2022 ರ ವಿಧಾನಸಭೆ ಚುನಾವಣೆ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ಲಾಭ ಪಡೆಯುತ್ತಾ ಬಿಜೆಪಿ?
ಚಂಡೀಗಢ, ಅಕ್ಟೋಬರ್ 08: ಭಾರತವು 2022 ರ ವಿಧಾನ ಸಭೆ ಚುನಾವಣೆಗೆ ಸಿದ್ಧವಾಗುತ್ತಿದೆ. ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆಯು ನಡೆಯಲಿದೆ. ಈ ಪಂಚ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ರಾಜ್ಯಗಳು ಬಿಜೆಪಿ ಆಡಳಿತ ಇರುವ ರಾಜ್ಯವಾದರೆ, ಪಂಜಾಬ್ ಮಾತ್ರ ಕಾಂಗ್ರೆಸ್ ಆಡಳಿತವಿರುವ ರಾಜ್ಯವಾಗಿದೆ.
ಬಿಜೆಪಿ ಆಡಳಿತವಿರುವ ನಾಲ್ಕು ರಾಜ್ಯಗಳ ಪೈಕಿ ಉತ್ತರ ಪ್ರದೇಶವು ಪ್ರಮುಖ ರಾಜ್ಯವಾದರೂ ಕೂಡಾ ಈ ನಡುವೆ ಈ ಪಂಜ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ರಾಜ್ಯದ ಮೇಲೆ ರಾಜಕೀಯ ವಲಯದಲ್ಲಿ ಅಧಿಕ ಗಮನವಿದೆ. ಇನ್ನು ಅಧಿಕವಾಗಿ ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ನಲ್ಲಿ ನಡೆದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಂಜಾಬ್ನತ್ತವೂ ದೇಶದ ಚಿತ್ತ ನೆಟ್ಟಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಆಡಳಿತವನ್ನು ಉಳಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಸರಿಸುಮಾರು ವರ್ಷಗಳ ಕಾಲ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರವನ್ನು ಪಂಜಾಬ್ ರಾಜ್ಯದವರು ವಹಿಸಿಕೊಂಡಿದ್ದಾರೆ. ಪಂಜಾಬ್ನಿಂದ ಅದೆಷ್ಟೋ ಕುಟುಂಬವು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಲು ದೆಹಲಿಯತ್ತ ದೌಡಾಯಿಸಿದೆ. ಈ ನಡುವೆ ಪಂಜಾಬ್ ಸರ್ಕಾರವು ರೈತರಿಗೆ ಬೆಂಬಲ ಸೂಚಿಸಿದೆ. ಈ ನಡುವೆ ಕೇಂದ್ರದಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳವು ಮೈತ್ರಿ ಕೂಟದಿಂದ ಹೊರ ಬಂದಿದೆ.

ಪಂಜಾಬ್ನಲ್ಲಿ ರಾಜಕೀಯ ಬಿಕ್ಕಟ್ಟು ತರುತ್ತಾ ಕಾಂಗ್ರೆಸ್ಗೆ ಕುತ್ತು
ಪಂಜಾಬ್ ಅನ್ನು ಆಳುವ ಕಾಂಗ್ರೆಸ್ ಸರ್ಕಾರವು ಈಗ ಹಲವಾರು ಗೊಂದಲಕಾರಿ ಸ್ಥಿತಿಯನ್ನು ದಾಟಿ ಬಂದಿದೆ. ಅಮರಿಂದರ್ ಸಿಂಗ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹಾಗೂ ಪಂಜಾಬ್ ರಾಜ್ಯ ಮುಖ್ಯಸ್ಥ ಸ್ಥಾನಕ್ಕೆ ನವಜ್ಯೋತ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಪಂಜಾಬ್ನಲ್ಲಿ ಕಾಂಗ್ರೆಸ್ನ ಸ್ಥಿತಿಯು ಹಲವಾರು ಗೊಂದಲದಿಂದ ಕೂಡಿದೆ. ಈ ಎಲ್ಲಾ ಘಟನೆಗಳು ಪಂಜಾಬ್ನಲ್ಲಿ ಚುನಾವಣೆ ನಡೆಯಲಿರುವ ಕೆಲವು ತಿಂಗಳುಗಳ ಮುಂಚೆ ನಡೆದಿರುವ ಹಿನ್ನೆಲೆ ಈ ಎಲ್ಲಾ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಅಧಿಕ ಸಂಚಲನವನ್ನು ಮೂಡಿಸಿದೆ. ಇನ್ನು ಸೆಪ್ಟೆಂಬರ್ 30 ರಂದು ಅಮರಿಂದರ್ ಸಿಂಗ್ ತಾನು ಬಿಜೆಪಿಗೆ ಸೇರ್ಪಡೆ ಆಗಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಈ ನಡುವೆ ಪಂಜಾಬ್ನಲ್ಲಿನ ಈ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್ಗೆ ಕುತ್ತು ತರಲಿದೆಯೇ ಎಂಬ ವಿಚಾರವು ಮುನ್ನಲೆಯಲ್ಲಿದೆ.

ಪಂಜಾಬ್ನಲ್ಲಿ ಬಿಜೆಪಿಗೆ ಇರುವ ಎರಡು ಸವಾಲುಗಳು
ಈ ಎಲ್ಲಾ ಬೆಳವಣಿಗೆಯ ನಡುವೆ ಬಿಜೆಪಿಯು ಪಂಜಾಬ್ನಲ್ಲಿ ತನ್ನ ಕಬಂದ ಬಾಹುವನ್ನು ಚಾಚುವ ಯತ್ನ ಮಾಡುತ್ತಿದೆ. ಕಾಂಗ್ರೆಸ್ನ ಈ ರಾಜಕೀಯ ಬಿಕ್ಕಟ್ಟಿನ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ಸಫಲವಾದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತವನ್ನು ಪಡೆಯುವುದು ಖಚಿತ ಎಂಬ ಯೋಚನೆಯನ್ನು ಬಿಜೆಪಿ ನಾಯಕರು ನಡೆಸಿದ್ದಾರೆ. ಈ ಹಿನ್ನೆಲೆ ಬಿಜೆಪಿ ನಾಯಕರು ಪಂಜಾಬ್ ರಾಜ್ಯದಲ್ಲೂ ಆಡಳಿತದ ಚುಕ್ಕಾಣಿಯನ್ನು ಹಿಡಿಯುವ ಯತ್ನದಲ್ಲಿ ಇದ್ದಾರೆ. ಇನ್ನು ಈ ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ ಮಾತ್ರವಲ್ಲದೆ ಆಮ್ ಆದ್ಮಿ ಪಕ್ಷ ಮತ್ತು ಎಸ್ಎಡಿ-ಬಿಎಸ್ಪಿ ಮೈತ್ರಿಕೂಟವು ಕಠಿಣ ಸ್ಪರ್ಧೆಯನ್ನು ನೀಡಲಿದೆ. ಪಂಜಾಬ್ನಲ್ಲಿ ಶಿರೋಮಣಿ ಅಕಾಲಿ ದಳ ಮೈತ್ರಿ ಇಲ್ಲದೆ ಬಿಜೆಪಿಯು ಸುಮಾರು 25 ವರ್ಷಗಳ ಬಳಿಕ ಒಟ್ಟಿಯಾಗಿ ಪಂಜಾಬ್ನಲ್ಲಿ ಚುನಾವಣೆಯನ್ನು ಎದುರಿಸಲು ಮುಂದಾಗಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ಹಿನ್ನೆಲೆ ಅಕಾಳಿದಳ ಬಿಜೆಪಿ ಮೈತ್ರಿ ಕೂಟದಿಂದ ಹೊರಕ್ಕೆ ಬಂದಿದೆ. ಪಂಜಾಬ್ನಲ್ಲಿ ಬಿಜೆಪಿಯ ಎನ್ಡಿಎ ಒಕ್ಕೂಟದಲ್ಲಿ ಪ್ರಮುಖ ನಾಯಕರುಗಳು ಇಲ್ಲದಂತೆ ಆಗಿದೆ. ಮಾಜಿ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ ಈಗ ಬಿಜೆಪಿ ಪರವಾಗಿಲ್ಲದಿರುವುದು ಬಿಜೆಪಿಗೆ ಒಂದು ಸವಾಲಾಗಿದೆ. ಇನ್ನು ಮತ್ತೊಂದು ಪ್ರಮುಖ ಸವಾಲೆಂದರೆ ಪಂಜಾಬ್ನಲ್ಲಿ ಅಧಿಕವಾಗಿರುವ ಸಿಖ್ ಸಮುದಾಯದಲ್ಲಿ ಅಧಿಕ ಮಂದಿ ರೈತರು ಆಗಿರುವುದು. ಪಂಜಾಬ್ ರೈತ ಸಮುದಾಯವು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಹಿನ್ನೆಲೆ ಬಿಜೆಪಿಯನ್ನು ಈಗ ತೀವ್ರವಾಗಿ ವಿರೋಧ ಮಾಡುತ್ತಿದೆ. ಇವೆರಡು ಅಂಶಗಳು ಬಿಜೆಪಿಗೆ ಪಂಜಾಬ್ನಲ್ಲಿ ಸವಾಲಾಗಿದೆ. ಆದರೆ ಕಾಂಗ್ರೆಸ್ನ ರಾಜಕೀಯ ಬಿಕ್ಕಟ್ಟನ್ನು ಬಳಸಿಕೊಂಡು ಬಿಜೆಪಿಯು ತನ್ನ ಕಾರ್ಯತಂತ್ರ ರೂಪಿಸುವ ಎಲ್ಲಾ ಸಾಧ್ಯತೆಗಳು ಇದೆ. ಕಳೆದ 2017 ರ ಚುನಾವಣೆಯಲ್ಲಿ ಬಿಜೆಪಿಯು ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಟ್ಟು 117 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ 23 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆಗೆ ಇಳಿದಿತ್ತು.

ಪಂಜಾಬ್ನಲ್ಲಿ ಕಾಂಗ್ರೆಸ್ ಆಡಳಿತ ಕಿತ್ತು ಹಾಕಲು ಬಿಜೆಪಿಯ ರಣತಂತ್ರ
ಪಂಜಾಬ್ನಲ್ಲಿ ಈ ಬಾರಿ ಒಂಟಿಯಾಗಿ ಕಣಕ್ಕೆ ಇಳಿಯಲಿರುವ ಬಿಜೆಪಿಯು ಕಾಂಗ್ರೆಸ್ಗೆ ಸವಾಲನ್ನು ಒಡ್ಡಲು ಮುಂದಾಗಿದೆ. ಅದಕ್ಕಾಗಿ ಮುಖ್ಯವಾಗಿ ದಲಿತರು, ಒಬಿಸಿಗಳು ಹಾಗೂ ನಗರ ಭಾಗದ ಹಿಂದೂಗಳನ್ನು ಒಗ್ಗೂಡಿಸುವ ಯುತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ತಜ್ಞರು ಹೇಳುತ್ತಾರೆ. ನಗರದ ಮತದಾರರ ಬೆಂಬಲವನ್ನು ಬಿಜೆಪಿಯು ಪಂಜಾಬ್ನಲ್ಲಿ ಹೊಂದಿದೆ. ಈ ಹಿನ್ನೆಲೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಈ ನಗರದ ಮತದಾರರನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುವ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ ಎಂದು ಹೇಳಲಾಗಿದೆ. ವರದಿಯೊಂದರ ಪ್ರಕಾರ, ಸುಮಾರು 60 ಶೇಕಡದಷ್ಟು ಹಿಂದೂಗಳು ಇರುವ ಪ್ರದೇಶದಲ್ಲಿ ಬಿಜೆಪಿಯು 45 ಕ್ಷೇತ್ರವನ್ನು ಈಗಾಗಲೇ ಗುರುತು ಮಾಡಿಕೊಂಡಿದೆ. ಈ ಪೈಕಿ 23 ಕ್ಷೇತ್ರಗಳು ಈ ಹಿಂದೆ ಬಿಜೆಪಿ ಅಕಾಳಿದಳದ ಮೈತ್ರಿಯೊಂದಿಗೆ ಸ್ಪರ್ಧೆಗೆ ಇಳಿದಿದ್ದ ಕ್ಷೇತ್ರಗಳು ಆಗಿದೆ.

ಉತ್ತರ ಪ್ರದೇಶದಂತೆ ಪಂಜಾಬ್ನಲ್ಲಿಯೂ ಬಿಜೆಪಿಯ ಕಣ್ಣು ಜಾತಿಗಳ ಮೇಲೆ
ಉತ್ತರ ಪ್ರದೇಶ ರಾಜ್ಯದಂತೆ ಬಿಜೆಪಿಯು ಪಂಜಾಬ್ನಲ್ಲಿ ಜಾತಿಗಳ ಮೇಲೆ ನಿರ್ದಿಷ್ಟವಾಗಿ ಕಣ್ಣು ಇಟ್ಟಿದೆ. ದಲಿತ ಸಮುದಾಯ ಮತವನ್ನು ಪಡೆಯುವ ನಿಟ್ಟಿನಲ್ಲಿ ಬಿಜೆಪಿಯು ರವಿದಾಸಿಯ ಸಮುದಾಯ ವಿಜಯ್ ಸಪಲ್ಯಗೆ ನಾಯಕತ್ವವನ್ನು ನೀಡಿದೆ. ವಿಜಯ್ ಸಪಲ್ಯ ದಲಿತ ಸಮುದಾಯಗಳು ಅಧಿಕವಾಗಿ ಇರುವ ದೌಬಾ ಪ್ರದೇಶಕ್ಕೆ ಸೇರಿದವರು ಆಗಿದ್ದಾರೆ. ಬಿಜೆಪಿಯು ಕೇಂದ್ರ ಮಂತ್ರಿ ಶ್ರೇಣಿಯನ್ನು ನೀಡುವ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಇನ್ನು ಬಿಜೆಪಿ ಪಕ್ಷವು ಪಂಜಾಬ್ನಲ್ಲಿ ಗಜೇಂದ್ರ ಸಿಂಗ್ ಶೇಖವತ್ರನ್ನು ಚುನಾವಣಾ ಉಸ್ತುವಾರಿಯನ್ನಾಗಿ ಮಾಡಿದೆ. ಗಜೇಂದ್ರ ಸಿಂಗ್ ಶೇಖವತ್ ಇತರೆ ಮೂರು ಸಹಭಾಗಿದಾರರನ್ನು ಬಿಜೆಪಿಯು ನೀಡಿದೆ. ಕೇಂದ್ರ ನಗರ ಹಾಗೂ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಹಾಗೂ ಅಮಿತ್ ಶಾರ ಆಪ್ತರು ಎಂದು ಹೇಳಲಾಗುವ ಸಂಸದರು ವಿನೋಬಾಯಿ ಚಾವ್ಡಾ. ಗಜೇಂದ್ರ ಸಿಂಗ್ ಶೇಖವತ್ ಕಳೆದ ಎರಡು ವರ್ಷಗಳಿಂದ ಪಂಜಾಬ್ನ ರಾಜಕೀಯವನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗೆಯೇ ಮಂತ್ರಿಯಾಗುವ ರೈತರ ವಿಭಾಗದ ಪ್ರಧಾನ ಕಾರ್ಯದರ್ಶಿ ಕೂಡಾ ಆಗಿದ್ದರು. ಈ ಹಿನ್ನೆಲೆಯಲ್ಲಿ ರೈತರೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಳ್ಳಲು ಗಜೇಂದ್ರ ಸಿಂಗ್ ಶೇಖವತ್ ಸಹಾಯವಾಗಲಿದ್ದಾರೆ ಎಂಬ ಕಾರ್ಯತಂತ್ರವನ್ನು ಬಿಜೆಪಿಯು ಹೊಂದಿದೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications