ಜೈಪ್ರಕಾಶ್ ಅಸೋಸಿಯೇಟ್ಸ್ ಬಿಡ್ ಫೈಟ್: ವೇದಾಂತ ಮೇಲ್ಮನವಿ ವಜಾ, ಅದಾನಿ ಗ್ರೂಪ್ಗೆ ಎನ್ಸಿಎಲ್ಎಟಿ ಗ್ರೀನ್ ಸಿಗ್ನಲ್
ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ (JAL) ಅನ್ನು ಸ್ವಾಧೀನಪಡಿಸಿಕೊಳ್ಳಲು ಅದಾನಿ ಎಂಟರ್ಪ್ರೈಸಸ್ ಸಲ್ಲಿಸಿದ್ದ ರೆಸಲ್ಯೂಶನ್ ಪ್ಲಾನ್ (ಪರಿಹಾರ ಯೋಜನೆ) ಆಯ್ಕೆಯನ್ನು ಪ್ರಶ್ನಿಸಿ ವೇದಾಂತ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಸೋಮವಾರ ವಜಾಗೊಳಿಸಿದೆ.
ಎನ್ಸಿಎಲ್ಎಟಿ ಅಧ್ಯಕ್ಷ ಅಶೋಕ್ ಭೂಷಣ್ ಹಾಗೂ ತಾಂತ್ರಿಕ ಸದಸ್ಯ ಬರುಣ್ ಮಿತ್ರ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ. "ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ಹಿಂದಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಸೂಕ್ತ ಕಾರಣಗಳಿಲ್ಲ" ಎಂದು ಪೀಠವು ಸ್ಪಷ್ಟಪಡಿಸಿದೆ. ಈ ಮೇಲ್ಮನವಿಗಳಲ್ಲಿ ಯಾವುದೇ ಅರ್ಥವಿಲ್ಲದ ಕಾರಣ, ಎರಡೂ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.

ತೀರ್ಪಿನಲ್ಲಿ ಎನ್ಸಿಎಲ್ಎಟಿ ಮಹತ್ವದ ಅಂಶವೊಂದನ್ನು ಉಲ್ಲೇಖಿಸಿದೆ. "ರೆಸಲ್ಯೂಶನ್ ಪ್ಲಾನ್ ಆಯ್ಕೆ ಮಾಡುವಾಗ ಸಾಲಗಾರರ ಸಮಿತಿ (CoC) ತನ್ನ 'ವಾಣಿಜ್ಯ ಬುದ್ಧಿವಂತಿಕೆ'ಯನ್ನು ಚಲಾಯಿಸಿದೆ. ಜೊತೆಗೆ ರೆಸಲ್ಯೂಶನ್ ಪ್ರೊಫೆಷನಲ್ ನಡೆಸಿದ ದಿವಾಳಿತನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದಿಲ್ಲ" ಎಂದು ಪೀಠವು ಸ್ಪಷ್ಟಪಡಿಸಿದೆ.
ಸಾಲದಾತರು ಬಳಸಿದ ಮೌಲ್ಯಮಾಪನ ಮಾನದಂಡಗಳನ್ನು ವೇದಾಂತ ಲಿಮಿಟೆಡ್ ಪ್ರಶ್ನಿಸಿತ್ತು. ಅದಾನಿ ಎಂಟರ್ಪ್ರೈಸಸ್ ನೀಡಿದ್ದ ಆಫರ್ಗಿಂತ ತಮ್ಮ ಬಿಡ್ (ಹರಾಜು ಮೊತ್ತ) ಗಣನೀಯವಾಗಿ ಹೆಚ್ಚಾಗಿದೆ ಎಂದು ವೇದಾಂತ ವಾದಿಸಿತ್ತು. "ನಮ್ಮ ಬಿಡ್ನ ಒಟ್ಟು ಮೌಲ್ಯವು ಸುಮಾರು 3,400 ಕೋಟಿ ರೂ. ಮತ್ತು ನಿವ್ವಳ ಪ್ರಸ್ತುತ ಮೌಲ್ಯವು (NPV) ಸುಮಾರು 500 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ" ಎಂದು ಹೇಳಿತ್ತು. ಆದರೆ, ವೇದಾಂತ ಹೆಚ್ಚಿನ ಆರ್ಥಿಕ ಪ್ರಸ್ತಾಪವನ್ನು ನೀಡಿದ್ದರೂ ಸಹ, ಅದಾನಿ ಬಿಡ್ ಅನ್ನು ಬೆಂಬಲಿಸುವ ಸಿಒಸಿ (CoC) ನಿರ್ಧಾರವನ್ನು ತಪ್ಪು ಅಥವಾ ಏಕಪಕ್ಷೀಯ ಎಂದು ಕರೆಯಲಾಗದು ಎಂದು ಹೇಳಿ ನ್ಯಾಯಮಂಡಳಿಯು ವೇದಾಂತದ ವಾದವನ್ನು ತಳ್ಳಿಹಾಕಿತು.
ಈ ವಿವಾದವು ಮಾರ್ಚ್ 17ರಂದು ಶುರುವಾಗಿತ್ತು. ಅಂದು ಎನ್ಸಿಎಲ್ಟಿಯ ಅಲಹಾಬಾದ್ ಪೀಠವು ಜೈಪ್ರಕಾಶ್ ಅಸೋಸಿಯೇಟ್ಸ್ಗಾಗಿ ಅದಾನಿ ಎಂಟರ್ಪ್ರೈಸಸ್ ಸಲ್ಲಿಸಿದ್ದ 14,535 ಕೋಟಿ ರೂ.ಗಳ ಪರಿಹಾರ ಯೋಜನೆಗೆ ಅನುಮೋದನೆ ನೀಡಿತ್ತು. ಬಳಿಕ ವೇದಾಂತ ಈ ನಿರ್ಧಾರವನ್ನು ಎನ್ಸಿಎಲ್ಎಟಿಯಲ್ಲಿ ಪ್ರಶ್ನಿಸಿತ್ತು. ಇದಕ್ಕೂ ಮೊದಲು, ಮಾರ್ಚ್ 24ರಂದು ಎನ್ಸಿಎಲ್ಟಿ ಆದೇಶದ ಮೇಲೆ ಮಧ್ಯಂತರ ತಡೆಯಾಜ್ಞೆ ನೀಡಲು ಮೇಲ್ಮನವಿ ನ್ಯಾಯಮಂಡಳಿ ನಿರಾಕರಿಸಿತ್ತು. ಈ ವಿಚಾರವಾಗಿ ವೇದಾಂತ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯವು ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿತ್ತು. ಆದರೂ, ಮೇಲ್ವಿಚಾರಣಾ ಸಮಿತಿಯು ಯಾವುದೇ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನ್ಯಾಯಮಂಡಳಿಯ ಪೂರ್ವಾನುಮತಿ ಪಡೆಯಬೇಕು ಎಂದು ಸೂಚಿಸಿತ್ತು.
ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್ಪ್ರೈಸಸ್ ಸಾಲದಾತರಿಂದ ಅತಿ ಹೆಚ್ಚು ಅಂದರೆ ಶೇ. 89ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಆ ಬಳಿಕ ದಾಲ್ಮಿಯಾ ಭಾರತ್ ಮತ್ತು ವೇದಾಂತ ಸ್ಥಾನ ಪಡೆದಿದ್ದವು. ಆಯ್ಕೆ ಪ್ರಕ್ರಿಯೆಯು ದಿವಾಳಿತನ ಮತ್ತು ದಿವಾಳಿಕೋರತನ ಸಂಹಿತೆಯ (IBC) ಎಲ್ಲಾ ನಿಬಂಧನೆಗಳನ್ನು ಅನುಸರಿಸಿದೆ ಎಂದು ಸಿಒಸಿ ಸಮರ್ಥಿಸಿಕೊಂಡಿತ್ತು. ಬಿಡ್ಗಳನ್ನು ಕೇವಲ ಮೌಲ್ಯದ ಆಧಾರದ ಮೇಲೆ ಮಾತ್ರವಲ್ಲದೆ, ಮುಂಗಡ ನಗದು, ಕಾರ್ಯಸಾಧ್ಯತೆ ಮತ್ತು ಕಾರ್ಯಗತಗೊಳಿಸುವ ಸಾಮರ್ಥ್ಯದಂತಹ ಹಲವು ನಿಯತಾಂಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಅದು ತಿಳಿಸಿತ್ತು.
2024ರ ಜೂನ್ನಲ್ಲಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ (CIRP) ಒಳಪಟ್ಟ ಜೈಪ್ರಕಾಶ್ ಅಸೋಸಿಯೇಟ್ಸ್ ಒಟ್ಟು 57,185 ಕೋಟಿ ರೂ.ಗಳ ಬಾಕಿ ಸಾಲವನ್ನು ಹೊಂದಿದೆ. ಈ ಕಂಪನಿಯು ಡೆಲ್ಲಿ-ಎನ್ಸಿಆರ್ ಪ್ರದೇಶದಲ್ಲಿ ವಾಣಿಜ್ಯ ಕಚೇರಿಗಳು, ರಿಯಲ್ ಎಸ್ಟೇಟ್, ಸಿಮೆಂಟ್ ಉತ್ಪಾದನೆ, ಆತಿಥ್ಯ, ವಿದ್ಯುತ್ ಹಾಗೂ ಎಂಜಿನಿಯರಿಂಗ್ ಮತ್ತು ನಿರ್ಮಾಣ ವ್ಯವಹಾರಗಳನ್ನು ಒಳಗೊಂಡಿದೆ. ಇದೀಗ ಎನ್ಸಿಎಲ್ಎಟಿ ತೀರ್ಪಿನೊಂದಿಗೆ, ಜೈಪ್ರಕಾಶ್ ಅಸೋಸಿಯೇಟ್ಸ್ ಅನ್ನು ಅದಾನಿ ಎಂಟರ್ಪ್ರೈಸಸ್ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ಬಹುತೇಕ ಅಂತಿಮ ಹಂತ ತಲುಪಿದೆ. ಇದು ಭಾರತದ ಹೈ-ಪ್ರೊಫೈಲ್ ದಿವಾಳಿತನ ಪ್ರಕರಣಗಳ ಪೈಕಿ ಮಹತ್ವದ ಬೆಳವಣಿಗೆಯಾಗಿದೆ.












Click it and Unblock the Notifications