ದೀರ್ಘಾಯುಷ್ಯ ಯೋಗದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?
ಯಾವುದೇ ವ್ಯಕ್ತಿಯ ಜೀವನದಲ್ಲಿ ದೀರ್ಘಾಯುಷ್ಯ ಇದೆಯೋ-ಇಲ್ಲವೋ ತಿಳಿಯುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ನಿಮ್ಮ ಜತೆಗೆ ಹಂಚಿಕೊಳ್ಳುತ್ತಿದ್ದೇನೆ. ಎರಡು ರೀತಿಯಲ್ಲಿ ಆಯುಷ್ಯದ ಚಿಂತನೆ ಮಾಡಬಹುದು. ಒಂದು ಭಗವಂತನ ಅನುಗ್ರಹದ ಮೂಲಕ ನೋಡಬಹುದು ಅಥವಾ ಮತ್ತೊಂದು ಜಾತಕ ರೀತಿಯಾಗಿ ನೋಡಬಹುದು.
ಜಾತಕದಲ್ಲಿ ಪೂರ್ವಪುಣ್ಯ ಸ್ಥಾನ ಬಲವಾಗಿದ್ದು, ಹಿಂದಿನ ಜನ್ಮದಲ್ಲಿ ದಾನ-ಧರ್ಮಗಳನ್ನು ಮಾಡಿದ್ದರೆ, ಹಿಂದಿನ ಜನ್ಮದಲ್ಲಿ ವೈದ್ಯನಾಗಿ ಆಯುಷ್ಯವನ್ನು ಧಾರೆ ಎರೆಯುವ ಕೆಲಸ ಮಾಡಿದ್ದರೆ ಮುಂದಿನ ಜನ್ಮದಲ್ಲಿ ದೀರ್ಘಾಯುಷ್ಯ ಪ್ರಾಪ್ತಿ ಆಗುತ್ತದೆ. ಇನ್ನೊಂದು ಬಗೆಯಲ್ಲಿ ಹೇಳಬೇಕು ಅಂದರೆ, ಆಯಾ ಕುಟುಂಬದ ಪಿತೃಗಳು ಹಿಂದಿನ ಏಳು ತಲೆಮಾರಿನವರು ಮಾಡಿದ ಪುಣ್ಯದ ಫಲವಿದ್ದಾಗ ದೀರ್ಘಾಯುಷ್ಯ ದೊರೆಯುತ್ತದೆ.
ಇನ್ನು ಜಾತಕದ ಪ್ರಕಾರ ನೋಡುವುದಾದರೆ ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಎಂಟನೇ ಸ್ಥಾನವನ್ನು ನೋಡಬೇಕಾಗುತ್ತದೆ. ಅದನ್ನು ಆಯುಷ್ಯ ಸ್ಥಾನ ಎಂದು ಕರೆಯುತ್ತೇವೆ. ಆಯುಷ್ಯಕ್ಕೆ ಕಾರಕ ಯಾರು ಅಂತ ನೋಡಿದರೆ ಶನೈಶ್ಚರ. ಹಾಗಾಗಿ ಲಗ್ನದಿಂದ ಅಷ್ಟಮ ಸ್ಥಾನವನ್ನು ಮೊದಲು ನೋಡಬೇಕು. ಅಷ್ಟಮ ಸ್ಥಾನದ ಅಧಿಪತಿ ಲಗ್ನದಲ್ಲಿ ಇದ್ದರೆ ದೀರ್ಘಾಯುಷ್ಯ ಪ್ರಾಪ್ತಿ ಆಗುತ್ತದೆ.
ಅಥವಾ ಅಷ್ಟಮ ಸ್ಥಾನಾಧಿಪತಿಯು ಲಗ್ನದಿಂದ ವೀಕ್ಷಣೆ ಮಾಡಿದರೂ ದೀರ್ಘಾಯುಷ್ಯ ಪ್ರಾಪ್ತಿ ಆಗುತ್ತದೆ. ಅಯುಷ್ಯಕ್ಕೆ ಕಾರಕನಾದವನು ಶನಿ ಎಂಬುದನ್ನು ಆರಂಭದಲ್ಲೇ ಹೇಳಿದ ಹಾಗೆ, ಆಯುಷ್ಯ ಭಾವದ ಚಿಂತನೆ ಮಾಡುವಾಗ ನೋಡುವುದು ಶನಿ ಗ್ರಹವನ್ನೇ ಎಂಬುದನ್ನು ನೆನಪಿನಲ್ಲಿ ಇಡಿ.

ಲಗ್ನದಿಂದ ಮೂರು, ಏಳು ಹಾಗೂ ಹತ್ತನೇ ಸ್ಥಾನ ಕೂಡ ಮುಖ್ಯ
ಇದಾದ ಮೇಲೆ ಲಗ್ನದಿಂದ ಮೂರು, ಏಳು ಹಾಗೂ ಹತ್ತನೇ ಸ್ಥಾನದ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ, ಎಂಟನೇ ಸ್ಥಾನದ ನಂತರ ಆಯುಷ್ಯವನ್ನು ಚಿಂತಿಸುವುದು ಮೂರು, ಏಳು ಹಾಗೂ ಹತ್ತನೇ ಮನೆ ಮೂಲಕವೇ. ಅಷ್ಟಮ ಸ್ಥಾನದ ಅಧಿಪತಿ ಯಾರೇ ಆಗಬಹುದು. ಆದರೆ ಆಯುಷ್ಯದ ಕಾರಕ ಮಾತ್ರ ಶನಿಯೇ ಆದ್ದರಿಂದ ಅಷ್ಟಮ ಸ್ಥಾನಕ್ಕೆ ಶನಿಯ ವೀಕ್ಷಣೆ ಹೇಗಿದೆ ಅಂತ ನೋಡುತ್ತೇವೆ. ಅಷ್ಟಮ ಸ್ಥಾನಕ್ಕೆ ಅಧಿಪತಿಯಾದ ಗ್ರಹಗಳು ಆರು ಮತ್ತು ಹನ್ನೆರಡನೇ ಮನೆಯಲ್ಲಿ ಇರಬಾರದು. ಆ ಮನೆಗಳಲ್ಲಿ ಇದ್ದರೆ ದೀರ್ಘಾಯುಷ್ಯ ಸಾಧ್ಯವಿಲ್ಲ.

ದ್ವಿತೀಯ ಹಾಗೂ ಪಂಚಮ ಸ್ಥಾನವೂ ನೋಡಬೇಕು
ಇನ್ನೊಂದು ಬಗೆಯಲ್ಲಿ ನೋಡುವುದಾದರೆ ಅಷ್ಟಮಾಧಿಪತಿ ದ್ವಿತೀಯ ಅಥವಾ ಪಂಚಮದಲ್ಲಿ ಇರಬಾರದು. ಅಂಥ ಸಂದರ್ಭಗಳಲ್ಲೂ ದೀರ್ಘಾಯುಷ್ಯ ಪೂರೈಸಲು ಸಾಧ್ಯವಿಲ್ಲ. ಇನ್ನು ದಶೆ ಬಗ್ಗೆ ನಿಮಗೆ ತಿಳಿಸಬೇಕು. ಎಲ್ಲ ಗ್ರಹಗಳ ದಶೆಯನ್ನು ಜಿವನದಲ್ಲಿ ನೋಡಬೇಕು ಅಂದರೆ ನೂರಕ್ಕೂ ಹೆಚ್ಚು ವರ್ಷ ಬದುಕಬೇಕು. ಆಗಷ್ಟೇ ಜೀವನದಲ್ಲಿ ಎಲ್ಲ ಗ್ರಹದ ದಶೆ ನೋಡಲು ಸಾಧ್ಯ. ಇನ್ನು ಯಾವ ವ್ಯಕ್ತಿ, ಯಾವ ದಶೆಯಲ್ಲಿ ಹುಟ್ಟುತ್ತಾನೋ ಆ ದಶೆಯನ್ನು ಮತ್ತೆ ನೋಡಲ್ಲ ಎಂಬ ಮಾತಿದೆ. ವೇದಗಳಲ್ಲಿ ಶತಮಾನಂ ಭವತು ಅಂತ ಆಶೀರ್ವಾದ ಮಂತ್ರ ಇದೆ. ಹಿರಿಯರು- ಋಷಿಗಳು ಈ ಮಂತ್ರವನ್ನು ಶತಮಾನ ಅಧಿಕ ಪರ್ಯಂತಂ ಎಂದು ಆಶೀರ್ವದಿಸುತ್ತಾರೆ. ಅದರರ್ಥ ನೂರಕ್ಕೂ ಹೆಚ್ಚು ವರ್ಷ ಎಂದರ್ಥ.

ಶನಿ ದುರ್ಬಲ, ಅಸ್ತ ಅಥವಾ ನೀಚನಾಗಿದ್ದರೆ ಪೂರ್ಣಾಯುಷ್ಯ ಸಾಧ್ಯವಿಲ್ಲ
ಮತ್ತೆ ತುಂಬ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಆಯುಷ್ಯವನ್ನು ನೀಡುವಂಥವನು ಶನಿ. ಆ ಗ್ರಹವು ಜನ್ಮ ಜಾತಕದಲ್ಲಿ ನೀಚವಾಗಿದ್ದರೆ, ದುರ್ಬಲವಾಗಿದ್ದರೆ, ಅಸ್ತನಾಗಿದ್ದರೆ, ವಕ್ರನಾಗಿದ್ದರೆ ಅಥವಾ ಶತ್ರುವಿನ ಮನೆಯಲ್ಲಿದ್ದರೆ ಅಥವಾ ಶನಿಯ ಜತೆಗೆ ಪಾಪ ಗ್ರಹಗಳು ಇದ್ದರೆ ಅಂಥ ಸಂದರ್ಭದಲ್ಲೂ ದೀರ್ಘಾಯುಷ್ಯ ಸಾಧ್ಯವಿಲ್ಲ. ಶನಿಗೆ ಉಚ್ಚ ಸ್ಥಾನವಾದ ತುಲಾ ರಾಶಿಯಲ್ಲಿ ಇದ್ದರೂ ಆಗ ಕೂಡ ಉತ್ತಮ ಫಲ ದೊರೆಯುತ್ತದೆ. ಜಾತಕದಲ್ಲಿ ಪೂರ್ವ ಪುಣ್ಯ ಸ್ಥಾನ, ಹಿರಿಯ ಆಶೀರ್ವಾದ, ಭಗವಂತನ ಅನುಗ್ರಹ, ಜಾತಕದಲ್ಲಿ ಗ್ರಹಗಳ ಬಲ ಇಷ್ಟರ ಮೇಲೂ ದೀರ್ಘಾಯುಷ್ಯ ಎಂಬುದು ಅವಲಂಬನೆ ಆಗಿರುತ್ತದೆ.

ಆಯುರ್ವೇದ ಹಾಗೂ ಜ್ಯೋತಿಷ್ಯಕ್ಕೂ ನಂಟು
ಜಾತಕದಲ್ಲಿ ಲಗ್ನದಿಂದ ಆರು, ಹನ್ನೆರಡನೇ ಸ್ಥಾನದಿಂದ ಅರೋಗ್ಯದ ಚಿಂತನೆ ಮಾಡಬಹುದು. ಇನ್ನು ಎಂಟನೇ ಸ್ಥಾನದಿಂದ ಆಯುಷ್ಯದ ಚಿಂತನೆ ಮಾಡಿ, ಎರಡನ್ನೂ ತುಲನೆ ಮಾಡಿ, ಆ ನಂತರ ದೀರ್ಘಾಯುಷ್ಯ ಇದೆಯೋ ಅಥವಾ ಇಲ್ಲವೋ ತಿಳಿಯಬಹುದು. ಇನ್ನು ಜ್ಯೋತಿಷ್ಯ ಹಾಗೂ ಆಯುರ್ವೇದಕ್ಕೆ ಕೂಡ ಹತ್ತಿರದ ನಂಟಿದೆ . ಅದರ ಪ್ರಕಾರ ಹೇಳಬೇಕು ಅಂದರೆ, ಮಿತ ಹಾಗೂ ಸಾತ್ವಿಕ ಆಹಾರ ಪದ್ಧತಿ, ಆಲೋಚನೆ, ಮಿತವಾದ ನಿದ್ದೆ ಕೂಡ ದೀರ್ಘಾಯುಷ್ಯಕ್ಕೆ ಪೂರಕವಾಗಿರುತ್ತದೆ. ಮನುಷ್ಯನ ದೇಹ ಕೂಡ ಯಂತ್ರ ಇದ್ದಂತೆ. ಅದರ ಬಳಕೆಯನ್ನು ಹೇಗೆ ಮಾಡುತ್ತೇವೆ ಅನ್ನೋದರ ಆಧಾರದಲ್ಲಿ ಕೂಡ ಆಯುಷ್ಯದ ಗುಟ್ಟು ಅಡಗಿದೆ. ಆದರೆ ಅದಕ್ಕೆ ದೈವಾನುಗ್ರಹ ಹಾಗೂ ಜಾತಕ ಬಲ ಅಗತ್ಯ.
ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.












Click it and Unblock the Notifications