ಮೇಷ ಮತ್ತು ವೃಷಭ ಗುಣಸ್ವಭಾವಗಳು
* ಧವಳ
ಈಗ ನಾವು ತಿಳಿಸಲು ಹೊರಟಿರುವ ಮಾಹಿತಿ ಜನ್ಮ ದಿನ ಆಧರಿಸಿದ್ದು. ಸಾಮಾನ್ಯವಾಗಿ ಜಾತಕಗಳಲ್ಲಿ ಬರುವ ರಾಶಿಗಳ ಬಗ್ಗೆ ಜನ್ಮ ನಕ್ಷತ್ರಹುಟ್ಟಿದ ಗಳಿಗೆ, ಪಾದ ಎನ್ನುವ ಸಂಗತಿಗಳತ್ತ ಆದ್ಯತೆ ನೀಡಲಾಗುತ್ತದೆ. ನಾವೀಗ ನಿಮಗೆ ತಿಳಿಸಹೊರಟಿರುವುದು ಭವಿಷ್ಯವಲ್ಲದ ಭವಿಷ್ಯ. ಅಂದರೆ, ಇಲ್ಲಿ ಲೆಕ್ಕಾಚಾರಕ್ಕಿಂತ ಸಾರಸಂಗ್ರಹಿಸಿದ ಸರಳ ಅರ್ಥಕ್ಕಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಸೊ, ಜನ್ಮದಿನದ ಆಧಾರ ಅನ್ವಯಿಸಿ ರಾಶಿಗಳ ಗುಣಾವಗುಣಗಳ, ಗುಣಸ್ವಭಾವಗಳ ಬಗ್ಗೆ ... ಬನ್ನಿ ಮೊಟ್ಟ ಮೊದಲು ಮೇಷ ಹಾಗೂ ವೃಷಭ ರಾಶಿಯ ವ್ಯಕ್ತಿಗಳು ಯಾವ ಗುಣಗಳನ್ನು ಹೊಂದಿರುತ್ತಾರೆ ಅಂತ ನೋಡೋಣ!
* ಮೇಷ (Aries) ಮಾರ್ಚ್ 21 - ಏಪ್ರಿಲ್ 21 : ಈ ರಾಶಿಯನ್ನು ಟಗರು ಪ್ರತಿನಿಧಿಸುತ್ತದೆ. ಬೇಕಾದರೆ ನೀವು ರಾಣಿಜೇನು ಅಂತಾದರೂ ಕರೆಯಬಹುದು, ಆಯ್ಕೆ ನಿಮಗೆ ಸೇರಿದ್ದು. ಸಾಹಸಿ ಪ್ರವೃತ್ತಿಯನ್ನು ಹೊಂದಿರುವ ರಾಶಿ, ಮೇಷ. ಈ ರಾಶಿಯಲ್ಲಿ ಹುಟ್ಟಿದವರು ಬೆಟ್ಟವನ್ನು ಕೀಳೋಕೆ ಆಗದೆ ಇದ್ರು ಬೆಟ್ಟ ಹತ್ತಿ ಬರುವ ಸಾಹಸ ಕೆಲಸ ಮಾಡ್ತಾರೆ. ಇಷ್ಟೆ ಅಲ್ಲದೆ ರೂಲಿಂಗ್ ನೇಚರ್ ಹೊಂದಿರ್ತಾರೆ, ಕಮ್ಯಾ೦ಡಿಂಗ್ ಗುಣ ಇವರದು.
ಇನ್ನೂ ಸರಳವಾಗಿ ಹೇಳುವುದಾದರೆ ತಮ್ಮ ಮೂಗಿನ ನೇರಕ್ಕೆ ನಡೆಯುವ ಜಾಯಮಾನದವರು. ಕೆಚ್ಚೆದೆಯವರು, ಭಯ ಇಲ್ಲದ ಭಯಂಕರ ಧೈರ್ಯಸ್ಥರು. ಮೇಷ ಮೊದಲನೇ ರಾಶಿ ಆಗಿರುವುದು ಇವೆಲ್ಲಕ್ಕೆ ಕಾರಣ ಅಂತಾರೆ ಜ್ಯೋತಿಷಿಗಳು. ಇವರನ್ನು ಆಗಾಗ ಜ್ವರ, ಮೂಗಲ್ಲಿ ರಕ್ತ ಸುರಿಯುವ, ಮೆದುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತವೆ.. ಸೊ ಇದರ ಬಗ್ಗೆ ಎಚ್ಚರ ವಹಿಸಿ.
ಮೊದಲೇ ಹೇಳಿದಂತೆ ಸಾಹಸ ಪ್ರೇಮಿಗಳಾದ ಮೆಶರಾಶಿಯವರು ಪ್ರೀತಿಯ ವಿಷಯದಲ್ಲಿ ಒಂದು ಕೈ ಮುಂದು. ಕೆಲಸದ ವಿಷಯಕ್ಕೆ ಬಂದರೆ ಕತ್ತೆಥರ ದುಡಿಯುವ ಗುಣ ಹೊಂದಿರುತ್ತಾರೆ. ಇಪ್ಪತ್ನಾಲ್ಕು ಗಂಟೆ ಬೇಡ ನಲವತ್ತೆಂಟು ಗಂಟೆ ದುಡಿ ಅಂದ್ರೂ ಸರಿಯೇ ಬೇಜಾರಿಲ್ಲದೆ ದುಡಿಯುವ ಮನಸ್ಥಿತಿ ಇವರದು. ಸೈನಿಕರು, ಅತ್ಲೆಟ್, ವೈದ್ಯರು, ಸಾಫ್ಟ್ ವೇರ್ ಪ್ರೊಗ್ರಾಂ ರೈಟರ್ ಆಗಿದ್ರೆ ಸಕ್ಸಸ್ ಅನ್ನೋದು ಗ್ಯಾರಂಟಿ.
* ವೃಷಭ (Taurus) ಏಪ್ರಿಲ್ 21 - ಮೇ 21 : ಎತ್ತು ಈ ರಾಶಿಯನ್ನು ರೆಪ್ರೆಸೆಂಟ್ ಮಾಡುತ್ತದೆ. ಈ ರಾಶಿಯವರದು ಸ್ವಲ್ಪ ಹಟಮಾರಿ ಗುಣ. ರಾಶಿಯಲ್ಲಿ ಜನ್ಮಿಸಿದ ಮಹನೀಯರು ಮತ್ತು ಮಹಿಳೆಯರು ಸದಾ ಯಶಸ್ಸಿನ ಕುದುರೆ ಏರಿರುತ್ತಾರೆ. ಇನ್ನು ಗುಣದ ಬಗ್ಗೆ ಹೇಳುವುದಾದರೆ ಸರಳಜೀವಿಗಳು, ಸಿಕ್ಕಾಪಟ್ಟೆ ನಿಗರ್ವಿಗಳು. ಸ್ನೇಹದ ವಿಷಯಕ್ಕೆ ಬಂದ್ರೆ ಸ್ವಲ್ಪ ಜಾಸ್ತೀನೆ ಕಂಜೂಸ್ಗಳು.
ಯಾರೂ ಬೇಡ ಇವರಿಗೆ, ಆದರೆ ಒಮ್ಮೆ ಅವರ ಮನದೊಳಗೆ ಎಂಟ್ರಿ ಆಗಿಬಿಟ್ರೆ ಬಿಡುವುದೇ ಇಲ್ಲ ಹಾಲುಜೇನು ಬೆರತಂಗೆ ಬೆರೆತು ಬಿಡ್ತಾರೆ. ಅತ್ಯಂತ ನಂಬಿಕಸ್ಥರು ಹಾಗೂ ಉದಾರಿಗಳು ಕೂಡಾ. ತುಂಬಾ ಪ್ರಾಕ್ಟಿಕಲ್ ಮತ್ತು ಮಹತ್ವಾಕಾಂಕ್ಷಿಗಳು. ಇವರಿಗೆ ಬ್ಯಾಂಕಿಂಗ್, ವೈದ್ಯ, ಇನ್ಶುರೆನ್ಸ್, ಶೈಕ್ಷಣಿಕ, ಬ್ಯುರೋಕ್ರೆಸಿ, ಕೃಷಿ, ಸಂಗೀತ, ವಾಸ್ತುಕಲೆ ಯಶಸ್ಸು ನೀಡುವ ವೃತ್ತಿಗಳು.
ಇದನ್ನು ಹೊರತುಪಡಿಸಿ ಬೇರೆ ವೃತ್ತಿಯಲ್ಲಿ ಯಶಸ್ವಿ ಆಗಿದ್ದರೆ ನಾವು ಖಂಡಿತ ಜವಾಬ್ದಾರರಲ್ಲ. ಸಮಚಿತ್ತ ಇವರ ಪ್ಲಸ್ ಪಾಯಿಂಟ್. ಸದಾ ರೇಸು ಕುದುರೆಯ ಮೇಲೆ ಸವಾರಿ ಮಾಡುವ ಮನೋವೃತ್ತಿಯ ವೃಷಭ ರಾಶಿಯವರಿಗೆ ಒತ್ತಡ ಆತಂಕಗಳೇ ಕಾಯಿಲೆಯಾಗಿ ಬಾಧಿಸುತ್ತದೆ.