Dinesh Karthik: ಆರ್ಸಿಬಿಗೆ ನಾನು ಕೋಚ್ ಆಗಲು ವಿರಾಟ್ ಕೊಹ್ಲಿ ಕಾರಣ: ದಿನೇಶ್ ಕಾರ್ತಿಕ್ ಮಹತ್ವದ ಮಾಹಿತಿ ರಿವೀಲ್
Dinesh Karthik: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಶಸ್ಸು ಕಾಣುವಲ್ಲಿ ದಿನೇಶ್ ಕಾರ್ತಿಕ್ ಅವರ ಪಾತ್ರ ಪ್ರಮುಖವಾಗಿದೆ. ಹಾಗೆಯೇ ತಾವು ಮೆಂಟರ್ ಜವಾಬ್ದಾರಿ ವಹಿಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಅವರ ಪಾತ್ರ ತುಂಬಾ ದೊಡ್ಡದಿದೆ ಎಂದು ಡಿಕೆ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದಿನೇಶ್ ಕಾರ್ತಿಕ್ ಐಪಿಎಲ್ ಇತಿಹಾಸದಲ್ಲಿ ಒಬ್ಬ ಅನುಭವಿ ಆಟಗಾರ, ಪ್ರಯಾಣಿಕ ಅಂತಲೇ ಹೇಳಬಹುದು. ಅವರು ತಮ್ಮ ಐಪಿಎಲ್ ಪಯಣವನ್ನು ಡೆಲ್ಲಿ ಡೇರ್ಡೆವಿಲ್ಸ್ ತಂಡದೊಂದಿಗೆ ಆರಂಭಿಸಿದರು. ನಂತರ ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರವಾಗಿಯೂ ಆಡಿದರು.

ದಿನೇಶ್ ಕಾರ್ತಿಕ್ ಹೇಳಿದ್ದೇನು?
ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಆಗಿರುವ ದಿನೇಶ್ ಕಾರ್ತಿಕ್ ಅವರು ಐಪಿಎಲ್ 2024ರಲ್ಲಿ ಆರ್ಸಿಬಿ ತಂಡದ ಪರವಾಗಿ ಆಡುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಆದರೆ ಆರ್ಸಿಬಿ ಜೊತೆಗಿನ ಅವರ ಸಂಬಂಧ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಅದೇ ತಂಡಕ್ಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಸೇರ್ಪಡೆಗೊಂಡರು. ಇನ್ನೂ ತಾವು ಈ ಜವಾಬ್ದಾರಿ ವಹಿಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಅವರ ಪಾತ್ರ ಬಹಳ ದೊಡ್ಡದಿದೆ ಎಂದು ಕಾರ್ತಿಕ್ ಬಹಿರಂಗಪಡಿಸಿದ್ದಾರೆ.
"ನಾನು 2024ರಲ್ಲಿ ನನ್ನ ವೃತ್ತಿಜೀವನವನ್ನು ಮುಗಿಸುತ್ತಿದ್ದ ವೇಳೆ ಮೆಂಟರ್ ಆಗುವ ಬಗ್ಗೆ ನಿಮಗೆ ಆಸಕ್ತಿ ಇದೆಯೇ ಎಂದು ಆರ್ಸಿಬಿ ತಂಡದ ನಿರ್ದೆಶಕ ಮೊ ಬೊಬಾಟ್ ಕೇಳಿದರು. ಆಗ ನಾನು ಇನ್ನೂ ಟೂರ್ನಿಯಲ್ಲಿದ್ದೆ ಮತ್ತು ಅದು ಅತ್ಯಂತ ಮುಖ್ಯವಾದ ಐಪಿಎಲ್ ಸೀಸನ್ ಆಗಿತ್ತು. ನಾವು ಆಡಿದ ಪಂದ್ಯಗಳಲ್ಲಿ ತುಂಬಾ ಸೋತಿದ್ದೆವು. ನಮ್ಮ ಮುಂದೆ ದೊಡ್ಡ ಸವಾಲಿತ್ತು. ನಿಜ ಹೇಳಬೇಕೆಂದರೆ, ನಾವು ಪುಟಿದೇಳುತ್ತೇವೆ ಎಂದು ಯಾರೂ ನಂಬಿರಲಿಲ್ಲ," ಎಂದು ಹೇಳಿದರು.
ಮಲೋಲನ್ ರಂಗರಾಜನ್ ಕೊಟ್ಟ ಸಲಹೆ ಏನು?
"ನಾನು ಆ ಸಮಯದಲ್ಲಿ ತಂಡದ ಆಟದ ಬಗ್ಗೆ ಎಷ್ಟು ಮಗ್ನನಾಗಿದ್ದೆ ಎಂದರೆ ಆಡುತ್ತಿದ್ದಾಗಲೇ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ನಾನು ನನ್ನ ಪತ್ನಿ ಮತ್ತು ಮೋ ಬೊಬಾಟ್ ಜೊತೆಗೂ ಮಾತನಾಡುತ್ತಿದ್ದೆ. ಒಂದು ವೇಳೆ ಈ ಜವಾಬ್ದಾರಿ ವಹಿಸಿಕೊಂಡರೆ ಅದು ಹೇಗಿರುತ್ತದೆ ಎಂಬ ಮಾಹಿತಿಯನ್ನು ಮಲೋಲನ್ ರಂಗರಾಜನ್ ಕೂಡ ನೀಡುತ್ತಿದ್ದರು. ಅವರು ಎಂದಿಗೂ ಇದನ್ನೇ ಮಾಡು ಅಥವಾ ಅದನ್ನೇ ಮಾಡು ಎಂದು ಹೇಳಲಿಲ್ಲ. ಬದಲಿಗೆ ಈ ಪಾತ್ರವು ಹೇಗಿರಬಹುದು ಎಂಬುದನ್ನು ಮಾತ್ರ," ತೋರಿಸಿಕೊಟ್ಟರು ಎಂದು ಹೇಳಿದರು.
ವಿರಾಟ್ ಕೊಹ್ಲಿ ಕೊಟ್ಟ ಸಲಹೆ ಏನು?
ದಿನೇಶ್ ಕಾರ್ತಿಕ್ ಆರ್ಸಿಬಿ ಪಾಡ್ಕಾಸ್ಟ್ನಲ್ಲಿ ಮಾತನಾಡಿ, "ನಾನು ತಂಡಕ್ಕೆ ಉಪಯುಕ್ತವಾಗಬಲ್ಲೆ ಎಂಬ ಬಗ್ಗೆ ಮೋ ಬೊಬಾಟ್ ಅವರಿಗೆ ಅಪಾರ ಭರವಸೆಯಿತ್ತು. ನಾನು ಬೊಬಾಟ್ ಅವರನ್ನು ತುಂಬಾ ನಂಬುತ್ತೇನೆ. ಅವರ ಬಗ್ಗೆ ಗೌರವವಿದೆ ಮತ್ತು ಅವರೊಂದಿಗೆ ಉತ್ತಮ ಒಡನಾಟವಿದೆ. ಅವರು ನನ್ನನ್ನು ಒಪ್ಪಿಸಲು ಪ್ರಯತ್ನಿಸಲಿಲ್ಲ, ಬದಲಿಗೆ ನನ್ನ ವೃತ್ತಿಜೀವನದ ಈ ಹಂತದಲ್ಲಿ ಈ ಪಾತ್ರವು ಹೇಗಿರುತ್ತದೆ ಮತ್ತು ಇದು ಎಷ್ಟು ಸೂಕ್ತವಾದುದು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಅವರ ಮಾತನ್ನು ಪೂರ್ಣವಾಗಿ ನಂಬಿದೆ ಮತ್ತು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಒಪ್ಪಿದೆ," ಎಂದು ಹೇಳಿದರು.
ವಿರಾಟ್ ಕೊಹ್ಲಿ ಅವರೊಂದಿಗಿನ ಸತತ ಮಾತುಕತೆಗಳು ಈ ನಿರ್ಧಾರ ತೆಗೆದುಕೊಳ್ಳಲು ತಮಗೆ ಸಹಾಯ ಮಾಡಿತು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. "ಸೀಸನ್ನ ಅಂತ್ಯದ ವೇಳೆಗೆ ವಿರಾಟ್ ಕೊಹ್ಲಿ ಅವರ ಜೊತೆ ಈ ಬಗ್ಗೆ ಸ್ವಲ್ಪ ಸಮಯ ಮಾತನಾಡಿದೆ. ಅವರು ತುಂಬಾ ಪ್ರೋತ್ಸಾಹ ನೀಡಿದರು. ಇದರ ಬಗ್ಗೆ ಯೋಚಿಸು, ಇದು ಒಳ್ಳೆಯದು ಎಂದು ನನಗನ್ನಿಸುತ್ತದೆ ಎಂದು ಸಲಹೆ ನೀಡಿದರು," ಎಂದು ಹೇಳಿದರು.
"ಸೀಸನ್ ಮುಗಿದ ಬಳಿಕ ನಾನು ಆಟಕ್ಕೆ ವಿದಾಯ ಹೇಳಿದಾಗ ಮೋ ಬೊಬಾಟ್ ಕರೆ ಮಾಡಿ ತಂಡವು ನಿಮ್ಮನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು. ಆಂಡಿ ಫ್ಲವರ್ ಕೂಡ ಈ ಬಗ್ಗೆ ತುಂಬಾ ಸಂತೋಷವಾಗಿದ್ದಾರೆ ಮತ್ತು ತಂಡಕ್ಕೆ ಒಂದಿಬ್ಬರು ಭಾರತೀಯ ಕೋಚಿಂಗ್ ಸಿಬ್ಬಂದಿ ಇದ್ದರೆ ಸಹಾಯವಾಗುತ್ತದೆ ಎಂದು ಅವರು ಭಾವಿಸಿದ್ದರು," ಎಂದು ಕಾರ್ತಿಕ್ ತಿಳಿಸಿದ್ದಾರೆ.
ವಿರಾಟ್ ಮಾತಿಗೆ ಬೆಲೆ ಕೊಟ್ಟ ಡಿಕೆ
ಮುಂದುವರೆದು ಮಾತನಾಡಿದ ದಿನೇಶ್ ಕಾರ್ತಿಕ್ ಅವರು, "ನನಗೆ ನೆನಪಿದೆ, ನಾನು ಮತ್ತೊಮ್ಮೆ ವಿರಾಟ್ ಜೊತೆ ಮಾತನಾಡಿದಾಗ ಅವರು, ನೀವು ಈ ಕೆಲಸವನ್ನು ಮಾಡಲೇಬೇಕು. ಈ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತೀರಿ ಎಂದು ಹೇಳಿದರು. ನನಗೆ ಅಷ್ಟೇ ಸಾಕಾಗಿತ್ತು. ವಿರಾಟ್ನಂತಹ ವ್ಯಕ್ತಿ ನನ್ನ ಮೇಲೆ ಗೌರವ ಇಟ್ಟಿದ್ದಾರೆ ಎಂದಾಗ ಅದಕ್ಕೆ ತುಂಬಾ ಬೆಲೆ ಇರುತ್ತದೆ," ಅಂದುಕೊಂಡು ಮೆಂಟರ್ ಆಗಲು ಒಪ್ಪಿಕೊಂಡೆ ಎಂದು ಹೇಳಿದರು. ಒಟ್ಟಿನಲ್ಲಿ ಆರ್ಸಿಬಿ ತಾವು ಮೆಂಟರ್ ಆಗಲು ಪ್ರಮುಖ ಕಾರಣವೇ ವಿರಾಟ್ ಕೊಹ್ಲಿ ಅವರು ಕೊಟ್ಟ ಸಲಹೆ ಎಂದು ಡಿಕೆ ರಿವೀಲ್ ಮಾಡಿದ್ದಾರೆ.












Click it and Unblock the Notifications