Advertisement

ಅಗ್ರಾ ಮೆಟ್ರೋ ಯೋಜನೆ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ


ಲಕ್ನೋ, ಡಿ. 7: ಆಗ್ರಾದಲ್ಲಿನ ಆಗ್ರಾ ಮೆಟ್ರೋ ಯೋಜನೆಯ ನಿರ್ಮಾಣ ಕಾಮಗಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ದೇಶದ ಮೂಲಸೌಕರ್ಯ ವಲಯದಲ್ಲಿನ ಅತಿ ದೊಡ್ಡ ಒಂದು ಸಮಸ್ಯೆ ಎಂದರೆ ಹೊಸ ಯೋಜನೆಗಳನ್ನು ಘೋಷಿಸುವುದು ಮತ್ತು ಅವುಗಳಿಗೆ ಹಣ ಒದಗಿಸದಿರುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಗಮನಹರಿಸದೇ ಇರುವುದು ಎಂದರು. ಆದರೆ ತಮ್ಮ ಸರ್ಕಾರ ಹೊಸ ಯೋಜನೆಗಳು ಆರಂಭವಾಗುತ್ತಿದ್ದಂತೆಯೇ ಅಗತ್ಯ ಆರ್ಥಿಕ ನೆರವು ಒದಗಿಸುವುದನ್ನು ಖಾತ್ರಿಪಡಿಸುತ್ತಿದೆ ಎಂದರು.

ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆ ಅಡಿ 100 ಲಕ್ಷ ಕೋಟಿಗೂ ಅಧಿಕ ಹಣವನ್ನು ಮೂಲಸೌಕರ್ಯಕ್ಕೆ ಖರ್ಚು ಮಾಡಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. ಬಹು ವಿಧದ ಸಂಪರ್ಕದ ಮೂಲಸೌಕರ್ಯ ಕ್ರಿಯಾ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕಾರ್ಯ ಸಾಗಿದೆ ಎಂದ ಅವರು, ದೇಶದ ಮೂಲಸೌಕರ್ಯ ವಲಯ ಸುಧಾರಣೆಗೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದ ಬಂಡವಾಳ ಆಕರ್ಷಿಸುವ ಪ್ರಯತ್ನಗಳು ನಡೆದಿವೆ ಎಂದರು.

ಕೇಂದ್ರ ಸರ್ಕಾರದ ಇ-ವೀಸಾ ಯೋಜನೆ

ಪ್ರವಾಸೋದ್ಯಮ ವಲಯದಲ್ಲಿ ಪ್ರತಿಯೊಬ್ಬರಿಗೂ ಆದಾಯ ಗಳಿಕೆಯ ಅವಕಾಶವಿದೆ ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಕೇಂದ್ರ ಸರ್ಕಾರ ಇ-ವೀಸಾ ಯೋಜನೆಯಡಿ ದೇಶಗಳ ಸಂಖ್ಯೆಯನ್ನಷ್ಟೇ ಹೆಚ್ಚಳ ಮಾಡಿಲ್ಲ, ಹೋಟೇಲ್ ರೂಮ್ ಗಳ ತೆರಿಗೆ ದರವನ್ನೂ ಕೂಡ ಗಣನೀಯವಾಗಿ ಇಳಿಕೆ ಮಾಡಿದೆ ಎಂದರು. ಸ್ವದೇಶ್ ದರ್ಶನ್ ಮತ್ತು ಪ್ರಸಾದದಂತಹ ಯೋಜನೆಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು. ಸರ್ಕಾರದ ಪ್ರಯತ್ನಗಳ ಫಲವಾಗಿ ಪ್ರವಾಸ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ 34ನೇ ಸ್ಥಾನಕ್ಕೆ ಏರಿಕೆಯಾಗಿದೆ. 2013ರಲ್ಲಿ ಭಾರತ 65ನೇ ಕ್ರಮಾಂಕದಲ್ಲಿತ್ತು. ಕೊರೊನಾದ ಪರಿಸ್ಥಿತಿ ಸುಧಾರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಪ್ರವಾಸೋದ್ಯಮ ವಲಯದ ರೂಪ ಮರಳಲಿದೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಖರೀದಿದಾರರು ಮತ್ತು ಬಿಲ್ಡರ್ ಗಳ ವಿಶ್ವಾಸ ಬೆಳೆದಿದೆ

ನಗರಗಳ ಅಭಿವೃದ್ಧಿಯನ್ನು ನಾಲ್ಕು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ. ಅವುಗಳೆಂದರೆ ದೀರ್ಘಾವಧಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಸುಲಭ ಜೀವನ ನಡೆಸುವಂತೆ ಮಾಡುವುದು, ಗರಿಷ್ಠ ಹೂಡಿಕೆ ಮತ್ತು ಹೆಚ್ಚಿನ ಆಧುನಿಕ ತಂತ್ರಜ್ಞಾನ ಬಳಕೆ, ಈ ಅಂಶಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಗೃಹ ಖರೀದಿದಾರರು ಮತ್ತು ಬಿಲ್ಡರ್ ಗಳ ನಡುವೆ ವಿಶ್ವಾಸದ ಕೊರತೆ ಇತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಕೆಲವು ಕಟ್ಟ ಉದ್ದೇಶಗಳನ್ನು ಹೊಂದಿದ್ದ ವ್ಯಕ್ತಿಗಳು, ಇಡೀ ರಿಯಲ್ ಎಸ್ಟೇಟ್ ವಲಯದ ಘನತೆಗೆ ಕಳಂಕ ತಂದಿದ್ದರು ಮತ್ತು ಅದರಿಂದ ನಮ್ಮ ಮಧ್ಯಮ ವರ್ಗದವರು ಬೇಸರಗೊಂಡಿದ್ದರು ಎಂದು ಅವರು ಹೇಳಿದರು. ಈ ಸಮಸ್ಯೆಯನ್ನು ನಿವಾರಿಸಲು ರೇರಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದ ಅವರು, ಈ ಕಾನೂನಿನಿಂದಾಗಿ ಮಧ್ಯಮ ವರ್ಗದ ಗೃಹ ಖರೀದಿ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ಪೂರ್ಣಗೊಳ್ಳುತ್ತಿವೆ ಎಂಬುದು ಇತ್ತೀಚಿನ ವರದಿಗಳಿಂದ ದೃಢಪಟ್ಟಿದೆ ಎಂದು ಅವರು ಹೇಳಿದರು. ಆಧುನಿಕ ಸಾರ್ವಜನಿಕ ಸಾರಿಗೆಯಿಂದ ಹಿಡಿದು, ವಸತಿವರೆಗೆ ಸಮಗ್ರ ಅಭಿವೃದ್ಧಿಗಳನ್ನು ಕೈಗೊಳ್ಳುತ್ತಿರುವ ಪರಿಣಾಮ ನಗರಗಳಲ್ಲಿ ಜೀವನ ನಡೆಸುವುದು ಅತ್ಯಂತ ಸುಲಭವಾಗುತ್ತಿದೆ ಎಂದರು.

Advertisement
Advertisement
ಪ್ರಧಾನಮಂತ್ರಿ ಆವಾಸ್ ಯೋಜನೆ ಉದ್ಘಾಟನೆ

ಆಗ್ರಾದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಉದ್ಘಾಟಿಸಲಾಯಿತು. ಅದರಡಿ ಒಂದು ಕೋಟಿಗೂ ಅಧಿಕ ನಗರ ಪ್ರದೇಶದ ಬಡವರಿಗೆ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಗರ ಪ್ರದೇಶಗಳಲ್ಲಿನ ಮಧ್ಯಮ ವರ್ಗದವರಿಗೆ ಮೊದಲ ಬಾರಿಗೆ ಗೃಹ ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಈವರೆಗೆ ಮನೆ ಖರೀದಿಗಾಗಿ ನಗರ ಪ್ರದೇಶಗಳ ಮಧ್ಯಮ ವರ್ಗದ 12 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ 28,000 ಕೋಟಿ ರೂ. ಆರ್ಥಿಕ ನೆರವಿನ ಸಹಾಯ ಮಾಡಲಾಗಿದೆ ಎಂದರು. ಅಮೃತ್ ಯೋಜನೆ ಅಡಿ ಹಲವು ನಗರಗಳಲ್ಲಿ ನೀರು, ಒಳಚರಂಡಿ ಮತ್ತಿತರ ಮೂಲಸೌಕರ್ಯಗಳನ್ನು ಉನ್ನತೀಕರಿಸಲಾಗುತ್ತಿದೆ ಹಾಗೂ ನಗರಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಸುಧಾರಿಸಲು ಸ್ಥಳೀಯ ಸಂಸ್ಥೆಗಳಿಗೆ ನೆರವು ನೀಡಲಾಗುತ್ತಿದೆ ಮತ್ತು ತ್ಯಾಜ್ಯ ನಿರ್ವಹಣೆಗೆ ಆಧುನಿಕ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಮೆಟ್ರೋ ಮಾರ್ಗ ಕಾರ್ಯಾಚರಣೆ ಆರಂಭ

2014ರ ನಂತರ 450 ಕಿಲೋಮೀಟರ್ ಮೆಟ್ರೋ ಮಾರ್ಗ ಕಾರ್ಯಾಚರಣೆ ಆರಂಭವಾಗಿದೆ. ಅದಕ್ಕೂ ಹಿಂದೆ ಕೇವಲ 225 ಕಿಲೋಮೀಟರ್ ಮೆಟ್ರೋ ರೈಲು ಮಾರ್ಗ ಅಭಿವೃದ್ಧಿಯಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಸುಮಾರು ಒಂದು ಸಾವಿರ ಕಿಲೋಮೀಟರ್ ಉದ್ದದ ಮೆಟ್ರೋ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಕ್ಷಿಪ್ರ ರೀತಿಯಲ್ಲಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು. ದೇಶದ 27 ನಗರಗಳಲ್ಲಿ ಮೆಟ್ರೋ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ.

ಆಗ್ರಾ ಮೆಟ್ರೋ ಯೋಜನೆ ಎರಡು ಕಾರಿಡಾರ್ ಗಳನ್ನು ಒಳಗೊಂಡಿದ್ದು, ಒಟ್ಟು ಉದ್ದ 29.4 ಕಿಲೋಮೀಟರ್ ಮತ್ತು ಅದು ಪ್ರಮುಖ ಪ್ರವಾಸಿ ತಾಣಗಳಾದ ತಾಜ್ ಮಹಲ್, ಆಗ್ರಾ ಕೋಟೆ, ಸಿಕಂದ್ರಾ ಹಾಗೂ ರೈಲು ಮತ್ತು ಬಸ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿದೆ.

ಆಗ್ರಾ ಮೆಟ್ರೋ ರೈಲು ಯೋಜನೆ ಉದ್ಘಾಟನೆ

ಈ ಯೋಜನೆಯಿಂದ ಆಗ್ರಾ ಪಟ್ಟಣದ 26 ಲಕ್ಷ ಜನಸಂಖ್ಯೆಗೆ ಮಾತ್ರವಲ್ಲ, ಪ್ರತಿ ವರ್ಷ ಆಗ್ರಾಕ್ಕೆ ಭೇಟಿ ನೀಡುವ 60 ಲಕ್ಷಕ್ಕೂ ಅಧಿಕ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ಯೋಜನೆಯಡಿ ಐತಿಹಾಸಿಕ ನಗರಿ ಆಗ್ರಾಕ್ಕೆ ಪರಿಸರ ಸ್ನೇಹಿ ಸಮೂಹ ಕ್ಷಿಪ್ರ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ 8,379.62 ಕೋಟಿ ರೂ.ಗಳಾಗಿದ್ದು, ಅದು ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

2019ರ ಮಾರ್ಚ್ 8ರಂದು ಪ್ರಧಾನಮಂತ್ರಿ ಅವರು, 23 ಕಿಲೋಮೀಟರ್ ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ನ ಸಿಸಿಎಸ್ ವಿಮಾನ ನಿಲ್ದಾಣ ಮತ್ತು ಮುನ್ಶಿಪುಲಿಯಾ ನಡುವಿನ ಲಕ್ನೋ ಮೆಟ್ರೋ ವಾಣಿಜ್ಯ ಕಾರ್ಯಾಚರಣೆ ಆರಂಭಕ್ಕೆ ಹಾಗೂ ಆಗ್ರಾ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದ್ದರು.

English Summary

PM inaugurated construction work of Agra Metro project in Agra, Uttar Pradesh today through video conference.
Read more...