ವೈಭವ್ ಸೂರ್ಯವಂಶಿಗೆ ತುಂಬಾ ಹೆದರಿದ್ದೆ; ವಂಡರ್ ಕಿಡ್ ವಿಕೆಟ್ ಪಡೆದ ಕೈಲ್ ಜೇಮಿಸನ್ ಅಚ್ಚರಿ ಹೇಳಿಕೆ
IPL 2026: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟ ಮುಂದುವರೆಸಿದ್ದಾರೆ. ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ, ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮಿನ್ಸ್ ಅಂತಹ ಅನುಭವಿ ಬೌಲರ್ಗಳ ವಿರುದ್ಧ ಸಿಕ್ಸರ್ಗಳ ಸುರಿಮಳೆ ಸುರಿಸಿ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೈಲ್ ಜೇಮಿಸನ್ ಅವರು ವೈಭವ್ ವಿಕೆಟ್ ಕಿತ್ತ ಬಳಿಕ ಕುಣಿದಾಡಿ ಸಂಭ್ರಮಿಸಿದರು. ನಂತರ ಈ ಬಗ್ಗೆ ಅವರು ಸ್ಪಷ್ಟನೆಯನ್ನೂ ನೀಡಿದ್ದು, ಇದು ಇದೀಗ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯದ ಹಾದಿಗೆ ಮರಳಲು ಪ್ರಯತ್ನಿಸುತ್ತಿದ್ದಾಗ, ಅವರ ಮುಂದೆ ದೊಡ್ಡ ಸವಾಲಾಗಿ ನಿಂತಿದ್ದು 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ. ಅದೃಷ್ಟವಶಾತ್ ಕಿವೀಸ್ ವೇಗಿ ಕೈಲ್ ಜೇಮಿಸನ್ ಆರಂಭದಲ್ಲೇ ವೈಭವ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ವಿಕೆಟ್ ಪಡೆದ ಸಂಭ್ರಮದಲ್ಲಿ ಜೇಮಿಸನ್ ತೋರಿದ ವರ್ತನೆಯು ದಂಡನೆಗೆ ಒಳಗಾಗುವಂತೆ ಮಾಡಿತು.

ಕೈಲ್ ಜೇಮಿಸನ್ ಹೇಳಿದ್ದೇನು?
ಪಂದ್ಯದ ನಂತರ ಈ ಬಗ್ಗೆ ಮಾತನಾಡಿದ ಜೇಮಿಸನ್, "ನಾನು ನನ್ನ ಜೀವನದಲ್ಲಿ ಯಾವತ್ತೂ ಒಬ್ಬ 15 ವರ್ಷದ ಹುಡುಗನಿಗೆ ಈ ಮಟ್ಟಕ್ಕೆ ಹೆದರಿರಲಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಆ ಯುವ ಆಟಗಾರ ಅಂತಹ ಅದ್ಭುತ ಬ್ಯಾಟಿಂಗ್ ಸಾಮರ್ಥ್ಯ ಹೊಂದಿದ್ದಾನೆ," ಎಂದು ವೈಭವ್ ಸೂರ್ಯವಂಶಿ ಜೊತೆಗಿನ ಆಟದ ಅನುಭವವನ್ನು ಹಂಚಿಕೊಂಡಿದ್ದಾರೆ.
ಆರ್ಆರ್ ಪರ ಮಿಂಚಿದ ರಿಯಾನ್ ಪರಾಗ್
ಜೇಮಿಸನ್ ಎಸೆದ ಯಾರ್ಕರ್ ಸೂರ್ಯವಂಶಿ ಅವರ ಆಟಕ್ಕೆ ಬ್ರೇಕ್ ಹಾಕಿತು. ಅವರ ವಿಕೆಟ್ ಪತನವು ಡೆಲ್ಲಿ ಕ್ಯಾಪಿಟಲ್ಸ್ಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿತು. ಆದರೂ ರಾಜಸ್ಥಾನ್ ರಾಯಲ್ಸ್ ತಂಡದ ಪರ ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಡೊನೊವನ್ ಫೆರೇರಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿ ತಂಡದ ಮೊತ್ತವನ್ನು 225 ರನ್ಗಳಿಗೆ ತಲುಪಿಸಿದರು.
ವೈಭವ್ ಬಗ್ಗೆ ಜೇಮಿಸನ್ ಹೇಳಿದ್ದೇನು?
ಐಪಿಎಲ್ ವೆಬ್ಸೈಟ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಜೇಮಿಸನ್ ಅವರು ವೈಭವ್ ಸೂರ್ಯವಂಶಿ ಜೊತೆಗಿನ ಆಟದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. "ನನ್ನ ಜೀವನದಲ್ಲಿ ನಾನು ಯಾವತ್ತೂ ಒಬ್ಬ 15 ವರ್ಷದ ಹುಡುಗನಿಗೆ ಈ ಮಟ್ಟಕ್ಕೆ ಹೆದರಿರಲಿಲ್ಲ. ಆದರೆ ಈ ಪಂದ್ಯಕ್ಕೂ ಮುನ್ನ ನಾವು ಆತನ ವಿಕೆಟ್ ಕಬಳಿಸುವ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದೆವು. ನಮ್ಮ ಆ ಯೋಜನೆಗಳು ಫಲ ನೀಡಿದ್ದು ತುಂಬಾ ಸಂತೋಷ ತಂದಿದೆ," ಎಂದು ಹೇಳಿದರು.
ಅಲ್ಲದೆ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಜೋಡಿಯಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರನ್ನು ಬೇಗನೆ ಔಟ್ ಮಾಡುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಜೇಮಿಸನ್ ವಿವರಿಸಿದರು. "ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಇಬ್ಬರು ಬ್ಯಾಟರ್ಗಳೇ ದೊಡ್ಡ ಸವಾಲಾಗಿದ್ದರು. ಯಾಕೆಂದರೆ ಅವರು ತಂಡಕ್ಕೆ ಸ್ಫೋಟಕ ಆರಂಭ ನೀಡುತ್ತಿದ್ದಾರೆ. ಸ್ಟಾರ್ಕ್ ಒಂದು ವಿಕೆಟ್ ಪಡೆದರೆ, ನಾನು ಯಾರ್ಕರ್ ಮೂಲಕ ವಿಕೆಟ್ ಪಡೆದೆ. ಪಂದ್ಯದ ಆರಂಭದಲ್ಲೇ ವಿಕೆಟ್ ಪಡೆದು ಪವರ್ಪ್ಲೇನಲ್ಲಿ ಅವರ ರನ್ ವೇಗಕ್ಕೆ ಬ್ರೇಕ್ ಹಾಕಿದ್ದು ಒಳ್ಳೆಯದಾಯಿತು," ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಜೇಮಿಸನ್ ಅವರು ವೈಭವ್ ಸೂರ್ಯವಂಶಿ ಅವರ ವಿಕೆಟ್ ಪಡೆಯುವುದು ಎಷ್ಟು ಮುಖ್ಯ ಮತ್ತು ಯಾಕೆ ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟು ಗಮನ ಸೆಳೆದಿದ್ದಾರೆ.












Click it and Unblock the Notifications