ಕುಮಾರಸ್ವಾಮಿ ಪ್ರಮಾಣದ ಮುಹೂರ್ತ ಹೇಗಿತ್ತು? ಭವಿಷ್ಯ ಹೇಗಿದೆ?
Recommended Video
ಕೆಲವು ಉತ್ತಮ ಹಾಗೂ ಹಲವು ದೋಷ ಇರುವ ಮುಹೂರ್ತದಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ್ದು ಹಾಗೂ ಅದರ ಪರಿಣಾಮ ಏನಾಯಿತೆಂದು ಈ ರಾಜ್ಯದ ಜನರು ಕಂಡಿದ್ದಾರೆ. ಆ ಮುಹೂರ್ತ ಅವರಿಗೆ ಅನಿವಾರ್ಯ ಆಗಿತ್ತು ಎನ್ನುವುದನ್ನು ಗಮನಿಸಬೇಕು. ಈಗ ಅದರ ಬಗ್ಗೆ ಚರ್ಚೆಯೂ ಅಪ್ರಸ್ತುತ.
ಆದರೆ, ಕರ್ನಾಟಕದ ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರಮಾಣ ವಚನ ಮುಹೂರ್ತ ಏನು ತಿಳಿಸುತ್ತಿದೆ, ಮುಂದೆ ಏನಾಗಬಹುದು ಇತ್ಯಾದಿ ಕುತೂಹಲ ಸಹಜವಾಗಿ ರಾಜ್ಯದ ಜನರಿಗೆ ಇದ್ದೇ ಇರುತ್ತದೆ. ಆದಕಾರಣ ಮಾನ್ಯ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಈ ಮುಹೂರ್ತದ ವಿಶ್ಲೇಷಣೆ ಮಾಡುವುದಾದರೆ....
ಕರ್ನಾಟಕದ 25ನೇ ಮುಖ್ಯಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿ
ಮೂರನೇ ಬಾರಿ ಮುಖ್ಯ್ಮಂತ್ರಿಯಾಗಲು ಹೊರಟಿದ್ದ ಯಡಿಯೂರಪ್ಪನವರಿಗೆ ಆ ಮುಹೂರ್ತ (ಮೇ 17, ಬೆಳಿಗ್ಗೆ 9.30ಕ್ಕೆ) ಅನಿವಾರ್ಯ ಆಗಿತ್ತು. ಆದರೆ ಕುಮಾರಸ್ವಾಮಿಯವರಿಗೆ ಈ ಮುಹೂರ್ತ (ಮೇ 23, ಸಂಜೆ 4.30ಕ್ಕೆ) ಅನಿವಾರ್ಯ ಆಗಿರಲಿಲ್ಲ. ಬುಧವಾರ ಇರುವ ಎಲ್ಲಾ ದಿನಗಳನ್ನೂ, ಆ ದಿನಗಳಲ್ಲಿ ಬರುವ ನಕ್ಷತ್ರಗಳನ್ನೂ ಲೆಕ್ಕ ಹಾಕಿ, ತಾರಾಬಲ ನೋಡಿ, ಇರುವುದರಲ್ಲಿ ಒಳ್ಳೆಯ ಸೂಕ್ತ ದಿನವನ್ನು ಆರಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಖಾತ್ರಿ ಆಗುತ್ತಿದೆ.
ವ್ಯಕ್ತಿಚಿತ್ರ: ನಾಡಿನ 25ನೇ ಮುಖ್ಯಮಂತ್ರಿ ಕುಮಾರಸ್ವಾಮಿ
ಕುಮಾರಸ್ವಾಮಿಯವರಿಗೆ ನೀಡಲಾಗಿದ್ದ ಆ ಮುಹೂರ್ತ ಅವರ ರಾಜಕೀಯ ಭವಿಷ್ಯಕ್ಕೆ ಹೇಗಿದೆ? ಯಡಿಯೂರಪ್ಪನವರು ಆಯ್ದುಕೊಂಡು ಮುಹೂರ್ತಕ್ಕೂ, ಕುಮಾರಸ್ವಾಮಿಯವರು ಆಯ್ದುಕೊಂಡ ಮುಹೂರ್ತಕ್ಕೂ ಏನು ವ್ಯತ್ಯಾಸ? ಸಮಿಶ್ರ ಸರಕಾರ ಎಷ್ಟು ದಿನ, ಎಷ್ಟು ವರ್ಷ ಬಾಳಿಕೆ ಬರುತ್ತದೆ? ಇತ್ಯಾದಿ ಪ್ರಮುಖ ಸಂಗತಿಗಳನ್ನು ವಿವರವಾಗಿ ವಿಶ್ಲೇಷಿಸಲಾಗಿದೆ.
ಪ್ರಜೆಗಳ ಮನದಲ್ಲಿ ನೆಲೆಸುವಂಥ ಸಾಧನೆ
ಕುಮಾರಸ್ವಾಮಿಯವರ ಜನ್ಮ ನಕ್ಷತ್ರ ಆರ್ದ್ರಾ, ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಪೂರ್ವಾಫಲ್ಗುಣಿ ನಕ್ಷತ್ರದಲ್ಲಿ. ಅಂದರೆ ಕುಮಾರಸ್ವಾಮಿಯವರ ಜನ್ಮ ನಕ್ಷತ್ರದಿಂದ ಎಣಿಸಿ ನೋಡಿದಾಗ ಅದು ಸಾಧನ ತಾರೆ ಆಗುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕೂರುವಾಗ ಅತ್ಯಂತ ಅವಶ್ಯ ಇರುವ ತಾರಾಬಲ ಈ ಸಾಧನ. ರಾಜ್ಯಾದ್ಯಂತ ಓಡಾಡಿ ಏನಾದರೂ ಸಾಧನೆ ಮಾಡಬೇಕು, ಪಕ್ಷಕ್ಕೆ ಒಳ್ಳೆಯ ಹೆಸರು ತರಬೇಕು ಎಂದಾದಲ್ಲಿ ಈ ಸಾಧನ ತಾರೆ ಅನಿವಾರ್ಯ ಆಗಿತ್ತು. ಸಾಧನ ತಾರೆ ಅನುಕೂಲ ನೋಡಿಕೊಂಡು ತೆಗೆದುಕೊಂಡ ಪ್ರಮಾಣ ವಚನ ಆಗಿರುವುದರಿಂದ ಶಾಶ್ವತವಾಗಿ ಪ್ರಜೆಗಳ ಮನದಲ್ಲಿ ನೆಲೆಸುವಂಥ ಸಾಧನೆಗಳನ್ನು ಕುಮಾರಸ್ವಾಮಿಯವರು ಈ ಮೂಲಕ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ.
ವಾಹ್ ಏನು ಅದ್ಭುತ ಗ್ರಹ ಸ್ಥಿತಿ!
ತುಲಾ ಲಗ್ನ ಸುಮುಹೂರ್ತದಲ್ಲಿ ಕುಮಾರಸ್ವಾಮಿಯವರ ಪ್ರಮಾಣ ವಚನ ಆಗಿದೆ. ಈ ಲಗ್ನದಲ್ಲಿ ಗುರು ಇರುವುದು ಶ್ರೇಯಸ್ಕರ ಆಗುತ್ತದೆ. ಈ ತುಲಾ ಲಗ್ನಕ್ಕೆ ಭಾಗ್ಯಾಧಿಪತಿ ಬುಧ ಸಪ್ತಮದಲ್ಲಿ ಮೇಷದಲ್ಲಿ ಇದ್ದು ಲಗ್ನಕ್ಕೆ ಪೂರ್ಣ ದೃಷ್ಟಿ ನೀಡುತ್ತಿದ್ದಾನೆ. ಲಗ್ನ ಪಂಚಮಾಧಿಪತಿ ಶನಿ ತೃತೀಯದಲ್ಲಿ ಇದ್ದು ಭಾಗ್ಯ ಸ್ಥಾನವನ್ನು ನೋಡುತ್ತಿದ್ದಾನೆ ಹಾಗೆಯೇ ಲಗ್ನಾಧಿಪತಿ ಶುಕ್ರ ಭಾಗ್ಯ ಸ್ಥಾನದಲ್ಲಿ ಇದ್ದಾನೆ! ವಾಹ್ ಏನು ಅದ್ಭುತ ಗ್ರಹ ಸ್ಥಿತಿಗಳು ಎನ್ನುವಂತಿದೆ ಈ ಮುಹೂರ್ತ! ದಿನಗಳಲ್ಲಿ ಬುಧವಾರ ಉತ್ತಮ ಹಾಗೂ ಸೌಮ್ಯ ದಿನ.
ಇನ್ನು ಯಾವುದೂ ತೊಂದರೆ ಇಲ್ವಾ?
ಹೌದಾ ಹಾಗಾದರೆ ಇನ್ನು ಯಾವುದೂ ತೊಂದರೆ ಇಲ್ವಾ? ಈ ಮುಹೂರ್ತದಲ್ಲಿ ಯಾವುದೂ ದೋಷ ಇಲ್ವಾ? ಎಂದು ಕೇಳಿದರೆ ಇನ್ನೂ ಮುಗಿದಿಲ್ಲ ಮುಂದೆ ಓದಿ...
ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತ ಲಗ್ನ ತುಲಾ ಲಗ್ನ. ಇದು 'ಚರ' ಲಗ್ನ. ಈ ಲಗ್ನ ಅಧಿಕಾರ ಸ್ವೀಕಾರಕ್ಕೆ ಉತ್ತಮ ಎಂದು ಸಾರಾಸಗಟಾಗಿ ಹೇಳಲು ಬರುವುದಿಲ್ಲ. ಸ್ಥಿರವಾಗಿ ಅಧಿಕಾರ ಉಳಿಯಲು 'ಸ್ಥಿರ' ಲಗ್ನ ಆಗಿದ್ದಲ್ಲಿ ಒಳ್ಳೆಯದಿತ್ತು ಎನ್ನುವ ಅಭಿಪ್ರಾಯ ಸಹ ಬರುತ್ತದೆ. ಇನ್ನು ಪ್ರಮಾಣ ವಚನ ಸ್ವೀಕಾರ ಮಾಡಿದ ತಿಥಿ ನವಮಿ. ಇತ್ತ ಕೆಟ್ಟದೂ ಅಲ್ಲ ಅತ್ತ ಉತ್ತಮವೂ ಅಲ್ಲ. ದಶಮಿ ಆಗಿದ್ದರೆ ಚೆನ್ನಾಗಿ ಇರುತ್ತಿತ್ತು. ಆದರೆ ದಶಮಿ ತಿಥಿಯಲ್ಲಿ ಇರುವ ನಕ್ಷತ್ರ ಕುಮಾರಸ್ವಾಮಿಯವರಿಗೆ ಕೂಡಿ ಬರುವುದಿಲ್ಲ ಅದು ಸಮಸ್ಯೆ.
ಸಮ್ಮಿಶ್ರ ಸರಕಾರದ ಭವಿಷ್ಯ ಎಷ್ಟು ದಿನ?
ಇನ್ನು ಲಗ್ನ ಲಾಭಾಧಿಪತಿ ರವಿ ಹಾಗೂ ಎಲ್ಲಾ ವಿಧದ ರಾಜಕೀಯ ಕ್ಷೇತ್ರಕ್ಕೆ ಅತ್ಯಗತ್ಯ. ರವಿ ಲಗ್ನಾಷ್ಟಮ ಸ್ಥಾನಕ್ಕೆ ಬಂದಿರುವುದು ಸಹ ಉತ್ತಮ ಅಲ್ಲ. ಈ ಹಿಂದೆ ಹೇಳಿದಂತೆ ಲಗ್ನ ಭಾಗ್ಯಾಧಿಪತಿ ಬುಧ ಸಪ್ತಮದಲ್ಲಿ ಇರುವುದು ಉತ್ತಮ. ಆದರೂ ಸಹ ಅದೇ ಬುಧ ತುಲಾ ಲಗ್ನಕ್ಕೆ ವ್ಯಯಾಧಿಪತಿ ಸಹ ಆಗುತ್ತಾನೆ ಹಾಗು ತುಲಾ ಲಗ್ನದಲ್ಲಿ ಇರುವ ಗುರುಗೆ ವೈರಿ! ಹೀಗಿರುವಾಗ ಈ ಸಮ್ಮಿಶ್ರ ಸರಕಾರದ (ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ) ಭವಿಷ್ಯ, ಅದರ ಬಾಳಿಕೆ ಎಷ್ಟು ದಿನ ಬಾಳಿಕೆ ಬರುತ್ತದೆ ಎನ್ನುವುದು ನಾವೇ ಅರಿತುಕೊಳ್ಳಬೇಕು.
ಕುಮಾರಸ್ವಾಮಿ : ಹಲವು ಉತ್ತಮ, ಕೆಲವು ದೋಷ
ನಾನು ಈ ಹಿಂದಿನ ಲೇಖನದಲ್ಲಿ ಬರೆದಂತೆ ಕೇವಲ ಪ್ರಮಾಣ ವಚನ ಮುಹೂರ್ತದಲ್ಲಿ ಎಲ್ಲವನ್ನೂ ಹೇಳುವುದು ಅಸಾಧ್ಯ, ಹೇಳಲೂ ಬಾರದು. ಆದರೆ ಬಹಳ ಪ್ರಮುಖವಾದ ವಿಚಾರಗಳನ್ನು ನಾವು ಊಹಿಸಬಹುದು. ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ ಈ ಹಿಂದೆ ಪ್ರಮಾಣ ವಚನ ತೆಗೆದುಕೊಂಡ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಮುಹೂರ್ತದಲ್ಲಿ ಕೆಲವು ಉತ್ತಮ, ಹಲವು ದೋಷ ಇತ್ತು. ಆದರೆ ಕುಮಾರಸ್ವಾಮಿಯವರ ಪ್ರಮಾಣ ವಚನ ಮುಹೂರ್ತದಲ್ಲಿ ಹಲವು ಉತ್ತಮ ಹಾಗೂ ಕೆಲವು ದೋಷಗಳಿಂದ ಕೂಡಿದೆ. ಆದುದರಿಂದ ಪಡೆದದ್ದು ಉಳಿಸಿಕೊಳ್ಳಲು ಸಹ ಸಾಹಸಗಳು ಕುಮಾರ ಸ್ವಾಮಿಯವರಿಗೆ ಅನಿವಾರ್ಯ !