ಮಕರ ರಾಶಿಯವರಿಗೆ ಗುರು-ಶನಿ ನೀಡುತ್ತಿರುವ ಕೊನೆ ಅವಕಾಶ ಏನು ಗೊತ್ತೆ?
ಮಕರ ರಾಶಿಯವರಿಗೆ ಈಗೊಂದು ನೀತಿ ಪಾಠ ಹೇಳಿ, ಆ ನಂತರ ಲೇಖನ ಆರಂಭಿಸುತ್ತೇನೆ. ಇರುವೆಗಳು ಬೇಸಿಗೆಕಾಲದಲ್ಲಿ ಉಳಿದ ಕಾಲ, ಅಂದರೆ ಚಳಿ ಹಾಗೂ ಮಳೆಗಾಲಕ್ಕಿಂತ ಹೆಚ್ಚು ಶ್ರಮಪಟ್ಟು ಆಹಾರ ಸಂಗ್ರಹ ಮಾಡುತ್ತವೆ. ಏಕೆಂದರೆ, ಮುಂದಿನ ಕಾಲ ಅದೆಂಥ ಸನ್ನಿವೇಶ ಎದುರಾಗಬಹುದೋ ಗೊತ್ತಿಲ್ಲ. ದುಡಿಯುವ ಶಕ್ತಿ ಇದ್ದಾಗ, ಆಹಾರ ಕಣ್ಣಿಗೆ ಕಾಣುವಾಗ ಆಪತ್ಕಾಲಕ್ಕೆ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು.
ಕಳೆದ ಅಕ್ಟೋಬರ್ ಹನ್ನೊಂದನೇ ತಾರೀಕು ನಿಮ್ಮ ಜನ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತಿದೆ. ಹನ್ನೆರಡನೇ ಮನೆಯಲ್ಲಿ ನಿಮ್ಮದೇ ರಾಶ್ಯಾಧಿಪತಿ ಶನಿಯು ಸ್ಥಿತನಾಗಿದ್ದಾನೆ. ಈ ಎರಡು ಗ್ರಹದ ಫಲ ನಿಮ್ಮ ಪಾಲಿಗೆ ಹೇಗೆ ಸಿಗಬಹುದು. ಮುಂದಿನ ವರ್ಷದ ನವೆಂಬರ್ ಐದನೇ ತಾರೀಕಿನ ತನಕ ಗುರು ಅದೇ ಹನ್ನೊಂದನೇ ಮನೆಯಲ್ಲಿ ಇರುತ್ತದೆ.
ಕರ್ಕಾಟಕ ರಾಶಿಯವರಿಗೆ ಅನುಕೂಲದ ಸಮಯವಿದು, ಮೈ ಮರೆಯದಿರಿ
ಶನಿ ಗ್ರಹವು 2020ನೇ ಇಸವಿಯ ಜನವರಿ ತನಕ ಹನ್ನೆರಡನೇ ಮನೆಯಲ್ಲೇ ಇರುತ್ತದೆ. ಆದರೆ ನಂತರ ಜನ್ಮ ರಾಶಿಗೆ ಪ್ರವೇಶ ಮಾಡುತ್ತದೆ ವಿನಾ ದೊಡ್ಡ ಮಟ್ಟದಲ್ಲಿ ಸಮಾಧಾನ ಆಗುವಂಥ ಸನ್ನಿವೇಶ ಏನೂ ಸೃಷ್ಟಿ ಆಗಿಲ್ಲ. ಈಗ ಮೊದಲು ಹೇಳಿದ ಉದಾಹರಣೆ ಇರುವೆಯದು. ಆ ವಿಚಾರಕ್ಕೆ ಬರುತ್ತೇನೆ. ಈ ಒಂದು ವರ್ಷ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತಕ್ಕ ಮಟ್ಟಿಗಿನ ಚೇತರಿಕೆ, ಸುಧಾರಣೆ ಕಾಣುತ್ತದೆ.
ಆದರೆ, ಅದನ್ನೇ ಶಾಶ್ವತ ಎಂಬ ಅತಿಯಾದ ಆತ್ಮವಿಶ್ವಾಸ ಬೇಡ. ಹಣವನ್ನು ಕೂಡಿಟ್ಟುಕೊಳ್ಳುವುದು ಬಹಳ ಮುಖ್ಯ. ಇನ್ನು ಸಾಲವಂತೂ ಬೇಡವೇ ಬೇಡ.
ಹಣವನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳುವುದು ಜಾಣ್ಮೆ
ಮೊದಲಿಗೆ ಶುಭ ಫಲವನ್ನೇ ನೋಡಿಬಿಡೋಣ. ಹನ್ನೊಂದನೇ ಮನೆಯಲ್ಲಿನ ಗುರು ಅಂದರೆ ಲಾಭ ಸ್ಥಾನದಲ್ಲಿದೆ. ಕಾನೂನು ತೊಡಕುಗಳ ಕಾರಣಕ್ಕೆ ಸರಕಾರ ಅಥವಾ ಬೇರೆ ದೇಶ ಅಥವಾ ಬೇರೆ ವ್ಯಕ್ತಿ ಬಳಿ ಸೇರಿಹೋಗಿದ್ದ ನಿಮ್ಮದೇ ಹಣ-ಆಸ್ತಿ, ಸರಕು, ಬಾಕಿ ವಾಪಸ್ ಬರುವ ಅವಕಾಶಗಳು ಹೆಚ್ಚಾಗಿರುತ್ತವೆ. ಆದರೆ ನೀವು ಕಡ್ಡಾಯವಾಗಿ ಶ್ರಮ ಹಾಕಲೇಬೇಕು. ಮೂಲತಃ ನೀವು ವಿಚಿತ್ರ ಸ್ವಭಾವದವರು. ಎಲ್ಲಿ ಆತುರ ಮಾಡಬಾರದೋ ಅಲ್ಲಿ ವಿಪರೀತ ಉತ್ಸಾಹ ತೋರಿಸಿ, ಕೈಯಿಂದ ಒಂದಕ್ಕೆರಡು ಹಣ ಕಳೆದುಕೊಂಡು, ಹತ್ತು ರುಪಾಯಿ ಬರುವ ಕೂಡ ಐದು ರುಪಾಯಿ ಬರುವಂತೆ ಮಾಡಿಕೊಳ್ಳುತ್ತೀರಿ. ಇನ್ನು ಯಾವ ಸಂದರ್ಭದಲ್ಲಿ ಉತ್ಸಾಹ ತೋರಿಸಬೇಕೋ, ಶ್ರಮ ಹಾಕಬೇಕೋ ಅಂಥಲ್ಲಿ ತಾನಾಗಿಯೇ ಬರುತ್ತದೆ ಎಂಬ ಧೋರಣೆಯಲ್ಲಿ ಸುಮ್ಮನಾಗಿರುತ್ತೀರಿ. ಆದರೆ ಈಗ ಸಮಯ ಬಂದಿದೆ; ಚುರುಕಾಗಿ ಕೆಲಸ-ಕಾರ್ಯಗಳನ್ನು ಪೂರೈಸಿ. ಬಂದ ಹಣವನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳಿ.
ವಿದೇಶ ವ್ಯಾಸಂಗ- ಉದ್ಯೋಗಕ್ಕೆ ಅವಕಾಶ
ವಿದೇಶ ವ್ಯಾಸಂಗಕ್ಕೆ, ಉದ್ಯೋಗಕ್ಕೆ, ವ್ಯಾಪಾರ-ವ್ಯವಹಾರಕ್ಕೆ, ಸಂತಾನ ಅಪೇಕ್ಷಿತರಿಗೆ, ಉದ್ಯೋಗ ಬದಲಾವಣೆ ಮಾಡಿಕೊಳ್ಳಲು ಬಯಸುವವರಿಗೆ ಇದು ಸೂಕ್ತ ಕಾಲ. ಆದರೆ ವಿದೇಶಕ್ಕೆ ಹೋಗಲು ಬಯಸುವವರು ಒಮ್ಮೆ ಕಡ್ಡಾಯವಾಗಿ ಜಾತಕ ತೋರಿಸಿಕೊಳ್ಳಿ. ಆ ನಂತರ ಮುಂದುವರಿಯಿರಿ. ಅಕ್ಟೋಬರ್ ಗೂ ಮುಂಚೆ ಆರೆಂಟು ತಿಂಗಳು ಕಾಯಿಲೆ-ಕಸಾಲೆ ಅನುಭವಿಸಿದ್ದವರಿಗೆ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಮಧುಮೇಹ- ರಕ್ತದೊತ್ತಡದಂಥ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿರುವವರಿಗೆ ವೈದ್ಯರ ಔಷಧಿ ಕೆಲಸ ಮಾಡಲು ಆರಂಭ ಮಾಡುತ್ತದೆ. ಹಾಗಂತ ಆಹಾರ-ಪಥ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಜತೆಗೆ ನಾನಾ ಕಡೆಗಳಿಂದ ಮದುವೆ ಸೇರಿದಂತೆ ನಾನಾ ಶುಭ ಕಾರ್ಯಗಳಿಗೆ ಆಹ್ವಾನ ಬರುತ್ತದೆ. ಅಲ್ಲಿಗೆ ತೆರಳಿದಾಗ ಆಹಾರ-ನೀರಿನ ವಿಚಾರದಲ್ಲಿ ಎಚ್ಚರ ವಹಿಸಿ. ಮುಖ್ಯವಾಗಿ ಆಲಸ್ಯವನ್ನು ಬಿಡಲೇಬೇಕು. ಚುರುಕಾಗಿ, ಚಟುವಟಿಕೆಯಿಂದ ಇರಬೇಕು.
ವಂಚಕರ ಜಾಲಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಿ
ಇನ್ನು ಶನಿಯು ವಿಪರೀತ ಖರ್ಚುಗಳನ್ನು ತರುತ್ತದೆ. ದುರ್ಜನರ ವಂಚನೆ ಮಾತುಗಳಿಗೆ ಮರುಳಾಗಿ ಹಣ ಕೊಟ್ಟರೆ ವಾಪಸ್ ಬರುವುದಿಲ್ಲ. ನಿಮ್ಮದೇ ಆಸ್ತಿಯ ವ್ಯಾಜ್ಯ ಇದ್ದರೂ ಅದನ್ನು ಸರಿಪಡಿಸಿಕೊಡುವುದಾಗಿ ಬರುವವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಈ ಬಾರಿ ಸಿಕ್ಕಿಹಾಕಿಕೊಂಡರೆ ಇನ್ನು ಆರೇಳು ವರ್ಷ ಅಲೆದಾಡಬೇಕಾಗುತ್ತದೆ. ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯವಾಗಿ ಅದಕ್ಕಾಗಿ ಹಣ-ಕಾಸು ಖರ್ಚಾಗುತ್ತದೆ. ಕಡಿಮೆ ಬಡ್ಡಿಗೆ ಸಾಲ ಸಿಕ್ಕುತ್ತದೆ, ಸಹೋದ್ಯೋಗಿಯೊಬ್ಬರು ತೆಗೆದುಕೊಂಡರು ಎಂಬ ಕಾರಣಕ್ಕೆ ನೀವೂ ಹೊಸ ವಾಹನ ಖರೀದಿಸಬೇಕು ಎಂದು ಹೊರಡಬೇಡಿ. ನಿಮ್ಮ ಸಾಮರ್ಥ್ಯವನ್ನೂ ಮೀರಿ ಮನೆ-ನಿವೇಶನ ಖರೀದಿ, ಹೂಡಿಕೆ, ಸಟ್ಟಾ- ಜೂಜು ಯಾವುದೂ ಬೇಡ. ಬಡ್ತಿ ಸಿಗುವ ಸಾಧ್ಯತೆ ಇದೆ. ಆ ಮೂಲಕ ಸಂಬಳ ಜಾಸ್ತಿಯಾದರೆ ಬ್ಯಾಂಕಿನಲ್ಲಿ ಹಣ ಇಟ್ಟುಕೊಂಡು ಸುಮ್ಮನಿರುವುದು ಉತ್ತಮ ನಿರ್ಧಾರ ಆಗುತ್ತದೆ.
ಪ್ರಾಮಾಣಿಕತೆ ಬಿಡಬೇಡಿ, ಸುಳ್ಳು ಹೇಳಬೇಡಿ
ಮಹಿಳೆಯರು ಅಪರಿಚಿತರೊಂದಿಗೆ ವ್ಯವಹರಿಸುವಾಗ ಬಹಳ ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ಅಪವಾದ ಹಾಗೂ ಅವಮಾನ ಎದುರಿಸಬೇಕಾಗುತ್ತದೆ. ಇನ್ನು ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ಸಮಯ ಹಾಳು ಮಾಡಿಕೊಳ್ಳಬಾರದು. ಪ್ರವಾಸಕ್ಕೆ ಹೋಗುವ ಅವಕಾಶ ಬಂತು, ಪಾರ್ಟಿಗೆ ಕರೆದರು ಎಂದು ಅದರಲ್ಲೇ ಹೆಚ್ಚು ಸಮಯ ಕಳೆದರೆ ಈ ಬಾರಿ ಉತ್ತಮ ಫಲಿತಾಂಶ ಬರುವ ಅವಕಾಶ ತಪ್ಪಿಹೋಗುತ್ತದೆ. ನಿವೃತ್ತರು ಹಾಗೂ ನಿವೃತ್ತಿಯ ಅಂಚಿನಲ್ಲಿ ಇರುವವರು ಯಾರನ್ನೋ ನಂಬಿ, ಹಣ ಹೂಡಿಕೆ ಮಾಡಬೇಡಿ. ಮಕರ ರಾಶಿಯವರು ಅದೆಂಥದೇ ಸನ್ನಿವೇಶ ಎದುರಾದರೂ ಪ್ರಾಮಾಣಿಕತೆಯನ್ನು ಬಿಡಬಾರದು. ಸುಳ್ಳು ಹೇಳಬಾರದು. ಹಾಗೆ ಮಾಡುವುದರಿಂದಾ ಅವಮಾನಕ್ಕೆ ಗುರು ಆಗಬೇಕಾಗುತ್ತದೆ. ಶನಿ ಶಾಂತಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ, ಬೇರೆಯವರಿಗೆ ಜಾಮೀನು ನಿಲ್ಲಬೇಡಿ.