ವಿವಾಹ, ಸಂತಾನ ದೋಷ ನಿವಾರಣೆಗೆ ಮುಗ್ವಾ ಸುಬ್ರಹ್ಮಣ್ಯ ದರ್ಶನ
ಮದುವೆ ವಿಳಂಬ, ಸಂತಾನ ಸಮಸ್ಯೆ ಸೇರಿದಂತೆ ನಾನಾ ರೀತಿಯ ಕುಜ-ಸರ್ಪ ದೋಷ ನಿವಾರಣೆಗಾಗಿ ಮುಗ್ವಾ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿ. ನಾರದ ಮಹರ್ಷಿಗಳು ಪ್ರತಿಷ್ಠಾಪನೆ ಮಾಡಿದ ಈ ಕ್ಷೇತ್ರದಲ್ಲಿ ಪ್ರಾರ್ಥನೆ ಶೀಘ್ರ ಫಲಿಸುತ್ತದೆ
ಸರ್ಪ ದೋಷ, ಕುಜ ದೋಷ ಇತ್ಯಾದಿಗಳ ಸಮಸ್ಯೆಗಳಿಂದ ಪರದಾಡುತ್ತಿರುವ ಹಲವರನ್ನು ನಾವು ಇಂದು ಕಾಣಬಹುದು. 'ಸರ್ಪ ಶಾಪಾತ್ ಕುಲಕ್ಷಯಃ' ಎಂಬ ಶಾಸ್ತ್ರ ವಾಕ್ಯದಂತೆ ಸರ್ಪ ಶಾಪ ಅಥವಾ ನಾಗ ದೋಷದಿಂದ ಕುಲ ನಾಶ ಎಂದು ಹೇಳುತ್ತಾರೆ ಅಂದರೆ ಸಂತಾನ ಆಗದೇ ಕುಲ ಅಲ್ಲಿಗೇ ನಿಂತು ಹೋಗುತ್ತದೆ. ಇನ್ನೂ ಬಲವಾಗಿ ಸರ್ಪ ಶಾಪ ಅಥವಾ ದೋಷಗಳು ಇದ್ದಾಗ ಕುಟುಂಬದಲ್ಲಿ ಅಕಾಲಿಕ ಮರಣಗಳು ಆಗಿ ಆ ಕುಟುಂಬ ಅಥವಾ ಕುಲ ನಾಶ ಆಗುತ್ತದೆ.
ಇನ್ನು ಇದೇ ಸರ್ಪ ಶಾಪ ಅಥವಾ ನಾಗ ದೋಷದಿಂದಾಗಿ ಆರೋಗ್ಯ ಸಮಸ್ಯೆ, ಚರ್ಮ ರೋಗಗಳು ಸಹ ಆಗಿ ಕಷ್ಟ ಅನುಭವಿಸುತ್ತ ಇರುವವರನ್ನು ಹಲವರನ್ನು ಕಾಣಬಹುದು. ಕೆಲವರಿಗೆ ಈ ಸರ್ಪ ದೋಷದಿಂದ ಉದ್ಯೋಗ ಬಾಧೆಗಳಾದರೆ, ಕೆಲವರಿಗೆ ವಿವಾಹ ಆಗದೇ ಸಮಸ್ಯೆ ಆಗುತ್ತದೆ.[ಜ್ಯೋತಿಷ್ಯ: ರಾಹು ಗ್ರಹವು ಕೊಟ್ಟರೆ ವರ, ಇಟ್ಟರೆ ಶಾಪ!]
ವಿವಾಹ ಅಥವಾ ವಿವಾಹದ ನಂತರದ ದಾಂಪತ್ಯ ಜೀವನದಲ್ಲಿ ಸಮಸ್ಯೆ ಆಗಬಾರದು ಎಂದಾದಲ್ಲಿ ಜಾತಕದಲ್ಲಿ ಕುಜ ದೋಷ ಇರಬಾರದು. ಹಾಗೆ ಕುಜ ದೋಷ ಇದ್ದಲ್ಲಿ ಮೊದಲು ವಿವಾಹಕ್ಕೆ ಹಾಗೂ ವಿವಾಹದ ನಂತರ ಸುಖ ದಾಂಪತ್ಯ ಜೀವನ ನಡೆಸದಂತೆ ಕುಜ ದೋಷ ಅಡ್ಡಗೋಡೆ ಆಗಿ ನಿಲ್ಲುತ್ತದೆ.
ಶೀಘ್ರ ಫಲ ನೀಡುವ ಬಾಲಸುಬ್ರಹ್ಮಣ್ಯ
ಹೀಗಿರುವಾಗ ಈ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ ಒಂದೇ ಅಗಿದ್ದಾಗ ಅದು ಸರ್ಪ ಶಾಪ ಅಥವಾ ನಾಗ ದೋಷ ಆಗಿದ್ದಲ್ಲಿ ಅಥವಾ ಕುಜ ದೋಷ ಆಗಿದ್ದಲ್ಲಿ ಸುಬ್ರಹ್ಮಣ್ಯ ದೇವರ ಆರಾಧನೆ ಬಹಳ ಪ್ರಾಮುಖ್ಯ ಹೊಂದಿರುತ್ತದೆ. ಅಂಥ ಸುಬ್ರಹ್ಮಣ್ಯ ದೇವರ ಕ್ಷೇತ್ರಗಳು ಎಲ್ಲರಿಗೂ ಸಹ ತಿಳಿದಿದೆ. ಆದರೆ ಅತ್ಯಂತ ಶೀಘ್ರ ಫಲ ನೀಡುವ, ಸಾಕ್ಷಾತ್ ನಾರದ ಮಹರ್ಷಿಗಳಿಂದಲೇ ಪ್ರತಿಷ್ಠಾಪನೆಯಾದ ಬಾಲ ಸುಬ್ರಹ್ಮಣ್ಯ ಸ್ವಾಮಿಯ ದಿವ್ಯ ಕ್ಷೇತ್ರ ಒಂದಿದೆ.
ಪವಾಡ ಸದೃಶ ದೇಗುಲ
ಆ ಕ್ಷೇತ್ರದ ಪರಿಚಯ ಮಾಡಿಕೊಡುತ್ತಿದ್ದೇನೆ. ಅದರ ಹೆಸರು 'ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯ ದೇವರು'. ಅಂಥ ಪವಾಡ ಸದೃಶ ದೇಗುಲ ಇರುವುದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ. ಇಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ದೇವರ ಬಿಂಬವನ್ನು ಸ್ವತಃ ನಾರದ ಮಹರ್ಷಿಗಳೇ ಪ್ರತಿಷ್ಠಾಪಿಸಿದರೆಂದು ಪುರಾಣಗಳು ಹೇಳುತ್ತವೆ.
ಸಂಕಲ್ಪ ಸಿದ್ಧಿ
ಈ ಕ್ಷೇತ್ರವನ್ನು ದಕ್ಷಿಣ ನಾಸಿಕಾ ಕ್ಷೇತ್ರ ಅಂದರೆ ಮೂಗುತಿ ಕ್ಷೇತ್ರ ಎಂದ ಸಹ ಪುರಾಣಗಳು ಸಾರುತ್ತವೆ. ಸುಬ್ರಹ್ಮಣ್ಯ ಸ್ವಾಮಿಯ ಈ ದಿವ್ಯ ಕ್ಷೇತ್ರದಲ್ಲಿ ಮಾಡಿದ ಹರಕೆ ತೀರದ ಉದಾಹರಣೆ ಇಲ್ಲ! ಭಕ್ತಿಯಿಂದ ಮಾಡಿದ ಸೇವೆ ನಂಬಿ, ಮಾಡಿದ ಪ್ರಾರ್ಥನೆ ಇಲ್ಲಿ ವೃಥಾ ಆದ ಇತಿಹಾಸವೇ ಇಲ್ಲ. ಆದರೆ ಹರಕೆ ಮಾಡಿಕೊಂಡ ನಂತರ ನಿಮ್ಮ ಸಂಕಲ್ಪ ಸಿಧ್ಧಿಸಿದ ಮೇಲೆ ಮತ್ತೆ ಹರಿಕೆ ತೀರಿಸದೆ ಕಾಲಹರಣ ಮಾಡಿದರೆ ಅಥವಾ ಸ್ವಾಮಿಯನ್ನು ಮರೆತರೆ ಆಗುವ ಅನಾಹುತಗಳಿಗೂ ಲೆಕ್ಕವಿಲ್ಲ!
ಗಂಧ ಪ್ರಸಾದ
ಸಂತಾನ ಆಗದ ದಂಪತಿಗಳಿಗೆ ಇಲ್ಲಿ ಸ್ವಾಮಿಗೆ ಹಚ್ಚಿದ ಗಂಧವನ್ನು ಪ್ರಸಾದವಾಗಿ ಕೊಡಲಾಗುತ್ತದೆ. ಆ ಗಂಧವನ್ನು ಹೊಟ್ಟೆಗೆ ಸ್ವೀಕರಿಸಿ, ಸನ್ನಿಧಾನದಲ್ಲಿ ಸಂತಾನಕ್ಕಾಗಿ ಹರಕೆ ಮಾಡಿಕೊಳ್ಳಬೇಕು. ಹೀಗೆ ಮಾಡಿ ನಂತರ ಸಂತಾನ ಪಡೆದ ದಂಪತಿ ಲೆಕ್ಕವಿಲ್ಲದಷ್ಟು ಇದ್ದಾರೆ. ಸರ್ಪ ದೋಷ ಇರುವವರು ಚಿಕ್ಕದೊಂದು ಬೆಳ್ಳಿಯ ನಾಗರ ಬಿಂಬವನ್ನು ತಂದು ಇಲ್ಲಿ ಸ್ವಾಮಿಗೆ ಸಮರ್ಪಿಸಿದರೆ ದೋಷ ಮುಕ್ತಿಯನ್ನು ಪಡೆಯಬಹುದು.
6 ತುಪ್ಪದ ದೀಪ ಹಚ್ಚಬೇಕು
ಮನಸ್ಸಿನಲ್ಲಿ ಕೋರಿಕೆಗಳು ಹಲವು ಇರುತ್ತವೆ. ಅಂಥವರು ಅಲ್ಲಿಗೆ ಹೋಗಿ 6 ತುಪ್ಪದ ದೀಪವನ್ನು ಸ್ವತಃ ತಾವೇ ಹಚ್ಚಿ, ಸ್ವಾಮಿಗೆ ಪ್ರಾರ್ಥನೆ ಮಾಡಿಕೊಳ್ಳಬಹುದು. ಇನ್ನು ಈ ದಿವ್ಯ ಕ್ಷೇತ್ರದಲ್ಲಿ ಬಾಳೆಗೊನೆ ಸೇವೆ ಬಹಳ ಪ್ರಮುಖ ಹಾಗೂ ವಿಶಿಷ್ಠ! ಕಾರಣ ನೈವೇದ್ಯಕ್ಕೆ ಒಂದು ಸಂಪೂರ್ಣ ಬಾಳೆಗೊನೆಯನ್ನು ಕೊಂಡೊಯ್ಯಬೇಕು. ಬಹಳ ಮುಖ್ಯವಾಗಿ ಆ ಗೊನೆಯಲ್ಲಿ ಒಂದೇ ಒಂದು ಬಾಳೆಹಣ್ಣನ್ನು ಸಹ ಕಿತ್ತಿರ ಬಾರದು!
ಸಂಪೂರ್ಣ ಬಾಳೆಗೊನೆ ಅರ್ಪಣೆ
ಹಾಗೆಯೇ ಸಂಪೂರ್ಣ ಬಾಳೆಗೊನೆ ನೈವೇದ್ಯ ಮಾಡಿಸಿ ಅಲ್ಲೇ ದೇಗುಲಕ್ಕೆ ಭೇಟಿ ಕೊಡುವ ಭಕ್ತಾದಿಗಳಿಗೆ ಹಂಚುವುದ ವಾಡಿಕೆ. ಇನ್ನು ಈ ದೇಗುಲದಲ್ಲಿ ಎಲ್ಲರೂ ಮಾಡಬಹುದಾದ ಸೇವೆ ಅಂದರೆ, ಫಲ ಪಂಚಾಮೃತ ಅಭಿಷೇಕ, ಅರ್ಚನೆ, ಬೆಳ್ಳಿ ನಾಗಬಿಂಬ ಸಮರ್ಪಣೆ, 6 ತುಪ್ಪದ ದೀಪಗಳ ಹಚ್ಚುವುದು, 6೦೦ ಕುಜ ಅಥವಾ ಸರ್ಪ ಜಪ ಅಥವಾ ಸುಬ್ರಹ್ಮಣ್ಯ ಜಪ, ಕನಿಷ್ಠ 28 ಪ್ರದಕ್ಷಿಣೆ.
ದೇಗುಲದ ವೇಳೆ ಇತರ ಮಾಹಿತಿ
ದೇಗುಲದ ಪೂಜಾ ವೇಳೆ ಬೆಳಗ್ಗೆ 8.30 ರಿಂದ 12.30, ಮಧ್ಯಾಹ್ನ 3ರಿಂದ 8.30. ಅಭಿಷೇಕದ ವೇಳೆ ಬೆಳಗ್ಗೆ 10 ಹಾಗೂ 11. ಷಷ್ಠಿ ದಿನದಂದು ಬೆಳಗ್ಗೆ 10, 11 ಹಾಗೂ ಮಧ್ಯಾಹ್ನ 12. ಹೆಚ್ಚಿನ ಮಾಹಿತಿ ಅಥವಾ ಸೇವೆ ಸಲ್ಲಿಸಲು ಕಾರ್ಯಾಲಯ ಸಂಪರ್ಕ ಸಂಖ್ಯೆ 08387279572.