Rajat Patidar: ನಮಗೆ ಮತ್ತೊಮ್ಮೆ ಚಾಂಪಿಯನ್ ಆಗುವ ಅವಕಾಶವಿದೆ: ಆರ್ಸಿಬಿ ನಾಯಕ ರಜತ್ ಪಾಟಿದಾರ್
Rajat Patidar: ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಗುರುವಾರ (ಮೇ 7) ನಡೆದ ಐಪಿಎಲ್ ಪಂದ್ಯದಲ್ಲಿ ಎಲ್ಎಸ್ಜಿ ತಂಡವು ಆರ್ಸಿಬಿ ವಿರುದ್ಧ ಜಯ ದಾಖಲಿಸಿತು. ಈ ಮೂಲಕ ಐಪಿಎಲ್ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಸೋಲನುಭವಿಸಿದೆ. ಪಂದ್ಯದ ಬಳಿಕ ರಜತ ಪಾಟಿದಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ಇದೀಗ ಸಖತ್ ಸದ್ದು ಮಾಡುತ್ತಿದೆ.
ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದಾರ್ ತಮ್ಮ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದರು. ಕಳೆದ ವರ್ಷ ಐಪಿಎಲ್ ಪ್ರಶಸ್ತಿ ಗೆದ್ದಿರುವ ಆರ್ಸಿಬಿ ಸದ್ಯ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಆದರೆ ಪಾಟಿದಾರ್ ಪ್ರಕಾರ ತಂಡವು ಡಿಫೆಂಡಿಂಗ್ ಚಾಂಪಿಯನ್ಸ್ ಎಂಬ ಮನಸ್ಥಿತಿಯೊಂದಿಗೆ ಆಡುತ್ತಿಲ್ಲ ಎಂದು ಹೇಳಿದರು.

ಆರ್ಸಿಬಿ ನಾಯಕ ಪಾಟಿದಾರ್ ಹೇಳಿದ್ದೇನು?
ಪ್ರತಿ ಪಂದ್ಯವನ್ನು ಹೊಸ ಆರಂಭವಾಗಿ ನೋಡಲಾಗುತ್ತಿದೆ ಮತ್ತು ಹಳೆಯ ಯಶಸ್ಸಿನ ಹೊರೆ ಹೊತ್ತುಕೊಳ್ಳದೆ ಮುನ್ನುಗ್ಗುವುದು ತಂಡದ ಉದ್ದೇಶವಾಗಿದೆ. ಮಳೆ ಅಡ್ಡಿಯಿಂದಾಗಿ ಈ ಪಂದ್ಯದಲ್ಲಿ ತಂಡದ ಹೋರಾಟ ಮತ್ತು ಈ ಋತುವಿನಲ್ಲಿ ತಂಡವು ಅಳವಡಿಸಿಕೊಳ್ಳುತ್ತಿರುವ ಕಾರ್ಯತಂತ್ರಗಳ ಬಗ್ಗೆ ಅವರು ಸುದೀರ್ಘವಾಗಿ ಚರ್ಚಿಸಿದರು. ಸತತ ಸೋಲುಗಳ ಹೊರತಾಗಿಯೂ ಚಾಂಪಿಯನ್ ತಂಡಕ್ಕೆ ತಕ್ಕಂತೆ ಪುನರಾಗಮನ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
'ಕೇವಲ ಪ್ರಶಸ್ತಿ ಉಳಿಸಿಕೊಳ್ಳುವ ಮನಸ್ಥಿತಿ ಹೊಂದಿಲ್ಲ'
"ನಮ್ಮ ತಂಡವು ಕೇವಲ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮನಸ್ಥಿತಿಯನ್ನು ಹೊಂದಿಲ್ಲ. ಬದಲಾಗಿ ಕಳೆದ ವರ್ಷದಂತೆಯೇ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿ ಮತ್ತೆ ಟ್ರೋಫಿ ಗೆಲ್ಲಬೇಕೆಂದು ನಾವು ಬಯಸುತ್ತೇವೆ," ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅವರು ಹೇಳಿದರು.
"ಈ ಸೀಸನ್ನಲ್ಲಿ ನಾವು ಹಾಲಿ ಚಾಂಪಿಯನ್ ಆಗಿ ಆಡುತ್ತಿಲ್ಲ. ನಮಗೆ ಮತ್ತೊಮ್ಮೆ ಚಾಂಪಿಯನ್ ಆಗುವ ಅವಕಾಶವಿದೆ. ಆಕ್ರಮಣಕಾರಿ ಆಟವಾಡಲು ಬಯಸುತ್ತೇವೆ. ನಮ್ಮಲ್ಲಿ ರಕ್ಷಣಾತ್ಮಕ ಮನಸ್ಥಿತಿಯಿಲ್ಲ. ಇದು ಹೊಸ ಸೀಸನ್, ನಾವು ಮಾಡಿದ್ದೆಲ್ಲವೂ 2025ರಲ್ಲಿ ಮುಗಿದಿದೆ. ಈಗಿನದು ಹೊಸ ಸೀಸನ್. ಹಾಗಾಗಿ ತಂಡಕ್ಕಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೇವೆ," ಎಂದು ಹೇಳಿದರು.
ಮಿಚೆಲ್ ಮಾರ್ಷ್ ಆಟಕ್ಕೆ ಪಾಟಿದಾರ್ ಮೆಚ್ಚುಗೆ
ಇನ್ನೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ ಸಿಡಿಸಿದ ಭರ್ಜರಿ ಶತಕವು ತಂಡದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿತು. ಮಾರ್ಷ್ ಅವರ ಈ ಸ್ಫೋಟಕ ಆಟದ ಬಗ್ಗೆ ರಜತ್ ಪಾಟಿದಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆಸ್ಟ್ರೇಲಿಯಾದ ಈ ಬಿಗ್ ಹಿಟ್ಟರ್ ಮಾರ್ಷ್ ಅವರ ಆ ಸ್ಫೋಟಕ ಇನಿಂಗ್ಸ್ ಆರ್ಸಿಬಿ ಮೇಲೆ ಹೆಚ್ಚಿನ ಒತ್ತಡ ಹೇರಿತು," ಎಂದು ಒಪ್ಪಿಕೊಂಡರು. ಅಲ್ಲದೆ, "ಇಷ್ಟೆಲ್ಲಾ ಸವಾಲುಗಳ ನಡುವೆಯೂ ಆರ್ಸಿಬಿ ಗೆಲುವಿನ ಹತ್ತಿರ ಬಂದಿತ್ತು. ಕೇವಲ ಒಂದೆರಡು ಬೌಂಡರಿಗಳು ಹೆಚ್ಚುವರಿಯಾಗಿ ಬಂದಿದ್ದರೆ ನಾವು ಪಂದ್ಯವನ್ನು ಗೆಲ್ಲಬಹುದಿತ್ತು" ಎಂದು ಅವರು ಹೇಳಿದರು.
"ಮಿಚೆಲ್ ಮಾರ್ಷ್ ಈ ಪಿಚ್ನಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇದು ಬ್ಯಾಟಿಂಗ್ಗೆ ಪೂರಕವಾದ ಪಿಚ್ ಕೂಡ ಆಗಿತ್ತು. ಪವರ್ಪ್ಲೇನಲ್ಲಿ ಅವರ ಆಕ್ರಮಣಕಾರಿ ಆಟವು ನಮ್ಮ ಮೇಲೆ ಒತ್ತಡ ಹೇರಿತು. ಆದರೆ ನಂತರ ನಮ್ಮ ಬೌಲರ್ಗಳು ಪಂದ್ಯವನ್ನು ನಿಯಂತ್ರಣಕ್ಕೆ ತಂದರು. ಮಧ್ಯದಲ್ಲಿ ಮಳೆಯಿಂದಾಗಿ ವಿರಾಮ ಸಿಕ್ಕಾಗ ನಮಗೆ ಯೋಚಿಸಲು ಸಮಯ ಸಿಕ್ಕಿತು. ಅವರು ಆರಂಭಿಸಿದ ರೀತಿ ಮತ್ತು ನಾವು ಮುಗಿಸಿದ ರೀತಿಯನ್ನು ನೋಡಿದರೆ ನಮ್ಮ ಬೌಲಿಂಗ್ ಮತ್ತು ಪಂದ್ಯದ ಮೇಲಿನ ನಿಯಂತ್ರಣದ ಬಗ್ಗೆ ನನಗೆ ತೃಪ್ತಿಯಿದೆ," ಎಂದು ಅವರು ಹೇಳಿದರು. ಒಟ್ಟಿನಲ್ಲಿ ಮಾರ್ಷ್ ಅವರ ಶತಕ ಪಂದ್ಯದ ಗತಿಯನ್ನು ಬದಲಿಸಿದರೂ, ಆರ್ಸಿಬಿ ಕೊನೆಯವರೆಗೂ ದಿಟ್ಟ ಹೋರಾಟ ನೀಡಿ ಕೇವಲ 9 ರನ್ಗಳ ಅಂತರದಿಂದ ಗೆಲುವವನ್ನ ಕೈತಪ್ಪಿಸಿಕೊಂಡಿತು.












Click it and Unblock the Notifications