ಗೋವಾದ 40 ವಿಧಾನಸಭೆ ಸೀಟಿಗೆ ಎಂಟು ಪಕ್ಷಗಳ ಚುನಾವಣಾ ಸಮರ ಹೇಗಿದೆ ನೋಡಿ..
ಪಣಜಿ, ನವೆಂಬರ್ 05: ದೇಶದಲ್ಲಿ ಮುಂದಿನ ವರ್ಷ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಪಂಜಾಬ್, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಪಂಚ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ರಾಜ್ಯಗಳು ಬಿಜೆಪಿ ಆಡಳಿತ ಇರುವ ರಾಜ್ಯವಾದರೆ, ಪಂಜಾಬ್ ಮಾತ್ರ ಕಾಂಗ್ರೆಸ್ ಆಡಳಿತವಿರುವ ರಾಜ್ಯವಾಗಿದೆ.
ಪಂಜಾಬ್ ಕಾಂಗ್ರೆಸ್ ಆಡಳಿತವಿರುವ ರಾಜ್ಯವಾದ ಕಾರಣದಿಂದಾಗಿ ಈ ಚುನಾವಣೆಯ ನಂತರ ಪಂಜಾಬ್ನಲ್ಲಿ ಮತ್ತೆ ಕಾಂಗ್ರೆಸ್ ಬರಲಿದೆಯೇ ಎಂಬುವುದನ್ನು ನಾವು ತಿಳಿಯಲು ನಾವು ಚುನಾವಣೆ ಮುಗಿದು ಫಲಿತಾಂಶಕ್ಕಾಗಿ ಕಾಯಬೇಕಷ್ಟೇ. ಈ ನಡುವೆ ಪಂಜಾಬ್ನಲ್ಲಿ ನಡೆಯುತ್ತಿರುವ ಕೆಲವು ರಾಜಕೀಯ ಬಿಕ್ಕಟ್ಟಿನ ಲಾಭವನ್ನು ಪಡೆಯಲು ಬಿಜೆಪಿ ಸಿದ್ಧವಾಗುತ್ತಿದ್ದಂತೆ ಕಾಣುತ್ತಿದೆ. ಇನ್ನು ಬಿಜೆಪಿ ಆಡಳಿತ ಇರುವ ನಾಲ್ಕು ರಾಜ್ಯಗಳ ಪೈಕಿ ಉತ್ತರ ಪ್ರದೇಶ ಆರಂಭದಿಂದಲೇ ಮುಖ್ಯ ರಾಜಕೀಯ ರಾಜ್ಯವಾಗಿದೆ. ಈ ನಡುವೆ ಹಲವಾರು ಪ್ರಮುಖ ಪಕ್ಷಗಳ ಕಣ್ಣು ಗೋವಾದ ಮೇಲೂ ನೆಟ್ಟಿದೆ.
2022 ರ ಚುನಾವಣೆ: ಉತ್ತರಾಖಂಡ, ಗೋವಾ, ಮಣಿಪುರದ ಆಡಳಿತ ಉಳಿಸಿಕೊಳ್ಳುವತ್ತ ಬಿಜೆಪಿ ಚಿತ್ತ
ಗೋವಾ ಸಣ್ಣ ರಾಜ್ಯವಾದರೂ ಕೂಡಾ ಪ್ರಸ್ತುತ ಗೋವಾದಲ್ಲಿ ಭರ್ಜರಿ ಚುನಾವಣಾ ತಯಾರಿಯನ್ನು ಮುಖ್ಯಮಂತ್ರಿ ಗದ್ದುಗೆಯ ಮೇಲೆ ಗುರಿ ಇಟ್ಟಿರುವ ಪಕ್ಷಗಳು ನಡೆಸುತ್ತಿದೆ. 40 ವಿಧಾನಸಭೆ ಸೀಟುಗಳನ್ನು ಹೊಂದಿರುವ ಗೋವಾ ರಾಜ್ಯದಲ್ಲಿ 2022 ರ ಫೆಬ್ರವರಿ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈಗಾಗಲೇ ತೃಣಮೂಲ ಕಾಂಗ್ರೆಸ್ ಹೊಸದಾಗಿ ಈ ಸಣ್ಣ ರಾಜ್ಯದಲ್ಲಿ ತನ್ನ ರಾಜಕೀಯ ಬಲವನ್ನು ವಿಸ್ತಾರ ಮಾಡಿಕೊಳ್ಳುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರವನ್ನು ನಡೆಸುತ್ತಿರುವ ಎಎಪಿ ಕೂಡಾ ಗೋವಾ ಚುನಾವಣಾ ಸಮರಕ್ಕೆ ಜಿಗಿದಿದೆ. ಈ ನಡುವೆ ಗೋವಾದ 40 ವಿಧಾನಸಭೆ ಸೀಟಿಗೆ ಎಂಟು ಪಕ್ಷಗಳು ಸಮರ ಶುರು ಮಾಡಿದೆ. ಆ ಪಕ್ಷಗಳು ಯಾವುದು?, ಗೋವಾದಲ್ಲಿ ಚುನಾವಣಾ ತಯಾರಿ ಹೇಗೆ ನಡೆಯುತ್ತಿದೆ ಎಂಬುವುದನ್ನು ತಿಳಿಯಲು ಮುಂದೆ ಓದಿ.
40 ವಿಧಾನಸಭೆ ಸೀಟಿಗೆ ಎಂಟು ಪಕ್ಷಗಳು ಸಮರ
ಗೋವಾದಲ್ಲಿ ಮುಂದಿನ ವರ್ಷ ಅಂದರೆ 2022 ರ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಗೋವಾದಲ್ಲಿ ಒಟ್ಟು 40 ವಿಧಾನಸಭೆ ಸೀಟುಗಳು ಇದ್ದು, ಇದಕ್ಕಾಗಿ ಈಗ ಎಂಟು ಪಕ್ಷಗಳು ಸಮರ ಆರಂಭ ಮಾಡಿಕೊಂಡಿದೆ. ಈ ಕರಾವಳಿ ರಾಜ್ಯದ ಚುನಾವಣಾ ರಣರಂಗಕ್ಕೆ ತೃಣಮೂಲ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷವೂ ಎಂಟ್ರಿ ನೀಡಿದ್ದು, ಪ್ರಸ್ತುತ ಚುನಾವಣಾ ಬಿಸಿಯು ಹೆಚ್ಚಾಗಿದೆ. ಗೋವಾದಲ್ಲಿ ಮುಖ್ಯವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಚುನಾವಣಾ ಕಾದಾಟ ನಡೆಯುವುದು ಕಂಡು ಬರುತ್ತಿದೆ. 2017 ಕಾಂಗ್ರೆಸ್ ಇಲ್ಲಿನ 40 ವಿಧಾನಸಭೆ ಸ್ಥಾನಗಳ ಪೈಕಿ 17 ಸ್ಥಾನಗಳಲ್ಲಿ ಜಯ ಗಳಿಸಿದ್ದು ಈ ಮೂಲಕವಾಗಿ ಕಾಂಗ್ರೆಸ್ ಅತೀ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯು 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ದಿಢೀರ್ ಆಗಿ, ಬಿಜೆಪಿಯು ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಮನೋಹರ್ ಪಾರಿಕ್ಕಾರ್ ನೇತೃತ್ವದಲ್ಲಿ ಸರ್ಕಾರವನ್ನು ರಚನೆ ಮಾಡಿದೆ. ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದ್ದ ಸಂದರ್ಭ ಬಿಜೆಪಿಗೆ ಗದ್ದುಗೆ ಹೋದ ಹಿನ್ನೆಲೆ ಆಘಾತಕ್ಕೆ ಒಳಗಾಗಿದ್ದ ಕಾಂಗ್ರೆಸ್ಗೆ 2019 ರಲ್ಲಿ ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆ ಆಗಿದ್ದು ಇನ್ನಷ್ಟು ತಲೆ ಬಿಸಿಯನ್ನು ಉಂಟು ಮಾಡಿತ್ತು. ಬಿಜೆಪಿಯ ಈ ರಾಜಕೀಯ ಕುದುರೆ ವ್ಯಾಪಾರದಿಂದಾಗಿ ಆಕ್ರೋಶಕ್ಕೆ ಒಳಗಾಗಿರುವ ಹಾಗೂ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್ಗೆ ಮತ ನೀಡಲಿದ್ದಾರೆ ಎಂಬುವುದು ಕಾಂಗ್ರೆಸ್ನ ನಿರೀಕ್ಷೆ ಆಗಿದೆ. ಪ್ರಸ್ತುತ ಗೋವಾದಲ್ಲಿ ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಎಎಪಿ, ಶಿವಸೇನೆ, ಗೋವಾ ಫಾರ್ವಡ್ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಸಿಪಿಐ ಈ ಚುನಾವಣಾ ಕಣದಲ್ಲಿ ಇದೆ.
ಗೋವಾದಲ್ಲಿ ಟಿಎಂಸಿ ಎಂಟ್ರಿ
ಗೋವಾ ರಾಜ್ಯದ ಚುನಾವಣಾ ರಂಗಕ್ಕೆ ಈಗ ತೃಣಮೂಲ ಕಾಂಗ್ರೆಸ್ ಕೂಡಾ ಎಂಟ್ರಿಯನ್ನು ನೀಡಿದೆ. ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ನ ಈ ಎಂಟ್ರಿಯು ಕಾಂಗ್ರೆಸ್ಗೆ ಮಾತ್ರ ಭಾರೀ ಆತಂಕವನ್ನು ಸೃಷ್ಟಿ ಮಾಡಿರುವಂತಿದೆ. ಟಿಎಂಸಿ ಈಗಾಗಲೇ ಗೋವಾದಲ್ಲಿ ಹಲವು ಕಾಂಗ್ರೆಸ್ ನಾಯಕರುಗಳನ್ನು ತನ್ನತ್ತ ಸೆಳೆದಿದೆ. ಗೋವಾದಲ್ಲಿ ತನ್ನ ಕಬಂದ ಬಾಹುವನ್ನು ವಿಸ್ತಾರ ಮಾಡುತ್ತಿರುವ ಟಿಎಂಸಿ, ಅನುಭವಿ ಗೋವಾ ಕಾಂಗ್ರೆಸ್ ನಾಯಕ, ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊರನ್ನು ಈಗಾಗಲೇ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಲುಯಿಜಿನೊ ಫಲೆರೊ ಪ್ರಸ್ತುತ ಟಿಎಂಸಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಕ್ಟೋಬರ್ 24 ರಂದು ಗೋವಾದಲ್ಲಿ ಸುಮಾರು 300 ಜನರು ತೃಣಮೂಲ ಕಾಂಗ್ರೆಸ್ ಅನ್ನು ಸೇರ್ಪಡೆಗೊಂಡಿದ್ದಾರೆ ಎಂದು ಟಿಎಂಸಿ ಹೇಳಿದೆ. ರಾಜ್ಯಸಭೆಯ ಟಿಎಂಸಿ ಸಂಸದೀಯ ನಾಯಕ ಡೆರೆಕ್ ಒ'ಬ್ರೇನ್ ಮತ್ತು ಸಾಂಗುಮ್ನ ಶಾಸಕ ಪ್ರಸಾದ್ ಗಾಂವ್ಕರ್ ಉಪಸ್ಥಿತಿಯಲ್ಲಿ 150 ಕ್ಕೂ ಹೆಚ್ಚು ಜನರು ಮೊಲ್ಕಾರ್ನೆಮ್ ಪಂಚಾಯತ್ನ ಸರ್ಪಂಚ್ ಮತ್ತು ನಾಲ್ಕು ಪಂಚ್ಗಳು ಸೇರಿದಂತೆ ಪಕ್ಷಕ್ಕೆ ಸೇರಿದ್ದಾರೆ. ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಬಾಲಿವುಡ್ ನಟಿ ನಫೀಸಾ ಅಲಿ ಮತ್ತು ಮೃಣಾಲಿನಿ ದೇಶಪ್ರಭು ಕೂಡಾ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ನಿಂದ ತನ್ನತ್ತ ಟಿಎಂಸಿ ಜನರನ್ನು ಸೆಳೆದುಕೊಳ್ಳುತ್ತಿರುವುದು ಬಿಜೆಪಿ ಲಾಭ ಉಂಟು ಮಾಡಲಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವಿಗಾಗಿ ಶ್ರಮಿಸಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತಂಡವು ಟಿಎಂಸಿಗಾಗಿ ಗೋವಾದಲ್ಲಿ ಸಮೀಕ್ಷೆಯನ್ನು ನಡೆಸುತ್ತಿದೆ.
ಎಎಪಿಯಿಂದ ಭರವಸೆಗಳ ಮಹಾಪೂರ
ಈ ನಡುವೆ ಎಎಪಿ ಕೂಡಾ ಗೋವಾ ಚುನಾವಣಾ ರಂಗಕ್ಕೆ ಪ್ರವೇಶ ಮಾಡಿದೆ. ಗೋವಾದಲ್ಲಿ ತಮ್ಮ ಸರ್ಕಾರ ರಚನೆ ಆದರೆ ನಾವು ಜನರಿಗೆ ಯಾವೆಲ್ಲಾ ಸಹಾಯವನ್ನು ಮಾಡಲಿದ್ದೇವೆ ಎಂಬ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆಯ ಮಹಾಪೂರವನ್ನೇ ಸುರಿಸಿದ್ದಾರೆ. ಮುಂಬರುವ 2022ರ ಗೋವಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಿದರೆ, ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಉದ್ಯಮಗಳು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಈ ವಲಯಗಳನ್ನು ಅವಲಂಬಿಸಿರುವ ಕುಟುಂಬಗಳಿಗೆ ತಿಂಗಳಿ 5,000 ರೂ. ನೀಡಲಾಗುವುದು ಎಂದು ಕೂಡಾ ಹೇಳಿದ್ದಾರೆ. ಹಾಗೆಯೇ ಹಲವಾರು ಭರವಸೆಗಳನ್ನು ನೀಡಿದ್ದಾರೆ. ದೆಹಲಿಯಲ್ಲಿ ಆಪ್ ತನ್ನ ಸರ್ಕಾರವನ್ನು ರಚನೆ ಮಾಡುವ ಮುನ್ನ ಹಲವಾರು ಭರವಸೆಗಳನ್ನು ನೀಡಿತ್ತು. ಇದೇ ತಂತ್ರಗಾರಿಕೆಯನ್ನು ಗೋವಾದಲ್ಲಿ ಅರವಿಂದ್ ಕೇಜ್ರಿವಾಲ್ ನಡೆಸುತ್ತಿದ್ದಾರೆ.
ಕಮಲ ಗೋವಾದಲ್ಲಿ ಮತ್ತೆ ಅರಳುತ್ತದೆಯೇ?
ಗೋವಾದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದಾಗ ಬಿಜೆಪಿಯು ತನ್ನ ಗದ್ದುಗೆಯನ್ನು ಉಳಿಸಿಕೊಳ್ಳುವಂತೆ ಕಾಣುತ್ತಿದೆ. ಟಿಎಂಸಿ ಹಾಗೂ ಎಎಪಿ ಗೋವಾ ಚುನಾವಣಾ ರಂಗಕ್ಕೆ ಕಾಲಿಟ್ಟಿರುವುದು ಕಾಂಗ್ರೆಸ್ನ ಬಲವನ್ನು ಕುಗ್ಗಿಸುತ್ತಿದ್ದು, ಇದರ ಲಾಭ ಬಿಜೆಪಿ ಬರುವ ಸಾಧ್ಯತೆಗಳು ಇದೆ. ಆದರೂ ಗೋವಾದಲ್ಲಿ ಮತ್ತೆ ಕಮಲ ಅರಳಬೇಕಾದರೆ, ಬಿಜೆಪಿಯು ಕೊಂಚ ಜಾಗರೂಕವಾಗಿ ಕಾರ್ಯತಂತ್ರ ರೂಪಿಸುವುದು ಉತ್ತಮ ಎಂಬುವುದು ತಜ್ಞರ ಅಭಿಪ್ರಾಯ. ಗೋವಾದಲ್ಲಿ ಚುನಾವಣಾ ಕದನ ಪೈಪೋಟಿಯಲ್ಲಿ ನಡೆಯಲಿದೆ ಎಂಬುವುದು ಈಗಾಗಲೇ ಸ್ಪಷ್ಟವಾಗಿದೆ. ಆದರೆ ಬಿಜೆಪಿಗೆ ಇಲ್ಲಿ ಹಲವಾರು ಸವಾಲುಗಳು ಇದೆ. ಗೋವಾದಲ್ಲಿ ಈಗ ಬಿಜೆಪಿಗೆ ಪೈಪೋಟಿ ನೀಡಲು ಆಪ್, ತೃಣಮೂಲ ಕಾಂಗ್ರೆಸ್ ಹಾಗೂ ಶಿವಸೇನೆಯು ಕೂಡಾ ಸಿದ್ಧವಾಗಿದೆ. ಬಿಜೆಪಿಯು ಗೋವಾದಲ್ಲಿ ಮತ್ತೆ ಸರ್ಕಾರವನ್ನು ರಚನೆ ಮಾಡಲು ಈ ಮೂರು ಪಕ್ಷ ಮಾತ್ರವಲ್ಲದೇ ಕಾಂಗ್ರೆಸ್ನ ವಿರುದ್ಧವಾಗಿ ಕಾರ್ಯತಂತ್ರ ರೂಪಿಸಬೇಕಾಗಿದೆ. ಬಿಜೆಪಿಯ ಮೈತ್ರಿ ಪಕ್ಷಗಳು ಆಗಿದ್ದ, ವಿಜಯ್ ಸರ್ದೇಸಾಯಿ ಅವರ ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಸುದಿನ್ ಧವಳಿಕರ್ರ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ ಈಗ ಎನ್ಡಿಎ ಕೂಟದಿಂದ ಹೊರ ನಡೆದಿದೆ. ಹಾಗಾಗಿ ಬಿಜೆಪಿಯು ಈಗ ಒಂಟಿಯಾಗಿ ಇಲ್ಲಿ ಚುನಾವಣೆ ಎದುರಿಸಬೇಕಾಗಿದೆ. ಕಳೆದ ಬಾರಿ ಇನ್ನು ಈ ನಡುವೆ ಕೋವಿಡ್ ನಿರ್ವಹಣೆಯಲ್ಲಿನ ಲೋಪದ ಹಿನ್ನೆಲೆ, ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಯು ಬಿಜೆಪಿಯ ವಿರುದ್ಧ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯವಾಗಿ ಬಿಜೆಪಿಯು ಮನೋಹರ್ ಪಾರಿಕ್ಕಾರ್ರಂತಹ ಮುಖ್ಯ ನಾಯಕರನ್ನೇ ಕಳೆದುಕೊಂಡಿದೆ. ಈ ನಡುವೆ ಈ ಚುನಾವಣೆಗೂ ಮುನ್ನವೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸ್ಥಾನದಿಂದ ಕೆಳಗಿಳಿಯಲಿದು, ಗೋವಾ ಹೊಸ ಮುಖ್ಯಮಂತ್ರಿಯನ್ನು ಕಾಣಲಿದೆ ಎಂಬ ಊಹಾಪೋಹಗಳು ಇದೆ. ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ ಕನಿಷ್ಠ 7-8 ವಿಧಾನಸಭೆ ಸ್ಥಾನವನ್ನು ಹೊಂದಿದೆ.
ಸಣ್ಣ ರಾಜ್ಯ ಎಷ್ಟು ವಿಸ್ತಾರವಾಗಿದೆ?
ಗೋವಾ ದೇಶದ ಅತೀ ಸಣ್ಣ ರಾಜ್ಯವಾಗಿದೆ. ಗೋವಾ ರಾಜ್ಯವು 3,702 ಸ್ವ್ಕೇರ್ ಕಿಲೋ ಮೀಟರ್ ಇದೆ. ಇಲ್ಲಿನ ಭೂ ವಿಸ್ತಾರವು ಇತ್ತರ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ತೀರಾ ಕಡಿಮೆ ಆಗಿದೆ. ಈ ರಾಜ್ಯದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 20,000-25,000 ಸಾವಿರ ಮತದಾರರು ಇದ್ದಾರೆ. ಆದ್ದರಿಂದ ಓರ್ವ ಅಭ್ಯರ್ಥಿ ಮೂರು ಸಾವಿರ ಮತವನ್ನು ಪಡೆದರೂ ಕೂಡಾ ಅದು ಚುನಾವಣಾ ರಂಗದಲ್ಲಿ ತೀವ್ರ ಬದಲಾವಣೆ ಆಗಲಿದೆ. ಇಲ್ಲಿನ ಚುನಾವಣೆಯಲ್ಲಿ ಚರ್ಚುಗಳು ಕೂಡಾ ಪ್ರಮುಖ ಪಾತ್ರ ವಹಿಸಲಿದೆ. ಇಲ್ಲಿ ಪ್ಯಾರಿಷ್ನ ಪಾದ್ರಿಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ. ಗೋವಾದಲ್ಲಿ ಗೆಲುವು ಸಾಧಿಸಿದ ಬಳಿಕ ಬೇರೆ ಪಕ್ಷಕ್ಕೆ ಜಿಗಿಯುವುದು ಸಾಮಾನ್ಯವಾಗಿ ಕಂಡು ಬಂದಿರುವ ಹಿನ್ನೆಲೆಯಿಂದಾಗಿ ಇಲ್ಲಿ ಯಾವ ಪಕ್ಷ ಕೊನೆಗೆ ಸರ್ಕಾರವನ್ನು ರಚನೆ ಮಾಡಲಿದೆ ಎಂದು ಈಗಲೇ ಊಹೆ ಮಾಡುವುದು ಸಾಧ್ಯವಾಗದು.
(ಒನ್ಇಂಡಿಯಾ ಸುದ್ದಿ)
2022 ರ ವಿಧಾನಸಭೆ ಚುನಾವಣೆ: ಮತಕ್ಕಾಗಿ ಯುಪಿಯಲ್ಲಿ ಹೀಗಿದೆ ಬಿಜೆಪಿಯ ಕಾರ್ಯತಂತ್ರ..
2022 ರ ವಿಧಾನಸಭೆ ಚುನಾವಣೆ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ಲಾಭ ಪಡೆಯುತ್ತಾ ಬಿಜೆಪಿ?