ಜ್ಯೋತಿಷ್ಯ ಟಿಪ್ಸ್: ಯಾವ ವಾರ ಏನು ಮಾಡಿದರೆ ಕೈಗೊಳ್ಳುವ ಕಾರ್ಯ ಯಶಸ್ಸು?
ಮನೆಯಿಂದ ಆಚೆ ತೆರಳುವ ವೇಳೆ ಶುಭ ಶಕುನವನ್ನು ನಂಬುವವರು ಇರುವಂತೆಯೇ ಒಳ್ಳೆ ಕೆಲಸಕ್ಕೆ ತೆರಳುವ ಮುನ್ನ ಕೆಲ ಪದಾರ್ಥವನ್ನು ಸೇವಿಸಿದರೆ ಒಳಿತು ಸಂಭವಿಸುತ್ತದೆ ಎಂಬುದು ನಂಬಿಕೆ. ಈ ವಿಚಾರದಲ್ಲಿ ಜನ್ಮ ರಾಶಿಯ ಪಾತ್ರ ಏನೂ ಇರುವುದಿಲ್ಲ. ಒಟ್ಟಿನಲ್ಲಿ ಒಳ್ಳೆ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ ಇಲ್ಲಿ ತಿಳಿಸುವ ಕೆಲ ಸಲಹೆಗಳನ್ನು ಅನುಸರಿಸಿದರೆ ಅನುಕೂಲಕರವಾದ ಸನ್ನಿವೇಶ ಸೃಷ್ಟಿಯಾಗಿ, ಕೈಗೊಂಡ ಕೆಲಸ ಸಿದ್ಧಿ ಆಗುತ್ತದೆ.
ಇಲ್ಲಿ ತಿಳಿಸುತ್ತಿರುವ ಅಂಶ ಸಾಮಾನ್ಯವಾಗಿ ಅನ್ವಯಿಸುವಂಥದ್ದು. ಆದ್ದರಿಂದ ಯಾರಾದರೂ ಇದನ್ನು ಪ್ರಯತ್ನಿಸಬಹುದು. ಆದರೆ ನಂಬಿಕೆ ಬಹಳ ಮುಖ್ಯ. ಮಾಡುವ ಕೆಲಸದಲ್ಲಿನ ಉದ್ದೇಶ ಶುದ್ಧಿ ಮತ್ತು ಪ್ರಯತ್ಮ ಸಹ ಅಷ್ಟೇ ಮುಖ್ಯ. ಇಲ್ಲಿ ತಿಳಿಸುತ್ತಿರುವ ಸಲಹೆ ಆಯಾ ವಾರಕ್ಕೆ ಅನ್ವಯಿಸುವಂತೆ ಇದೆ.
ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ?
ಇದರ ಹೊರತಾಗಿ ತಾರಾನುಕೂಲ ನೋಡಿದರೆ ಒಳ್ಳೆಯದು. ಆದರೆ ಹಲವು ಕೆಲಸಗಳನ್ನು ಆಯಾ ದಿನದಂದೇ ಮಾಡಬೇಕು. ಆದ್ದರಿಂದ ಹಾಗೆ ತಾರಾನುಕೂಲವನ್ನೇ ನೋಡಿ ಕೆಲಸ ಮಾಡುವುದು ಕಷ್ಟಸಾಧ್ಯ. ಆ ಕಾರಣಕ್ಕೆ ಈ ಸರಳ ಸಲಹೆಗಳು. ಯತ್ನ ಕಾರ್ಯದಲ್ಲಿ ಅನುಕೂಲ ಆಗಲಿ ಎಂದು ಶುಭ ಹಾರೈಸುತ್ತಾ ನಿಮಗಾಗಿ ಈ ಲೇಖನ.
ಸೂರ್ಯದೇವನಿಗೆ ನೀರನ್ನು ಇಡಿ
ಭಾನುವಾರದಂದು ಯಾವುದೇ ಶುಭ ಕಾರ್ಯಗಳಿಗೆ ತೆರಳುವ ಮುನ್ನ ಮನೆಯಲ್ಲಿ ವೀಳ್ಯದೆಲೆ- ಅಡಿಕೆ ಹಾಕಿಕೊಳ್ಳಿ. ಜತೆಗೆ ಬೆಳಗ್ಗೆ ಸೂರ್ಯದೇವನಿಗೆ ನೀರನ್ನು ಇಡಿ. ವೀಳ್ಯದೆಲೆ- ಅಡಿಕೆ ಎಲ್ಲ ಸೇರಿ ಮಾಡುವ ಬೀಡಾ ಸೇವಿಸಿದರೂ ಅಡ್ಡಿ ಇಲ್ಲ. ಅಭ್ಯಾಸ ಇಲ್ಲದವರು ದಯವಿಟ್ಟು ಮಾಡಬೇಡಿ. ಒಂದು ವೇಳೆ ವೀಳ್ಯದೆಲೆ- ಅಡಿಕೆ ಹಾಕುವಂತಿದ್ದರೆ ಅಡ್ಡಿ ಇಲ್ಲ.
ಕನ್ನಡಿಯಲ್ಲಿ ಪ್ರತಿಬಿಂಬ ನೋಡಿಕೊಳ್ಳಿ
ಇನ್ನು ಸೋಮವಾರದಂದು ಮುಖ್ಯ ಕೆಲಸವಿದ್ದು, ಮನೆಯಿಂದ ಆಚೆ ತೆರಳುವ ಮುನ್ನ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬವನ್ನು ಒಮ್ಮೆ ನೋಡಿಕೊಂಡು, ಆ ನಂತರ ಹೊರಡಿ. ಹೀಗೆ ಮಾಡುವುದರಿಂದ ನೀವು ಪ್ರಯತ್ನಿಸುವ ಕೆಲಸದಲ್ಲಿ ಯಶಸ್ಸು ದೊರೆಯುವ ಸಾಧ್ಯತೆಯು ಹೆಚ್ಚಿರುತ್ತದೆ.
ಚಿನ್ನ ಖರೀದಿಗೆ ಜ್ಯೋತಿಷ್ಯ ಪ್ರಕಾರ ಚಿನ್ನದಂಥ ದಿನಗಳಿವು!
ನಿಂಬೆಹಣ್ಣು ಸ್ವಲ್ಪ ಭಾಗ ತಿನ್ನಿ
ಕುಜ ಅಥವಾ ಅಂಗಾರಕನ ವಾರವಾದ ಮಂಗಳವಾರದಂದು ಬಹು ಮುಖ್ಯ ಕಾರ್ಯದ ಸಲುವಾಗಿ ಪ್ರಯತ್ನಿಸುತ್ತಿದ್ದರೆ, ಅಂದು ನಿಂಬೆಹಣ್ಣನ್ನು ಒಳಗೊಂಡಂಥ ಯಾವುದಾದರೂ ಖಾದ್ಯ ಅಥವಾ ಸ್ವಲ್ಪ ನಿಂಬೆಹಣ್ಣಿನ ಭಾಗ ತಿಂದು, ಆ ನಂತರ ತೆರಳಿದರೆ ಕಾರ್ಯ ಸಿದ್ಧಿಗೆ ಅನುಕೂಲ ಆಗುತ್ತದೆ.
ಸಿಹಿ ತಿಂದು ಮನೆಯಿಂದ ಹೊರಡಿ
ಕೆಲವರು ಸಾಧಾರಣವಾಗಿ ಈ ಸಲಹೆ ನೀಡುತ್ತಾರೆ. ಆದರೆ ಪರಿಣಾಮಕಾರಿ ಆಗುವುದು ಬುಧವಾರದಂದು. ತುಂಬ ಮುಖ್ಯವಾದ ಕೆಲಸದ ಮೇಲೆ ಬುಧವಾರದಂದು ಮನೆಯಿಂದ ಹೊರಡುವ ಮೊದಲು ಸ್ವಲ್ಪ ಸಿಹಿ ತಿಂದು ಹೊರಡಿ. ಆಗ ಯತ್ನ ಕಾರ್ಯದಲ್ಲಿ ಸಫಲತೆಗೆ ಸಹಕಾರವಾಗುತ್ತದೆ.
ಹಳದಿ ಸಾಸಿವೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ
ಯಾರಿಗೇ ಆಗಲಿ ತಾವು ಅನುಸರಿಸುವ ಗುರುಗಳ ಆರಾಧನೆಗೆ ಮುಖ್ಯವಾದ ವಾರವಾದ ಗುರುವಾರದಂದು ಯಾವುದಾದರೂ ಬಗೆಯಲ್ಲಿ ಹಳದಿ ಸಾಸಿವೆ ತಿಂದು ಮನೆಯಿಂದ ಹೊರಟರೆ ಮಾಡುವ ಕೆಲಸದಲ್ಲಿ ಅನುಕೂಲ ದೊರೆಯುತ್ತದೆ. ಹಳದಿ ಸಾಸಿವೆ ಸ್ವಲ್ಪ ಪ್ರಮಾಣದಲ್ಲಿ ಬಾಯಿಗೆ ಹಾಕಿಕೊಂಡು ಹೊರಡಿ, ಆ ನಂತರ ಬದಲಾವಣೆ ನೀವು ಗಮನಿಸಿ.
ಮೊಸರು ತಿಂದು ಮನೆಯಿಂದ ಹೊರಡಿ
ಇನ್ನು ಲಕ್ಷ್ಮಿ ಅಥವಾ ದೇವಿ ಆರಾಧನೆಗೆ ಬಹಳ ಅನುಕೂಲಕರ ಎಂದೇ ಪರಿಗಣಿಸುವ ಶುಕ್ರವಾರದಂದು ಮನೆಯಿಂದ ತೆರಳುವ ಮೊದಲು ಮೊಸರನ್ನು ತಿಂದು ಹೊರಟರೆ ನೀವು ಪ್ರಯತ್ನಿಸಿದ ಕಾರ್ಯದಲ್ಲಿ ಸಫಲತೆ ಸಿಗುವ ಸಾಧ್ಯತೆ ಹೆಚ್ಚು. ವಿದ್ಯಾರ್ಥಿಗಳು ಮೊಸರು ಹಾಗೂ ಸಕ್ಕರೆ ತಿಂದು ಮನೆಯಿಂದ ಹೊರಟರೆ ಪರೀಕ್ಷೆಯಂಥ ಸಂದರ್ಭದಲ್ಲಿ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ.
ತುಪ್ಪ ಸೇವಿಸಿ ನೋಡಿ
ಲೇಖನದ ಕೊನೆ ಘಟ್ಟಕ್ಕೆ ಬಂದಿದ್ದೇವೆ. ಯಾವುದಾದರೂ ಕಾರ್ಯಕ್ಕೆ ಶನಿವಾರದಂದು ಪ್ರಯತ್ನಿಸುತ್ತಿದ್ದಲ್ಲಿ ಮನೆಯಿಂದ ತೆರಳುವ ಮೊದಲು ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸಿ, ಆ ನಂತರ ನೀವು ಅಂದುಕೊಂಡ ಕೆಲಸ ಕೈಗೊಂಡರೆ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಲಹೆಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.