ಅಂತೂ ಇಂತೂ ಗುರುಬಲ ಬಂತು : ಯಾರಿಗುಂಟು, ಯಾರಿಗಿಲ್ಲ
ಅಂತೂ, ಇಂತೂ ಬಹಳಷ್ಟು ದಿನಗಳಿಂದ ಎಷ್ಟೋ ಜನರು ಕಾಯುತ್ತಿದ್ದ ಕಾಲ ಬಂದೇ ಬಿಟ್ಟಿತು. ಹೌದು, ಇದೇ ಜುಲೈ 14ನೇ ತಾರೀಖಿನಂದು ಗುರು ತನ್ನ ಉಚ್ಚಕ್ಷೇತ್ರವಾದ ಕಟಕ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಅಲ್ಲಿ ಮತ್ತೆ ಒಂದು ವರ್ಷವಿದ್ದು ಮುಂದಿನ ವರ್ಷದ ಇದೇ ದಿನಗಳಲ್ಲಿ ಕನ್ಯಾ ರಾಶಿಗೆ ಕಾಲಿಡುತ್ತಾನೆ.
ಗುರುಬಲವಿಲ್ಲದೇ ಒದ್ದಾಡಿದವರಿಗೆ ಇದೊಂಥರಾ ಖುಷಿಯ ವಿಷಯವಾದರೆ, ಗುರುಬಲದಿಂದ ಮೆರೆದಾಡಿದವರಿಗೆ ಸ್ವಲ್ಪ ಖೇದಕರವೇ ಸರಿ. ಏಕೆಂದರೆ, ತನ್ನ ಉಚ್ಚಕ್ಷೇತ್ರ ಕಟಕದಲ್ಲಿಂದ ತುಂಬಾ ಅತ್ಯುತ್ತಮವಾದ ಫಲವನ್ನು ಕೆಲ ರಾಶಿಯವರಿಗೆ ಗುರು ನೀಡಿದ್ದಾನೆ. ಆದರೆ, ನಮ್ಮ ಪಾಲಿಗ್ಯಾವಾಗ ಗುರುಬಲವೆಂದು ಕಾಯುತ್ತಿದ್ದವರಿಗೆ ಈಗ ಶುಭಸುದ್ದಿ. ಅದಕ್ಕೇನೆ ಹೇಳುವುದು ಕಾಲಚಕ್ರ ತಿರುಗುತ್ತಿರುತ್ತದೆ, ಮೇಲಿದ್ದವರು ಕೆಳಗೆ ಬರಬೇಕು, ಕೆಳಗಿದ್ದವರು ಮೇಲೇರಬೇಕೆಂದು.

ಸಾಮಾನ್ಯವಾಗಿ ಗುರು ಒಂದು ವರ್ಷ ಕಾಲ ಒಂದು ರಾಶಿಯಲ್ಲಿ ಸಂಚರಿಸಿದರೂ ಕೂಡ ಕೇವಲ 2 ತಿಂಗಳು ಮಾತ್ರ ತನ್ನ ಫಲವನ್ನು ನೀಡುತ್ತಾನೆ. ಆದರೆ ನಿರಂತರವಾಗಿ 12 ತಿಂಗಳು ಕೂಡ ಅಷ್ಟಿಷ್ಟು ಸತ್ಫಲ ನೀಡುತ್ತಿರುತ್ತಾನೆ. ಜಾತಕದಲ್ಲಿ ಚಂದ್ರನಿರುವ ಸ್ಥಾನಕ್ಕೆ ರಾಶಿಯೆನ್ನಲಾಗುತ್ತದೆ. ಜನ್ಮರಾಶಿಯಿಂದ 2, 5, 7, 9, 11 ಸ್ಥಾನಗಳಿಗೆ ಬಂದಾಗ ಗುರು ಸಾಮಾನ್ಯವಾಗಿ ಅತ್ಯುತ್ತಮ ಫಲಗಳನ್ನೇ ನೀಡುತ್ತಾನೆ. [2015 ವರ್ಷ ಭವಿಷ್ಯ : ಮೇಷ ರಾಶಿಗೆ ಫಿಫ್ಟಿ ಫಿಫ್ಟಿ]
ಈಗಾಗಲೇ ವೃಷಭ, ಕನ್ಯಾ, ವೃಶ್ಚಿಕ, ಮಕರ, ಮೀನ ರಾಶಿಯವರು ಗುರುಬಲದ ಫಲವನ್ನು ಅನುಭವಿಸಿದ್ದಾರೆ. ಇನ್ಮುಂದೆ ಈ ರಾಶಿಯವರಿಗೆ ಗುರುಬಲ ಹೋದಂಗೆ. ಆದರೆ, ಮೇಷ, ಕಟಕ, ತುಲಾ, ಧನಸ್ಸು, ಕುಂಭ ರಾಶಿಯವರಿಗೆ ಗುರುಬಲ ಶುರುವಾಗಿದೆ. ಇಷ್ಟು ದಿನ ಈ ರಾಶಿಯವರು ಕಾಯುತ್ತಿದ್ದ ಸಮಯ ಈಗ ಬಂದಿದೆ ಎಂದೇ ಅರ್ಥೈಸಿಕೊಳ್ಳಬಹುದು ಆಸ್ತಿಕರು.
ಪಂಚಮಪಾಡಾಗಿದೆ ನಮ್ಮ ಜೀವನ ಎಂದು ಗುದ್ದಾಡಿದ ಕಟಕ ರಾಶಿಯವರು ಹರ್ಷ ಪಡುವ ಸಮಯವಾದರೆ, ತುಲಾ ರಾಶಿಯವರಿಗೆ ಸಾಡೇಸಾತಿಯಿದ್ದರೂ ಗುರುವಿನ ಅನುಗ್ರಹ ಸಿಕ್ಕಂತಾಗಿದೆ. ಆದರೆ, ವೃಶ್ಚಿಕ ರಾಶಿಯವರಿಗೆ ಮಾತ್ರ ತೊಂದರೆಗಳ ಸರಮಾಲೆಗಳು ಸುತ್ತಿಕೊಂಡರೆ, ಧನಸ್ಸು ರಾಶಿಯವರು ಏಳರಾಟದಲ್ಲಿದ್ದರೂ ಗುರುವಿನ ಕೃಪಾಕಟಾಕ್ಷದಿಂದ ಸುಖಕರ ಜೀವನಾನುಭವ ಪಡೆದುಕೊಳ್ಳುತ್ತಾರೆ.












Click it and Unblock the Notifications