ಟವಿದು. ಇನ್ನು ಗುರುವು ಹತ್ತನೇ ಸ್ಥಾನದಲ್ಲಿದ್ದು, ಅಕ್ಟೋಬರ್ ನಲ್ಲಿ ಹನ್ನೊಂದನೇ ಮನೆಗೆ ಪ್ರವೇಶ ಆಗುತ್ತದೆ.
ವಾಸ್ತು ಟಿಪ್ಸ್: ಈ 9 ವಸ್ತುಗಳು ಮನೆಯಲ್ಲಿದ್ದರೆ ಎಚ್ಚರ!
ಸಾಡೇ ಸಾತ್ ಶನಿಯ ಆರಂಭದ ಕಾಲ ಆದ್ದರಿಂದ ಕೆಲ ಮಟ್ಟಿಗೆ ಗೊಂದಲ ಸಹಜ. ಅದರಲ್ಲು ಮುಖ್ಯವಾಗಿ ಉದ್ಯೋಗ-ವ್ಯಾಪಾರ ಸ್ಥಾನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಇರುತ್ತವೆ. ಇನ್ನು ಏಳನೇ ಸ್ಥಾನದಲ್ಲಿನ ರಾಹು ದಾಂಪತ್ಯ ಜೀವನದಲ್ಲಿ ಕೆಲ ಅನುಮಾನ- ಜಗಳ- ಕಲಹಗಳಿಗೆ ಇಂಬು ನೀಡುತ್ತದೆ. ಮುಖ್ಯವಾಗಿ ಆರೋಗ್ಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾದ ಕಾಲ ಇದು.
ಸಂವತ್ಸರದ ಆದಾಯ-ವ್ಯಯ ಮತ್ತಿತರ ವಿಚಾರ
ವಿಳಂಬಿನಾಮ ಸಂವತ್ಸರದಲ್ಲಿ ಮಕರ ರಾಶಿಯವರ ಆದಾಯ 8, ವ್ಯಯ 14 ಇದೆ. ಇನ್ನು ಆರೋಗ್ಯ 2, ಅನಾರೋಗ್ಯ 3, ರಾಜಪೂಜಾ 5 ಹಾಗೂ ರಾಜ ಕೋಪ 6 ಮತ್ತು ಸುಖ 3, ದುಃಖ 3 ಹೀಗಿವೆ. ಮುಖ್ಯವಾಗಿ ಖರ್ಚು ಹೆಚ್ಚು ತರುವ ಸಂವತ್ಸರ ಇದು. ಅದರಲ್ಲೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಖರ್ಚುಗಳು ಹೆಚ್ಚಾಗಲಿವೆ. ಸಾರ್ವಜನಿಕ ಜೀವನದಲ್ಲಿ ಅಲ್ಪ ಮಟ್ಟಿಗಿನ ಅವಮಾನ ಎದುರಿಸಬೇಕಾಗುತ್ತದೆ. ಸುಖ- ದುಃಖ ಸಮನಾಗಿ ಇರಲಿದೆ.
ಶ್ರವಣ ನಕ್ಷತ್ರದವರು ಎಚ್ಚರವಾಗಿರಬೇಕು
ಈಗಾಗಲೇ ಉತ್ತರಾಷಾಢ ನಕ್ಷತ್ರದ ಕಂದಾಯ ಫಲವನ್ನು ತಿಳಿಸಲಾಗಿದೆ. ಮೊದಲ ನಾಲ್ಕು ತಿಂಗಳು ಚೆನ್ನಾಗಿದ್ದು, ಆ ನಂತರ ಸಾಧಾರಣವಾದ ಒಳ ಹರಿವು ಇರುತ್ತದೆ. ಆದರೆ ನಿಜವಾದ ಸಮಸ್ಯೆ ಇರುವುದು ಶ್ರವಣ ನಕ್ಷತ್ರದವರಿಗೆ. ಮೊದಲ ನಾಲ್ಕು ತಿಂಗಳು ತೀರಾ ಸಾಧಾರಣ ಆಗಿರುತ್ತದೆ. ಆ ನಂತರದ ಎಂಟು ತಿಂಗಳು ಆದಾಯಕ್ಕೆ ಅಡೆ-ತಡೆ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಯಾವುದೇ ಕಾರಣಕ್ಕೂ ಉದ್ಯೋಗ-ವ್ಯವಹಾರ- ವ್ಯಾಪಾರದ ವಿಚಾರದಲ್ಲಿ ಅಹಂಕಾರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಎದುರಿನವರು ಆಡುವ ಪ್ರತಿ ಮಾತಿಗೆ ಎರಡೆರಡು ಅರ್ಥ ಹುಡುಕುವ ಪ್ರಯತ್ನ ಬೇಡ. ಇನ್ನು ಧನಿಷ್ಠಾ ನಕ್ಷತ್ರದವರಿಗೆ ಮೊದಲ ಹಾಗೂ ಕೊನೆಯ ನಾಲ್ಕು ತಿಂಗಳು ಅಡ್ಡಿ ಇಲ್ಲ. ಮಧ್ಯದ ನಾಲ್ಕು ತಿಂಗಳು ಒಂದಿಷ್ಟು ಸವಾಲುಗಳಿರುತ್ತವೆ.
ಹೊಸ ರೀತಿಯ ಜೀವನ ಪಾಠಗಳು
ಸಾಡೇಸಾತ್ ನ ಆರಂಭದ ಘಟ್ಟದಲ್ಲಿರುವ ಮಕರ ರಾಶಿಯವರಿಗೆ ಈಗ ಹೊಸ ರೀತಿಯ ಜೀವನ ಪಾಠಗಳು ಎದುರಾಗುತ್ತವೆ. ಮುಖ್ಯವಾಗಿ ನಿಮಗೆ ಎದುರಾಡದೇ ಇದ್ದ, ನಿಮ್ಮೆದುರು ತಲೆ ತಗ್ಗಿಸಿ, ಹೇಳಿದ ಮಾತನ್ನು ಕೇಳಿಕೊಂಡಿದ್ದವರ ವರ್ತನೆಯಲ್ಲಿ ಭಾರೀ ವ್ಯತ್ಯಾಸ ಆಗುತ್ತದೆ. ನಿಮಗಿಂತ ಸಣ್ಣ ಜನರನ್ನು ಹಣಿಯುವ ಪ್ರಯತ್ನದಲ್ಲಿ ಅವಮಾನದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಅತಿ ಆತ್ಮವಿಶ್ವಾಸ ಒಳಿತಲ್ಲ. ಮನೆಯಲ್ಲಿ ಬಾಳಸಂಗಾತಿಯೊಡನೆಯೂ ಜಗಳ ಮಾಡಿಕೊಂಡು ಮಾತು ಬಿಟ್ಟರೆ ಅದು ನಿಮಗೇ ಕಷ್ಟ.
ಸಾಲದ ಸುಳಿಗೆ ಸಿಲುಕದಂತೆ ಎಚ್ಚರ ವಹಿಸಿ
ಕ್ರೆಡಿಟ್ ಕಾರ್ಡ್ ಸಾಲ ಬಾಕಿ ಉಳಿಸಿಕೊಂಡಿದ್ದರೆ, ಗೋಲ್ಡ್ ಲೋನ್ ತೆಗೆದುಕೊಂಡಿದ್ದರೆ ಅಥವಾ ಇನ್ಯಾವುದೇ ಸಾಲದ ಸುಳಿಗೆ ಸಿಲುಕಿದ್ದರೆ ಅವಮಾನ ಹಾಗೂ ನಷ್ಟ ಸಾಧ್ಯತೆ ಇದೆ. ಅಕ್ಟೋಬರ್ ವರೆಗೆ ಒಂದಿಷ್ಟು ಲೆಕ್ಕಾಚಾರ ಇಟ್ಟುಕೊಳ್ಳಿ. ತೋರಿಕೆಗಾಗಿ ಖರ್ಚು ಹೆಚ್ಚು ಮಾಡಿ, ಆ ಮೇಲೆ ಸಾಲದಿಂದ ಪರಿತಪಿಸುವ ಸಾಧ್ಯತೆ ಇದೆ. ಅಕ್ಟೋಬರ್ ವರೆಗಂತೂ ಆದಷ್ಟು ಮಾತು ಕಡಿಮೆ ಮಾಡಿಕೊಂಡು, ನೀವಾಯಿತು- ನಿಮ್ಮ ಕೆಲಸ ಆಯಿತು ಎಂದಿದ್ದರೆ ಒಳಿತು.