ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ ಗಿಡಗಳಿಗೆ ನೀರುಣಿಸಿದರೆ ಸಸಿಗಳು ಸದಾ ಹಸಿರಾಗಿರುವುದು! ಕೈತೋಟ ನಳನಳಿಸುವುದು
ಸೂರ್ಯ ಪ್ರಹಾರದಿಂದ ಜನ ಜೀವನ ಹೈರಾಣಾಗಿದೆ. ಜನ, ಜಾನುವಾರುಗಳು ಇನ್ನಿಲ್ಲದಂತೆ ಹಾಹಾಕಾರ ಮಾಡುತ್ತಿದ್ದಾರೆ. ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ವಿಧಾನಗಳನ್ನು ಹುಡುಕುತ್ತಿದ್ದಾರೆ.ಬಿಸಿಲಿಗೆ ಜನ ಜೀವನವೇ ದುಸ್ಥರವಾಗಿರುವಾಗ, ಇನ್ನು ಮರಗಿಡಗಳ ಕತೆ ಏನಾಗಬೇಡ. ತೀರಾ ಆಸ್ಥೆ ವಹಿಸಿ, ಜತನದಿಂದ ಮಾಡಿದ ಗಾರ್ಡನ್ಗಳ ನಿರ್ವಹಣೆ ಹೇಗೆ? ಸುಡುಬಿಸಿಲಲ್ಲಿ ಗಿಡಗಳಿಗೆ ಹೇಗೆ, ಯಾವ ಹೊತ್ತಲ್ಲಿ, ಎಷ್ಟು ನೀರುಣಿಸಬೇಕು? ಬಕೇಟ್, ಸ್ಪ್ರಿಂಕ್ಲರ್, ಪೈಪ್ ಹಿಡಿದು ಗಾರ್ಡನ್ಗೆ ಇಳಿಯೋ ಮೊದಲು ಈ ೯ ಅಂಶಗಳನ್ನು ನೀವು ಓದಲೇಬೇಕು.
1. ಬೇಸಿಗೆಯಲ್ಲಿ ನೀರುಣಿಸಲು ಸೂಕ್ತ ಸಮಯ ಯಾವುದು?:
ಗಿಡಗಳಿಗೆ ಯಾವ ಹೊತ್ತಲ್ಲಿ ನೀರುಣಿಸಿದರೆ ಸೂಕ್ತ? ಈ ಪ್ರಶ್ನೆ ಬೇಸಿಗೆಯಲ್ಲಿ ಕಾಡುತ್ತದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ - ಯಾವ ಹೊತ್ತಲ್ಲಿ ನೀರು ಬಿಟ್ಟರೆ ಸಸ್ಯಗಳ ಬೆಳವಣಿಗೆಗೆ ಅನುಕೂಲ? ಈ ಪ್ರಶ್ನೆಗೆ ನೀವು ಮೊದಲು ಉತ್ತರ ಕಂಡುಕೊಳ್ಳಬೇಕು. ಬೆಳಗ್ಗೆ ಅಥವಾ ಸಂಜೆಯೇ ಸಸ್ಯಗಳಿಗೆ ನೀರುಣಿಸಿ. ಮಧ್ಯಾಹ್ನ ಬೇಡ.

2. ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯಾಸ್ತದ ನಂತರ ನೀರುಣಿಸಿ:
ಬೆಳಗ್ಗೆ 6 ಗಂಟೆಗಿಂತ ಮೊದಲು ನೀರು ಹಾಕುವುದು ಸೂಕ್ತ ಎಂದು ಹೇಳಲಾಗುತ್ತದೆ. ಯಾಕೆಂದರೆ, ಈ ಸಮಯದಲ್ಲಿ ತಾಪಮಾನ ಕಡಿಮೆ ಇರುತ್ತದೆ. ಇದರಿಂದ ನೀರು ಆಳವಾಗಿ ಬೇರಿನ ತನಕ ಸುಲಭವಾಗಿ ತಲುಪುತ್ತದೆ. ಬೇರಿನಲ್ಲಿ ಜಲಸಂಚಯನ ಹೆಚ್ಚುತ್ತದೆ. ಬಿಸಿಲ ಹೊಡೆತ ತಾಳಲು ಸಸ್ಯಕ್ಕೆ ಶಕ್ತಿ ಸಿಗುತ್ತದೆ. ಬೆಳಗ್ಗೆ ಆಗದಿದ್ದರೆ, ಸೂರ್ಯಾಸ್ತದ ನಂತರ ಗಾರ್ಡನ್ಗೆ ನೀರು ಹಾಕಿ. ಇದರಿಂದ ಸಸ್ಯಗಳು ರಿಫ್ರೆಶ್ ಆಗುತ್ತವೆ.
3. ಮಧ್ಯಾಹ್ನ ಗಿಡಗಳಿಗೆ ಯಾಕೆ ನೀರುಣಿಸಬಾರದು?
ಮಟಮಟ ಮಧ್ಯಾಹ್ನ ಗಿಡಗಳಿಗೆ ನೀರುಣಿಸುವುದು ತಪ್ಪಿಸಬೇಕು. ಈ ಹೊತ್ತಲ್ಲಿ ಬಿಸಿಲ ಝಳ ವಿಪರೀತವಾಗಿರುತ್ತದೆ. ಸಸ್ಯ ಹೀರಿಕೊಳ್ಳುವ ಮೊದಲೇ ನೀರು ಆವಿಯಾಗಿರುತ್ತದೆ. ಇಷ್ಟಲ್ಲದೆ ಎಲೆಯ ಮೇಲಿನ ಜಲಬಿಂದು ಭೂತಗನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ. ಆಗ ಜಲಬಿಂದುವಿನ ಕಾರಣಕ್ಕೆ ಎಲೆಗಳು ಸುಡುವ ಅಪಾಯ ಹೆಚ್ಚಿರುತ್ತದೆ.
4. ಡೀಪ್ ವಾಟರಿಂಗ್ ಅಥವಾ ಅಲ್ಪ ಸ್ವಲ್ಪ ನೀರು ಸಿಂಪಡಿಕೆ?:
ಬೇಸಿಗೆಯಲ್ಲಿ ಡೀಪ್ ವಾಟರಿಂಗ್ ಅಥವಾ ಆಳಕ್ಕೆ ಇಳಿಯುವ ತನಕ ನೀರು ಹಾಕುವುದು ಅತ್ಯಂತ ಪರಿಣಾಮಕಾರಿ ತಂತ್ರವಾಗಿದೆ. ಇದರಿಂದ ಮಣ್ಣಿನ ತೇವಾಂಶ ಹೆಚ್ಚುತ್ತದೆ. ಬೇರುಗಳು ಆಳಕ್ಕೆ ಇಳಿಯುತ್ತವೆ ಸಸ್ಯ ನೈಸರ್ಗಿಕವಾಗಿ ಬಲಷ್ಠವಾಗುತ್ತದೆ. ನೀರು ಸಿಂಪಡಿಸಿದರೆ, ಅದು ಆಳಕ್ಕೆ ಇಳಿಯಲ್ಲ. ಬೇರುಗಳು ನೀರು ಸಿಗುವ ಕಡೆಗೆಹೊರಳುತ್ತವೆ. ಬೇರು ಆಳಕ್ಕೆ ಇಳಿಯುವ ಸಾಧ್ಯತೆ ತೀರಾ ಕಡಿಮೆ. ಇದರಿಂದ ಸಸ್ಯ ದುರ್ಬಲವಾಗುತ್ತದೆ.
5. ನೀರುಣಿಸುವುದಕ್ಕೂ ಒಂದು ಮಿತಿ ಬೇಕು:
ನೀರಿದೆ ಎಂದು ಬೇಕಾದಷ್ಟು ನೀರುಣಿಸುವುದೂ ಅಪಾಯಕಾರಿ. ಮಣ್ಣು ಕೆಸರುಮಯವಾದರೆ ಬೇರುಗಳಿಗೆ ಅಮ್ಲಜನಕ ಸಿಗವುದಿಲ್ಲ. ಆಗ ಬೇರುಗಳು ಕೊಳೆಯಲಾರಂಭಿಸುತ್ತವೆ. ಕೊಳೆಯತೊಡಗಿದರೆ, ನಿಮ್ಮ ಪ್ರೀತಿಯ ಗಾರ್ಡನ್ ಆಸೆ ಬಿಡಬೇಕಾಗುತ್ತದೆ.
6. ದಿನವೂ ನೀರು ಹಾಕಬೇಕಿಲ್ಲ:
ನೀರುಣಿಸುವ ಮೊದಲು ಒಮ್ಮೆ ಮಣ್ಣು ಪರೀಕ್ಷೆ ಮಾಡಿ. ಒಂದು ಇಂಚು ಆಳ ಮಣ್ಣು ಒಣಗಿದಂತೆ ಕಂಡರೆ ಖಂಡಿತಾ ನೀರುಣಿಸಬೇಕು. ಮಣ್ಣು ತೇವವಾಗಿದ್ದರೆ, ಖಂಡಿತಾ ಸಸ್ಯಕ್ಕೆ ನೀರು ಬೇಕಾಗಿಲ್ಲ. ಮರುದಿನ ನೀರುಣಿಸಬಹುದು. ಅಥವಾ ಮಣ್ಣು ಒಣಗಿದ ಮೇಲೆ ನೀರು ಹಾಕಿ.
7. ಮಣ್ಣಿನ ತೇವಾಂಶ, ಪೌಷ್ಠಿಕಾಂಶ ರಕ್ಷಣೆಗೆ ಮಲ್ಚಿಂಗ್ ಅಗತ್ಯ:
ಮಲ್ಚಿಂಗ್ ಅಂದರೆ ಮಣ್ಣಿನ ಮೇಲ್ಭಾಗವನ್ನು ಒಣ ಎಲೆ, ಹುಲ್ಲು, ಮರದ ಪುಡಿ ಇತ್ಯಾದಿಗಳಿಂದು ಮುಚ್ಚುವುದು. ಈ ಪದರ ಮಣ್ಣನ್ನು ನೇರ ಸೂರ್ಯನ ಪ್ರಖರ ಬೆಳಕಿಂದ ರಕ್ಷಿಸುತ್ತದೆ. ನೀರು ಬೇಗ ಆವಿಯಾಗಲ್ಲ. ಬೇರುಗಳು ತಂಪಾಗಿರುತ್ತವೆ. ಮುಖ್ಯವಾಗಿ ಪೋಷಕಾಂಶಗಳು ಉಳಿಯುತ್ತವೆ.
8. ಕುಂಡದಲ್ಲಿರುವ ಗಿಡಗಳಿಗೆ ಎಷ್ಟು ನೀರು ಬೇಕು?:
ಹೂಕುಂಡದಲ್ಲಿರುವ ಗಿಡಗಳಿಗೆ ಹೇಗೆ ನೀರುಣಿಸಬೇಕು ಅನ್ನೋದು ಕೂಡಾ ತೀರಾ ಮುಖ್ಯ. ಟೆರಾಕೋಟಾ, ಪ್ಲಾಸ್ಟಿಕ್ ಕುಂಡದಲ್ಲಿರುವ ಗಿಡಗಳಿಗೆ ದಿನ್ನಕ್ಕೆರಡು ಸಲ ನೀರುಣಿಸಿ. ಹೆಚ್ಚುವರಿ ನೀರು ಹರಿದುಹೋಗಲು ಹೂಕುಂಡದಲ್ಲಿ ರಂಧ್ರಗಳಿವೆಯಾ ಪರೀಕ್ಷಿಸಿ.
9. ಯಾವ ಗಿಡಕ್ಕೆ ಎಷ್ಟು ನೀರು ಬೇಕು ಗೊತ್ತಿರಲಿ:
ಯಾವ ಸಸ್ಯಕ್ಕೆ ಎಷ್ಟು ನೀರು ಬೇಕು ಎಂಬುದು ಅದರ ಪ್ರಬೇಧವನ್ನು ಅವಲಂಬಿಸಿದೆ. ಪಾಪಾಸುಕಳ್ಳಿಯಂತಹ ಗಿಡಗಳಿಗೆ ನೀರಿನ ಅಗತ್ಯವೇ ಇರಲ್ಲ. ಆದರೆ, ಹಣ್ಣು ಮತ್ತು ತರಕಾರಿ, ಹೂಬಿಡುವ ಗಿಡಗಳಿಗೆ ಸಾಕಷ್ಟು ನೀರುಬೇಕು. ಒಳಾಂಗಣ ಗಿಡಗಳ ಬಗ್ಗೆ ಮುತುವರ್ಜಿ ವಹಿಸಿ.
ಸಸ್ಯಗಳಿಗೂ ನಮ್ಮಂತೆ ಜೀವವಿದೆ. ಭಾವ ಇದೆ. ಬೇಸಿಗೆ ನಮ್ಮನ್ನು ಎಷ್ಟು ಕಾಡುತ್ತದೆಯೋ ಅಷ್ಟೇ ತೀವ್ರತೆಯಲ್ಲಿ ಸಸ್ಯ ಜೀವವನ್ನೂ ಸುಡುತ್ತದೆ. ಬೇಸಿಗೆಯಲ್ಲಿ ಕೈತೋಟದ ಆರೋಗ್ಯ ಕಾಪಾಡುವುದು ತೀರಾ ಮುಖ್ಯ. ಸ್ವಲ್ಪ ಕಾಳಜಿ, ಅಲ್ಪ ಅಸ್ಥೆ ಮೈಗೂಡಿಸಿಕೊಂಡರೆ ನಿಮ್ಮ ಕೈತೋಟ ನಳನಳಿಸುತ್ತದೆ. ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications