ಮಹಾಲಯ ಅಮಾವಾಸ್ಯೆ ಸೆಪ್ಟೆಂಬರ್ 17ಕ್ಕೆ; ಆಚರಣೆ, ವಿಶೇಷ ಮತ್ತಿತರ ಮಾಹಿತಿ
ಈ ವರ್ಷದ ಮಹಾಲಯ ಅಮಾವಾಸ್ಯೆ ಸೆಪ್ಟೆಂಬರ್ 17, 2020ರ ಗುರುವಾರ ಬಂದಿದೆ. ಮಹಾಲಯ ಅಮಾವಾಸ್ಯೆ ಎಂಬುದು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದಿನಗಳ ಪೈಕಿ ಒಂದು. ಕುಟುಂಬದಲ್ಲಿ ತೀರಿಕೊಂಡ ಎಲ್ಲ ಹಿರಿಯರನ್ನು ಸ್ಮರಿಸಿ, ಆ ದಿನ ತರ್ಪಣವನ್ನು ನೀಡಲಾಗುತ್ತದೆ. ಮನೆಯಲ್ಲಿ ತೀರಿಹೋದ ಹಿರಿಯರನ್ನು ಪಿತೃ ದೇವತೆಗಳು ಅಂತಲೇ ಕರೆಯಲಾಗುತ್ತದೆ.
ಪಿತೃಗಳು ಅಂದಾಕ್ಷಣ ವಯಸ್ಸಿನ ಭೇದವಿಲ್ಲದೆ ತೀರಿಕೊಂಡ ಕುಟುಂಬದ ಎಲ್ಲರೂ ಆ ಸ್ಥಾನವನ್ನು ಪಡೆಯುತ್ತಾರೆ. ಈ ದಿನವನ್ನು ಸರ್ವ ಪಿತೃ ಅಮಾವಾಸ್ಯೆ ಅಂತಲೂ ಕರೆಯುವುದು ಉಂಟು. ಪಿತೃ ಪಕ್ಷದ ಅಮಾವಾಸ್ಯೆಯಂದು ಎಲ್ಲ ಜಾತಿಯವರು ಸಹ ತಮ್ಮ ಕುಟುಂಬದ ಹಿರಿಯರ ಸ್ಮರಣೆ ಮಾಡುತ್ತಾರೆ. ಈ ಪೈಕಿ ಒಂದೊಂದು ಸಮುದಾಯ ಒಂದೊಂದು ರೀತಿಯಲ್ಲಿ ಆಚರಣೆಯನ್ನು ಮಾಡುತ್ತದೆ. ತಮ್ಮ ಕುಟುಂಬದ ಹಿರಿಯರು ಇಷ್ಟಪಟ್ಟು ಬಳಸುತ್ತಿದ್ದ ಎಲ್ಲ ವಸ್ತುಗಳನ್ನು ಅವರ ಭಾವಚಿತ್ರದ ಎದುರು ಇರಿಸಿ, ಸ್ಮರಿಸಲಾಗುತ್ತದೆ.
ಸಾಮಾನ್ಯವಾಗಿ ಮಹಾಲಯ ಅಮಾವಾಸ್ಯೆಯ ಮಾರನೇ ದಿನದಿಂದ ಒಂಬತ್ತು ದಿನಗಳ ಕಾಲ ಶರನ್ನವರಾತ್ರಿ ಆರಂಭವಾಗುತ್ತದೆ. ಆದರೆ ಈ ಬಾರಿ ಮಹಾಲಯ ಅಮಾವಾಸ್ಯೆಯ ಮರುದಿನದಿಂದ ಆಶ್ವಯುಜ ಅಧಿಕ ಮಾಸ ಬಂದಿರುವುದರಿಂದ ಶರನ್ನವರಾತ್ರಿ ಶುರುವಾಗುವುದಿಲ್ಲ. ಪಿತೃಗಳ ಸ್ಮರಣೆ, ಆರಾಧನೆಯಿಂದ ಎಲ್ಲ ರೀತಿಯಲ್ಲೂ ಒಳಿತಾಗುತ್ತದೆ.
"ಉಳಿದ ದೇವತೆಗಳ ಆರಾಧನೆಯನ್ನು ಮಾಡಲು ಸಾಧ್ಯವಾಗದೇ ಹೋಗಬಹುದು. ಅಥವಾ ಆಯಾ ವ್ಯಕ್ತಿಗಳ ನಂಬಿಕೆ ಮೇಲೆ ಆ ವಿಚಾರ ಬಿಟ್ಟಿದ್ದು. ಆದರೆ ಪಿತೃದೇವತೆಗಳ ಆರಾಧನೆಯನ್ನು ಮಾತ್ರ ಕಡ್ಡಾಯವಾಗಿ ಮಾಡಬೇಕು. ಇದರಿಂದ ವಂಶಾಭಿವೃದ್ಧಿಯೂ ಸೇರಿದ ಹಾಗೆ ಹಲವು ಬಗೆಯಲ್ಲಿ ಶ್ರೇಯಸ್ಕರ" ಎಂದು ತಿಳಿಸಿದರು ಅಧ್ಯಾತ್ಮ ಚಿಂತಕರು ಹಾಗೂ ಜ್ಯೋತಿಷಿ ಶಂಕರ್ ಭಟ್.
ಇನ್ನೊಮ್ಮೆ ನೆನಪಿಸುತ್ತಿದ್ದೇವೆ ಸೆಪ್ಟೆಂಬರ್ 17, 2020ರಂದು ಮಹಾಲಯ ಅಮಾವಾಸ್ಯೆ ಆಚರಣೆಯನ್ನು ಮಾಡಬೇಕು. ಕುಟುಂಬದಲ್ಲಿ ತೀರಿಕೊಂಡ ಹಿರಿಯರಿಗೆ ಈ ತನಕ ನಡೆಸಿಕೊಂಡು ಬಂದ ಸಂಪ್ರದಾಯದ ರೀತ್ಯಾ ಆರಾಧನೆಯನ್ನು ಮಾಡಬೇಕು.
ಸೆಪ್ಟೆಂಬರ್ 16ನೇ ತಾರೀಕಿನ ಬುಧವಾರ ಘಾತ ಚತುರ್ದಶಿ ಇದೆ. ಆ ದಿನ ಮನೆಯಲ್ಲಿ ದುರ್ಮರಣಕ್ಕೆ ಈಡಾದವರಿಗೆ ತರ್ಪಣ ನೀಡಬೇಕು. ನೀರಿನಲ್ಲಿ ಮುಳುಗಿ ತೀರಿಕೊಂಡವರು, ಅಪಘಾತ, ಆತ್ಮಹತ್ಯೆ ಹೀಗೆ ದುರ್ಮರಣಕ್ಕೆ ಈಡಾದವರಿಗೆ ತರ್ಪಣವನ್ನು ನೀಡಬೇಕು.